ದೀಪವು ನಿನ್ನದೆ, ಗಾಳಿಯೂ ನಿನ್ನದೆ; ಈ ದೀಪಾವಳಿ ಎಲ್ಲರಿಗೂ ಇರಲಿ ಏಕರೀತಿ.

ದೀಪವು ನಿನ್ನದೆ, ಗಾಳಿಯೂ ನಿನ್ನದೆ; ಈ ದೀಪಾವಳಿ ಎಲ್ಲರಿಗೂ ಇರಲಿ ಏಕರೀತಿ.

ಬರಹ

ಕುಂಬಾರ ಕೈಯೊಳಗಿನ ಮಣ್ಣಿನ ಪಣತಿ ದೀಪಾವಳಿ ಹಬ್ಬಕ್ಕೆ ಶ್ರೇಷ್ಟ.

 

ಮಣ್ಣಿನ ತೆಪ್ಪವೋ;

ತೆಪ್ಪದೊಳು ತುಪ್ಪದ ಸಮುದ್ರವೋ!

ತೆಪ್ಪದ ಕಮಲದಲ್ಲಿ ಹತ್ತಿಯ ಬತ್ತಿಯೋ;

ಬತ್ತಿಯ ತ್ಯಾಗದಿಂದ ಬೆಳಕಿನ ಸೆಲೆಯೋ!

ಹೊಮ್ಮಿದೆ ದೀಪವೆಂಬ ಹಣತೆಯಿಂದ ಹಬ್ಬದ ಅಲೆ;

ಮನದಲ್ಲಿ ತಿಳಿಸುತ್ತ ಈ ಬೇರೆ ಬೇರೆ

ನೆಲೆಯ ವಸ್ತುಗಳ ಒಗ್ಗಟ್ಟಿನ ಬೆಲೆ! 

 

"ಅವ್ವಾವ್ರು ಈ ಸರ್ತೆ ಮಣ್ಣಿನ ಪಣತಿ ಬ್ಯಾಡಂದಾರ್ರೀ; ಪ್ಯಾಟ್ಯಾಗ ಚೀಣಿ ಮಣ್ಣಿನ ಪಣತಿ ಛೋಲೋ ಬಂದಾವ ಅಂತಾರ..ನೀವ ಒಂದ್ ಮಾತು ಹೇಳ್ರೀ..ನಾವು ವರ್ಷಕ್ಕೊಮ್ಮೆ ಬರಾವ್ರು, ಅವೇನೂ ತುಟ್ಟು ಇಲ್ಲ; ಒಂದ ಡಜನ್ ತೊಗೋ ಅಂತ ಹೇಳ್ರೀ. ಹೊತಗೊಂಡ ಬಂದ ಕೂಲಿ ಗಿಟ್ಟುದುಲ್ರೀ.. ಆದರೂ ತಮ್ಮಂಥ ಒಂದಷ್ಟು ಹಳೆ ಮನೀಗೋಳು ನಾವು ಬಿಡುವಂಗಿಲ್ರೀ..ಕುಂಬಾರ ಕೈಯ್ಯಾಗಿನ ಪಣತೀನ ಹಬ್ಬಕ್ಕ ಶ್ರೇಷ್ಠ ಅಂತ ಹೇಳ್ರೀ.."

 

ಕುಂಬಾರ ರುಕ್ಮಾಬಾಯಿ ನಮ್ಮವ್ರ ಮುಂದೆ ಅವಲೊತ್ತುತ್ತಿದ್ದಳು. ಕಾರಣ ನಮ್ಮ ಅತ್ತೆಮ್ಮ ಈ ಬಾರಿ ಮಣ್ಣಿನ ಪಣತಿ ಬದಲು ಎಣ್ಣೆ ಹೀರದ ಪ್ಲಾಸ್ಟರ್ ಆಫ್ ಪ್ಯಾರೀಸ್ ಅಥವಾ ಚೀನಿ ಮಣ್ಣಿನ ಪಣತಿ ಹಚ್ಚೋದು..ದೀಪಾವಳಿ ಆಚರಿಸೋದು ಅಂತ ತೀರ್ಮಾನ ಮಾಡಿದ್ರು. ಧಾರ್ವಾಡದೊಳಗಾದರ ಪರ್ಯಾಯ ವ್ಯವಸ್ಥೆಗಳು ಸಾಕಷ್ಟು. ಆದರೆ ನಮ್ಮೂರು ಗುಲ್ಬರ್ಗಾ ಬಳಿಯ ಶಹಾಪೂರದಲ್ಲಿ ಇಂದಿಗೂ ಮಣ್ಣಿನ ಪಣತಿ ಬಿಟ್ರ ಬೇರೆ ಪಣತಿಗಳು ಸಿಗುವುದಿಲ್ಲ.  

 

ಲೋಕ ನಿರ್ಮಾಣದ ಕಾಯಕ ಹೊತ್ತ ಕುಂಬಾರ ಆ ಭಗವಂತ. ಅವನ ಕುಲದಕ್ಕಿ ನಾನು ಅಂತಾಳ ಕುಂಬಾರ ರುಕ್ಮಜ್ಜಿ. ಪ್ರತಿ ವರ್ಷ ಎಲ್ಲರ ಮನೆ ಬೆಳಗಿದ ಪಣತಿಗಳಿಗೆ ಈ ವರ್ಷ ಬೇಡಿಕೆಯೇ ಇಲ್ಲವಂತೆ. ನಮ್ಮ ‘ಕಲ್ಯಾಣ ಅರ್ಥಶಾಸ್ತ್ರಜ್ಞರ’ ಪ್ರಕಾರ ಈ ಬಾರಿಯ ದೀಪಾವಳಿಗೆ ಆಕೆಯ ಮನೆ ಬೆಳಗಿಸಲಿಕ್ಕೆ ಸ್ವಂತ ಪಣತಿ ಇದ್ರೂ ಎಣ್ಣಿ-ಬತ್ತಿ ಹೊಂದಿಸೋದು ಕಷ್ಟ ಅಂತ ನನಗೆ ಮೇಲ್ನೋಟಕ್ಕೇ ಅನಿಸಿತ್ತು.

 

ಕಾರಣ ಚೀನಿ ಮಣ್ಣು, ಪ್ಲಾಸ್ಟರ್ ಆಫ್ ಪ್ಯಾರಿಸ್, ಪ್ಲಾಸ್ಟಿಕ್ ಹಾಗೂ ಸ್ಟೀಲ್ ದೀಪಗಳು ಒಂದು ತೊಟ್ಟೂ ಎಣ್ಣೆ ಹೀರಲಾರದೇ ನಿಸ್ವಾರ್ಥಿಗಳಾಗಿ ದೀಪ ಉರಿಸುತ್ತವೆ; ಆದರೆ, ರುಕ್ಮಜ್ಜಿಯ ಮಣ್ಣಿನ ಪಣತಿ ‘ಸಾವಯವ’, ‘ಪರಿಸರ ಸ್ನೇಹಿ’ ಏನೆಲ್ಲಾ ಆದರೂ ಈ ತುಟ್ಟಿಯ ಕಾಲದಲ್ಲಿ ಎಣ್ಣೆ ಕುಡಿದರೆ ಹಬ್ಬ ಮಾಡುವುದು ಸಾಧ್ಯವೇ? ಅತ್ತೆಮ್ಮನ ರಸಾಯನ ಶಾಸ್ತ್ರ-ಭೌತಶಾಸ್ತ್ರ ಲೆಕ್ಕಾಚಾರಗಳ ಮುಂದೆ ‘ಅರ್ಥಶಾಸ್ತ್ರಜ್ಞಾ ಭೋಗ್ಯಾ ವಸುಂಧರಾ’! ಅಂತ ನನಗೆ ಅನಿಸಿತ್ತು.

 

ದೀಪಗಳ ಹಬ್ಬ ದೀಪಾವಳಿ ಮತ್ತೆ ಬಂದಿದೆ. ಕರುಣಾಳುವಾಗಿ ಬೆಳಕು ಮಬ್ಬಿನಲ್ಲಿ ಮುಸುಕಿದ ನಮ್ಮನ್ನು ಜ್ಞಾನದ ಬೆಳಕಿನೆಡೆಗೆ ಕೆರೆದೊಯ್ಯಲು ಸಿದ್ಧವಾಗಿ ನಿಂತಿದೆ. ಪ್ರತಿ ವರ್ಷದಂತೆ ಈ ವರ್ಷವೂ ಸಂಭ್ರಮ ಸಡಗರ ಹೊತ್ತು ತಂದಿದೆ. ಹೊಸ ಹುರುಪು, ನವ ಉಲ್ಲಾಸ, ಪುಟಿದೇಳುವ ಉತ್ಸಾಹ ನಮ್ಮಲ್ಲಿ ಮೇಳೈಸುವಂತೆ ಮಾಡಿದೆ. ಲಕ್ಷ್ಮಿ ಪೂಜೆ, ಪಟಾಕಿ ಸಿಡಿಸುವ, ಬಾನಂಗಳದಲ್ಲಿ ಕುಡಿಕೆಗಳಿಂದ ಚಿತ್ತಾರ ಮೂಡಿಸುವ ಸಂಭ್ರಮ ಮನೆ ಮಾಡಿದೆ. ಹೊಸ ಬಟ್ಟೆ, ಬಂಗಾರ-ಆಭರಣ ಹಾಗೆಯೇ ಹೊಸ ವಾಹನ ಖರೀದಿ ತುಟ್ಟಿಕಾಲದಲ್ಲಿಯೂ ನಮ್ಮ ಮನೆಗಳಲ್ಲಿ ಭರದಿಂದ ನಡೆದಿದೆ. ಕಾರಣ ನಿಲ್ಲಿಸುವ ಹಾಗಿಲ್ಲ!

 

ಕರುಣಾಳು ಬಾ ಬೆಳಕೆ ಮುಸುಕಿದೆ ಮಬ್ಬಿನಲಿ..ಕನಿಕರಿಸಿ ಕೈಹಿಡಿದು ನಡೆಸೆನ್ನನು.

 

ನಾಡ ಹಬ್ಬ ದಸರಾದಷ್ಟೇ ದೊಡ್ಡ ಹಬ್ಬ ದೀಪಾವಳಿ. ಆದರೆ ನಾನು ತವರಿಗೆ ಹೋಗುವಂತಿಲ್ಲ. ಅತ್ತೆ ಮನೆಯಲ್ಲಿಯೇ ದೀಪಾವಳಿ ಮಾಡಬೇಕು. ಈಗ ನಾನು ತವರಿಂದ ಕೊಟ್ಟ ಹೆಣ್ಣು. ಆದರೆ ದೂರದಲ್ಲಿ ತಮ್ಮ -ತಂಗಿ ‘ಹಬ್ಬಕ್ಕೆ ಬಾ’ ಎಂದು ದುಂಬಾಲು ಬಿದ್ದಿದ್ದಾರೆ. ಈ ಮನೆಯಲ್ಲಿ ನನ್ನ ಹಿರಿಯ ಮೈದುನ ವಿಶಾಲ ಅಣ್ಣ ನೌಕರಿಯ ಕಾರಣ ಮುಂದು ಮಾಡಿ ‘ಹಬ್ಬಕ್ಕೆ ಬರಲಾಗುತ್ತಿಲ್ಲ ವೈನಿ’ ಎಂದಿದ್ದಾರೆ. ಮದುವೆ ಮಾಡಿಕೊಂಡು ಹೋದ ನನ್ನ ನಾದಿನಿ, ನಮ್ಮ ಮನೆಯವರ ತಂಗಿ, ನನ್ನಂತೆ ಅತ್ತೆಯ ಮನೆಯ ಜಂಜಾಟಗಳನ್ನು ಮುಂದು ಮಾಡಿ ‘ಅಣ್ಣ ಮೊದಲನೇ ವರ್ಷ ನಾನು ಇವರೂ ಬಂದಿದ್ದೇವಲ್ಲ’ ಎಂದು ಎರಡನೇ ವರ್ಷಕ್ಕೆ ಸಮಾಧಾನ ಹೇಳಿದ್ದಾಳೆ. ನಮ್ಮವರ ಅಕ್ಕ ‘ಅಲ್ಲಪ್ಪಾ..ಅಷ್ಟು ದೂರದಿಂದ ಬರ್ಲಿಕ್ಕೆ ಎರಡು ದಿನ..ಹೋಗಲಿಕ್ಕೆ ಎರಡು ದಿನ. ಇದ್ಧಾಂಗ ಆಗೋಗುದಿಲ್ಲ. ಮಕ್ಕಳ ಸೂಟಿಗೆ ಬರ್ತೇವಿ..ನೀವು ಮನಿ ಪುರ್ತೇಕ ಹಬ್ಬ ಮಾಡಿ ಬಿಡ್ರೀ..’ ಅಂದಿದ್ದಾರೆ. ಇದನ್ನೆಲ್ಲ ನಮ್ಮ ಮನೆಯವರು ಅರಗಿಸಿಕೊಳ್ಳುವ ಮೊದಲೇ ಕುಂಬಾರ ರುಕ್ಮಜ್ಜಿ, ‘ಹಬ್ಬ ಜೋರಲ್ಲ ಅಪ್ಪಾರ..’ ಅಂತ ಲೋಕಾರೂಢಿಯಾಗಿ  ಕೇಳಿದ್ದಾಳೆ ನಮ್ಮ ಮನೆಯವರನ್ನ.. ‘ಹಬ್ಬದ ಖುಷಿ ಕೊಡ್ತೇನಿ ಬೇಕಾರ..ಆದ್ರ ಆ ಪಣತಿ ಸಹವಾಸ ನನಗ ಬ್ಯಾಡಾ’ ಅಂತ ದೀಪದ ಬದಲಿ ಇವರೇ ಉರಿದು ಬೆಳಕು ಕೊಡುವ ಹಾಗೆ ಮಾಡಿದ್ರು! ರುಕ್ಮಜ್ಜಿ ಥಣ್ಣಗಾಗಿದ್ಲು.

 

ಕಾಲಕ್ಕೆ ತಕ್ಕಂತೆ ಆಚರಣೆಗಳು ಬದಲಾಗಲಿ, ಅಭಿಪ್ರಾಯಗಳು ಬದಲಾಗಲಿ. ಆದರೆ ಹಬ್ಬಗಳ ಆಚರಣೆಯ ಹಿಂದಿನ ಮೌಲ್ಯಗಳು, ಆಶಯಗಳು ನಮ್ಮ ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸುವುದಾದರೆ? ಕೇವಲ ಆಚರಣೆಗಷ್ಟೆ ಹಬ್ಬಗಳು ಸೀಮಿತವಾದರೆ? ನಮ್ಮ ಭಾವನಾತ್ಮಕ ನೆಂಟಸ್ತಿಕೆ, ಕೌಟುಂಬಿಕ ರಕ್ತ ಸಂಬಂಧಗಳು ಉಳಿದಾವೆಯೇ? ನಮ್ಮ ಸಂಸ್ಕೃತಿ, ಸಂಸ್ಕಾರ, ಮುಂದಿನ ಪೀಳಿಗೆಗೆ  ಯೋಗ್ಯ ವಾರಸುದಾರರಿಗೆ ಹಸ್ತಾಂತರಿಸುವುದು ಹೇಗೆ? ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ಇದ್ದುಳ್ಳವರಿಗೆ ಹಬ್ಬಗಳು ಎನಿಸಿದರೆ ಅತಿಶಯೋಕ್ತಿ ಏನಲ್ಲ.

 

ಹಾಗಾದರೆ ವಯಕ್ತಿಕ ಮಟ್ಟದಲ್ಲಿ ಅರ್ಥಪೂರ್ಣವಾಗಿ ದೀಪಾವಳಿ ಆಚರಿಸುವುದು ಹೇಗೆ? ಆದಷ್ಟು ನಮ್ಮ ಮನೆ-ಅಂಗಡಿಯ ದೀಪಾವಳಿ ಹಬ್ಬ ಪರಿಸರ ಸ್ನೇಹಿಯಾಗಿರಲಿ. ಸಾವಯವ ರೀತ್ಯಾ ಊಟೋಪಚಾರಗಳಿರಲಿ. ದುಂದುವೆಚ್ಚ, ಆರ್ಭಟ, ತೋರಿಕೆ ಇಣುಕದಿರಲಿ. ಸ್ಫೋಟಕಗಳ ಬಳಕೆ ಹಿತ-ಮಿತವಾಗಿರಲಿ. ಸುರಕ್ಷಿತವಾಗಿರಲಿ. ಮಕ್ಕಳು ದೊಡ್ಡವರ ಸುಪರ್ದಿಯಲ್ಲಿ ದೀಪಗಳನ್ನು ಬೆಳಗಲಿ. ನಮ್ಮ ಮನೆಯ ಕೆಲಸದ ಆಳು ಮಕ್ಕಳು, ಅವರಿಗೂ ನಮ್ಮಂತೆ ಹೊಸ ಬಟ್ಟೆಗಳನ್ನು ನೀಡೋಣ. ಅವರಿಗೂ ಹಬ್ಬದ ನಿಮಿತ್ತ ಮೂರು ದಿನಗಳ ಕಾಲ ಪಗಾರ ಸಮೇತ ರಜೆ ನೀಡೋಣ. ಒಟ್ಟಾರೆ ನಮ್ಮ ಮನೆ ಯಾರಿಲ್ಲದೇ ನಡೆಯುವುದಿಲ್ಲವೋ? ಅರ್ಥಾತ್ ಹಾಲಿನ ಗೌಳಿ, ಪೇಪರ್ ಹಂಚುವ ಹುಡುಗ, ತೋಟದ ಮಾಲಿ ಅಜ್ಜ, ಕಾರಿನ ಡ್ರವರ್ ಅಣ್ಣ,  ರಿಕ್ಷಾ ಓಡಿಸುವ ನಮ್ಮ ಮಕ್ಕಳ ಕಾಕಾ ಅವರೆಲ್ಲರನ್ನೂ ಜೋಡಿಸಿಕೊಳ್ಳೋಣ. ನಮ್ಮೊಂದಿಗೆ ಅವರೂ ನಮ್ಮ ಮನೆಗಳಲ್ಲಿಯೇ ಹಬ್ಬದೂಟ ಮಾಡಲಿ. ಈ ವರ್ಷ ನಮ್ಮ ಮನೆಯ ಆಳು ಮಕ್ಕಳ ಪೈಕಿ ಓರ್ವರ ಮಗುವನ್ನು ದತ್ತು ಪಡೆಯೋಣ, ಇಡೀ ವರ್ಷದ ಓದಿನ ಖರ್ಚು ನಿಭಾಯಿಸುವ ಮನಸ್ಸು ಮಾಡೋಣ.

 

ದೀಪದಿಂದ ಮಾತ್ರ ದೀಪ ಪ್ರಜ್ವಲಿತವಾಗುವುದು..     

ಸಾಧ್ಯವಾದರೆ, ನಮ್ಮ ಮಕ್ಕಳೊಂದಿಗೆ ಅನಾಥಾಶ್ರಮಕ್ಕೆ ತೆರಳಿ ಅಲ್ಲಿನ ಮಕ್ಕಳಿಗೆ ಸಿಹಿ ಹಂಚೋಣ. ಉದ್ಯಮಿ ಅಥವಾ ಸಮಾಜ ಸೇವಕ ಗೆಳೆಯರ ಪರಿಚಯ ವಿದ್ದರೆ ಅಲ್ಲಿನ ಕನಿಷ್ಠ ಐದು ಹೊಸ ಮಕ್ಕಳಿಗೆ ಹೊಸ ಬಟ್ಟೆ ಕೊಡಿಸೋಣ. ಸಮೀಪದ ವೃದ್ಧಾಶ್ರಮಗಳಿಗೆ ತೆರಳಿ ಅಲ್ಲಿನ ಹಿರಿಯರಿಗೆ ಹಬ್ಬದ ಶುಭ ಹಾರೈಸಿ, ಸಿಹಿ ಹಂಚೋಣ. ಒಟ್ಟಾರೆ ವನಸುಮದೊಳು ನಮ್ಮ ಜೀವನ ವಿಕಸಿಸುವಂತೆ, ಎನ್ನುಪಕಾರ ಜಗತ್ತಿಗೆ ಇದೆ ಎಂಬುದನ್ನು ಮರೆತು, ಕಾಣದ ದೇವರಿಗಿಂತ ಇಲ್ಲೇ ಇರುವ ಪ್ರೀತಿ ಸ್ನೇಹಗಳನ್ನು ದೀಪಾವಳಿಯ ಬೆಳಕಿನಲ್ಲಿ ಅನ್ವೇಷಿಸುವ ಪ್ರಯತ್ನ ಮಾಡೋಣ. ನಮ್ಮವರು ಅನಿವಾರ್ಯ ಕಾರಣಗಳಿಂದ ಹಬ್ಬಕ್ಕೆ ಬಾರದಿದ್ದರೆ ಏನಂತೆ? ಇದ್ದವರನ್ನೆಲ್ಲ ಒಟ್ಟುಗೂಡಿಸಿ ಅರ್ಥಪೂರ್ಣವಾಗಿ ಆಚರಿಸೋಣ. ನಮ್ಮ ಮಕ್ಕಳಿಗೆ ಹಬ, ಮಾನವೀಯ ಸಂಬಂಧಗಳ ಮೌಲ್ಯ ಕಲಿಸೋಣ. ಅರಿವಿನ ಹಣತೆ ಬೆಳಗೋಣ. ಕತ್ತಲಿಗೆ ಹೆದರದೇ ಬೆಳಕಿಗೆ ಅಂಜುವ ಸಂಕ್ರಮಣ ಕಾಲಘಟ್ಟದಲ್ಲಿ ನಾವಿದ್ದೇವೆ. ಹಾಗಾಗದಿರಲಿ. ಈ ದೀಪಾವಳಿ ಬೆಳ್ಳನೆ ಬೆಳಕು ತರಲಿ.

 

ದೀಪವು ನಿನ್ನದೆ; ಗಾಳಿಯೂ ನಿನ್ನದೆ, ಆರದಿರಲಿ ಬೆಳಕು.

 

ದೀಪವು ನಿನ್ನದೆ, ಗಾಳಿಯೂ ನಿನ್ನದೆ;

- ಆರದಿರಲಿ ಬೆಳಕು.

ಕಡಲು ನಿನ್ನದೆ, ಹಡಗು ನಿನ್ನದೆ,

- ಮುಳುಗದಿರಲಿ ಬದುಕು.

              - ಮಲ್ಲಿಗೆಯ ಕವಿ ಶ್ರೀ ಕೆ.ಎಸ್. ನರಸಿಂಹ ಸ್ವಾಮಿ.

 

ಈ ದೀಪಾವಳಿ ಸಂಪದಿಗರಿಗೆಲ್ಲ ಶಾಂತಿ-ನೆಮ್ಮದಿ ಕರುಣಿಸಲಿ. ಸಂತಸ-ಸಂಭ್ರಮ ಎಲ್ಲರ ಮನೆ-ಮನಗಳಲ್ಲಿ ಕಂಗೊಳಿಸಲಿ. ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.