ದಾಸಪರಂಪರೆಯ ಅನರ್ಘ್ಯ ರತ್ನ-- ಪುರಂದರ ದಾಸರು

ದಾಸಪರಂಪರೆಯ ಅನರ್ಘ್ಯ ರತ್ನ-- ಪುರಂದರ ದಾಸರು

ಕರ್ನಾಟಕ ಶಾಸ್ತ್ರೀಯ ಸಂಗೀತದ ಆಡೊಂಬಲದಲ್ಲಿ ಅಪಾರ ಸಾಧನೆ ಮಾಡಿದ ಭಕ್ತಾಗ್ರೇಸರ, ದಾಸಶ್ರೇಷ್ಠರಾದ ಪುರಂದರ ದಾಸರು ಓರ್ವರು. ವ್ಯಾಸತೀರ್ಥರ ಪ್ರೀತಿಯ ಶಿಷ್ಯರಾಗಿ, ದಾಸರಾಗಿ ಲೋಕೋದ್ಧಾರಕರಾದ ಪುರಂದರ ದಾಸರು ಕೋಟಿ ಸಂಪತ್ತಿನ ಒಡೆಯರಾಗಿದ್ದವರು.

ಪೂರ್ವಾಶ್ರಮದಲ್ಲಿ ಶೀನಪ್ಪ ನಾಯಕ ಎಂಬ ಹೆಸರಿನಿಂದ ಪುರಂದರಗಡದಲ್ಲಿದ್ದ ಇವರು, ತನ್ನ ವಂಶ ಪಾರಂಪರ್ಯ ವೃತ್ತಿ ಚಿನ್ನ, ಬೆಳ್ಳಿ, ವಜ್ರ ವ್ಯಾಪಾರದೊಂದಿಗೆ, ಲೇವಾದೇವಿ ವ್ಯವಹಾರವನ್ನು ಮಾಡುತ್ತಿದ್ದರು. ಒಂದು ಕಿಲುಬುಕಾಸನ್ನು ಸಹ ಇತರರಿಗೆ ನೀಡದ ಸ್ವಭಾವ ಅವರದಾಗಿತ್ತು ಎಂದು ತಿಳಿದು ಬರುತ್ತದೆ. ಇವರಿಗೆ ನವಕೋಟಿ ನಾರಾಯಣನೆಂಬ ಅಡ್ಡ ಹೆಸರೂ ಸಹ ಇತ್ತು. ಸಾಧ್ವಿ, ಕರುಣಾಮಯಿ, ಉದಾತ್ತ ಧ್ಯೇಯಗಳನ್ನು ಹೊಂದಿದ ಗುಣವಂತೆ ಸರಸ್ವತಿಬಾಯಿ ಇವರ ಧರ್ಮಪತ್ನಿ. ಅಪಾರ ದೈವಭಕ್ತೆಯಾಗಿದ್ದ ಪತ್ನಿಯ ಗುಣ ಅವರಿಗೆ ಹಿಡಿಸುತ್ತಿರಲಿಲ್ಲ. ದೈವ, ದೇವರ ಹೆಸರಿನಲ್ಲಿ ದಾನಧರ್ಮ ಮಾಡುವುದನ್ನು ವಿರೋಧಿಸುತ್ತಿದ್ದರು.

ಭಕ್ತರನ್ನು ಪರೀಕ್ಷಿಸಲು ಭಗವಂತನಿರುತ್ತಾನೆ, ಎಂಬುದು ಇವರ ಪಾಲಿಗೆ ಸತ್ಯವಾಯಿತು. ಓರ್ವ ಬ್ರಾಹ್ಮಣನು ತನ್ನ ಮಗನ ಉಪನಯನಕ್ಕೆ ಧನ ಯಾಚನೆಗಾಗಿ ಅಂಗಡಿಗೆ ಬಂದನಂತೆ. ಇವರು ಕೊಡದಿದ್ದಾಗ ಅವರ ಮನೆಗೆ ಹೋಗಿ ಪತ್ನಿಯಲ್ಲಿ ಕೇಳಿದರಂತೆ. ಆ ಸಾಧ್ವೀಮಣಿ ತನ್ನ ಮೂಗಿನ ನತ್ತನ್ನೇ ತೆಗೆದು ಕೊಟ್ಟಳಂತೆ. ಅದನ್ನು ಗಿರವಿ ಇಡಲು ಅಂಗಡಿಗೆ ತಂದಾಗ, ಇದು ಪತ್ನಿಯದೇ ಎಂಬ ಸಂಶಯ ಬಂದು, ಅವರನ್ನು ಅಲ್ಲಿ ಕೂರಿಸಿ, ಹೆಂಡತಿ ಹತ್ತಿರ ಮೂಗುತಿ ಎಲ್ಲಿ ಕೇಳಿದರಂತೆ. ಸಿಟ್ಟಿನಿಂದ ಗುಡುಗಿದ ಪತಿಯನ್ನು ಎದುರಿಸಲಾಗದೆ ವಿಷ ಕುಡಿಯಲು ಹೊರಟಾಗ, ಅದರಲ್ಲಿ ಬ್ರಾಹ್ಮಣನಿಗಿತ್ತ ನತ್ತು ಗೋಚರಿಸಿತಂತೆ. ಅದನ್ನು ತಂದು ಪತಿಯ ಕೈಗಿತ್ತಳಂತೆ.

ಕಬ್ಬಿಣದ ತಿಜೋರಿಯಲ್ಲಿಟ್ಟ ಮೂಗುತಿ ಇಲ್ಲಿ ಹೇಗೆ ಬಂತು? ಎಂದು ಯೋಚಿಸಿ, ತಕ್ಷಣ ತನ್ನ ಅಂಗಡಿಗೆ ಬಂದರಂತೆ. ಈ ಪವಾಡ ದೇವರಿಂದ ಮಾತ್ರ ಸಾಧ್ಯ ಎಂದರಿತರು. ಇದು ಆ ನಾರಾಯಣನದೇ ಕೆಲಸವೆಂದು ನಂಬಿದ ಅವರು ತನ್ನ ಪತ್ನಿಯನ್ನು ಕೊಂಡಾಡಿ, ಭಗವಂತನ ಸಾಕ್ಷಾತ್ಕಾರ ಮಾಡಿಸಿದ ನಿನಗೆ ಕೋಟಿ ನಮನಗಳೆಂದು ಪತ್ನಿಗೆ ಹೇಳಿದರಂತೆ. ತನ್ನ ಸಂಪತ್ತೆಲ್ಲವನ್ನೂ ದೀನರಿಗೆ, ಬಡವರಿಗೆ ಹಂಚಿದರಂತೆ.

ಕರ್ನಾಟಕ ಮತ್ತು ಆಂಧ್ರದಲ್ಲಿ ತನ್ನ ಕೀರ್ತನೆಗಳ ಮೂಲಕ ಛಾಪನ್ನು, ಜನಜಾಗೃತಿಯನ್ನು ಮೂಡಿಸಿದ ಮಹಾನುಭಾವರು. ಆಡು ಭಾಷೆಯ ಮೆರವಣಿಗೆಯೇ ದಾಸರ ಪದಗಳಲ್ಲಿ ಅಡಗಿದೆ. ಹಂಪೆಯಲ್ಲಿದ್ದ ವ್ಯಾಸತೀರ್ಥರಿಂದ ಸನ್ಯಾಸ ದೀಕ್ಷೆ ಪಡೆದ  ಶೀನಪ್ಪನಾಯಕರು ‘ಪುರಂದರದಾಸ’ರಾದರು. ‘ಪುರಂದರ ವಿಠಲ’ ಎಂಬ ಹೆಸರಿನಿಂದ ಒಂದು ಅಂದಾಜಿನ ಪ್ರಕಾರ ೪.೭೫ ಲಕ್ಷ ಕೀರ್ತನೆಗಳನ್ನು ರಚಿಸಿ ಹಾಡಿದ್ದಾರೆಂದು ಪ್ರತೀತಿಯಿದೆ. ದೇಶಾಟನೆ, ತೀರ್ಥಕ್ಷೇತ್ರ ಸಂದರ್ಶನ ಮಾಡಿ ಅನುಭವ ಪಡೆದರು.ದಾಸರೆಂದರೆ ಪುರಂದರ ದಾಸರು ಗುರುಗಳಾದ ವ್ಯಾಸತೀರ್ಥರು ಹಾಡಿ ಹೊಗಳಿದರಂತೆ.

ಶ್ರೀ ಹರಿಯ ಅವತಾರಗಳ ವರ್ಣನೆ, ಎಲ್ಲಾ ದೇವ ದೇವಿಯರ ಸ್ತುತಿ, ಮಧ್ವಾಚಾರ್ಯರ ತತ್ವಗಳ ಪ್ರತಿಪಾದನೆ ಕೀರ್ತನೆಗಳಲ್ಲಿದೆ. ಮೂಢನಂಬಿಕೆ, ದಾಸ್ಯತನ, ಜನಜಾಗೃತಿ, ಹಿತೋಪದೇಶ, ವ್ಯವಹಾರ ವಿಷಯಗಳನ್ನೂ ಕಾಣಬಹುದು. ರಾಗ, ತಾಳ, ಲಯ, ಭಾವಬದ್ಧವಾಗಿರುವ, ಭಕ್ತಿರಸ ಧುಮ್ಮಿಕ್ಕುವ ಸುಮಧುರ ರಚನೆಗಳನ್ನು ಬರೆದವರು ಪುರಂದರ ದಾಸರು.  ಧಾರ್ಮಿಕ ಜೀವನ ತತ್ವ, ಅಂತರಂಗ ನಿವೇದನೆ, ಭಗವಂತನ ಸಾಕ್ಷಾತ್ಕಾರ ತಮ್ಮ ರಚನೆಯ ವಿಶೇಷತೆಗಳಾಗಿವೆ. ‘ಎಲುಬಿಲ್ಲದ ನಾಲಿಗೆ ಹೇಗೂ ಹೊರಳುತ್ತದೆ’ ಎಂಬ ಕಡುಸತ್ಯವನ್ನು ‘ಆಚಾರವಿಲ್ಲದ ನಾಲಿಗೆ ನಿನ್ನ ನೀಚಬುದ್ಧಿಯ ಬಿಡು ನಾಲಿಗೆ’ ನಾವೆಲ್ಲ ಹಾಡಿದವರು ಕೇಳಿದವರು.

‘ಮಾನವ ಜನ್ಮ ದೊಡ್ಡದು, ಇದ ಹಾನಿ ಮಾಡಲು ಬೇಡ ಹುಚ್ಚಪ್ಪಗಳಿರಾ’, ಎಂಥ ಭಾವವಿದೆ, ಎಚ್ಚರಿಕೆಯ ಕರೆಗಂಟೆಯಿದೆ, ಸಂದೇಶವಿದೆ. ‘ಪಿಳ್ಳಂಗೋವಿಯ ಚೆಲುವ ಕೃಷ್ಣನ’ ಎಷ್ಟು ನವಿರಾದ ಲಾಸ್ಯವಿದೆ. ‘ಜಗದ ಮನುಜರ ಹಗರಣವ ನೋಡಿ ನಗೆಯು ಬರುತಿದೆ’ ಹಾಸ್ಯ, ವಿಡಂಬನೆಯಿದೆ. ‘ಭಾಗ್ಯದ ಲಕ್ಷ್ಮೀ ಬಾರಮ್ಮ ಕೊಂಡಾಡುವಿಕೆ’ ವರ್ಣನೆಯಿದೆ . 

ಯಮದೂತರು ಬಂದೆಳೆದೊಯ್ವಾಗ*

*ಮಾಳಿಗೆ ಮನೆ ಸಂಗಡ ಬಾರದಯ್ಯ* ವ್ಯಾಮೋಹ ಬೇಡವೆಂದವರು.

*ಒಡೆಯ ಶ್ರೀ ಪುರಂದರ ವಿಠಲನ ಚರಣವ*

*ದೃಢ ಭಕ್ತಿಯಲಿ ನೀ ನೆನೆಸಿಕೊ ಮನುಜ* ಎಂದು ಕರೆಯಿತ್ತರು.

ಕೈಯಲ್ಲಿ ತಂಬೂರಿ  ಹಿಡಿದು ಹಾಡುವವರೆಲ್ಲ ದಾಸರಾಗಲು ಸಾಧ್ಯವಿಲ್ಲ,ಅದಕ್ಕೊಂದು ರೀತಿ-ನೀತಿಯಿದೆ.ಉತ್ತಮ ನೀತಿ,ಸನ್ಮಾರ್ಗಗಳನ್ನು ಬಿಂಬಿಸುತ್ತಾ, ಊರೂರು ಸುತ್ತಿದ ಪುರಂದರದಾಸರು ಸಂಗೀತ ದಾಸಸಾಹಿತ್ಯಕ್ಕೆ, ಶಾಸ್ತ್ರಕ್ಕೆ ಒಂದು ನೂತನ ಆಯಾಮವನ್ನೇ ನೀಡಿದರು.

ಕರ್ನಾಟಕ ಶಾಸ್ತ್ರೀಯ ಸಂಗೀತಕ್ಕೆ ಇವರು ಬುನಾದಿಯನ್ನೇ ಹಾಕಿಕೊಟ್ಟರು ಎಂದರೂ ತಪ್ಪಾಗಲಾರದು.ಭಕ್ತಿಮಾರ್ಗ ಹೆಚ್ಚು ಜನಜನಿತವೆನ್ನ ಬಹುದು.ತುಳಸಿಯ ಮಹತ್ವವನ್ನು ತನ್ನ ಕೀರ್ತನೆಗಳಲ್ಲಿ ಸಾರಿದ ಮಹಾತ್ಮರು. ಕ್ರಿ.ಶ.೧೪೮೪--೧೫೬೪ ಜೀವಿತ ಕಾಲವೆಂದು ತಿಳಿದು ಬರುತ್ತದೆ. ಪುಷ್ಯ ಮಾಸದ ಅಮಾವಾಸ್ಯೆಯಂದು ದೇಹತ್ಯಾಗ ಮಾಡಿದರು ಈ ದಿನವನ್ನು ಅವರ ನೆನಪಿಗಾಗಿ ಪುರಂದರ  ಆರಾಧನೋತ್ಸವವೆಂದು ಆಚರಿಸಲಾಗುತ್ತಿದೆ. ನಮ್ಮ ಕನ್ನಡ ನಾಡಿನ ಹೆಮ್ಮೆಯ *ದಾಸಪರಂಪರೆಯ ಶ್ರೇಷ್ಠರಾದ ಪುರಂದರದಾಸರನ್ನು ಸದಾ ಕಾಲ ನೆನೆಯೋಣ

-ರತ್ನಾ ಕೆ.ಭಟ್ ತಲಂಜೇರಿ

(ಸಂಗ್ರಹ: ಭಾರತದ ಧಾರ್ಮಿಕ ಪುರುಷರು)

ಚಿತ್ರ ಕೃಪೆ: ಇಂಟರ್ನೆಟ್ ತಾಣ