ತುಮಕೂರು ಜಿಲ್ಲೆಯ ಇತಿಹಾಸವನ್ನು ಸಾರುವ ‘ಕಲ್ಪಹಾಸ’

ತುಮಕೂರು ಜಿಲ್ಲೆಯ ಇತಿಹಾಸವನ್ನು ಸಾರುವ ‘ಕಲ್ಪಹಾಸ’

ಶಿಲಾಯುಗದ ಮೊದಲ ಹೆಜ್ಜೆ ಗುರುತುಗಳು ಕಂಡುಬಂದಿದ್ದು ತುಮಕೂರು ಜಿಲ್ಲೆಯ ಕಿಬ್ಬನಹಳ್ಳಿಯಲ್ಲಿ. ಜಿಲ್ಲೆಯ ಎಂ. ಎನ್. ಕೋಟೆಯನ್ನು ಪ್ರಾಗ್ ಇತಿಹಾಸದ ತವರು ಎಂದು ಗುರುತಿಸಲಾಗಿದೆ. ಶಿಲೆಯಿಂದ ಮಾಡಲಾದ ಮಚ್ಚುಗತ್ತಿ, ಕೊಡಲಿ ಸೇರಿದಂತೆ ಶಿಲಾಯುಗದ 26ಕ್ಕೂ ಹೆಚ್ಚು ಆಯುಧಗಳು ಇಲ್ಲಿ ಸಿಕ್ಕಿವೆ. ಎಲ್ಲಕ್ಕಿಂತ ಹೆಚ್ಚಾಗಿ,  300 ವರ್ಷಗಳ ಹಿಂದೆ ಎಂ ಎನ್ ಕೋಟೆ ಬಹುದೊಡ್ಡ ಮಾರುಕಟ್ಟೆಯಾಗಿತ್ತು. ಹೊರ ಜಿಲ್ಲೆಗಳಿಂದ ನೂರಾರು ಸಂಖ್ಯೆಯ ವ್ಯಾಪಾರಸ್ಥರು ವ್ಯಾಪಾರಕ್ಕಾಗಿ ಇಲ್ಲಿಗೆ ಬರುತ್ತಿದ್ದರು. ತಮಿಳುನಾಡು, ಕೇರಳ, ಆಂಧ್ರಪ್ರದೇಶಗಳಿಗೆ ಇಲ್ಲಿಂದ ತೆಂಗು, ಬಾಳೆ, ಅಡಿಕೆ ಮುಂತಾದ ಆಹಾರ ಸಾಮಗ್ರಿಗಳು ರಫ್ತಾಗುತ್ತಿದ್ದವು. ಗಂಗ, ನೊಳಂಬ, ಚೋಳ, ಹೊಯ್ಸಳ, ಕಾಕತೀಯ, ವಿಜಯನಗರ ಸೇರಿದಂತೆ ಹಲವಾರು ರಾಜಮನೆತನಗಳು ಜಿಲ್ಲೆಯಲ್ಲಿ ಆಳ್ವಿಕೆ ನಡೆಸಿದವು.

ರಾಜಧಾನಿ ಬೆಂಗಳೂರಿಗೆ ಹೆಬ್ಬಾಗಿಲಿನಂತಿರುವ ತುಮಕೂರು ಜಿಲ್ಲೆ ತನ್ನದೇ ಆದ ಐತಿಹ್ಯವನ್ನು ಹೊಂದಿದೆ. ಇತ್ತೀಚೆಗೆ ಬಿಡುಗಡೆಯಾದ ‘ಕಲ್ಪಹಾಸ ‘  (ಸಂಪುಟ-1) ಕೃತಿಯ ಮೂಲಕ ರಾಜ್ಯದ ಪ್ರಮುಖ ಇತಿಹಾಸಕಾರರಲ್ಲಿ ಒಬ್ಬರಾದ ಡಾ. ಡಿ. ಎನ್. ಯೋಗೀಶ್ವರಪ್ಪನವರು ಕ್ರಿ.ಶ 1800ರವರೆಗಿನ  ತುಮಕೂರು ಜಿಲ್ಲೆಯ ಇತಿಹಾಸವನ್ನು ಸಮಗ್ರವಾಗಿ ದಾಖಲಿಸುವ ಅಮೂಲ್ಯ ಕಾರ್ಯವನ್ನುಮಾಡಿದ್ದಾರೆ.

ಜೆಲ್ಲೆಯಲ್ಲಿ ಆಡಳಿತ ನಡೆಸಿದ  ತ;ಲಕಾಡು ಗಂಗರು,  ನೊಳಂಬ, ಚೋಳ, ಕಾಕತೀಯ, ಹೊಯ್ಸಳ, ವಿಜಯನಗರ ಸಾಮ್ರಜ್ಯದ  ರಾಜಮನತನಗಳು, ಅವುಗಳು ಜಿಲ್ಲೆಯ ಸಾಂಸ್ಕೃತಿಕ, ಧಾರ್ಮಿಕ, ಕೃಷಿ ಮತ್ತು ವಾಸ್ತುಶಿಲ್ಪಕ್ಕೆ ನೀಡಿದ ಕೊಡುಗೆಗಳ ಕುರಿತು ಕೃತಿಯಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಆರಂಭಲ್ಲಿ ಗಂಗರು ಮತ್ತು ಅವರ ಸಮಕಾಲೀನರಾದ ನೊಳಂಬರ ಆಳ್ವಿಕೆಗೆ ಜಿಲ್ಲೆಯ ಪ್ರದೇಶ ಒಳಪಟ್ಟಿತ್ತು. ಕ್ರಮೇಣ ಚೋಳರು ಮತ್ತು ಅವರ ಸಮಕಾಲೀನರಾದ ಹೊಯ್ಸಳರು ಆಳ್ವಿಕೆ ನಡೆಸಿದರು. ಹೊಯ್ಸಳರ ನಂತರ ವಿಜಯನಗರದ  ಅರಸರು ಅಮರನಾಯಕರುಗಳನ್ನು ನೇಮಿಸಿ ಅವರ ಮೂಲಕ ಆಡಳಿತ ನಡೆಸಿದರು.

ವಿಜಯನಗರ ಸಾಮ್ರಾಜ್ಯದ ಆಡಳಿತದ ಬಹುಮುಖ್ಯ ಲಕ್ಷಣವೆಂದರೆ. ನಾಯಕತನ ಪದ್ಧತಿ. ಸಾಹಸಿಗಳಿಗೆ ಸೇನಾ ಷರತ್ತಿನ ಮೇರೆಗೆ ಭೂಪ್ರದೇಶಗಳನ್ನು ನೀಡಿ ‘ನಾಯಕ’ ಹುದ್ದೆಗಳನ್ನು ಸೃಷ್ಟಿಸಿ ಅಲ್ಲಿನ ಆಡಳಿತವನ್ನು ಅವರಿಗೆ ನೀಡುವ ಮೂಲಕ ತಮ್ಮ ಸಾಮ್ರಾಜ್ಯವನ್ನು ವಿಸ್ತರಿಸಿಕೊಂಡು ತೆರಿಗೆ ಸಂಗ್ರಹ ಮಾಡುತ್ತಿದ್ದರು. ಕೆಲವೊಮ್ಮೆ ಈ ನಾಯಕರುಗಳನ್ನು ತಮ್ಮ ಆಡಳಿತಕ್ಕೆ ಒಳಪಟ್ಟಿರುವ ರಾಜ್ಯದ ವ್ಯಾಪ್ತಿಯಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾವಣೆ ಸಹ ಮಾಡುತ್ತಿದ್ದರು. 

ಜಿಲ್ಲೆಯಲ್ಲಿ ಆಡಳಿತ ನಡೆಸಿದ ಹಾಗಲವಾಡಿ ನಾಯಕರು, ನಿಡಗಲ್ಲು ನಾಯಕರು, ಪಾವಗಡ ನಾಯಕರು, ವೈ ಎನ್ ಹೊಸಕೋಟೆ ಪಾಳೆಯಗಾರರು, ಮಧುಗಿರಿ ಮಹಾನಾಡ ಪ್ರಭುಗಳು, ಗುಬ್ಬಿ ಹೊಸಹಳ್ಳಿ ಮಹಾನಾಡು ಪ್ರಭುಗಳು, ಹೊಳವನಹಳ್ಳಿ-ಕೊರಟಗೆರೆ ನಾಡಪ್ರಭುಗಳು, ಸಿರಾ ಪಾಳೆಯಗಾರರು, ಸಿರಾ ನವಾಬರು, ದೇವರಾಯಪಟ್ಟಣದ ಪಾಳೆಯಗಾರರ ಆಡಳಿತ, ಸಾಹಸ ಮತ್ತು ಸಾಧನೆಗಳ ಕುರಿತು ಲೇಖಕರು ಸಮಗ್ರವಾಗಿ ದಾಖಲಿಸಿದ್ದಾರೆ.

ಇಂತಹ ಸಣ್ಣಪುಟ್ಟ ಪಾಳೆಯಗಾರರನ್ನು  ನಿಯಂತ್ರಿಸಿ ಅವರ ಪ್ರದೇಶಗಳನ್ನು ಕಿತ್ತುಕೊಂಡು ಮೈಸೂರು ಸಂಸ್ಥಾನಕ್ಕೆ ಸೇರಿಸಿದ ಹೈದರಾಲಿ ತನ್ನ ಬಾಲ್ಯ ಜೀವನವನ್ನು ಕಳೆದದ್ದು ಜಿಲ್ಲೆಯ ಸಿರಾದಲ್ಲಿ ಎಂಬ ವಿಷಯವನ್ನು ಲೇಖಕರು ಉಲ್ಲೇಖಿಸಿದ್ದಾರೆ. ಹೈದರಾಲಿಯ ಚಾಣಾಕ್ಷತೆ, ಅವರ ವಂಶಸ್ಥರ ಮೂಲ, 1749ರ ದೇವನಹಳ್ಳಿಯ ಮುತ್ತಿಗೆ, ಆರ್ಕಾಟ್ ಪ್ರವೇಶ, ಮೈಸೂರು ರಾಜ್ಯದ ನವಾಬ ಹುದ್ದೆಗೆ ಏರಿದ್ದು, ನಂತರ ಮೈಸೂರಿನ ಸರ್ವಾದಿಕಾರಿಯಾಗಿದ್ದು, ತುಮಕೂರು ಜಿಲ್ಲೆಯ ಸುತ್ತಮುತ್ತ ಮರಾಠರ ರಾಜಕೀಯ ಚಟುವಟಿಕೆಗಳು ಹೆಚ್ಚದಾಗ ಸಿರಾವನ್ನು ಕ್ಯಾಂಪ್ ಮಾಡಿಕೊಂಡು ಅವರನ್ನು ಹತ್ತಿಕ್ಕಲು ನಡೆಸಿದ ಕಾರ್ಯಾಚರಣೆಗಳು,  ಹೀಗೆ ಹೈದರಾಲಿಯ ಕುರಿತಾದ ಹಲವು ಅಪರೂಪದ ಘಟನೆಗಳನ್ನು ಕೃತಿಯು ಒಳಗೊಂಡಿದೆ.

ಹೊಯ್ಸಳ ದೊರೆಗಳು ಜಿಲ್ಲೆಯಲ್ಲಿ ನೇರ ಆಳ್ವಿಕೆಯನ್ನು ಮಾಡದಿದ್ದರೂ ತಮ್ಮ ಪ್ರತಿನಿಧಿಗಳ ಮೂಲಕ ಆಡಳಿತ ನಡೆಸಿದರು. ಇವರು ಹುಳಿಯಾರನ್ನು ಆಡಳಿತ ಕೇಂದ್ರವನ್ನಾಗಿ ಮಾಡಿಕೊಂಡಿದ್ದರು. ಅರಳಗುಪ್ಪೆ, ನಾಗಲಾಪುರ, ತುರುವೇಕೆರೆ, ತಂಡಗ, ಹುಲಿಕಲ್, ಕರಡಿ, ತಿಪಟೂರು, ನೊಣವಿನಕೆರೆ ಸೇರಿದಂತೆ ಹಲವು ಪ್ರದೇಶಗಳಲ್ಲಿ  ಅಧಿಕಾರಿಗಳನ್ನು ನೇಮಿಸಿ ಅಲ್ಲಿ ಶ್ರೇಷ್ಠ ವಾಸ್ತುಶಿಲ್ಪವನ್ನು ಒಳಗೊಂಡ ದೇವಾಲಯಗಳನ್ನು ನಿರ್ಮಿಸಿದರು ಮತ್ತು  ಜಿಲ್ಲೆಯ ಪಶ್ಚಿಮ ಭಾಗವನ್ನು ಹೊಯ್ಸಳ ದೇಶ ಎಂದು ಕರೆಯುತ್ತಿದ್ದರು ಎಂಬ ಉಲ್ಲೇಖ ಕೃತಿಯಲ್ಲಿದೆ.

ಚಾಮರಾಜ ಒಡೆಯರ ಕಾಲದಲ್ಲಿ (ಕ್ರಿ.ಶ.1617-1630) ಚಿಕ್ಕನಾಯಕನಹಳ್ಳಿ ಪಾಳೆಯಗಾರರ ವಿರುದ್ಧ ಯದ್ಧ ಮಾಡುವ ಮೂಲಕ ಮೈಸೂರು ಅರಸರ ಆಳ್ವಿಕೆ ಜಿಲ್ಲೆಯಲ್ಲಿ ಆರಂಭವಾಯಿತು. ಕ್ರಿ.ಶ.1800ರಲ್ಲಿ ಆಡಳಿತ ನಡೆಸಲು ಅನುವಾಗುವಂತೆ ಪಾವಗಡ, ನಿಡುಗಲ್, ಮಧುಗಿರಿ, ಸಿರಾ ಪ್ರದೇಶಗಳಲ್ಲಿ ಮುಖ್ಯ ತರಫ್ ಗಳನ್ನು ರಚಿಸಿಕೊಂಡರು. ಟಿಪ್ಪುವಿನ ಮರಣಾನಂತರ ಇಡೀ ಪ್ರದೇಶ ಮೈಸೂರು ಮಹಾರಾಜರ ಆಳ್ವಿಕೆಗೆ ಒಳಪಟ್ಟಿತು.

ಬ್ರಿಟಿಷರು ಮೈಸೂರು ರಾಜ್ಯವನ್ನು ಎಂಟು ಜಿಲ್ಲೆಗಳನ್ನಾಗಿ ವಿಂಗಡಿಸಿದ್ದರು. ಇದರಲ್ಲಿ ತುಮಕೂರು ಜಿಲ್ಲೆಯೂ ಒಂದಾಗಿತ್ತು. 1866ರಲ್ಲಿ ಚಿತ್ರದುರ್ಗ ವಿಭಾಗಕ್ಕೆ ಸೇರಿದ್ದ ಸಿರಾ ಪಟ್ಟಣವನ್ನು ತುಮಕೂರು ಜಿಲ್ಲೆಗೆ ಸೇರಿಸಲಾಯಿತು. 1882ರಲ್ಲಿ ಚಿತ್ರದುರ್ಗ ಜಿಲ್ಲೆಯನ್ನು ಉಪ-ವಿಭಾಗವನ್ನಾಗಿ ಪರಿವರ್ತಿಸಿ ತುಮಕೂರು ಜಿಲ್ಲೆಗೆ ಸೇರಿಸಲಾಯಿತು. 1886ರಲ್ಲಿ ಪುನಃ ಚಿತ್ರದುರ್ಗಕ್ಕೆ ಜಿಲ್ಲೆಯ ಸ್ಥಾನಮಾನವನ್ನು ನೀಡಲಾಯಿತು. 1870 ರಿಂದ 1882ರಲ್ಲಿ ಸರ್ವೆಮಾಪನ ಕಾರ್ಯ ನಡೆದ ನಂತರ ತುಮಕೂರು, ಸಿರಾ, ಮಧುಗಿರಿ, ಕೊರಟಗೆರೆ, ಚಿಕ್ಕನಾಯಕನಹಳ್ಳಿ, ಹೊನ್ನವಳ್ಳಿ, ಕುಣಿಗಲ್ ಮತ್ತು ಕಡಬಾ ತಾಲ್ಲೂಕುಗಳನ್ನು ರಚಿಸಲಾಯಿತು. 1881-82ರಲ್ಲಿ ತುರುವೇಕೆರೆಯನ್ನು ಕಡಬಾ ತಾಲ್ಲೂಕಿನಿಂದ ಪ್ರತ್ಯೇಕಿಸಿ ತಿಪಟೂರು ತಾಲ್ಲೂಕಿನ ಉಪ ತಾಲ್ಲೂಕನ್ನಾಗಿ ಮಾಡಲಾಯಿತು. 1938ರಲ್ಲಿ ತುರುವೇಕೆರೆ ಉಪ ತಾಲ್ಲೂಕನ್ನು ಮೇಲ್ದರ್ಜೆಗೇರಿಸಿ ತಾಲ್ಲೂಕನ್ನಾಗಿ ಮಾಡಲಾಯಿತು.

ತುಮಕೂರು ಜಿಲ್ಲೆಯ ಭೌಗೋಳಿಕ ಲಕ್ಷಣಗಳು, ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಹುಟ್ಟಿ ಹರಿಯುವ ಜಯಮಂಗಲಿ, ಶಿಂಷಾ, ಸುವರ್ಣಮುಖಿ, ಗರುಡಾಚಲ. ಉತ್ತರ ಪಿನಾಕಿನಿ, ಕುಮದ್ವತಿ ನದಿಗಳ ಸಂಕ್ಷಿಪ್ತ ವಿವರಣೆಯನ್ನು ದಾಖಲಿಸಿರುವ ಲೇಖಕರು ಜಿಲ್ಲೆಯ ಪ್ರಮುಖ ಬೆಟ್ಟಗಳು, ಪ್ರಕೃತಿ ಸಂಪತ್ತು, ಪ್ರಾಣಿ ಸಂಕುಲ, ಕೃಷಿ, ವಾಯುಗುಣ ಮತ್ತು ಖನಿಜ ಸಂಪತ್ತಿನ ವಿವರಗಳನ್ನು, ಪೌರಾಣಿಕ ಹಿನ್ನೆಲೆಯನ್ನೂ ಕೂಡ ಕೃತಿಯಲ್ಲಿ ವಿವರಿಸಿದ್ದಾರೆ. ಕೃತಿಯ ಎರಡನೇ ಸಂಪುಟ ಹೊರಬಂದರೆ ಜಿಲ್ಲೆಯ ಮತ್ತಷ್ಟು ಇತಿಹಾಸದ ಮೇಲೆ ಬೆಳಕು ಚೆಲ್ಲಿದಂತಾಗುತ್ತದೆ.

ಹಳೇ ಮೈಸೂರು ಪ್ರದೇಶದಲ್ಲಿ ಶಾಸನಗಳನ್ನು ಸಂಗ್ರಹಿಸಿ ಕರ್ನಾಟಕದ ಇತಿಹಾಸಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದ ಶಾಸನ ತಜ್ಞರಾದ ಬಿ ಎಲ್ ರೈಸ್, ಇತಿಹಾಸಕಾರರಾದ ಹೆಚ್. ಕೆ. ಸ್ಲೆಟ್, ಕೆ.ವಿ.ರಾವ್, ಸೇರಿದಂತೆ ಜಿಲ್ಲೆಯ ಇತಿಹಾಸದ ದಾಖಲೆಗಳನ್ನು ಕಲೆ ಹಾಕಿದ ಎಲ್ಲರನ್ನೂ ಲೇಖಕರು ಸ್ಮರಿಸಿದ್ದಾರೆ. ತುಮಕೂರು ಜಿಲ್ಲೆಯ ಪಾಳೇಗಾರರ ಕುರಿತು ಅಮೂಲ್ಯ ಅಧ್ಯಯನ ಮಾಡಿ ದಾಖಲಿಸಿರುವ ಜಪಾನಿನ ಟೋಕಿಯೋ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ನೋಬುಹಿರೋ ಓತಾ ಕೃತಿಗೆ ಮುನ್ನುಡಿ ಬರೆದಿದ್ದು, ಕರ್ನಾಟಕ ಪ್ರಮುಖ ಇತಿಹಾಸಕಾರರೂ, ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಪ್ರೊ.ಚಿನ್ನಸ್ವಾಮಿ ಸೋಸಲೆಯವರು ಕೃತಿಗೆ ಬೆನ್ನುಡಿಯನ್ನು ಬರೆದಿದ್ದಾರೆ.

            ತುಮಕೂರು ಜಿಲ್ಲೆಯ ಇತಿಹಾಸವನ್ನು ತಿಳಿಯಬಯಸುವವರಿಗೆ, ವಿದ್ಯಾರ್ಥಿಗಳಿಗೆ, ಸಂಶೋಧಕರಿಗೆ ಮತ್ತು ಇತಿಹಾಸಕಾರರಿಗೆ ಇದೊಂದು ಮಹತ್ವದ ಪರಾಮರ್ಶನ ಕೃತಿಯಾಗಿದೆ. ಕ್ರೌನ್ ಆಕಾರದ 520 ಪುಟಗಳನ್ನು ಹೊಂದಿರುವ ಈ ಕೃತಿಯನ್ನು ಬೆಂಗಳೂರಿನ ಸುಹಾಸ್ ಗ್ರಾಫಿಕ್ಸ್ ಹೊರತಂದಿದೆ. ಕೃತಿಯ ಮುಖ ಬೆಲೆ 900 ರೂಪಾಯಿಗಳು. ಪ್ರತಿಗಳಿಗಾಗಿ ದೂರವಾಣಿ ಸಂಖ್ಯೆ 9448680920 ಅನ್ನು ಸಂಪರ್ಕಿಸಬಹುದು.

-ಡಾ. ಅಮ್ಮಸಂದ್ರ ಸುರೇಶ್