ದೀಪದ ಹಬ್ಬ ಮತ್ತು ಬಲಿಪಾಡ್ಯ

ದೀಪದ ಹಬ್ಬ ಮತ್ತು ಬಲಿಪಾಡ್ಯ

ಕವನ

ಮಣ್ಣಿನ ಹಣತೆಲಿ ಬತ್ತಿಯ ಜೋಡಿಸಿ

ಎಣ್ಣೆಯ ಎರೆಯುತ ಪ್ರೀತಿಲಿ ಉರಿಸಿ/

ಸಣ್ಣ ಮಕ್ಕಳು ಕೂಡುತ ಆಡುತ

ಬಣ್ಣಬಣ್ಣದ ದಿರಿಸನು ಧರಿಸುತ//

 

ಮನದ ತಮವನು ಕಳೆದು ಹೊಳೆಯುತ

ತನುವ ಕೊಳೆಯನು ತೊಳೆದು ಬೆಳಗುತ/

ಕತ್ತಲ ರಾಶಿಯ ಹೊಡೆದು ಓಡಿಸುತ

ಸುತ್ತಲು ಎಲ್ಲರೂ ಒಂದಾಗಿ ಸೇರುತ//

 

ದುಷ್ಟ ನರಕಗೆ ಮೋಕ್ಷ ಕರುಣಿಸಿದ

ಕೆಟ್ಟ ಹುಳವನು ಕುಟ್ಟಿ ಕೆಡಹಿದ/

ದಿಟ್ಟ ನಿಲುವಿನ ಗೋವಿಂದ ಮುರಾರಿ

ಪಟ್ಟ ಭದ್ರೆಯರ ಹೃದಯ ಕಿಶೋರ//

 

ಬಲಿಯ ಯಜ್ಞದಲಿ ವಿಘ್ನ ತಂದನು

ಮಹಾವಿಷ್ಣು ವಟು ವಾಮನನಾದನು/

ಅಹಮಿಕೆ ಗರ್ವವ ತುಳಿದು ಹಾಕಿದನು

ಮೂರು ಹೆಜ್ಜೆಯಲಿ ಪಾತಾಳಕೆ ತಳ್ಳಿದನು//

 

ನರಕ ಚತುರ್ದಶಿ ದಿನ ವಿಶೇಷವು

ಗೋವಿನ ಪೂಜೆ ಮಹಾಪುಣ್ಯವು/

ಲಕ್ಷ್ಮೀ ಕಟಾಕ್ಷ  ಒಲಿದು ಬರುವುದು

ಬಲೀಂದ್ರ ಸೇವೆ ಮಾಡುತ  ನಲಿವುದು//

 

ಮೂರು ದಿನಗಳ ಹಬ್ಬದ ಸಂಭ್ರಮ

ಎಲ್ಲೆಲ್ಲು ನಗುವಿನ ಒಲವಿನ ತೋರಣ/

ಜಗದ ತಮ ಅಳಿಯಲಿ ಎನ್ನುತ

ದೇವನ ಪಾದಕೆ ಎರಗುತ ನಮಿಸುತ//

***

ಬಲಿಪಾಡ್ಯ

ಕಾರ್ತಿಕ ಮಾಸದ ಪಾಡ್ಯದ ದಿನವು

ಬೆಳಕಿನ ಹಬ್ಬ ದೀಪಾವಳಿ ಸಡಗರವು|

ಬಲಿಪಾಡ್ಯಮಿ ಪೌರಾಣಿಕ ಹಿನ್ನೆಲೆಯು

ಗುಣಗಳ ಗಣಿ ಬಲಿರಾಜನ  ಕಥೆಯು||

 

ಸುರಪೀಠಕೆ  ಲಗ್ಗೆಯಿಡುವ ಆಸೆಯು

ದಿಗ್ವಿಜಯ ಸಾಧಿಸಿ ಕೈಗೊಂಡನು ವಿಶ್ವಜಿತ್ ಯಜ್ಞವ |

ದಾನಧರ್ಮಗಳ ಕೊಡುವ ಅರಸನು

ವೀರೋಚನ ಸುತ ಅಗಣಿತ ಘನ ಮಹಿಮನು||

 

ಕೈಯಲಿ ಕಮಂಡಲ ಶಿರದ ಮೇಲೆ ಛತ್ರಿಯು

ವಟು ರೂಪಧಾರಿ ವೈಕುಂಠ ವಾಸಿ  |

ವಾಮನನಾಗಿ ಬೆಳೆದು ದಾನ ಬೇಡಿದನು

ಮೂರು ಹೆಜ್ಜೆಗಳ ಸ್ಥಳ ಬೇಡಿಕೆಯಿಟ್ಟನು||

 

ಒಂದನೇ ಪಾದವ ಭುವಿಗೂರಿದ

ಎರಡನೇ ಪಾದವ ಆಗಸಕೂರಿದ|

ಭೂಮ್ಯಾಕಾಶ ಗಾತ್ರ ಪಾದವ ಬೆಳೆಸಿದ

ಮೂರನೇ ಹೆಜ್ಜೆಯ ಎಲ್ಲಿಡಲೆಂದ||

 

ಶಿರದ ಮೇಲೆ ಹೆಜ್ಜೆಯನೂರಿದ ದೇವ

ಬಲಿಯ ಪಾತಾಳಕೆ ತಳ್ಳಿದ ಜಗದ್ರಕ್ಷಕ ಕಾವ|

 ಗೋಧೂಳಿ ಲಗ್ನದಿ ಪೂಜೆಯು ಸಂದಿತು

ನೆನೆಯೋಣ ಕಥಾಸಾರದ ತಿರುಳ ಧನ್ಯರಾಗುತ||

 

 -ರತ್ನಾ ಕೆ.ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್