ತನ್ನ ಮನೆಯೊಳಗಣ ಕಿಚ್ಚು…

ತನ್ನ ಮನೆಯೊಳಗಣ ಕಿಚ್ಚು…

ತನ್ನ ಮನೆಯ ಸುಡುವುದಲ್ಲದೇ ನೆರೆ ಮನೆಯ ಸುಡುವುದೇ? ಹಿಮ್ಮುಖವಾಗಿ ಚಲಿಸುತ್ತಿರುವಂತೆ ಭಾಸವಾಗುತ್ತಿದೆ ನಮ್ಮ ಸಮಾಜ ಅಥವಾ ಮಧ್ಯಕಾಲೀನ ಸಾಮಾಜಿಕ ವ್ಯವಸ್ಥೆಯತ್ತ ಸಾಗುತ್ತಿರುವ ಹಾಗೆ ಅನಿಸುತ್ತಿದೆ. ಅಥವಾ ಜೀವನೋತ್ಸಾಹ ಕಡಿಮೆಯಾಗಿ ನಿರುತ್ಸಾಹ ಮೂಡಿ ಅದರ ಪರಿಣಾಮ ಅನವಶ್ಯಕ ಗಲಭೆಗಳಿಗೆ ಮನಸ್ಸು ಹಾತೊರೆಯುತ್ತಿದೆ ಎಂದೇನೋ ಅನುಭವವಾಗುತ್ತಿದೆ. ಅಥವಾ ಯಾವುದೋ ಬಲವಾದ ಷಡ್ಯಂತ್ರ ನಮ್ಮನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನದ ಭಾಗವಾಗಿ ಈ ವಾತಾವರಣವನ್ನು ಪರೋಕ್ಷವಾಗಿ ಸೃಷ್ಟಿ ಮಾಡುತ್ತಿರಬೇಕು ಎಂಬ ಅನುಮಾನವೂ ಕಾಡುತ್ತಿದೆ ಅಥವಾ ಬದಲಾವಣೆಯ ಹೊಸ್ತಿಲಲ್ಲಿ ಭಾರತೀಯ ಸಮಾಜ ನಿಂತಿದೆಯೇ?

ಧರ್ಮ ಎಂಬುದು ಒಂದು ಅಮಲು, ಕೇಸರೀಕರಣ ಇಸ್ಲಾಮೀಕರಣವಾಗುವತ್ತ.. ಹಿಜಾಬ್ ವಿರುದ್ಧ ಕೇಸರಿ ಶಾಲು. ಬಸವಣ್ಣ ಹುಟ್ಟಿದ್ದು ಎಲ್ಲಿ? ಶಿಶುನಾಳ ಶರೀಫಜ್ಜ ಹುಟ್ಟಿದ್ದು ಎಲ್ಲಿ? ಕನಕ ಪುರಂದರರು ಹುಟ್ಟಿದ್ದು ಎಲ್ಲಿ? ಕುವೆಂಪು ಹುಟ್ಟಿದ್ದು ಎಲ್ಲಿ? ಇದೇ ನೆಲದಲ್ಲಿ ಅಲ್ಲವೇ? ಮೈಮೇಲೆ ಸರಿಯಾಗಿ ಬಟ್ಟೆ ಹಾಕಿಕೊಳ್ಳಲು ಒತ್ತಾಯಿಸಬೇಕಾದ ಕಾಲಘಟ್ಟದಲ್ಲಿ ಹಿಜಾಬ್ ಅಂತೆ - ಕೇಸರಿ ಶಾಲು ಅಂತೆ...

ಜೈ ಶ್ರೀರಾಮ್ - ಅಲ್ಲಾ ಹೋ ಅಕ್ಬರ್, ಧರ್ಮ ಎಂದರೆ ಏನು ಎಂದು ತಿಳಿಯದ ಅಯೋಗ್ಯರು. ಬಟ್ಟೆಗಾಗಿ - ಬಣ್ಣಕ್ಕಾಗಿ - ಪದಗಳ ಘೋಷಣೆಗಾಗಿ - ಬಾವುಟಗಳಿಗಾಗಿ ಹೊಡೆದಾಡಿ ಬಡಿದಾಡುತ್ತಿರುವರು. ಬುರ್ಖಾ ಹಾಕ್ಕೊಂಡು ನೀವು ಹಿಂಸೆ ಅನುಭವಿಸಿ, ಹಾಗೆಯೇ ಕೇಸರಿ ಬುರ್ಖಾ ಹಾಕಿಕೊಂಡು ನೀವೂ ಹಿಂಸೆ ಅನುಭವಿಸಿ. ಅಲ್ಲಿ ಮೊಬೈಲ್ ಇಂಟರ್ನೆಟ್ ಡಿಜಿಟಲೈಸೇಷನ್ ಐ ಟಿ ಬಿ ಟಿ, ಇಲ್ಲಿ ನೋಡಿದರೆ ಮುಖ ಮುಚ್ಚುವ ಬಟ್ಟೆಗಾಗಿ ಹೊಡೆದಾಟ.

ಉರುಳಿಸಿ ಬಿಡಿ ಬಸವಣ್ಣನವರ ಪ್ರತಿಮೆಯನ್ನು. ಈ ಅಸಮಾನತೆಯ ಸಮಾಜದಲ್ಲಿ ಇರುವುದು ಅವರಿಗೆ ಅವಮಾನ. ಉರುಳಿಸಿ ಬಿಡಿ ಗಾಂಧಿ ಪ್ರತಿಮೆಯನ್ನು, ಈ ಅಸತ್ಯದ ಬದುಕಿನಲ್ಲಿ ಅವರ ಪ್ರತಿಮೆ ನಮ್ಮನ್ನು ಅಣಕಿಸುವುದು ಬೇಡ. ಉರುಳಿಸಿ ಬಿಡಿ ವಿವೇಕಾನಂದರ ಪ್ರತಿಮೆಯನ್ನು, ಈ ಮೌಡ್ಯದ ಸಮುದಾಯಗಳಲ್ಲಿ ಅವರಿಗೆ ಇಲ್ಲಿ ಕೆಲಸವಾದರೂ ಏನು? ಉರುಳಿಸಿ ಬಿಡಿ ಬುದ್ದನ ಪ್ರತಿಮೆಯನ್ನು, ಆ ಆಡಂಬರದ ಜೀವನದಲ್ಲಿ ಆವರಿಗೆ ಇಲ್ಲಿ ಜಾಗವೇ ಇಲ್ಲ. ಉರುಳಿಸಿ ಬಿಡಿ ಅಂಬೇಡ್ಕರ್ ಪ್ರತಿಮೆಯನ್ನು , ಈ ಅಮಾನವೀಯ ಸಮಾಜದಲ್ಲಿ ಅವರಿಗೆ ಸ್ಥಾನವೇ ಇಲ್ಲ. ಉರುಳಿಸಿ ಬಿಡಿ ಮಹಾವೀರರ ಪ್ರತಿಮೆಯನ್ನು, ಈ ಹಿಂಸಾತ್ಮಕ ನೆಲದಲ್ಲಿ ಅವರಿಗೆ ಪ್ರವೇಶವೇ ಇಲ್ಲ. ಉರುಳಿಸಿ ಬಿಡಿ ಸುಭಾಷ್, ಭಗತ್, ಆಜಾದ್, ಶಿವಾಜಿ, ತಿಲಕ್, ಪಟೇಲ್, ಟಿಪ್ಪು, ಪೆರಿಯಾರ್, ನಾರಾಯಣ ಗುರು, ಶಂಕರ, ರಾಮನುಜ, ಕಭೀರ, ಕನಕ, ಪುರಂದರ ಮುಂತಾದ ಎಲ್ಲರನ್ನೂ, ಅವರಿಗೆ ಶಿಲೆಯಾಗಿಯೂ ಇಲ್ಲಿ ನಿಲ್ಲುವುದು ಸಹನೀಯವಲ್ಲ.

ಸ್ಥಾಪಿಸಿ, ರಾಮ, ಕೃಷ್ಣ, ಗಣೇಶ, ಶಿವ, ಲಕ್ಷ್ಮೀ, ಸರಸ್ವತಿ, ಕಾಳಿ, ಅಲ್ಲಾ, ಜೀಸಸ್, ಆಂಜನೇಯನ ಇತ್ಯಾದಿಗಳ ಪ್ರತಿಮೆಯನ್ನು. ಸ್ಥಾಪಿಸಿ, ಅಂಬಾನಿ, ಅಧಾನಿ, ಟಾಟಾ, ಬಿರ್ಲಾ, ಮಿತ್ತಲ್, ಹಿಂದೂಜಾ, ಅಜೀಂ ಪ್ರೇಮ್ ಜಿ, ನಾರಾಯಣ ಮೂರ್ತಿ ಮುಂತಾದರ ಪ್ರತಿಮೆಗಳನ್ನು. ಆಗ ಇದು ನಿಜವಾದ ಭಾರತವಾಗುತ್ತದೆ.

ನಂಬಿಕೆಯ ದೇವರುಗಳು ನಮ್ಮನ್ನು ರಕ್ಷಿಸುತ್ತಾರೆ. ಶ್ರೀಮಂತ ಉದ್ಯಮಿಗಳು ನಮಗೆ ಜೀವನ ಕೊಡುತ್ತಾರೆ. ಬದುಕೆಂದರೆ ಅಷ್ಟೇ ತಾನೆ? ಯಾವನಿಗೆ ಬೇಕು ಈ ಸ್ವಾತಂತ್ರ್ಯ  ಸಮಾನತೆ ಮಾನವೀಯತೆ ಸರಳತೆ ಜ್ಞಾನ ಅರಿವು ಸತ್ಯ ಅಹಿಂಸೆ... ಹುಟ್ಟಿದ್ದೇವೆ, ತಿನ್ನೋಣ ಕುಡಿಯೋಣ ಮಜಾ ಮಾಡೋಣ, ಯಾರಿಗೆ ಏನಾದರೆ ನಮಗೇನು? ಯಾರದೋ ವಿಚಾರಗಳನ್ನು ನಾವು ಕಲಿತು ಮಾಡುವುದೇನು? ಅದನ್ನು ನೋಡಿಕೊಳ್ಳಲಿಕ್ಕೆ ದೇವರಿದ್ದಾನೆ. ಹಣ ಉದ್ಯೋಗ ನೀಡಲು ಶ್ರೀಮಂತರಿದ್ದಾರೆ. ತಲೆ ಕೆಡಿಸಿಕೊಳ್ಳುವುದೇಕೆ ? ಎತ್ತ ಸಾಗುತ್ತಿದ್ದೇವೆ ನಾವು? ಮೂಲಭೂತವಾದಕ್ಕೆ ಬಲಿಯಾಗಿ ನರಳುತ್ತಿರುವ ಮಧ್ಯ ಪ್ರಾಚ್ಯ ದೇಶಗಳ ಸ್ಥಿತಿ ನೆನಪಾಗುತ್ತಿಲ್ಲವೇ ?

ಹೋಗಲಿ, ಹಸಿವು ಬಡತನ ಅಜ್ಞಾನಗಳನ್ನಾದರೂ ಮೀರಿದ್ದೇವೆಯೇ ? ಏಯ್, ಮೂರ್ಖರೇ… ನಾರ್ವೆ ಎಂಬ ದೇಶ ಈ ಭೂಮಿಯ ಮೇಲೆಯೇ ಇದೆ. ಅಲ್ಲಿನ ಜನರ ನೆಮ್ಮದಿಯ ಮಟ್ಟ ವಿಶ್ವದಲ್ಲೇ ಅತ್ಯುತ್ತಮ. ಭ್ರಷ್ಟಾಚಾರ ಇಲ್ಲವೇ ಇಲ್ಲ ಎಂಬಷ್ಟು ಕಡಿಮೆ. ಪರಿಸರ ನಾಶ ಇಲ್ಲವೇ ಇಲ್ಲ. ಅಪರಾಧಗಳು ತೀರಾ ಅಪರೂಪ. ಬಹುತೇಕ ಭೂಲೋಕದ ಸ್ವರ್ಗ ಆ ದೇಶ. ದಯವಿಟ್ಟು ಅರ್ಥಮಾಡಿಕೊಳ್ಳೋಣ. ಬದುಕಿನ ಸಾರ್ಥಕತೆ ಅಡಗಿರುವುದು ನೆಮ್ಮದಿಯ ಹುಡುಕಾಟದಲ್ಲಿಯೇ ಹೊರತು ಸಂಘರ್ಷದ ಹಾದಿಯಲ್ಲಿ ಅಲ್ಲ. ಸಂಘರ್ಷದ ಹೋರಾಟ ಶಾಂತಿಗಾಗಿಯೇ ಹೊರತು ವಿನಾಶಕ್ಕಲ್ಲ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು

ನಾರ್ವೆ ದೇಶದ ಚಿತ್ರ ಕೃಪೆ: ಇಂಟರ್ನೆಟ್ ತಾಣ