ದೇವಶಿಲ್ಪಿ ವಿಶ್ವಕರ್ಮ ನಿರ್ಮಿಸಿದ ಇಡಗುಂಜಿ ಗಣಪತಿ

ದೇವಶಿಲ್ಪಿ ವಿಶ್ವಕರ್ಮ ನಿರ್ಮಿಸಿದ ಇಡಗುಂಜಿ ಗಣಪತಿ

ಇಡಗುಂಜಿ ಉತ್ತರ ಕನ್ನಡದ ಪವಿತ್ರ ಗಣಪತಿ ಕ್ಷೇತ್ರ. ಸಿದ್ಧಿಪ್ರದ ಅಷ್ಟಕ್ಷೇತ್ರಗಳಲ್ಲಿ ಒಂದೆಂದು ಪ್ರಖ್ಯಾತವಾದ ಇಲ್ಲಿ ಗೋಕರ್ಣದಲ್ಲಿರುವಂತೆಯೇ ಇರುವ ದ್ವಿಭುಜ ಗಣಪ ನೆಲೆಸಿದ್ದಾನೆ. ಹೊನ್ನಾವರದಿಂದ ಕೇವಲ 15 ಕಿಲೋ ಮೀಟರ್ ಹಾಗೂ ಮುರ್ಡೇಶ್ವರದಿಂದ 23 ಕಿಲೋಮೀಟರ್ ದೂರದಲ್ಲಿರುವ ಈ ಪವಿತ್ರಪುಣ್ಯ ಧಾಮಕ್ಕೆ ಇಡುಗುಂಜಿ ಎಂಬ ಹೆಸರು ಹೇಗೆ ಬಂತು ಗೊತ್ತೇ..? ಇಡ ಎಂದರೆ ಎಡ, ಕುಂಜು ಎಂದರೆ ಗಿಡ - ಗಂಟಿಗಳಿಂದ ತುಂಬಿರುವ ಅರಣ್ಯ ಪ್ರದೇಶ. ಶರಾವತಿಯ ಎಡಭಾಗದಲ್ಲಿರುವ ಅರಣ್ಯದ ರಮಣೀಯತೆಗೆ ಮನಸೋತು ನಾರದ ಮಹರ್ಷಿಗಳು ಈ ಹೆಸರು ಇಟ್ಟರೆಂದು ಸ್ಥಳ ಪುರಾಣ ಹೇಳುತ್ತದೆ.

ಪ್ರಾಚೀನ ಕಾಲದಲ್ಲಿ ಇಲ್ಲಿ ವಾಲಖಿಲ್ಯಾದಿ ಋಷಿಗಳೂ ಕುಟಜಾದ್ರಿಯಲ್ಲಿ ತಪಸ್ಸನ್ನಾಚರಿಸುತ್ತಿದ್ದರಂತೆ ಅವರಿಗೆ ಹಲವು ಬಗೆಯ ವಿಘ್ನಗಳು ಎದುರಾದವು. ಆ ಸಂದರ್ಭದಲ್ಲಿ ಅಲ್ಲಿ ಪ್ರತ್ಯಕ್ಷರಾದ ತ್ರಿಲೋಕ ಸಂಚಾರಿ ನಾರದ ಮಹರ್ಷಿಗಳು ವಿಘ್ನ ನಿವಾರಕನಾದ ಗಣಪತಿಯ ಪೂಜೆ ಮಾಡುವಂತೆ ತಿಳಿಸಿದರು. ತಾವೇ ಗಣಪತಿಯನ್ನು ಕರೆತರುವುದಾಗಿ ಒಪ್ಪಿಕೊಂಡರು. ನಂತರ ಗೇರುಸೊಪ್ಪೆ ಪ್ರದೇಶದಲ್ಲಿ ನಿಂತು ಸುತ್ತಲ ಪ್ರದೇಶವನ್ನು ನೋಡಿದ ನಾರದರು, ಶರಾವತಿಯ ಮುಖಜ ಪ್ರದೇಶ ಕಂಡು ಮನಸೋತರು. ಶರಾವತಿ ನದಿಯ ಎಡಭಾಗದಲ್ಲಿರುವ ಗಿಡ- ಗಂಟಿಗಳ ಅರಣ್ಯ ಪ್ರದೇಶದ ರಮಣೀಯತೆಗೆ ಮನಸೋತು ಇಡಾಕುಂಜ ಎಂದು ಕರೆದರಂತೆ ಮುಂದೆ ಅದುವೇ ಇಡಗುಂಜಿ ಆಯಿತು ಎನ್ನುತ್ತಾರೆ. 

ಸ್ಥಳೀಯರು ಗಣಪನ ಪೂಜೆಗೆ ಸಾಕ್ಷಾತ್ ಗಣೇಶನನ್ನೇ ಕರೆತರುವುದಾಗಿ ವಾಲಖಿಲ್ಯಾದಿ ಮುನಿಗಳಿಗೆ ಮಾತುಕೊಟ್ಟಿದ್ದ ನಾರದರು, ನಿತ್ಯ ಪಂಚಕಜ್ಜಾಯ ಕೊಡುವುದಾಗಿ ತಿಳಿಸಿ, ಗಣಪತಿಯನ್ನು ಕರೆತಂದರಂತೆ. ವಾಲಖಿಲ್ಯಾದಿ ಋಷಿಗಳು ಗಣಪತಿಯನ್ನು ಪೂಜಿಸಿದರು. ಅಲ್ಲಿಯೇ ನೆಲೆಸುವಂತೆ ಕೋರಿದರು. ಆಗ ದೇವಶಿಲ್ಪಿ ವಿಶ್ವಕರ್ಮನೇ ಎರಡು ಕೈಗಳ ಸುಂದರ ಗಣಪನನ್ನು ನಿರ್ಮಿಸಿದ ಎಂದು ಹೇಳಲಾಗುತ್ತದೆ. ಈ ಸುಂದರ ಮೂರ್ತಿಯನ್ನು ನಾರದರೇ ಮಾಘ ಮಾಸದ ಶುಕ್ಲಪಕ್ಷದ ಬಿದಿಗೆಯಂದು ಪ್ರತಿಷ್ಠಾಪಿಸಿದರಂತೆ. ಇಲ್ಲಿ ಪ್ರತಿ ವರ್ಷ ಮಾಘಮಾಸದಲ್ಲಿ ವಾರ್ಷಿಕೋತ್ಸವದಂದು ವಿಶೇಷ ಪೂಜೆ ನಡೆಯುತ್ತದೆ. ಭಾದ್ರಪದ ಶುಕ್ಲ ಚೌತಿಯ ವರಸಿದ್ಧಿ ವಿನಾಯಕನ ವೃತದ ದಿನ ಇಲ್ಲಿ ಜನಜಾತ್ರೆಯೇ ಸೇರುತ್ತದೆ.

ಇಡಗುಂಜಿಯ ದ್ವಿಭುಜ ಗಣೇಶನಿಗೆ ಅಡಕೆ ಬೆಳೆಗಾರರ ದೊಡ್ಡ ಭಕ್ತವೃಂದವೇ ಇದೆ. ಅಡಿಕೆ ತೋಟಗಳಿಗೆ ಕೊಳೆರೋಗ ಬಂದರೆ, ಇವರು ಇಡಗುಂಜಿ ಗಣಪನಿಗೆ ಹರಕೆ ಹೊರುತ್ತಾರೆ. ಹೀಗಾಗಿ ಈ ಗಣಪನಿಗೆ ಕೊಳೆಯಡಿಕೆ ಗಣಪ ಎಂಬ ಹೆಸರು ಬಂದಿದೆ. ವಿಶಾಲ ಪ್ರದೇಶದಲ್ಲಿ 800 ವರ್ಷಗಳಷ್ಟು ಪುರಾತನವಾದ ವಿನೂತನ ಮಾದರಿಯ ದೇವಸ್ಥಾನ ಶಿಖರ ಗೋಪುರದಲ್ಲಿ 22 ತೊಲ ಚಿನ್ನದ ಲೇಪವುಳ್ಳ 78 ಕಿ.ಗ್ರಾಂ. ತೂಕದ ಪಂಚಲೋಹದ ಕಳಶ ಸ್ಥಾಪಿಸಲಾಗಿದೆ. ಪ್ರತಿವರ್ಷವೂ ರಥಸಪ್ತಮಿಯ ದಿನ ಇಲ್ಲಿ ವೈಭವದ ರಥೋತ್ಸವ ಜರುಗುತ್ತದೆ. ಇಲ್ಲಿಯೂ ಪ್ರತಿದಿನವೂ ಭಕ್ತರಿಗೆ ದಾಸೋಹವಿರುತ್ತದೆ. 

ಬನ್ನಿ ಪ್ರವಾಸಕ್ಕೆ - ವಿಘ್ನ ನಿವಾರಕನಾದ ಗಣಪನ ದರ್ಶನ ಪಡೆಯೋಣ - ಸುಂದರ ಗಣಪತಿಯ ಮೂರ್ತಿಯನ್ನು ಕಂಡು ಆಪ್ತವಾದ ಧಾರ್ಮಿಕತೆಯ ನೆಲೆಯಲ್ಲಿ ದೇವರ ದರ್ಶನ ಪಡೆಯೋಣ.    

-ರಮೇಶ ನಾಯ್ಕ, ಉಪ್ಪುಂದ, ಬೈಂದೂರು