ತಾಯಿ ಭಾಷೆಯ ಉಳಿವಿಗಾಗಿ...

ತಾಯಿ ಭಾಷೆಯ ಉಳಿವಿಗಾಗಿ...

ಕನ್ನಡದ ಭಾಷೆಯ ಸೊಗಡನ್ನು ಉಳಿಸಿಕೊಳ್ಳುವ, ಇಲ್ಲಿನ ಮಣ್ಣಿನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ, ಕನ್ನಡ ಭಾಷೆಯನ್ನು ಮತ್ತಷ್ಟು ವ್ಯಾಪಕವಾಗಿ ಬಳಸುವ ಮತ್ತು ಬೆಳೆಸುವ ದಿಕ್ಕಿನಲ್ಲಿ ವೈಯಕ್ತಿಕವಾಗಿ ನಾವು  ಮಾಡಬಹುದಾದ ಕೆಲವು ಕರ್ತವ್ಯಗಳು ನನಗೆ ತಿಳಿದಂತೆ...

೧) ಇನ್ನು ಮುಂದೆ ಕನ್ನಡದ ಯಾವುದೇ ಪೋಷಕರಿಗೆ ಹುಟ್ಟುವ ಮಕ್ಕಳಿಗೆ ಪರಂಪರಾನುಗತವಾಗಿ ಬೆಳೆದು ಬಂದ ಕನ್ನಡ ನೆಲಕ್ಕೆ ಹೆಚ್ಚು ಹತ್ತಿರದ ಮುದ್ದಾದ " ಹೆಸರುಗಳನ್ನು " ಆಯ್ಕೆ ಮಾಡಿಕೊಂಡು ನಾಮಕರಣ ಮಾಡುವುದು. ಅದರಿಂದಾಗಿ ಕನ್ನಡದ ಘಮಲು ಸದಾ ಪಸರಿಸುತ್ತಿರುತ್ತದೆ.

೨) ಒಂದು ವೇಳೆ ಅನಿವಾರ್ಯವಾಗಿ ಮತ್ತು ಅವಶ್ಯಕತೆಗಾಗಿ ನಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಿದ್ದರೂ ಸಹ ಮನೆಯಲ್ಲಿ ಎಲ್ಲರೂ ಸಂಪೂರ್ಣ ಅಚ್ಚ ಕನ್ನಡದಲ್ಲಿ ಮಾತನಾಡುವುದು. ಏಕೆಂದರೆ ಈಗ ಭಾಷಾ ವಾತಾವರಣ ಬದಲಾಗಿದೆ. ಹೇಗಿದ್ದರು ಆಂಗ್ಲ ಭಾಷೆಯನ್ನು ಎಲ್ಲಾ ಮಕ್ಕಳು ಸಹಜವಾಗಿ ಕಲಿಯುತ್ತಾರೆ. ನಾವು ಕನ್ನಡ ಕಲಿಸಲು ಹೆಚ್ಚು ಶ್ರಮ ಪಡಬೇಕು.

೩) ಮಕ್ಕಳು ಅವರು ಇಚ್ಚಿಸುವ ಯಾವುದೇ ಭಾಷೆಯ ಪುಸ್ತಕ ಓದುವ ಸ್ವಾತಂತ್ರ್ಯ ಇರಲಿ. ಆದರೆ ಪೋಷಕರಾದ ನಾವು ಪ್ರೀತಿಯಿಂದ ಅವರ ಮೇಲೆ ಕನಿಷ್ಠ ಒತ್ತಡ ಹೇರಿ ಕನ್ನಡ ಸಾಹಿತ್ಯದ ಪುಸ್ತಕ ಓದಲು ಪ್ರೇರೇಪಿಸಬೇಕು. ಅದರಿಂದ ಕನ್ನಡದ ಮೇಲೆ ಅವರಿಗೆ ಪರೋಕ್ಷ ಅಭಿಮಾನ ಬೆಳೆಯುತ್ತದೆ.

೪) ಮಕ್ಕಳಿಗೆ ತಾಯಿ ಎಷ್ಟು ಮುಖ್ಯವೋ ತಾಯಿ ಭಾಷೆ ಸಹ ಅಷ್ಟೇ ಮುಖ್ಯ ಎಂದು ಸಮಯ ಸಿಕ್ಕಾಗಲೆಲ್ಲಾ ಹೇಳುತ್ತಿರಬೇಕು. ತಾಯಿ ಸಮಾನ ನಮ್ಮ ಭಾಷೆ ಎಂದು ಮಕ್ಕಳಿಗೆ ಅರಿವಾದರೆ ಈಗ ತಕ್ಷಣಕ್ಕೆ ಅಲ್ಲದಿದ್ದರೂ ಮುಂದೆ ಅವರು ದೊಡ್ಡವರಾದ ಮೇಲೆ  ಖಂಡಿತ ನಮ್ಮ ಭಾಷೆಯನ್ನು ಸ್ವಲ್ಪವಾದರೂ ಪ್ರೀತಿಸುತ್ತಾರೆ.

೫) ಆಂಗ್ಲ ಭಾಷೆ ಮಾತನಾಡುವುದು ಪ್ರತಿಷ್ಠಿತ ಪ್ರಶ್ನೆಯೇ ಇರಬಹುದು ಆದರೆ ಅದರ ಜ್ಞಾನಾರ್ಜನೆ ಮತ್ತು ಕ್ರಿಯಾತ್ಮಕತೆಯ ಮೂಲ ನಮ್ಮ ತಾಯಿ ಭಾಷೆ ಎಂದು ಅವರಿಗೆ ವಿನಯಪೂರ್ವಕವಾಗಿ ತಿಳಿ ಹೇಳಬೇಕು. ನಮ್ಮೆಲ್ಲ ಕನಸು, ಆಸೆ ಆಕಾಂಕ್ಷೆ, ನೋವು ದುಃಖ ಯೋಚನೆಗಳು ಮೊಳಕೆ ಒಡೆಯುವುದೇ ತಾಯಿ ಭಾಷೆಯ ಉದರದೊಳಗೆ ಎಂದು ಅರ್ಥಮಾಡಿಸಬೇಕು.

೬) ತಾಯಿ ಭಾಷೆ ಎಂದು ಹೇಳುವಾಗ ಕನ್ನಡವೇ ಶ್ರೇಷ್ಠ ಎಂಬ ಸಂಕುಚಿತ ಮನೋಭಾವ ಬೆಳೆಸದೆ ಅವರವರ ತಾಯಿ ಭಾಷೆ ಅವರಿಗೆ ಮುಖ್ಯ ಮತ್ತು ಎಲ್ಲಾ ಭಾಷೆಗಳು ಸಮಾನ ಪ್ರಾಮುಖ್ಯತೆ ಹೊಂದಿವೆ ಎಂಬ ವಿಶಾಲ ಮನೋಭಾವ ಬೆಳೆಸಬೇಕು. ಒಂದು ಭಾಷೆಯ ಬೆಳವಣಿಗೆಗೆ ಈ ರೀತಿಯ ವಿಶಾಲ ಮತ್ತು ಸಮಗ್ರ ಚಿಂತನೆಗಳ ಮನಸ್ಥಿತಿ ಬಹಳ ಮುಖ್ಯ. ಇದರಿಂದ ಮಕ್ಕಳಲ್ಲಿ ಉತ್ತಮ ಗುಣಮಟ್ಟದ ವ್ಯಕ್ತಿತ್ವ ರೂಪಗೊಳ್ಳುತ್ತದೆ.

೭) ಆಂಗ್ಲ ಭಾಷೆ ಅಥವಾ ಕನ್ನಡ ಹೊರತುಪಡಿಸಿ ಇತರೆ ಯಾವುದೇ ಭಾಷೆ ಸರಿಯಾಗಿ ಓದಲು, ಬರೆಯಲು, ಮಾತನಾಡಲು ಬಾರದ ಅನೇಕ ಜನರು, ಕೇವಲ ಕನ್ನಡ ಮಾತ್ರವೇ ಕಲಿತು ಅದರಿಂದಲೇ ಬಹುದೊಡ್ಡ ಸಾಧನೆ ಮಾಡಿದ ಮಹಾನ್ ಸಾಧಕರುಗಳ ಸಾಧನೆಯನ್ನು ಮಕ್ಕಳಿಗೆ ಹೇಳಬೇಕು. ದೇಶ ವಿದೇಶಗಳಲ್ಲಿ ಅವರು ಪ್ರಖ್ಯಾತರಾದ ರೀತಿಯನ್ನು ತಿಳಿಸಬೇಕು. ಜೊತೆಗೆ ತಾಯಿ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವುದೇ ಅತ್ಯುತ್ತಮ ವಿಧ್ಯಾಭ್ಯಾಸ ಕ್ರಮ ಎಂದು ವಿಶ್ವದ ಪ್ರಖ್ಯಾತ ಭಾಷ ಶಾಸ್ತ್ರಜ್ಞರು ಹೇಳಿರುವುದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಡಬೇಕು.

೮) ತಾಯಿ ಭಾಷೆ ಸಹಜ ಸ್ವಾಭಾವಿಕ ಮತ್ತು ಇತರೆ ಯಾವುದೇ ಭಾಷೆಗಳು ಮಲತಾಯಿ ರೀತಿಯ ಭಾಷೆಗಳು, ಅವು ಎಷ್ಟೇ ಬಲಶಾಲಿ ಅಥವಾ ಜನಪ್ರಿಯವಾದರು ತಾಯಿ ಭಾಷೆಯ ಸಹಜ ಸೊಗಡು ಇರುವುದಿಲ್ಲ ಎಂದು ತಿಳಿ ಹೇಳಬೇಕು. ಅದರಿಂದ ತಾಯಿ ಭಾಷೆಯ ಮಹತ್ವ ಮಕ್ಕಳಿಗೆ ಅರಿವಾಗುತ್ತದೆ.

೯) ಕನ್ನಡದ ಸಿನಿಮಾ ಸಾಹಿತ್ಯ ಸಂಗೀತ ಉದ್ಯಮ ವಿಜ್ಞಾನ ರಾಜಕೀಯ ಸಾಮಾಜಿಕ ಯಾವುದೇ ಆಗಿರಲಿ ನಾವು ಯಾವುದೇ ಕಚೇರಿ, ಸಮಾರಂಭ, ಶೀರ್ಷಿಕೆ, ಕಾರ್ಯಕ್ರಮಗಳಲ್ಲಿ  ಉದ್ದೇಶಪೂರ್ವಕವಾಗಿ ಕನ್ನಡವನ್ನೇ ಹೆಚ್ಚಾಗಿ ಬಳಸಲು ಪ್ರಯತ್ನಿಸಬೇಕು. ಯಾರೋ ಒಬ್ಬರೋ ಇಬ್ಬರೋ ಅವರಿಗಿರುವ ಸಂವಿಧಾನಾತ್ಮಕ ಹಕ್ಕುಗಳನ್ನು ಉಪಯೋಗಿಸಿಕೊಂಡು ಸ್ವಲ್ಪ ಭಾಷೆಯನ್ನು ನಿರ್ಲಕ್ಷ್ಯ ಮಾಡಿದರೆ ನಾವುಗಳು ಅದನ್ನೇ ನೆಪವಾಗಿ ತೆಗೆದುಕೊಂಡು ಮತ್ತೊಂದು ತಪ್ಪು ಮಾಡಬಾರದು. ನಮ್ಮ ತಾಯಿ ಭಾಷೆಯ ಅಭಿಮಾನ ಅಚಲವಾಗಿರಬೇಕು.

೧೦) ಬಹುಮುಖ್ಯವಾಗಿ ಕನ್ನಡ ಬಾರದ ಬೇರೆ ರಾಜ್ಯಗಳ ಜನರು ಇಲ್ಲಿ ವಾಸಿಸಲು ಬಂದಾಗ ಭಾಷಾ ವಿಷಯದಲ್ಲಿ ಅವರ ಮೇಲೆ ದೌರ್ಜನ್ಯ ಮಾಡಬಾರದು. ಕನ್ನಡ ಕಲಿಯಲು ಒತ್ತಾಯ ಮಾಡಬಾರದು. ಅದು ತೀರಾ ಸಣ್ಣತನವಾಗುತ್ತದೆ. ಅವರ ಆಯ್ಕೆಗೆ ಬಿಡಬೇಕು. ಆದರೆ ಕನ್ನಡ ತಾಯಿ ಭಾಷೆಯ ನಾವುಗಳು ಕನ್ನಡವನ್ನೇ ಮಾತನಾಡಬೇಕು. ಆ ಮೂಲಕ ಪರೋಕ್ಷವಾಗಿ ಅವರ ಮೇಲೆ ಒತ್ತಡ ಹಾಕಬೇಕು. ಕೆಲವು ಪ್ರಖ್ಯಾತರು ಮುಖ್ಯವಾಗಿ ಸಿನಿಮಾ ಟಿವಿ ನಟನಟಿಯರು ಶೋಕಿಗಾಗಿ ಕನ್ನಡ ಕಾರ್ಯಕ್ರಮ ಅಥವಾ ಕನ್ನಡ ವಾಹಿನಿಯಲ್ಲಿ ಆಂಗ್ಲ ಭಾಷೆಯಲ್ಲಿ ಮಾತನಾಡಿದರೆ ಅವರಿಗೆ ಛೀಮಾರಿ ಹಾಕಬೇಕು .

ಹೀಗೆ ಮತ್ತು ಇದಲ್ಲದೆ ಇನ್ನೇನಾದರು ಹೊಸ ರೀತಿಯ ಯೋಚನೆ ಹೊಳೆದರೆ, ನಾವು ಕನ್ನಡದ ಬೆಳವಣಿಗೆಗೆ ನಮ್ಮ ವೈಯಕ್ತಿಕ ಮಟ್ಟದಲ್ಲಿ ಮಾಡಬಹುದಾದ ಅಳಿಲು ಸೇವೆಯನ್ನು ನಿರಂತರವಾಗಿ ಮಾಡಿದರೆ ಕನ್ನಡ ಮತ್ತು ಕನ್ನಡದ ಮಣ್ಣಿನ ಸಂಸ್ಕೃತಿ ಮತ್ತಷ್ಟು ಪ್ರಭಾವಶಾಲಿಯಾಗುತ್ತದೆ.

ಇನ್ನು ಸರ್ಕಾರದ ಮಟ್ಟದಲ್ಲಿ ಕನ್ನಡದ ಅಭಿವೃದ್ಧಿಗೆ ಈಗಾಗಲೇ ಹಲವಾರು ಸಮಿತಿಗಳು ಅತ್ಯಂತ ಉಪಯುಕ್ತ ವರದಿಗಳನ್ನು ನೀಡಿವೆ. ಸರೋಜಿನಿ ಮಹಿಷಿ ವರದಿ ಅದರಲ್ಲಿ ಮುಖ್ಯವಾದುದು. ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಹೀಗೆ ಅನೇಕ ಸಂಸ್ಥೆಗಳು ಕನ್ನಡದ ಕೆಲಸ ಮಾಡಲು ಇವೆ. ಆದರೆ ಅವು ಹೆಚ್ಚು ಕ್ರಿಯಾಶೀಲವಾಗದೆ ಎಂದಿನಂತೆ ಜಡ್ಡುಗಟ್ಟಿವೆ. ಆಡಳಿತದ ಎಲ್ಲಾ ಹಂತಗಳಲ್ಲಿ ಕನ್ನಡವನ್ನೇ ಬಳಸಬೇಕಾದ ಅನಿವಾರ್ಯತೆ ನಿರ್ಮಿಸಬೇಕಿದೆ. 

ಆದರೆ ಸರ್ಕಾರಕ್ಕೆ ಕೇವಲ ಭಾಷೆ ಮಾತ್ರವಲ್ಲ ಯಾವುದೇ ವಿಷಯವಾದರು ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತದೆ. ಭ್ರಷ್ಟ ವ್ಯವಸ್ಥೆಯ ಪೋಷಣೆಲ್ಲಿಯೇ ಅದಕ್ಕೆ ಹೆಚ್ಚು ಆಸಕ್ತಿ. ಆದ್ದರಿಂದ ಸರ್ಕಾರಕ್ಕಿಂತ ಹೆಚ್ಚಾಗಿ ನಾವುಗಳೇ ಭಾಷೆ ಉಳಿಸುವ ಮತ್ತು ಬೆಳೆಸುವ ಆಸಕ್ತಿ ಮತ್ತು ಜವಾಬ್ದಾರಿ ಹೊರಬೇಕಾಗಿದೆ. ಈ ರಾಜ್ಯೋತ್ಸವದಿಂದ ನಮ್ಮ ಕೈಲಾದ ಮಟ್ಟಿಗೆ ಕನ್ನಡದ ಮಣ್ಣಿನ ಸೊಗಡನ್ನು ಉಳಿಸಲು ಮತ್ತಷ್ಟು ಪ್ರಯತ್ನಿಸೋಣ...

  • 364 ನೆಯ ದಿನ ನಮ್ಮ ಜ್ಞಾನ ಭಿಕ್ಷಾ ಪಾದಯಾತ್ರೆ ಬೆಂಗಳೂರು ಜಿಲ್ಲೆಯ ಬೇಗೂರು ಗ್ರಾಮದಿಂದ ಸುಮಾರು 28 ಕಿಲೋಮೀಟರ್ ದೂರದ ಆನೇಕಲ್ ತಾಲ್ಲೂಕು ತಲುಪಿತು. ಇಂದು 31/10/2021 ಭಾನುವಾರ 365 ನೆಯ ದಿನ ನಮ್ಮ ಕಾಲ್ನಡಿಗೆ ಬೆಂಗಳೂರು ಜಿಲ್ಲೆಯ ಆನೇಕಲ್ ತಾಲ್ಲೂಕಿನಿಂದ ಸುಮಾರು ‌ 28 ಕಿಲೋಮೀಟರ್ ದೂರದ ಕೋಣನಕುಂಟೆ ಗ್ರಾಮ ತಲುಪಲಿದೆ. ನಾಳೆ 1/11/2021 ಸೋಮವಾರ 366 ನೆಯ ಬನಶಂಕರಿ, ಜೆಪಿ ನಗರ ಜಯನಗರ ಮಲ್ಲೇಶ್ವರಂ ರಾಜಾಜಿನಗರ ಮಾರ್ಗವಾಗಿ ಯಶವಂತಪುರ...

-ವಿವೇಕಾನಂದ. ಹೆಚ್.ಕೆ., ಬೆಂಗಳೂರು