ಡಿಮ್ - ಡಿಪ್ ಬಳಕೆ ಅತ್ಯಗತ್ಯ, ಏಕೆ?

ನಿಮ್ಮ ಗುರುಗಳು ನಿಮ್ಮ ಎದುರು ಇರುವಾಗ ನೀವು ಕಣ್ಣುಗಳನ್ನು ಹೊರಳಿಸುವ ಮೂಲಕ ನೀವು ಅವರನ್ನು ನಿಮ್ಮ ದೃಷ್ಟಿಯ ವ್ಯಾಪ್ತಿಯಲ್ಲಿರಿಸಿಕೊಳ್ಳಲು ಪ್ರಯತ್ನ ಮಾಡುತ್ತೀರಿ. ಇನ್ನೂ ಸ್ವಲ್ಪ ಆಚೆ ಹೋದರೆ ಕಣ್ಣನ್ನು ತಿರುಗಿಸಿದರೆ ಸಾಕಾಗುವುದಿಲ್ಲ. ಏಕೆಂದರೆ ನಮ್ಮ ಕಣ್ಣುಗಳ ಗರಿಷ್ಠ ದೃಷ್ಟಿ ವ್ಯಾಪ್ತಿ (visual angle) ಗರಿಷ್ಠ 60°. ಇದಕ್ಕಿಂತ ಹೆಚ್ಚಾದರೆ ನೀವು ನಿಮ್ಮ ಕುತ್ತಿಗೆಯನ್ನು ತಿರುಗಿಸಬೇಕಾಗುತ್ತದೆ. ಆದ್ದರಿಂದ ಅಲ್ಲವಾ ಶಿಕ್ಷಕರು ಬರೆಯಲು ಬೋರ್ಡ್ ಕಡೆಗೆ ತಿರುಗಿದ ಕೂಡಲೇ ನಾವು ನಮ್ಮ ಚಟುವಟಿಕೆಗಳನ್ನು ಆರಂಭಿಸಿ ಬಿಡುತ್ತೇವೆ. ಕಾಗದದ ಚೆಂಡುಗಳು ಹಾರಾಡುತ್ತವೆ. ಆದರೆ ಶಿಕ್ಷಕರು ಹಿಂದಕ್ಕೆ ತಿರುಗಿದರೋ ಮುಗಿಯಿತು. ಸುರೇಶ ಏನದು ಎನ್ನುವುದು ಮಾತ್ರವಲ್ಲ ಗುರಿಯಾಗಿ ಚಾಕ್ ಪೀಸ್ ಎಸೆದರೆಂದರೆ ಗುರಿ ತಪ್ಪದು. ಇಲ್ಲಿ ಎರಡು ಅಂಶಗಳಿವೆ. ಒಂದು ತನ್ನೆದುರಿರುವ ವಸ್ತುಗಳನ್ನು ಗುರುತಿಸುವುದು ಎರಡನೆಯದು ಸುರೇಶ ಎಷ್ಟು ದೂರ (depth) ಇದ್ದಾನೆ ಎಂದು ನಿಖರವಾಗಿ ಗುರುತಿಸುವುದು. ಈ ದೂರವನ್ನು ನಿಖರವಾಗಿ ಹೇಳಬೇಕಾದರೆ ಒಂದೇ ಕಣ್ಣಿನಿಂದ (monocular) ನೋಡಿದರೆ ಸಾಕಾಗುವುದಿಲ್ಲ. ಬದಲಾಗಿ ಎರಡೂ ಕಣ್ಣುಗಳನ್ನು (binocular) ಕೇಂದ್ರೀಕರಿಸಿದಾಗ ಮಾತ್ರ ಸಾಧ್ಯ. ಒಂದೇ ಕಣ್ಣಿನಿಂದ ನೋಡುವಾಗ ಸ್ಪಷ್ಟ ಚಿತ್ರ ಮೂಡುತ್ತದೆ. ಆದರೆ ದೂರದ ಅರಿವಾಗುವುದಿಲ್ಲ. ಎರಡೂ ಕಣ್ಣಿನಿಂದ ನೋಡುವಾಗ ಚಿತ್ರ ನಿಖರತೆ ಕಡಿಮೆ ಬದಲಾಗಿ ಆಳ ನಿಖರವಾಗಿ ತಿಳಿಯುತ್ತದೆ. ಆದ್ದರಿಂದ ನೀವು ಎತ್ತರದಲ್ಲಿರುವ ಮಾವಿನಕಾಯಿಗೆ ಕಲ್ಲು ಹೊಡೆದು ಉದುರಿಸುವುದು ಸಾಧ್ಯವಾಗಿದೆ. ಮಾನವನ ಕಣ್ಣುಗಳು ಮುಖದ ಎದುರು ಭಾಗದಲ್ಲಿರುವುದರಿಂದ ಯಾವಾಗಲೂ ದ್ವಿನೇತ್ರ ದೃಷ್ಟಿ (binocular vision) ಲಭ್ಯ.
ವಾಹನಗಳಲ್ಲಿ ಹೆಡ್ ಲ್ಯಾಂಪ್ ಇದೆ. ಅದಕ್ಕೆ ಡಿಮ್ ಡಿಪ್ಪರ್ ಇದೆ. ಡಿಮ್ ಮಾಡಿದಾಗ ಒಂದು ಫಿಲಮೆಂಟ್ ಹೊತ್ತಿಕೊಂಡರೆ ಡಿಪ್ಪರ್ ಹಾಕಿದಾಗ ಇನ್ನೊಂದು ಫಿಲಮೆಂಟ್ ಹೊತ್ತಿಕೊಳ್ಳುತ್ತದೆ. ಈ ಎರಡೂ ಫಿಲಮೆಂಟ್ ಗಳು ಒಂದೇ ಬಲ್ಬ್ ನ ಒಳಗಿದ್ದರೂ ಅವು ಬೇರೆಬೇರೆ ಬಿಂದುಗಳಲ್ಲಿವೆ. ಆದ್ದರಿಂದ ನೀವು ಡಿಮ್ ಡಿಪ್ಪ್ ಮಾಡಿದಾಗ ದೊರೆಯುವ ದ್ವಿ ಅಕ್ಷಿ ದೃಷ್ಟಿಯಿಂದಾಗಿ ಎದುರಿನಿಂದ ಬರುವ ಸವಾರನಿಗೆ ನಿಮ್ಮ ವಾಹನದ ದೂರ ಮತ್ತು ವೇಗಗಳನ್ನು ಲೆಕ್ಕ ಹಾಕುವುದು ಸುಲಭವಾಗುತ್ತದೆ. ಆದರೆ ನಮ್ಮ ತಿಳುವಳಿಕೆ ಏನೆಂದರೆ ರಾತ್ರಿ ಹೊತ್ತು ಡಿಪ್ಪರ್ ಬಳಸದಿದ್ದರೆ ಎದುರಿನವರ ಕಣ್ಣು ಕೋರೈಸುತ್ತದೆ ಎಂದು. ಅನೇಕರು ಬರಿಯ ಒಂದು ಕ್ಷಣ ತಾನೇ ಎಂದು ಡಿಪ್ಪರ್ ಬಳಸದೇ ಹೋಗಿ ಬಿಡುತ್ತೇವೆ. ಆದರೆ ನಿಜವಾದ ಡಿಪ್ಪರ್ ನ ಬಳಕೆಯ ಹಿಂದಿರುವ ಉದ್ದೇಶವನ್ನು ಯಾವ ಚಾಲನಾ ತರಬೇತುದಾರರೂ ಕಲಿಸಿರುವುದಿಲ್ಲ.
ಬಲಿಯನ್ನು ಪಾತಾಳಕ್ಕೆ ಕಳುಹಿಸುವ ಉದ್ದೇಶದಿಂದ ವಿಷ್ಣು ಬಾಲ ವಟುವಿನ ರೂಪದಲ್ಲಿ ವಾಮನನಾಗಿ ಬಂದ. ಬಲಿಯ ಬಳಿ ದಾನ ಬೇಡಿದ. ಬಲೀಂದ್ರ ಏನು ಬೇಕು ಎಂದು ಕೇಳಿದ. ವಾಮನ ಮೂರು ಹೆಜ್ಜೆ ಜಾಗ ಕೇಳಿದ. ಮೂರು ಹೆಜ್ಜೆ ಜಾಗ ತಾನೇ ಎಂದು ಬಲಿ ಒಪ್ಪಿದ. ಆದರೆ ಬಲಿಯ ಸಮೀಪದಲ್ಲಿದ್ದ ರಾಕ್ಷಸ ಗುರು ಶುಕ್ರಾಚಾರ್ಯರು ವಿಷ್ಣುವಿನ ತಂತ್ರವನ್ನು ತಿಳಿದು ಕೊಡಬೇಡ ಎಂದು ಬಲಿಯನ್ನು ಎಚ್ಚರಿಸಿದ. ಆದರೆ ಬಲಿ ಈಗಾಗಲೇ ಮಾತು ಕೊಟ್ಟಿರುವುದರಿಂದ ದಾನ ನೀಡಲು ಕೈ ಮುಂದೆ ಹಿಡಿದ. ನೀರು ಬಿಡಬೇಕಲ್ಲ ಅದಕ್ಕೆ ಕಮಂಡಲವನ್ನೆತ್ತಿದ. ಈ ದಾನ ಪೂರ್ಣವಾಗಬಾರದೆಂದು ಶುಕ್ರಾಚಾರ್ಯ ಕಮಂಡಲದ ನೀರು ಹೊರ ಬರದಂತೆ ಕಮಂಡಲದ ನಾಳದಲ್ಲಿ ಹೋಗಿ ಕುಳಿತ. ಇದನ್ನು ತಿಳಿದ ವಾಮನ ತನ್ನ ಬಳಿ ಇದ್ದ ದರ್ಭೆಯ ನಾಳದ ಒಳಗೆ ತೂರಿಸಿದ. ಅದು ಶುಕ್ರಾಚಾರ್ಯನ ಕಣ್ಣಿಗೆ ಚುಚ್ಚಿತು. ಶುಕ್ರಾಚಾರ್ಯ ಹೊರಬಂದ ಆದರೆ ದರ್ಭೆ ಚುಚ್ಚಿದ ಕಣ್ಣು ಕಳೆದುಕೊಂಡ ಮತ್ತು ಒಕ್ಕಣ್ಣ ಶುಕ್ರಾಚಾರ್ಯ ಎಂದು ಕರೆಯುವಂತಾಯ್ತು. ನೀವು ಗೂಗಲ್ ಆಂಟಿ ಹತ್ತಿರ ಹೋಗಿ ಕಾಗೆಗೆ ಒಂದು ಕಣ್ಣೇ ಅಂತ ಕೇಳಿ. ಆಕೆ ಹೌದು ಎನ್ನುತ್ತಾಳೆ. ಆದರೆ ನೀವು ಕಾಗೆಯ ಎರಡು ಕಣ್ಣುಗಳನ್ನು ನೋಡಿಯೇ ಇರುತ್ತೀರಿ. ಆದರೆ ಗೂಗಲ್ ಆಂಟಿ ಹೀಗೇಕೆ ಹೇಳುತ್ತಾಳೆ ಎಂದು ಕೇಳಬಹುದು. ಆಂಟಿ ಹೇಳಿದ್ದು ಸರಿ. ಗೂಗಲಾಂಟಿ ಹೇಳುವ ಹಾಗೆ ಕಾಗೆಗೆ ಒಂದೇ ಕಣ್ಣೇ?..... ಮುಂದಿನ ವಾರ.
-ದಿವಾಕರ ಶೆಟ್ಟಿ ಎಚ್, ಮಂಗಳೂರು,
ಚಿತ್ರ ಕೃಪೆ: ಇಂಟರ್ನೆಟ್ ತಾಣ