ದಾಳಿಂಬೆಯ ಕಾಯಿ ಒಡೆಯುವ ಸಮಸ್ಯೆಗೆ ಪರಿಹಾರ

ದಾಳಿಂಬೆಯ ಕಾಯಿ ಒಡೆಯುವ ಸಮಸ್ಯೆಗೆ ಪರಿಹಾರ

ನಮ್ಮ ರಾಜ್ಯದಲ್ಲಿನ ಪ್ರಮುಖ ತೋಟಗಾರಿಕಾ ಬೆಳೆಗಳ ಸಾಲಿನಲ್ಲಿ ದಾಳಿಂಬೆ ಒಂದು. ದಾಳಿಂಬೆ ಬೆಳೆ ಎಂಬುದು ಲಾಟರಿ ಹೊಡೆದಂತೆ. ಅದೃಷ್ಟ  ಖುಲಾಯಿಸಿದರೆ ಕೋಟ್ಯಾಧಿಪತಿಯಾಗಬಹುದು. ಈ ಬೆಳೆಯಲ್ಲಿನ ಪ್ರಮುಖ ಸಮಸ್ಯೆ ಬೆಳೆದ ಕಾಯಿಗಳಲ್ಲಿ ಅರ್ಧಕ್ಕೂ ಹೆಚ್ಚು ಉಪಯೋಗಕ್ಕಿಲ್ಲದೆ ನಷ್ಟವಾಗುವುದು. ರೋಗ, ಶಾರೀರಿಕ ತೊಂದರೆ ಕೀಟ ಸಮಸ್ಯೆಗಳಿಂದ ಪಾರಾದರೆ ಇದು ಲಾಭದ ಉತ್ತಮ ಬೆಳೆ. ಈ ವರ್ಷವಂತೂ ಅಕಾಲ ಮಳೆಯ ಕಾರಣದಿಂದ ದಾಳಿಂಬೆ ಬೆಳೆ ಸಂಪೂರ್ಣವಾಗಿ ನೆಲಕಚ್ಚಿದೆ. ಮಾರುಕಟ್ಟೆಯಲ್ಲೂ ದಾಳಿಂಬೆ ಬೆಳೆ ಗಗನಕ್ಕೇರಿದೆ. ಪ್ರಾಕೃತಿಕ ವಿಕೋಪಗಳಿಂದ ರಕ್ಷಣೆ ಕಷ್ಟವಾದರೂ ಇನ್ನುಳಿದ ಕೀಟಬಾಧೆ, ಕಾಯಿ ಒಡೆಯುವ ಸಮಸ್ಯೆಗಳಿಂದ ತಕ್ಕಮಟ್ಟಿನ ರಕ್ಷಣೆಯನ್ನು ಪಡೆದುಕೊಳ್ಳಬಹುದು.

ಉತ್ತಮ ಬೆಲೆಯ ಕಾರಣದಿಂದ ದಾಳಿಂಬೆ ಬೆಳೆ ಪ್ರದೇಶಗಳು ಹೆಚ್ಚುತ್ತಿದೆ. ರಾಜ್ಯದ ಬಿಜಾಪುರ, ಬಾಗಲಕೊಟೆ, ಚಿತ್ರದುರ್ಗ, ಬಳ್ಳಾರಿ, ಕೊಪ್ಪಳ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಚಾಮರಾಜ ನಗರ, ಮೈಸೂರು ಮುಂತಾದ ಕಡೆ ಲಕ್ಷಾಂತರ ಕೃಷಿಕರು ದಾಳಿಂಬೆ ಬೆಳೆಸಲು ಮುಂದಾಗಿದ್ದಾರೆ. ದಾಳಿಂಬೆ  ಬೆಳೆಯಲ್ಲಿ ಹೆಚ್ಚಾಗಿ ಕಂಡುಬರುವ ಸಮಸ್ಯೆ ಕಾಯಿ ಒಡೆಯುವಿಕೆ ಮತ್ತು ಕಾಯಿಯ ನೋಟ ಕೆಡುವಿಕೆ. ಯಾವಾಗಲೂ ಮಾರುಕಟ್ಟೆಯಲ್ಲಿ ಉತ್ತಮ ನೋಟ ಇರುವ ಹಣ್ಣುಗಳಿಗೇ ಬೇಡಿಕೆ. ಬೆಳೆದು ಇನ್ನೇನು ಕಠಾವಿಗೆ ಸಿದ್ದವಾಗುವ ಸಮಯದಲ್ಲಿ ನೋಟವನ್ನು ಕೆಡಿಸುವ  ಕಾಯಿ ಒಡಕ, ಮತ್ತು ಸನ್ ಬರ್ನ್ (ದಾಳಿಂಬೆ ಮೈಮೇಲೆ ಕಲೆಗಳು ಬೀಳುವುದು) ಸಮಸ್ಯೆ ಕಂಡು ಬರುತ್ತದೆ. ದಾಳಿಂಬೆ ಮೇಲೆ ಕಲೆಗಳಿದ್ದರೆ ಅದರ ದರ ಕುಸಿಯುತ್ತದೆ.

ದಾಳಿಂಬೆಯ ಕಾಯಿಗೆ ಯಾವ ರೋಗಾಣು - ಕೀಟಾಣು ಬಾಧೆ ಇಲ್ಲದಿದ್ದರೂ ಕಲೆಗಳಾಗುತ್ತವೆ ಆಗುತ್ತದೆ. ಬೇಸಿಗೆಯ ಕಾಲದಲ್ಲಿ ಮಧ್ಯಾಹ್ನದ ಬಳಿಕ ಬಿಸಿಲು ಕಾಯಿಗಳಿಗೆ ಬಿಳುವುದರಿಂದ ಕಾಯಿಯ ಮೇಲೆ ಸನ್ ಬರ್ನ್ ಉಂಟಾಗುತ್ತದೆ. ಆಗ ಆ ಭಾಗ ಕಪ್ಪಗಾಗಿ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ವಿಕ್ರಯವಾಗುತ್ತದೆ. ಇದರ ನಿಯಂತ್ರಣಕ್ಕೆ ಗಿಡವನ್ನು ಪ್ರೂನಿಂಗ್ ಮಾಡುವಾಗ ಕಾಯಿ ಬಿಡುವ ಗೆಲ್ಲುಗಳಿಗೆ ನೆರಳು ಒದಗಿಸುವಂತೆ ಮೇಲು ಭಾಗದಲ್ಲಿ  ಗೆಲ್ಲನ್ನು ಬಿಡಬೇಕು. ಇದು ನೆರಳನ್ನು ಕೊಡುವಂತಿದ್ದು ಕಾಯಿಯ ಮೇಲೆ ನೇರ ಸೂರ್ಯನ ಶಾಖ ತಾಗದಂತಿರಬೇಕು.

ಕಾಯಿ ಬಿಟ್ಟು ೧೫ ದಿನ ಕಳೆದ ಮೇಲೆ ಬಿಸಿಲಿನ ತೀವ್ರತೆಯನ್ನು ಗಮನಿಸಿ ೧೫ ದಿನಕ್ಕೊಮ್ಮೆ  ಕಾಯಿಗಳ ಮೇಲೆ  ಕೋಲಿನ್ (Kaolin - Inert Clay) ಕಾಯಿಗಳ ಮೇಲೆ ಸಿಂಪರಣೆ ಮಾಡಬೇಕು. ಮೊದಲು ಸಿಂಪಡಿಸುವಾಗ ೫ % ವನ್ನು ನಂತರ ೨.೫ % ವನ್ನು ಸಿಂಪರಣೆ ಮಾಡಬೇಕು. ದಾಳಿಂಬೆ ಸಸ್ಯಕ್ಕೆ ನೇರ ಬಿಸಿಲು ಬಿದ್ದೇ ಬೀಳುತ್ತದೆ ಎಂಬ ಖಾತ್ರಿ ಇದ್ದರೆ ಪ್ರತೀ ಸಸಿಗೆ ನಾಲ್ಕು ಬದಿಗೆ ಗೂಟ ಹಾಕಿ ಇಲ್ಲವೇ ಹಾಗೆಯೇ ೩೫ % ನೆರಳು ಒದಗಿಸುವ ನೆರಳು ಬಲೆಯನ್ನು  ಹೊದಿಸುವುದು ಉತ್ತಮ. ಈ ನೆರಳು ಬಲೆಯನ್ನು ೩-೪ ವರ್ಷ ಉಪಯೋಗ ಮಾಡಬಹುದು.

ಕಾಯಿಗಳಿಗೆ  ಬಟರ್ ಪೇಪರ್ ಸುತ್ತುವುದೂ ಸಹ ಪರಿಣಾಮಕಾರಿ. ಇದು ತುಂಬಾ ಕೆಲಸ ಅಪೇಕ್ಷಿಸುವ ಕಾರಣ ಅದಕ್ಕಿಂತ ನೆರಳು ಬಲೆ ಹಾಕುವುದು ಅಗ್ಗವಾಗುತ್ತದೆ. ನೆರಳು ಬಲೆಯಿಂದ ಕೆಲವು (ಕಾಯಿ ಕೊರಕ, ನುಶಿ, ಬಿಳಿ ನೊಣ) ಕೀಟಗಳ ಸೋಂಕು ಸಹ ಕಡಿಮೆಯಾಗುತ್ತದೆ.

ದಾಳಿಂಬೆ ಹೊಲದಲ್ಲಿ ಹೆಬ್ಬೇವಿನ ಸಸಿಗಳನ್ನು ನಾಟಿ ಮಾಡುವುದರಿಂದ ನೆರಳು ಹೆಚ್ಚಿಸಿ ಸೂರ್ಯನ ಶಾಖವನ್ನು ಕಡಿಮೆ ಮಾಡಬಹುದು. ಹೆಬ್ಬೇವಿನ ಗಿಡ ವೇಗವಾಗಿ, ಎತ್ತರವಾಗಿ  ಬೆಳೆಯುತ್ತದೆ. ಅದು ಗಾಳಿಗೆ ವಾಲುತ್ತಾ ಇರುವಾಗ ಕಾಯಿಯ ಮೇಲೆ ನಿರಂತರ ಬಿಸಿಲು ಬೀಳುವಿಕೆಯನ್ನು  ತಪ್ಪಿಸುತ್ತದೆ. ಮರವನ್ನು ೧೦ ವರ್ಷ ಬೆಳೆಸಿದ ನಂತರ ಅದಕ್ಕೆ  ಉತ್ತಮ ಬೆಲೆಯೂ ಇದೆ.

ಕಾಯಿ ಒಡೆಯುವ ಸಮಸ್ಯೆ ಎಲ್ಲಾ ಕಡೆ ತೀವ್ರವಾಗಿದ್ದು, ಇದರಿಂದ ಭಾರೀ ನಷ್ಟ ಉಂಟಾಗುತ್ತದೆ. ಬೆಳೆಯುತ್ತಿರುವ ಕಾಯಿಗಳು ಒಡೆಯಲು  ಪ್ರಾರಂಭವಾಗುವುದಕ್ಕೆ ಕಾರಣ ಅತಿಯಾದ ಇಬ್ಬನಿ ಬೀಳುವಿಕೆ, ತಕ್ಷಣ ಮಳೆ ಬರುವಿಕೆ, ಹಗಲಿನ ತಾಪಮಾನ ಹೆಚ್ಚು, ರಾತ್ರಿಯದ್ದು ಕಡಿಮೆ ಮತ್ತು ಹೆಚ್ಚು ಸಮಯ ನೀರಾವರಿ ಮಾಡದೆ ಒಮ್ಮೆಲೇ ಅಧಿಕ ನೀರಾವರಿ ಮಾಡುವುದರಿಂದ.

ಇದನ್ನು ಸೂಕ್ತ ಬೇಸಾಯ ಕ್ರಮ ಅನುಸರಿಸಿ ಗಣನೀಯವಾಗಿ ಕಡಿಮೆ ಮಾಡಿಕೊಳ್ಳಬಹುದು. ದಾಳಿಂಬೆ ಕಾಯಿ ಹೂವು ಬಿಟ್ಟ ಮೇಲೆ ನೀರಾವರಿ ಕಡಿಮೆ ಮಾಡಬಾರದು. ಹೆಚ್ಚೂ ಮಾಡಬಾರದು. ಸಾಮಾನ್ಯವಾಗಿ ನೀರಾವರಿಯ ವ್ಯತ್ಯಾಸವೇ ಈ ರೀತಿ ಆಗಲು ಕಾರಣ. ಹೂ ಬಿಡುವ ಹಂತದಲ್ಲಿ ಕೊಡುವ ನೀರನ್ನು ಕಾಯಿ ಬೆಳವಣಿಗೆ ಆಗುವ ಸಮಯದ ತನಕ ಹೆಚ್ಚಿಸುತ್ತಾ ಬರಬೇಕು. ಬರೇ ನೀರು ಹೆಚ್ಚಿಸುವಿಕೆ ಮಾತ್ರವಲ್ಲದೆ ಒಮ್ಮೆ ಪೊಟ್ಯಾಶಿಯಂ ನೈಟ್ರೇಟ್ ನಂತರ  ಪೊಟಾಶಿಯಂ ಸಲ್ಫೇಟ್ ಹೀಗೆ ಗೊಬ್ಬರ ಬದಲಾಯಿಸಿ ಕೊಡುತ್ತಿರಬೇಕು. ಪೊಟಾಶಿಯಂ ಸಲ್ಫೇಟ್ ಗೊಬ್ಬರವನ್ನು ೧ ಕಿಲೋ ೨೦೦ ಲೀ. ನೀರಿಗೆ ಬೆರೆಸಿ ಕಾಯಿ ಬೆಳವಣಿಗೆಯ ಹಂತದಲ್ಲಿ ಸಿಂಪರಣೆ ಮಾಡುವುದು ಕಾಯಿ ಒಡೆಯದಂತೆ ತಡೆಯಲು ಸಹಕಾರಿ. ಹೂ ಬಿಟ್ಟು ಕಾಯಿ ಆಗುವ ಸಮಯದಲ್ಲಿ ಒಮ್ಮೆಯಾದರೂ ಪ್ರತೀ ಸಸಿಗೆ ೨೦ ಗ್ರಾಂ ನಂತೆ ಕ್ಯಾಲ್ಸಿಯಂ ನೈಟ್ರೇಟ್ , ಅಥವಾ ಕ್ಯಾಸಿಯಂ ಅಮೋನಿಯಂ ನೈಟ್ರೇಟ್ ಗೊಬ್ಬರವನ್ನು ಕೊಡಬೇಕು.

ಕಾಯಿಯು ಬೆಳವಣಿಗೆ ಆಗುವ ಸಮಯದಲ್ಲಿ ಜಿಬರಲಿಕ್ ಆಸಿಡ್ ೧೨೦ ಪಿ ಪಿ ಎಂ, GA 3 , ಬೆನ್ಜಿಲಮಿನೋಪುರಿನ್ (Benzylaminopurine BS 6) ಮತ್ತು ೦.೨ % ಬೋರಾನನ್ನು ಕೊಡುವುದರಿಂದ ಬಹುತೇಕ ಕಾಯಿ ಒಡೆಯುವಿಕೆಯನ್ನು  ನಿಯಂತ್ರಿಸಬಹುದು ಅಥವಾ ಕಾಯಿ ಬೆಳೆಯುವ ಸಮಯದಲ್ಲಿ ೧ ಕಿಲೋ ಕ್ಯಾಲ್ಸಿಯಂ ಕ್ಲೊರೈಡ್ ೧ ಕಿಲೋ ಮೆಗ್ನೀಶಿಯಂ ಕ್ಲೋರೈಡ್ ೧೦೦ ಲೀ ನೀರಿನಲ್ಲಿ ಮಿಶ್ರಣ ಮಾಡಿ  ಸಿಂಪರಣೆ ಮಾಡುವುದರಿಂದ ಕಾಯಿ ಒಡೆಯುವಿಕೆ ಕಡಿಮೆಯಾಗುತ್ತದೆ. ಈ ಸಿಂಪರಣೆಯ ನಂತರ ೧೫ ದಿನ ಬಿಟ್ಟು ೧.೫ ಕಿಲೋ ಡಿ ಎ ಪಿ  ಮತ್ತು ೦.೭೫ ಕಿಲೋ ಮೆಗ್ನೀಶಿಯಂ ಸಲ್ಫೇಟ್ ೧೦೦ ಲೀ ನೀರಿನಲ್ಲಿ ಬೆರೆಸಿ ಸಿಂಪರಣೆ ಮಾಡಬೇಕು. ಉತ್ತಮ ಕಾಯಿ ಪಡೆಯುವುದಕ್ಕಾಗಿ ಹೂವು ಮತ್ತು ಕಾಯಿಗಳ ವಿರಳಗೊಳಿಸುವಿಕೆ ಮಾಡಬೇಕು. ಒಂದು ಗಿಡದಲ್ಲಿ  ೭೦-೮೦ ಕಾಯಿಯ ಬದಲಿಗೆ ೫೦ -೪೦ ಕಾಯಿಯನ್ನು  ಮಾತ್ರವೇ ಉಳಿಸಿಕೊಂಡರೆ ಎಲ್ಲವೂ ಉತ್ತಮ ಕಾಯಿಯಾಗಿ ಆದಾಯಕ್ಕೆ ಕೊರತೆಯಾಗದು.

ಮಾಹಿತಿ ಸಹಕಾರ: ರಾಧಾಕೃಷ್ಣ ಹೊಳ್ಳ

ಚಿತ್ರ ಕೃಪೆ: ಅಂತರ್ಜಾಲ ತಾಣ