ಝೆನ್ ಪ್ರಸಂಗ: ಗುರು, ಶಿಷ್ಯರಿಗೆ ಒಂದೇ ಆಹಾರ

ಝೆನ್ ಪ್ರಸಂಗ: ಗುರು, ಶಿಷ್ಯರಿಗೆ ಒಂದೇ ಆಹಾರ

ಝೆನ್ ಗುರು ಬಂಕೆಯವರಿಗೆ ವಯಸ್ಸಾಯಿತು. ಆಗ ಅವರ ಅಡುಗೆಯ ಮೇಲ್ವಿಚಾರಕ ಮತ್ತು ಸ್ವತಃ ಒಬ್ಬ ಭಿಕ್ಕು (ಬೌದ್ಧ ಸನ್ಯಾಸಿ) ಆದ ದೈರ್ಯೋಗೆ ಅನಿಸಿತು: ಗುರುಗಳ ಆರೋಗ್ಯ ಸುಧಾರಿಸಲಿಕ್ಕಾಗಿ ಅವರಿಗೆ ಉತ್ತಮ ಆಹಾರ ನೀಡಬೇಕು ಎಂದು.

ಹಾಗಾಗಿ, ರುಚಿರುಚಿಯಾದ ಹಾಗೂ ಪುಷ್ಟಿಕರವಾದ ಅಡುಗೆ ಸಿದ್ಧಪಡಿಸಿ ಗುರು ಬಂಕೆಯವರಿಗೆ ಬಡಿಸಲಾಯಿತು. ತಮ್ಮ ಮುಂದೆ ತಂದಿಟ್ಟ ಆಹಾರವನ್ನು ನೋಡಿದ ಗುರು ಬಂಕೆಯವರು ದೈರ್ಯೋ ಅವರನ್ನು ಕರೆಯಿಸಿದರು. ತನಗೆ ಮಾತ್ರ ಯಾಕೆ ಒಳ್ಳೆಯ ಆಹಾರ ನೀಡಲಾಗಿದೆ ಎಂದು ಪ್ರಶ್ನಿಸಿದರು.

ಅದಕ್ಕೆ ದೈರ್ಯೋ ನೀಡಿದ ಉತ್ತರ: “ವಯೋವೃದ್ಧರಾದ ನಿಮಗೆ ಒಳ್ಳೆಯ ಆಹಾರ ಅಗತ್ಯ, ಗುರುಗಳೇ." ತಕ್ಷಣವೇ ಗುರು ಬಂಕೆಯವರು, “ಹಾಗಾದರೆ ಇದು ನನಗೆ ಬೇಡ" ಎಂದು ಆಹಾರವನ್ನು ನಿರಾಕರಿಸಿ, ತಮ್ಮ ಕೋಣೆಗೆ ಹೋಗಿ ಬಾಗಿಲು ಮುಚ್ಚಿಕೊಂಡರು.

ಗುರು ಬಂಕೆಯವರ ಈ ಪ್ರತಿಕ್ರಿಯೆ ದೈರ್ಯೋ ಅವರ ದಿಕ್ಕೆಡಿಸಿತು. ಅವರು ಗುರುಗಳ ಕೋಣೆಯ ಬಾಗಿಲಿನ ಬಳಿಯೇ ಕುಳಿತುಕೊಂಡು, ಬಾರಿಬಾರಿ ಗುರುಗಳ ಕ್ಷಮೆ ಕೇಳಿದರು. ಆದರೆ ಗುರು ಬಂಕೆಯವರು ಕೋಣೆಯಿಂದ ಹೊರಗೆ ಬರಲೇ ಇಲ್ಲ.

ಹೀಗೆಯೇ ದಿನಗಳು ಸರಿದವು. ಒಂದು ವಾರವೇ ದಾಟಿತು. ಕೊನೆಗೊಬ್ಬ ಶಿಷ್ಯ ಗುರು ಬಂಕೆಯವರ ಕೋಣೆಯ ಬಾಗಿಲನ್ನು ಬಡಿದು ನಿವೇದಿಸಿದ: "ಗುರುಗಳೇ, ನೀವು ಹೇಳಿದ್ದು ಸರಿಯಾಗಿರಬಹುದು. ಆದರೆ ನಿಮ್ಮ ಕೋಣೆಯ ಬಾಗಿಲಿನೆದುರು ಒಂದು ವಾರದಿಂದ ಆಹಾರವಿಲ್ಲದೆ ಕುಳಿತಿದ್ದಾರಲ್ಲ ದೈರ್ಯೋ, ಅವರಿನ್ನು ಉಪವಾಸವಿರಲು ಸಾಧ್ಯವಿಲ್ಲ.”

ಆಗ ಗುರುಗಳು ಕೋಣೆಯ ಬಾಗಿಲು ತೆರೆದರು; ಅಲ್ಲೇ ಕುಳಿತಿದ್ದ ದೈರ್ಯೋ ಅವರನ್ನು ಉದ್ದೇಶಿಸಿ ಹೀಗೆಂದರು: "ನನ್ನ ಶಿಷ್ಯರು ತಿನ್ನುವ ಆಹಾರವನ್ನೇ ನನಗೂ ಬಡಿಸಬೇಕು. ನೀನೊಬ್ಬ ಗುರು ಆದಾಗಲೂ ಇದನ್ನು ನೆನಪಿಟ್ಟುಕೊಳ್ಳಬೇಕು.”