ತಾಳೆ ಬೆಳೆಯ ಪ್ರಾಮುಖ್ಯತೆ ಮತ್ತು ತೈಲೋತ್ಪಾದನೆ


ಪ್ರಪಂಚದಾದ್ಯಂತ ಸಾಗುವಳಿ ಮಾಡಲ್ಪಡುತ್ತಿರುವ ಖಾದ್ಯ ತೈಲ ಬೆಳೆಗಳಲ್ಲಿ ತಾಳೆಯು ಅತ್ಯಂತ ಹೆಚ್ಚು ತೈಲದ ಇಳುವರಿ ನೀಡುವ ಬೆಳೆಯಾಗಿದ್ದು, ಪ್ರತಿ ಹೆಕ್ಟೇರ್ಗೆ ಪ್ರತಿ ವರ್ಷಕ್ಕೆ ೪ ರಿಂದ ೬ ಟನ್ಗಳಷ್ಟು ತೈಲದ ಇಳುವರಿ ನೀಡುವ ಸಾಮರ್ಥ್ಯ ಹೊಂದಿದ್ದು, ಪ್ರಸ್ತುತ ಜಾಗತಿಕ ಮಾರುಕಟ್ಟೆಯಲ್ಲಿ ಅತ್ಯಂತ ಪ್ರಮುಖ ಸ್ಥಾನ ಹೊಂದಿದೆ. ಅಡುಗೆ-ತಿಂಡಿ ತಿನಿಸುಗಳ ತಯಾರಿಕೆಯಲ್ಲಿ ಅಲ್ಲದೆ ವನಸ್ಪತಿ, ಸಾಬೂನು, ಗ್ಲಿಸರಿನ್ ಮತ್ತು ಪ್ಯಾರಾಫಿನ್ ತಯಾರಿಕೆಯಲ್ಲೂ ಬಳಸುವರು. ಇದರ ಹಣ್ಣಿನಿಂದ ಪಾಮ್ ಎಣ್ಣೆ ಮತ್ತು ಬೀಜದಿಂದ ಪಾಮ್ ಕರ್ನಲ್ ಎಣ್ಣೆಯನ್ನು ತೆಗೆಯಲಾಗುವುದು. ತಾಳೆ ಎಣ್ಣೆಯಲ್ಲಿ ಹೆಚ್ಚು ಕ್ಯಾರೋಟಿನ್ ಅಂಶವಿದ್ದು, ಇದು ಆರೋಗ್ಯಕ್ಕೆ ಉತ್ತಮ ಖಾದ್ಯ ತೈಲವೆನ್ನಬಹುದು.
ತೈಲೋತ್ಪಾದನೆಗೆ ಮೊದಲು, ಮಾಗಿದ ಹಣ್ಣುಗಳು ಗೊಂಚಲಿನಲ್ಲಿ ಸಡಿಲವಾದಾಗ, ಹಣ್ಣುಗಳು ಕಿತ್ತಳೆ ಹಳದಿ ಬಣ್ಣಕ್ಕೆ ತಿರುಗಿದಾಗ ಹಾಗೂ ಹಣ್ಣುಗಳನ್ನು ಬೆರಳಿನಿಂದ ಬಲವಾಗಿ ಒತ್ತಿದಾಗ ಎಣ್ಣೆ ಹೊರಹೊಮ್ಮಿದಾಗ ಕೊಯ್ಲು ಮಾಡಬೇಕು. ಮೊದಲು ಕೊಯ್ಲು ಮಾಡಿದ ಗೊಂಚಲುಗಳನ್ನು ಸಣ್ಣದಾಗಿ ಕತ್ತರಿಸಿ ೩೦ ರಿಂದ ೬೦ ನಿಮಿಷಗಳವರೆಗೆ ನೀರಿನಲ್ಲಿ ಕುದಿಸಬೇಕು. ಹೀಗೆ ಮಾಡುವುದರಿಂದ ಕಾಯಿಗಳಲ್ಲಿರುವ ಹಲವು ಕಿಣ್ವಗಳು ನಿಶ್ಚೇತನಗೊಳ್ಳುತ್ತವೆ. ಇದಲ್ಲದೆ ಕುದಿಯುವ ನೀರಿನಿಂದ ಉಪಚರಿಸಿದಾಗ ಕಾಯಿಗಳು ಮೆತ್ತಗಾಗಿ ಎಣ್ಣೆ ತೆಗೆಯಲು ಸುಲಭವಾಗುತ್ತವೆ.
ಈ ರೀತಿ ಕುದಿಯುವ ನೀರಿನಿಂದ ಉಪಚರಿಸಿದ ಬಳಿಕ ಕಾಯಿಗಳನ್ನು ಗೊಂಚಲಿನಿಂದ ಬೇರ್ಪಡಿಸಿ ಮರದ ಕೋಲುಗಳಿಂದ ಬಡಿಯಬೇಕು ಅಥವಾ ತಿರುಗುವ ಸ್ಟೀಲ್ ಡ್ರಮ್ಮಿನಾಕಾರದ ಯಂತ್ರದ ಮೂಲಕ ಹಾಯಿಸಿ ಕಾಯಿಗಳನ್ನು ಬೇರ್ಪಡಿಸಬೆಕು. ಹೀಗೆ ಬೇರ್ಪಡಿಸಿದ ಕಯಿಗಳನ್ನು ತಿರುಗುವ ಹರಿತವಾದ ಅಲಗುಗಳಿರುವ ಡೈಜೆಸ್ಟರ್ಗಳಲ್ಲಿ ಹಾಕಲಾಗುತ್ತದೆ. ಈ ಕ್ರಿಯೆಯಲ್ಲಿ ಎಣ್ಣೆ ಅಂಶ ಬಿಡುಗಡೆಯಾಗಿ ತಿರುಳಿನ ಉಷ್ಣತೆಯನ್ನು ೯೫೦ ಡಿಗ್ರಿ ಸೆಂ. ಹೆಚ್ಚಿಸುವ ಮೂಲಕ ಎಣ್ಣೆಯ ಸಾಂಧ್ರತೆ ಹೆಚ್ಚುತ್ತದೆ. ಈ ಕ್ರಿಯೆ ಸುಮಾರು ೩೦ ನಿಮಿಷಗಳ ಕಾಲ ನಡೆಯುತ್ತದೆ.
ಈ ರೀತಿ ತಿರುಳು ಬೇರ್ಪಡಿಸಿದ ಮೇಲೆ ಹೈಡ್ರಾಲಿಕ್ ಪ್ರೆಸ್ನ ಸಹಾಯದಿಂದ ಎಣ್ಣೆಯನ್ನು ಹಿಂಡಿ ತೆಗೆಯಲಾಗುತ್ತದೆ. ನಾರು, ಬೀಜ ಮತ್ತು ಇನ್ನಿತರ ನಿರುಪಯುಕ್ತ ಪದಾರ್ಥಗಳು ಹೈಡ್ರಾಲಿಕ್ ಪ್ರೆಸ್ನ ಒಂದು ಭಾಗದಲ್ಲಿ ಉಳಿದುಕೊಳ್ಳುತ್ತವೆ. ಈ ಕಚ್ಚಾ ಎಣ್ಣೆಯನ್ನು ನೀರಿನೊಂದಿಗೆ ಸೇರಿಸಿ (೧:೨ ಪ್ರಮಾಣದಲ್ಲಿ) ೯೫೦ ಡಿಗ್ರಿ ಸೆಂ. ಗೆ ಕುದಿಸುತ್ತಾರೆ. ಎಣ್ಣೆಯಲ್ಲಿನ ಕಲ್ಮಷಗಳು ಕುದಿಸುವ ಕಡಾಯಿಯ ತಳದಲ್ಲಿ ಶೇಖರವಾಗುತ್ತವೆ. ಕೊನೆಯದಾಗಿ ಎಣ್ಣೆಯನ್ನು ಸೆಂಟ್ರಿಪ್ಯೂಜ್ ಯಂತ್ರದ ಮೂಲಕ ಹಾಯಿಸಿ, ನೀರಿನ ಅಂಶವನ್ನು ತೆಗೆಯಲು ಒಣಗಿಸುವ ಯಂತ್ರಗಳ ಮೂಲಕ ಹಾಯಿಸಬೇಕು. ಈ ರೀತಿ ಮಾಡುವುದರಿಂದ ಪ್ರತಿ ಹಣ್ಣಿನ ಗೊಂಚಲುಗಳಿAದ (೧೨ ಟನ್) ಅಂದಾಜು ೨.೫ ಟನ್ ತಾಳೆ ಎಣ್ಣೆಯನ್ನು ಪಡೆಯಬಹುದು.
ಮಾಹಿತಿ: ಅನುಪಮಾ ಜಿ. ಮತ್ತು ಡಾ. ಅಶೋಕ ಎನ್, ತೋಟಗಾರಿಕಾ ಕಾಲೇಜು, ಮುನಿರಾಬಾದ್
ಚಿತ್ರ ಕೃಪೆ: ಅಂತರ್ಜಾಲ ತಾಣ