ಝೆನ್ ಪ್ರಸಂಗ: ಆತ್ಮಮೋಹ ಬಿಟ್ಟು ನೋಡಿದಾಗ

ಝೆನ್ ಪ್ರಸಂಗ: ಆತ್ಮಮೋಹ ಬಿಟ್ಟು ನೋಡಿದಾಗ

ಝೆನ್ ಗುರುವಿನ ಬಳಿ ಶಿಷ್ಯನೊಬ್ಬ ಕೇಳಿದ, “ಸೌಂದರ್ಯ ಎಂದರೇನು?" ಗುರುವಿನ ಉತ್ತರ: “ಸೌಂದರ್ಯವನ್ನು ಮೊದಲು ನೋಡಲು ಕಲಿಯಬೇಕು.” ಆಗ ಶಿಷ್ಯ ಅಮಾಯಕನಂತೆ ಪ್ರಶ್ನಿಸಿದ, “ಎಲ್ಲಿ? ಹೇಗೆ?”

ಗುರು ಅವನನ್ನು ಊರಿನ ಕೆರೆಯ ಬಳಿಗೆ ಕರೆದೊಯ್ದು ಕೇಳಿದರು, “ಕೆರೆ ಹೇಗಿದೆ?” ಶಿಷ್ಯ ಕೆರೆಯನ್ನೊಮ್ಮೆ ನೋಡಿ ಹೇಳಿದ, “ಕೆರೆ ಶಾಂತವಾಗಿದೆ.” “ಬಾಗಿ ನೋಡು, ಏನು ಕಾಣಿಸುತ್ತಿದೆ?” ಎಂದು ಪುನಃ ಪ್ರಶ್ನಿಸಿದರು ಗುರು. ಶಿಷ್ಯ ಬಾಗಿ ನೋಡಿ, "ನನ್ನ ಮುಖ ಕಾಣಿಸುತ್ತಿದೆ” ಎಂದು ಉತ್ತರಿಸಿದ.

ಅದಾಗಿ ಒಂದು ತಿಂಗಳ ನಂತರ ಗುರು ಮತ್ತು ಶಿಷ್ಯ ಪುನಃ ಅದೇ ಕೆರೆಯ ಬಳಿಗೆ ಬಂದರು. ಈಗಲೂ ಗುರುವಿನ ಅದೇ ಪ್ರಶ್ನೆಗೆ ಅದೇ ಉತ್ತರ ನೀಡಿದ ಶಿಷ್ಯ. ಐದಾರು ಸಲ ಇದರ ಪುನರಾವರ್ತನೆ ಆಯಿತು.

ಅದಾದ ನಂತರ, ಗುರು ಅದೇ ಪ್ರಶ್ನೆ ಕೇಳಿದಾಗ, ಶಿಷ್ಯ ನೀಡಿದ ಮಾರ್ಮಿಕ ಉತ್ತರ ಹೀಗಿತ್ತು: ”ನಾನೀಗ ಕೆರೆಯ ನೀರಿನಲ್ಲಿ ಕಾಣುತ್ತಿರುವುದು ನನ್ನ ಬಿಂಬವನ್ನಲ್ಲ, ಧ್ಯಾನಿಯಂತೆ ತೇಲುತ್ತಿರುವ ಬಾತುಕೋಳಿಯ ಪಾದಗಳನ್ನು, ನೈದಿಲೆಯ ಬೇರುಗಳನ್ನು, ತಾವರೆಯ ದಳಗಳನ್ನು ಮತ್ತು ಬಣ್ಣಬಣ್ಣದ ಮೀನುಗಳ ಮೌನಸಂವಾದವನ್ನು.”

“ಹೀಗೆ ಆತ್ಮಮೋಹವನ್ನು ಬಿಟ್ಟು ಹೊರಜಗತ್ತನ್ನು ನೋಡಲು ಶುರು ಮಾಡುವುದೇ ಸೌಂದರ್ಯದ ಮೊದಲ ಅನುಭವ “ ಎನ್ನುತ್ತಾ ಗುರು ತನ್ನ ಪಾಠ ಆರಂಭಿಸಿದರು.