ತೋಳದ ಸಾರಥ್ಯ ?

ತೋಳದ ಸಾರಥ್ಯ ?

    KPSCಗೆ ಶ್ಯಾಂಭಟ್ಟರಂಥ ಭ್ರಷ್ಟರನ್ನು ಅಧ್ಯ‌ಕ್ಷಗಿರಿಗೆ  ತಂದಿದ್ದು,  ನನಗೆ 'ಕುರಿ ಕಾಯುವ ಕೆಲಸಕ್ಕೆ  ತೋಳವನ್ನು ನೇಮಿಸಿದಂತೆ' ಅನ್ನಿಸಿದ್ದು ಸುಳ್ಳಲ್ಲ.  ಬಿಡಿ, ನಮ್ಮಲ್ಲಿ ಇದು ಬಹಳ ಸಾಮಾನ್ಯ.  ಯಾವ ರಾಜಕಾರಣಿಯೂ `ಕಾಮಧೇನು'ವಿನಂಥ KPSCಯ ಮೂಗುದಾರವನ್ನು ಬೇರೆಯವರ ಸುಪರ್ದಿಗೆ  ಖಂಡಿತಾ ವಹಿಸುವುದಿಲ್ಲ.  ಅದು ತಮ್ಮ ಆಪ್ತನ ಕೈಲೇ  ಇರಬೇಕು.  ಒಂದು, ತಮಗೆ ಬೇಕಾದವರಿಗೆ, ಮತ್ತು `ತಕ್ಕ ಮೊತ್ತ' ಪಾವತಿಸುವ  `ಖರೀದಿದಾರ'ರಿಗೆ  ಕೆಲಸ ಕೊಡಿಸುವ ಆಡಳಿತ ಯಂತ್ರ ಇದು.
    ಜೀವನ ಪರ್ಯಂತ ಲಂಚವೆನ್ನುವ ಮೇಲ್ಸಂಪಾದನೆ / ಉಪ-ವೇತನವನ್ನೀವ  ಆಯ್ದ ಹುದ್ದೆಗಳಿಗೆ ಎಷ್ಟಾದರೂ ದುಡ್ಡು 'ಬಿಚ್ಚುವವರು' ಇರುವವರೆಗೆ, ಅದನ್ನು ಬಾಚಿಕೊಳ್ಳುವ ರಾಜಕಾರಣಿಗಳು/ಅಧಿಕಾರಿ ವರ್ಗ ಇದ್ದೇ ಇರುತ್ತದೆ. ಹೀಗೆ  `ಆಯ್ಕೆ'ಯಾದ  ಅಧಿಕಾರ ವರ್ಗ ತಾವೂ ದುಡ್ಡು ಮಾಡಿಕೊಂಡು, ರಾಜಕಾರಣಿಗಳಿಗೂ ಸರಬರಾಜು ಮಾಡುತ್ತಿರುತ್ತಾರೆ. ಇಂಥ ಅಧಿಕಾರಿವರ್ಗ, ತಮ್ಮನ್ನು `ಆಯ್ಕೆ' ಯಾಗಲು  ಸಹಕರಿಸಿದ್ದಕ್ಕಾಗಿ  ಈ ರಾಜಕಾರಣಿಗಳಿಗೆ - ಅವರು ಅಧಿಕಾರದಲ್ಲಿರಲಿ ಬಿಡಲಿ - ದಾಕ್ಷಿಣ್ಯದಲ್ಲಿದ್ದುಕೊಂಡು ಸಹಾಯ ಮಾಡುತ್ತಿರುತ್ತದೆ. ರಾಜಕಾರಣಿಗಳಿಗೆ ಬೇಕಾದ್ದೂ ಇದೇ! ತಾವು ಹೇಳಿದಂತೆ ಕೇಳುವ ಅಧಿಕಾರಿ ವರ್ಗವನ್ನೇ ತಮ್ಮ ಕ್ಷೇತ್ರಕ್ಕೆ `ವರ್ಗಾ'ಯಿಸಿಕೊಳ್ಳುತ್ತಾರೆ. ಒಟ್ಟಾರೆ ಇದು ಒಂದು ವಿಷ ವರ್ತುಲ.
    ಈ ಕಾರಣಕ್ಕೇ ನಮ್ಮ ಸಿದ್ದು KPSC ಸಾರಥ್ಯವನ್ನು ಶ್ಯಾಂಭಟ್ಟರಿಗೆ  ವಹಿಸಿದ್ದು. ಈ ಮನುಷ್ಯ (?)ನ  ಭ್ರಷ್ಟತನ ಕರ್ನಾಟಕದ  ಉದ್ದಗಲಕ್ಕೂ  ಚಿರಪರಿಚಿತ. ಎಲ್ಲ ಕಡೆ ಇದು ಸಾಮಾನ್ಯ ಎಂದು ಹೇಳುವುದು ತಪ್ಪು. ಯಾಕೆ, ಕೇಂದ್ರದಲ್ಲಿ UPSC ಇದೆಯಲ್ಲಾ? ಅದು ಯಾಕೆ  ಈ ಪಾಟೀ ಭ್ರಷ್ಟವಾಗಿಲ್ಲ? ಅದರ ಆಯ್ಕೆ ಪಾರದರ್ಶಕ  ಹಾಗೂ ವಿವಾದರಹಿತವಾಗಿದೆಯಲ್ಲಾ? KPSCಯನ್ನೂ ಅದರಂತೆ ಮಾಡಲು ನಮ್ಮ ರಾಜಕಾರಣಿಗಳಿಗೆ ಇಚ್ಛಾಶಕ್ತಿ ಇರಬೇಕಷ್ಟೇ. ಈಗಿನ ನೇಮಕದಿಂದಂತೂ ತದ್ವಿರುದ್ಧವಾದ ಸಂದೇಶ ರವಾನೆಯಾಗಿದೆಯಷ್ಟೇ.