ತಂಬಾಕು ರಕ್ಕಸ ಚಟದಿಂದ ಕ್ಯಾನ್ಸರಿಗೆ ಲಕ್ಷಗಟ್ಟಲೆ ಜೀವಗಳ ಬಲಿ (ಭಾಗ 2)

ತಂಬಾಕು ರಕ್ಕಸ ಚಟದಿಂದ ಕ್ಯಾನ್ಸರಿಗೆ ಲಕ್ಷಗಟ್ಟಲೆ ಜೀವಗಳ ಬಲಿ (ಭಾಗ 2)

ಗುಟ್ಕಾ ಚಟಕ್ಕೆ ಮಕ್ಕಳು ಬಲಿಯಾಗುತ್ತಿದ್ದಾರೆ!
ಶಾಲೆಗಳು ಮತ್ತು ವಿದ್ಯಾಸಂಸ್ಥೆಗಳ ಆಸುಪಾಸಿನಲ್ಲಿ “ತಂಬಾಕು ಉತ್ಪನ್ನಗಳ ಮಾರಾಟವನ್ನು ಸರಕಾರ ನಿಷೇಧಿಸಿದೆ. ಆದರೆ, ಅಲ್ಲಿರುವ ಗೂಡಂಗಡಿ ಮತ್ತು ಇತರ ಅಂಗಡಿಗಳಲ್ಲೇ ಇವುಗಳ ಮಾರಾಟ ಬಿರುಸು! ಇದೆಲ್ಲ ಗುಟ್ಟುಗುಟ್ಟಾಗಿ ನಡೆಯುವ ವ್ಯವಹಾರ.

ಒಂದು ಪ್ಯಾಕೆಟಿಗೆ ಕೆಲವೇ ರೂಪಾಯಿ ಬೆಲೆಯಿರುವ ಗುಟ್ಕಾವನ್ನು ಮಕ್ಕಳು ಮತ್ತು ವಿದ್ಯಾರ್ಥಿಗಳು ಸುಲಭವಾಗಿ ಖರೀದಿಸಬಲ್ಲರು. ಸಿಗರೇಟು, ಗುಟ್ಕಾಗಳ ಸೇವನೆಯ ಚಟ ಒಮ್ಮೆ ಶುರುವಾದರೆ ಮತ್ತೆ ಅದನ್ನು ಬಿಡಲಾಗದು.   

ಟಾಟಾ ಸ್ಮಾರಕ ಆಸ್ಪತ್ರೆಯು ಮುಂಬಯಿಯಲ್ಲಿ ನಡೆಸಿದ ಸರ್ವೆಗಳ ಅನುಸಾರ ಎಂಟನೆಯ ತರಗತಿಯಿಂದ 10ನೆಯ ತರಗತಿ ವರೆಗೆ ಕಲಿಯುವ ಶೇಕಡಾ 28 ವಿದ್ಯಾರ್ಥಿಗಳು ದಿನಕ್ಕೆ ಎರಡರಿಂದ ಐದು ಪ್ಯಾಕೆಟ್ ಗುಟ್ಕಾ ತಿನ್ನುತ್ತಾರೆ! ಹೀಗಿರುವಾಗ ಹಲವಾರು ಮಕ್ಕಳಲ್ಲಿ ಕ್ಯಾನ್ಸರಿಗೆ ಪೂರ್ವಭಾವಿ ಸೋಂಕು (ಓರಲ್ ಸಬ್ ಮ್ಯುಕೋಸಾ ಫೈಬ್ರೋಸಿನ್) ಪತ್ತೆಯಾಗಿರುವುದು ಅಚ್ಚರಿಯೇನಲ್ಲ.

ಗುಟ್ಕಾ ಚಟದಿಂದಾಗಿ ಶಿವಾಜಿ ಬೊರಗಿಯ ದಾರುಣ ಮರಣ
ಗುಟ್ಕಾದ ರಕ್ಕಸ ಚಟ ಗುಟ್ಕಾ ಜಗಿಯುವವನನ್ನು ಭಯಂಕರವಾಗಿ ನರಳಿಸಿ ಬಲಿ ತೆಗೆದುಕೊಳ್ಳುತ್ತದೆ ಎಂದು ತೋರಿಸಿಕೊಟ್ಟ ಇನ್ನೊಂದು ಪ್ರಕರಣ ಶಿವಾಜಿ ಬೊರಗಿಯದು. ಆತ ಭೀಮಾ ನದಿ ತೀರದ ಸಿಂದಗಿ ತಾಲೂಕಿನ ರೇವಣಗಾಂವದ ಗ್ಯಾಂಗಿನ ಪ್ರಮುಖ ಸದಸ್ಯನಾಗಿದ್ದ. ಹಲವಾರು ಕೊಲೆ ಮಾಡಿದ ಅವನು  ಹೀನ ಚಟಗಳ ದಾಸನಾದ. ಬಿಯರ್ ಕುಡಿಯುವ ಚಟದ ಜೊತೆಗೆ ಗುಟ್ಕಾ ತಿನ್ನುವ ಚಟ ಬೆಳೆಸಿಕೊಂಡ. ಆರಂಭದಲ್ಲಿ ದಿನಕ್ಕೆ ನಾಲ್ಕೈದು ಪ್ಯಾಕೆಟ್ ಗುಟ್ಕಾ ಜಗಿಯುತ್ತಿದ್ದ. ಕ್ರಮೇಣ ಅದು ಎಂತಹ ರಕ್ಕಸ ಚಟವಾಯಿತೆಂದರೆ, ಆತ ದಿನಕ್ಕೆ ಒಂದು ನೂರು ಪ್ಯಾಕೆಟ್ ಗುಟ್ಕಾ ತಿನ್ನಬೇಕಾಗುತ್ತಿತ್ತು! ಅಂತಿಮವಾಗಿ ಆತ ಕ್ಯಾನ್ಸರ್ ಇತ್ಯಾದಿ ಕಾಯಿಲೆಗಳಿಂದ ವಿಲಿವಿಲಿ ಒದ್ದಾಡಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸತ್ತುಹೋದ.

ಗುಟ್ಕಾ, ಸಿಗರೇಟು ಇತ್ಯಾದಿ ತಂಬಾಕು ಉತ್ಪನ್ನಗಳ ಸೇವನೆಯ ಚಟ ಬೆಳೆಸಿಕೊಂಡವರಿಗೆ ಹರೀಶ್ ಭಾಯಿ ಮತ್ತು ಶಿವಾಜಿ ಬೊರಗಿಯ ಭೀಕರ ಸಾವಿನ ಪ್ರಕರಣಗಳು ಎಚ್ಚರಿಕೆ. ಆ ಚಟಗಳು ದಾರುಣ ಮರಣಕ್ಕೆ ಆಹ್ವಾನ ಎಂಬುದಕ್ಕೆ ಇನ್ನೇನು  ಪುರಾವೆ ಬೇಕು?

ನೆನಪಿರಲಿ: ಸರಕಾರಗಳು ಕಾಯಿದೆಗಳು ಮತ್ತು ನಿಯಮಗಳನ್ನು ಮಾಡಿ ಕೈತೊಳೆದುಕೊಳ್ಳುತ್ತವೆ. ತಂಬಾಕಿನ ಉತ್ಪನ್ನಗಳ ಮಾರಾಟದಿಂದ ಬರುವ ತೆರಿಗೆ ಆದಾಯ ಕೈಬಿಡಲು ಸರಕಾರಗಳು ತಯಾರಿಲ್ಲ. ಆ ಆದಾಯಕ್ಕೆ ಹೋಲಿಸಿದಾಗ, ತಂಬಾಕಿನ ಉತ್ಪನ್ನ ಬಳಸಿ ಅಥವಾ ಸೇವಿಸಿದವರಿಗೆ ಅದರಿಂದಾಗಿ ಕ್ಯಾನ್ಸರ್ ತಗಲಿದ ನಂತರ, ಆ ರೋಗಿಗಳ ಚಿಕಿತ್ಸೆಗೆ ತಗಲುವ ವೆಚ್ಚ ಹಲವು ಪಟ್ಟು ಹೆಚ್ಚು ಎಂಬುದು ಸರಕಾರಗಳಿಗೆ ಚೆನ್ನಾಗಿ ತಿಳಿದಿದೆ. ಆದರೂ, ತಂಬಾಕು ಉತ್ಪನ್ನಗಳ ಸಂಪೂರ್ಣ ನಿಷೇಧಕ್ಕೆ ಸರಕಾರಗಳು ಮುಂದಾಗುವುದಿಲ್ಲ. ಆದ್ದರಿಂದ, ಇವನ್ನೆಲ್ಲ ಓದಿದ ನಂತರವಾದರೂ ನಮ್ಮ ಆರೋಗ್ಯ ರಕ್ಷಣೆಗೆ ನಾವೇ ಸಂಕಲ್ಪ ತೊಡಬೇಕು, ಅಲ್ಲವೇ?
ಫೋಟೋ: ಕ್ಯಾನ್ಸರ್ ಪೀಡಿತ ಬಾಲಕಿಗೆ ಚಿಕಿತ್ಸೆ…. ಕೃಪೆ: ಐಸ್ಟೋಕ್