ದುಃಖ ಬಂದಾಗ ಧ್ಯಾನಿಸಿ!

ದುಃಖ ಬಂದಾಗ ಧ್ಯಾನಿಸಿ!

ಬದುಕಿನ ಹಾದಿಯಲ್ಲಿ ಆಗಾಗ ನೋವು ಸಂಕಟಗಳು ಬರುವುದು ಸಹಜವೇ. ಸಂತಸದ ಸಂದರ್ಭಗಳನ್ನು ಆದರಿಸುವ ನಮ್ಮ ಮನಸ್ಸು ದುಃಖದ ಘಳಿಗೆಗಳನ್ನು ಎದುರುಗೊಳ್ಳಲು ಸಿದ್ಧವಾಗುವುದೇ ಇಲ್ಲ. ಅವುಗಳನ್ನು ನಮ್ಮಿಂದ ಸಾಧ್ಯವಾದಷ್ಟು ಮುಗಕ್ಕೆ ಸಂಸಲು ನಮ್ಮ ಮನಸ್ಸು ಹಠ ಹೂಡುತ್ತದೆ. ಇನ್ನು ಕೆಲವು ಬಾರಿ ನಮಗೆ ಬಂದ ದುಃಖದ ಸನ್ನಿವೇಶಗಳನ್ನು ಮರೆಯಲು ನಾವು ಬೇರೊಂದರಲ್ಲಿ ತೊಡಗಿಕೊಳ್ಳಲು ಅವಸರಿಸುತ್ತೇವೆ. ಇದರಿಂದ ಪರಿಸ್ಥಿತಿ ಇನ್ನಷ್ಟು ವಿಷಮಿಸುತ್ತದೆ. ವಾಸ್ತವದಲ್ಲಿ ಯಾವುದನ್ನು ಹೆಚ್ಚು ವಿರೋಧಿಸಲು ಪ್ರಯತ್ನಿಸುತ್ತೇವೆಯೋ ಅದು ನಮ್ಮನ್ನು ಹೆಚ್ಚು ಹೆಚ್ಚು ಆವರಿಸಿಕೊಳ್ಳಲು ಹವಣಿಸುತ್ತದೆ. ಇನ್ನಷ್ಟು ಘಾಸಿಗೊಳಿಸುತ್ತದೆ. ನಮ್ಮ ದುಃಖವನ್ನು ಶಮನಗೊಳಿಸಲು ನಾವು ಮೊದಲು ಮಾಡಬೇಕಾದ ಬಹು ಮುಖ್ಯ ಸಂಗತಿಯೆಂದರೆ ಅದನ್ನು ಒಪ್ಪಿಕೊಳ್ಳುವುದು. ನಾವು ಬದುಕುತ್ತಿರುವುದು ಬಹಳಷ್ಟು ದುಃಖವನ್ನುಂಟು ಮಾಡುವ ಸಂಗತಿಗಳ ನಡುವೆಯೇ ಎಂಬ ಅಂತಿಮ ಸತ್ಯವನ್ನು ಅರಿಯುವುದು.

ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖವೆನ್ನುವ ದಾಸರ ನುಡಿಯು ನಿಜಕ್ಕೂ ಅರ್ಥಪೂರ್ಣ. ಇಂತಹ ಸಾರ್ವತ್ರಿಕ ಸತ್ಯಗಳನ್ನು ನಾವು ಒಪ್ಪಿಕೊಳ್ಳುವ ಮನೋಸ್ಥಿತಿಯನ್ನು ರೂಢಿಸಿಕೊಳ್ಳಬೇಕು. ಸುಖವು ಎನ್ನುವುದು' ಬೆಟ್ಟಗಳ ಅದಿರುಗಳಲ್ಲಿ ಅಡಗಿರುವ ಚಿನ್ನದಂತೆ, ದುಃಖದ ಪದರುಗಳಲ್ಲಿಯೇ ಸುಖ ಬಹುತೇಕ ಬಾರಿ ಪವಡಿಸಿಕೊಂಡಿರುತ್ತದೆ. ಚಿನ್ನದ ಅದಿರನ್ನು ಸ್ವಚ್ಛಗೊಳಿಬೇಕು. ಅದನ್ನು ಕುಲುಮೆಯಲ್ಲಿ ಕಾಯಿಸಿ ಕಲ್ಮಶವನ್ನು ಶ್ರದ್ಧೆಯಿಂದ ಹೊರತೆಗೆದಾಗಲೇ ಚಿನ್ನ ಸಿಗಲು ಸಾಧ್ಯ ವಿನಃ ಅದಿರನ್ನು ಬಿಸಾಕಿ ಬಿಡುವುದರಿಂದ ಅದೆಂತು ಸಾಧ್ಯ? ಗಿರಿಶಿಖರಗಳನ್ನು ಕಷ್ಟಪಟ್ಟು ಏರಿದಾಗಲೇ ಅದರ ಮೇಲಿಂದ ಕಾಣುವ ಅದ್ಭುತ ನೋಟ ನೋಡಲು ಸಾಧ್ಯ. ದುಖ ಅಂಗಳದ ಕಸವನ್ನು ಗುಡಿಸುವ ಪೊರಕೆಯಂತೆ. ಸಂತಸವನ್ನು ಹೊತ್ತು ತರಬಲ್ಲ ಸುಬೇದಾರನಿದ್ದಂತೆ. ದುಃಖವನ್ನು ಪ್ರತಿರೋಧಿಸುವ ಬದಲಾಗಿ ಅದನ್ನು ನಮ್ಮ ಜೊತೆ ಸಂಗಡಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಅದು ಕೂಡ ಜೀವನದ ರೀತಿಯೆಂದು, ಬದುಕಿನ ಭಾಗವೆಂದು ಪರಿಗಣಿಸಬೇಕು. ನಾವು ದುಃಖವನ್ನು ಧ್ಯಾನಿಸುವುದರಲ್ಲಿಯೂ ಸುಖದ ಅನುಭೂತಿ ಇದೆ. ಧ್ಯಾನಿಸುವುದು ಎಂದರೆ ಅದರ ಕುರಿತು ಸಾಧ್ಯವಾದಷ್ಟು ಆಳವಾಗಿ ಅರಿಯುವುದು. ನೈಜವಾದ ಸಂಗತಿಯನ್ನು ಅರಿಯುವುದು, ಪೂರ್ವಗ್ರಹಗಳಲ್ಲಿ ಬಂಧಿಯಾಗಿ ಬಂದಿದ್ದನ್ನು ವಿರೋಧಿಸುವುದರಿಂದ ಎಲ್ಲ ವರಿಹಾರ ಸಾಧ್ಯ ಎಂಬ ಭ್ರಮೆಯಿಂದ ನಾವು ಹೊರಬರಬೇಕು. ಸಂತೆಯಲ್ಲಿ ಮನೆಯೊಂದನ್ನು ಮಾಡಿ ಶಬ್ದಕ್ಕೆ ಹೆದರಿದರೆ ಬದುಕು ಮುನ್ನಡೆಸಲು ಸಾಧ್ಯವಾಗದು. ಘಟಿಸಿದ ಸಂಗತಿಗಳನ್ನು ಸಮಚಿತ್ತದಿಂದ ಸ್ವೀಕರಿಸಬೇಕು. ಇಂತಹ ನಮ್ಮ ಎಡೆಬಿಡದ ಪ್ರಯತ್ನ ನಿಜಕ್ಕೂ ಒಂದೊಮ್ಮೆ ದುಃಖದಲ್ಲಿಯೂ ಒಂದು ಸಂತಸದ ಪ್ರಭೆಯಿರುವ ಸಂಗತಿಯನ್ನು ಅನಾವರಣಗೊಳಿಸುತ್ತದೆ.

-ಮಹಾದೇವ ಬಸರಕೋಡ

ಚಿತ್ರ ಕೃಪೆ: ಇಂಟರ್ನೆಟ್ ತಾಣ