ತೆಂಗಿನಕಾಯಿ ರಾಜಕುಮಾರ

ತೆಂಗಿನಕಾಯಿ ರಾಜಕುಮಾರ

ದೂರದ ಇಂಡೋ- ಚೈನಾದಲ್ಲಿ ಒಬ್ಬ ಬಡ ಮಹಿಳೆಯಿದ್ದಳು. ಅವಳಿಗೆ ಒಬ್ಬನೇ ಮಗ. ಅವನು ವಿಚಿತ್ರವಾಗಿದ್ದ ಯಾಕೆಂದರೆ ಅವನು ತೆಂಗಿನಕಾಯಿಯಂತೆಯೇ ಕಾಣುತ್ತಿದ್ದ! ಕೈಕಾಲುಗಳಿಲ್ಲದ ಅವನ ಪುಟಾಣಿ ತಲೆ, ತೆಂಗಿನಕಾಯಿಯಂತೇ ಇದ್ದ ಅವನ ದೇಹದ ಮೇಲಿತ್ತು. ಅದೇನಿದ್ದರೂ ಅವನು ಬಹಳ ಬುದ್ಧಿವಂತ.

ಅದೊಂದು ದಿನ ತೆಂಗಿನಕಾಯಿ-ಪುಟ್ಟ ತಾಯಿಗೆ ಹೇಳಿದ, “ಅಮ್ಮಾ, ರಾಜನ ಅರಮನೆಗೆ ಹೋಗಿ, ನನ್ನನ್ನು ಅರಮನೆಯ ಎತ್ತುಗಳ ಕಾವಲುಗಾರನನ್ನಾಗಿ ಮಾಡಬೇಕೆಂದು ಭಿನ್ನವಿಸು." “ಕೈಕಾಲುಗಳಿಲ್ಲದ ನೀನು ಆ ಕೆಲಸ ಹೇಗೆ ಮಾಡುತ್ತಿ?” ಎಂದವಳು ಕೇಳಿದಾಗ, “ನೀನು ಅದೆಲ್ಲ ಚಿಂತೆ ಮಾಡಬೇಡ. ಅದನ್ನೆಲ್ಲ ನಾನು ನೋಡಿ ಕೊಳ್ತೇನೆ” ಎಂದ.

ತೆಂಗಿನಕಾಯಿ-ಪುಟ್ಟನನ್ನು ಭೇಟಿಯಾಗಲು ರಾಜ ಒಪ್ಪಿದ. ಆತನ ಬುದ್ಧಿವಂತಿಕೆ ನೋಡಿದ ರಾಜ, ಆತನನ್ನು ಎತ್ತುಗಳ ಕಾವಲುಗಾರನನ್ನಾಗಿ ಮಾಡಲು ಸಮ್ಮತಿಸಿದ. ಹಾಗಾಗಿ ಅರಮನೆಗೆ ಬಂದ ತೆಂಗಿನಕಾಯಿ-ಪುಟ್ಟ. ಮರುದಿನ ಒಬ್ಬ ಸೇವಕ ಅವನನ್ನು ಒಂದು ಎತ್ತಿನ ಮೇಲೆ ಕೂರಿಸಿದಾಗ, ಎತ್ತುಗಳನ್ನು ಅಟ್ಟಿಕೊಂಡು ಬಯಲಿಗೆ ಹೊರಟ.

ರಾಜನಿಗೆ ಮೂವರು ಮಗಳಂದಿರು. ಅವರನ್ನು ಸಾಮಾನ್ಯರಂತೆ ಬೆಳೆಸಿದ್ದ ರಾಜ. ಅವರಿಗೆ ಎಲ್ಲ ಮನೆಕೆಲಸಗಳನ್ನೂ ಕಲಿಸಿದ್ದ. ಮಧ್ಯಾಹ್ನದ ಹೊತ್ತಿಗೆ, ಕಿರಿಯ ಮಗಳನ್ನು ಬಯಲಿಗೆ ಬುತ್ತಿಯೊಂದಿಗೆ ಕಳಿಸಲಾಯಿತು. ಅವಳನ್ನು ನೋಡಿದಾಗ ತೆಂಗಿನಕಾಯಿ-ಪುಟ್ಟ ನೆಲದಲ್ಲಿ ಉರುಳಿಕೊಂಡು ಹೋಗಿ ಅವಳ ಕಾಲಿನ ಬಳಿ ನಿಂತ. ಅವಳು ಅವನಿಗೆ ಬುತ್ತಿಯೂಟ ಕೊಟ್ಟು ಅರಮನೆಗೆ ಹಿಂತಿರುಗಿದಳು. ಆ ದಿನ ಮುಸ್ಸಂಜೆ, ತೆಂಗಿನಕಾಯಿ-ಪುಟ್ಟ ಎಲ್ಲ ಎತ್ತುಗಳನ್ನೂ ವಾಪಾಸು ಕರೆ ತಂದ. ಎಲ್ಲ ಎತ್ತುಗಳೂ ಮರಳಿ ಬಂದಿರೋದನ್ನು ಕಂಡು ರಾಜನಿಗೆ ಸಂತೋಷವಾಯಿತು.

"ನಾಳೆ ಕತ್ತಿ ತಗೊಂಡು ಹೋಗಿ, ಸಾಧ್ಯವಾದಷ್ಟು ಬಳ್ಳಿಗಳನ್ನು ಕತ್ತರಿಸಿ ತಾ. ನನ್ನ ಮನೆ ರಿಪೇರಿಗೆ ಅವು ಬೇಕಾಗಿವೆ" ಎಂದ ರಾಜ. ಮರುದಿನ ಒಂದು ಎತ್ತಿನ ಬೆನ್ನಿಗೆ ಕತ್ತಿಯನ್ನು ಕಟ್ಟಿ, ಎತ್ತಿನ ಮೇಲೆ ತೆಂಗಿನಕಾಯಿ-ಪುಟ್ಟನನ್ನು ಕೂರಿಸಿ ಕಳಿಸಲಾಯಿತು. ಮಧ್ಯಾಹ್ನದ ಹೊತ್ತಿಗೆ, ಕಿರಿಯ ರಾಜಕುಮಾರಿ ಪುನಃ ಬುತ್ತಿ ತಗೊಂಡು ಹೊರಟಳು. ಅವಳಿಗೆ ಅವನು ಹೇಗೆ ಕೆಲಸ ಮಾಡುತ್ತಿದ್ದಾನೆಂದು ನೋಡುವ ಕುತೂಹಲ. ಅವಳು ಸದ್ದು ಮಾಡದೆ ಬಯಲಿಗೆ ಹೋಗಿ, ಒಂದು ದೊಡ್ಡ ಮರದ ಹಿಂದೆ ಅವಿತು ನೋಡಿದಳು. ಅವನೊಂದಿಗೆ ಹಲವು ಸೇವಕರು ಇರೋದನ್ನು ನೋಡಿ ರಾಜಕುಮಾರಿಗೆ ಅಚ್ಚರಿ. ಅವರಲ್ಲಿ ಕೆಲವರು ಎತ್ತುಗಳನ್ನು ನೋಡಿಕೊಳ್ಳುತ್ತಿದ್ದರು ಮತ್ತು ಉಳಿದವರು ಬಳ್ಳಿಗಳನ್ನು ಕತ್ತರಿಸುತ್ತಿದ್ದರು.

ಸ್ವಲ್ಪ ಹೊತ್ತಿನ ನಂತರ, ರಾಜಕುಮಾರಿ ತೆಂಗಿನಕಾಯಿ-ಪುಟ್ಟನನ್ನು ಕರೆದಳು; ತಾನು ಈಗ ತಾನೇ ಬಂದೆ ಎಂಬಂತೆ ನಟಿಸಿದಳು. ತಕ್ಷಣವೇ ಅಲ್ಲಿದ್ದ ಸೇವಕರೆಲ್ಲ ಕಣ್ಮರೆಯಾದರು. ಆ ದಿನ ಮುಸ್ಸಂಜೆ, ಎತ್ತುಗಳು ಹಿಂತಿರುಗಿದಾಗ, ಪ್ರತಿಯೊಂದರ ಬೆನ್ನಿಗೂ ಬಳ್ಳಿಗಳ ನಾಲ್ಕು ಕಟ್ಟುಗಳನ್ನು ಕಟ್ಟಿದ್ದನ್ನು ಕಂಡು ರಾಜನಿಗೆ ಅಚ್ಚರಿ.

"ನಾಳೆ ಕೊಡಲಿ ತಗೊಂಡು ಹೋಗಿ, ಸಾಧ್ಯವಾದಷ್ಟು ಮರಗಳನ್ನು ಕತ್ತರಿಸಿ ತಾ. ಅರಮನೆಗೆ ಒಂದು ಕೋಣೆಯನ್ನು ಸೇರಿಸ ಬೇಕಾಗಿದೆ” ಎಂದ ರಾಜ. ಮರುದಿನ ಒಂದು ಎತ್ತಿನ ಬೆನ್ನಿಗೆ ಕೊಡಲಿಯನ್ನು ಕಟ್ಟಿ, ಎತ್ತಿನ ಮೇಲೆ ತೆಂಗಿನಕಾಯಿ-ಪುಟ್ಟನನ್ನು ಕೂರಿಸಿ ಕಳಿಸಲಾಯಿತು. ಮಧ್ಯಾಹ್ನದ ಹೊತ್ತಿಗೆ, ಕಿರಿಯ ರಾಜಕುಮಾರಿ ಪುನಃ ಬುತ್ತಿ ಒಯ್ದಳು. ಕುತೂಹಲ ತಡೆಯಲಾಗದೆ, ಒಂದು ಮರಮನ್ನೇರಿ ನೋಡಿದಳು. ನಿನ್ನೆಯಂತೆ ಇವತ್ತೂ ತೆಂಗಿನಕಾಯಿ-ಪುಟ್ಟನ ಜೊತೆ ಹಲವು ಸೇವಕರಿದ್ದರು. ಅವರು ಮರಗಳನ್ನು ಕಡಿಯುತ್ತಿದ್ದರು. ಆಗ, ಅಲ್ಲೊಂದು ವಿಸ್ಮಯ ನಡೆಯಿತು. ತೆಂಗಿನಕಾಯಿ ಸೀಳಿಕೊಂಡು, ಅದರೊಳಗಿನಿಂದ ಪುಟ್ಟ ವ್ಯಕ್ತಿಯೊಬ್ಬ ಹೊರಬಂದ; ನೋಡುತ್ತಿದ್ದಂತೆಯೇ ಅವನು ಸುಂದರಾಂಗ ಯುವಕನಾಗಿ ಬೆಳೆದ!

ಸ್ವಲ್ಪ ಹೊತ್ತಿನಲ್ಲೇ ರಾಜಕುಮಾರಿ ತೆಂಗಿನಕಾಯಿ-ಪುಟ್ಟನನ್ನು ಕರೆದಳು; ತಾನು ಈಗ ತಾನೇ ಬಂದೆ ಎಂಬಂತೆ ನಟಿಸಿದಳು. ತಕ್ಷಣವೇ ಅಲ್ಲಿದ್ದ ಸೇವಕರೆಲ್ಲ ಕಣ್ಮರೆಯಾದರು ಮತ್ತು ಆ ಯುವಕ ತೆಂಗಿನಕಾಯಿಯೊಳಗೆ ಸೇರಿಕೊಂಡ.
ಆ ದಿನ ಮುಸ್ಸಂಜೆ, ತೆಂಗಿನಕಾಯಿ-ಪುಟ್ಟ ಅರಮನೆಗೆ ಎತ್ತುಗಳೊಂದಿಗೆ ಹಿಂತಿರುಗಿದಾಗ, ಭಾರೀ ಬಿರುಗಾಳಿ ಬೀಸತೊಡಗಿತು. ಆತ ಅಡುಗೆಕೋಣೆ ಸೇರಿಕೊಂಡ. ಅಲ್ಲಿ ಮೂವರು ರಾಜಕುಮಾರಿಯರು ಅಡುಗೆ ಮಾಡುತ್ತಿದ್ದರು. ಇಬ್ಬರು ಹಿರಿಯ ರಾಜಕುಮಾರಿಯರು “ನಿನ್ನ ಜಾಗ ಎತ್ತುಗಳ ಕೊಟ್ಟಿಗೆ, ಅಡುಗೆಕೋಣೆಯಲ್ಲ" ಎಂದು ಆತನಿಗೆ ಕಟುವಾಗಿ ಹೇಳಿದರು. ಮೂರನೆಯ ರಾಜಕುಮಾರಿ ಮಾತ್ರ ಅವನನ್ನು ನೋಡಿ ಮುಗುಳ್ನಕ್ಕಳು.

ಮೂರನೆಯ ರಾಜಕುಮಾರಿ ರೂಪವತಿ ಮಾತ್ರವಲ್ಲ, ಕರುಣಾಮಯಿಯೂ ಆಗಿದ್ದಾಳೆಂದು ತೆಂಗಿನಕಾಯಿ-ಪುಟ್ಟ ಗಮನಿಸಿದ. ಅವನಿಗೆ ಅವಳ ಮೇಲೆ ಪ್ರೀತಿ ಬೆಳೆಯಿತು. ಕೊನೆಗೆ ತನ್ನ ತಾಯಿಗೆ ಹೇಳಿದ, “ಮೂರನೆಯ ರಾಜಕುಮಾರಿಯನ್ನು ಮದುವೆ ಮಾಡಿ ಕೊಡಬೇಕೆಂದು ರಾಜನ ಬಳಿ ಭಿನ್ನವಿಸು." ಆತನ ಧೈರ್ಯ ಮತ್ತು ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡಿದ್ದ ರಾಜ. ರಾಜಕುಮಾರಿ ಒಪ್ಪಿದರೆ ಮದುವೆ ಮಾಡ್ತೇನೆಂದ. ಆಕೆ ಸಮ್ಮತಿಸಿದಳು.

ಆದ್ದರಿಂದ, ರಾಜ ಸಂಭ್ರಮದಿಂದ ಅವರ ಮದುವೆ ಮಾಡಿದ. ಅವರು ಸಂತೋಷದಿಂದ ಅರಮನೆಯಲ್ಲಿ ವಾಸ ಮಾಡತೊಡಗಿದರು. ಮದುಮಗ ಈಗ ತೆಂಗಿನಕಾಯಿ-ರಾಜಕುಮಾರನಾದ. ಹಗಲಿನಲ್ಲಿ ತೆಂಗಿನಕಾಯಿ ಚಿಪ್ಪಿನ ದೇಹ ಜೊಂದಿರುತ್ತಿದ್ದ ಆತ ರಾತ್ರಿಯಾಗುತ್ತಲೇ ಅದನ್ನು ಸೀಳಿಕೊಂಡು, ಸುಂದರಾಂಗ ಯುವಕನಾಗಿ ಹೊರಬರುತ್ತಿದ್ದ. ತನಗೆ ಭೂತವೊಂದರ ರಕ್ಷಣೆಯಿದ್ದು, ಅದು ತನಗೆ ಮ್ಯಾಜಿಕ್ ಶಕ್ತಿಗಳನ್ನು ಕೊಟ್ಟಿದೆಯೆಂದು ಅವನು ರಾಜಕುಮಾರಿಗೆ ತಿಳಿಸಿದ.  

ಅದೇನಿದ್ದರೂ ತನ್ನ ಪತಿ ಹಗಲಿನಲ್ಲಿ ತೆಂಗಿನಕಾಯಿಯ ರೂಪ ಪಡೆಯುವುದು ರಾಜಕುಮಾರಿಗೆ ಇಷ್ಟವಿರಲಿಲ್ಲ. ಹಾಗಾಗಿ, ಒಂದು ದಿನ ರಾತ್ರಿ ಅವಳು ತೆಂಗಿನ ಚಿಪ್ಪನ್ನು ಅಡಗಿಸಿಟ್ಟಳು. ಆದ್ದರಿಂದ, ಮರುದಿನದಿಂದ ಹಗಲಿನಲ್ಲಿಯೂ  ತೆಂಗಿನಕಾಯಿ-ರಾಜಕುಮಾರ ಸುಂದರಾಂಗ ಯುವಕನಾಗಿಯೇ ಇರಬೇಕಾಯಿತು. ಇದರಿಂದ ಎಲ್ಲರಿಗೂ ಆಶ್ಚರ್ಯ ಮತ್ತು ಸಂತೋಷವಾಯಿತು.