ದೇವಾಲಯವು ಪಿಕ್ನಿಕ್ ತಾಣವಲ್ಲ !

ದೇವಾಲಯಗಳು ಪಿಕ್ನಿಕ್ ತಾಣಗಳಲ್ಲ. ದೇವಾಲಯಗಳಿಗೆ ಭೇಟಿ ನೀಡುವ ಅನ್ಯಧರ್ಮೀಯರು ದೇವಾಲಯಕ್ಕೆ ಅಪಚಾರ ತರುವಂತಹ, ಹಿಂದುಗಳ ಭಾವನೆಗೆ ನೋವುಂಟು ಮಾಡುವಂತಹ ಕೃತ್ಯಗಳಲ್ಲಿ ತೊಡಗುವಂತಿಲ್ಲ ಎಂಬುದಾಗಿ ತಮಿಳ್ನಾಡಿನ ಹೈಕೋರ್ಟ್ ಆದೇಶವೊಂದನ್ನು ನೀಡಿರುವುದು ಅತ್ಯಂತ ಮಹತ್ವಪೂರ್ಣವಾಗಿದೆ. ಈ ಕುರಿತಂತೆ ಅರ್ಜಿದಾರರೊಬ್ಬರು ಸಲ್ಲಿಸಿದ ದೂರಿನ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಾಲಯವು, ಅನ್ಯಧರ್ಮೀಯರು ದೇವಾಲಯದ ವಾಸ್ತುಶಿಲ್ಪವನ್ನು ನೋಡಿ ಆನಂದಿಸಲು ಅವಕಾಶವಿದೆ. ಆದರೆ ಅವರು ಕೊಡಿಮರ (ದೇವಾಲಯದ ಧ್ವಜಸ್ಥಂಭ) ಕ್ಕಿಂತ ಮುಂದಕ್ಕೆ ಪ್ರವೇಶಿಸುವಂತಿಲ್ಲ ಎಂದೂ ಹೇಳಿದೆ. ಕೊಡಿಮರಕ್ಕಿಂತ ಮುಂದಕ್ಕೆ ಅನ್ಯಧರ್ಮೀಯರಿಗೆ ಪ್ರವೇಶವಿಲ್ಲವೆಂಬ ಸೂಚನೆಗಳನ್ನು ಪ್ರತಿಯೊಂದು ದೇವಸ್ಥಾನದಲ್ಲಿ ಹಾಕುವಂತೆ ತಮಿಳುನಾಡು ಸರಕಾರಕ್ಕೆ ಸೂಚನೆಯನ್ನೂ ನೀಡಿದೆ. ಸನಾತನ ಧರ್ಮವನ್ನು ನಾಶಪಡಿಸಲು ತಮಿಳುನಾಡು ಸರಕಾರವು ಇನ್ನಿಲ್ಲದ ರೀತಿಯಲ್ಲಿ ಪ್ರಯತ್ನಿಸುತ್ತಿರುವ ಮಧ್ಯೆಯೇ ನ್ಯಾಯಾಲಯವು ನೀಡಿರುವ ಈ ತೀರ್ಪು ಹಿಂದುಗಳ ಪಾಲಿಗೆ ನಿರಾಳತೆಯನ್ನು ತರುವಂತಹುದಾಗಿದೆ.
ಪಳನಿಯ ಖ್ಯಾತ ಮುರುಗನ್ ದೇವಾಲಯಕ್ಕೆ ಭೇಟಿ ನೀಡುವ ಅನ್ಯಧರ್ಮೀಯರು ದೇವಾಲಯದ ಪಾವಿತ್ರ್ಯವನ್ನು ಉಲ್ಲಂಘಿಸುವಂತಹ ಕೃತ್ಯಗಳಲ್ಲಿ ತೊಡಗಿರುವುದು ಇತ್ತೀಚೆಗೆ ಹಲವು ಬಾರಿ ವರದಿಯಾಗಿತ್ತು. ಮುಸ್ಲಿಮರು ಗರ್ಭಗುಡಿಯ ಪಕ್ಕದಲ್ಲೇ ಕುರಾನ್ ಪಠಿಸಿ, ನಮಾಜ್ ಮಾಡಿದ್ದು, ದೇವಾಲಯದ ಆವರಣದಲ್ಲಿ ಮಾಂಸದಡುಗೆ ಭಕ್ಷಿಸಿದ್ದು ಮುಂತಾದ ಘಟನೆಗಳು ನಡೆದಿದ್ದವು. ಇಂತಹ ಘಟನೆಗಳಿಗೆ ಆಸ್ಪದ ನೀಡಬಾರದೆಂದು ಸರಕಾರಕ್ಕೆ ಸ್ಪಷ್ಟವಾಗಿ ತಿಳಿಸಿರುವ ನ್ಯಾಯಾಲಯವು, ಇತರ ಧರ್ಮಗಳವರು ತಮ್ಮ ಮತಾಚರಣೆಯನ್ನು ಸ್ವತಂತ್ರವಾಗಿ ನೆರವೇರಿಸಲು ಸ್ವಾತಂತ್ರ್ಯ ಹೊಂದಿರುವಂತೆಯೇ ಹಿಂದುಗಳು ಕೂಡಾ ದೇವಾಲಯಗಳಲ್ಲಿ ತಮ್ಮದೇ ಆದ ವಿಧಿವಿಧಾನಗಳನ್ನು ಆಚರಿಸುವ ಸ್ವಾತಂತ್ರ್ಯ ಹೊಂದಿದ್ದಾರೆ. ಅವರ ಇಂತಹ ಆಚರಣೆಗೆ ಭಂಗ ತರುವ ಅಧಿಕಾರ ಯಾರಿಗೂ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಧ್ವಜಸ್ಥಂಭಕ್ಕಿಂತ ಮುಂದೆ ಅನ್ಯಧರ್ಮೀಯರು ಪ್ರವೇಶಿಸುವಂತಿಲ್ಲ ಎಂಬ ಸೂಚನೆಯನ್ನು ಕೇವಲ ಪಳನಿ ಮುರುಗ ದೇವಸ್ಥಾನಕ್ಕೆ ಸೀಮಿತಗೊಳಿಸಲು ತಮಿಳುನಾಡು ಸರಕಾರ ಯತ್ನಿಸಿತಾದರೂ ಅದಕ್ಕೆ ನ್ಯಾಯಾಲಯವು ಅವಕಾಶ ನೀಡದೆ ಎಲ್ಲಾ ದೇವಾಲಯಗಳಲ್ಲಿಯೂ ಇಂತಹ ಸೂಚನೆ ಅಳವಡಿಸುವಂತೆ ಆದೇಶಿಸಿರುವುದು ಗಮನಾರ್ಹ. ದೇವಾಲಯ ಪ್ರವೇಶಿಸಲು ಯಾರಾದರೂ ಇಚ್ಛಿಸುವುದಾದರೆ ಅಂತಹ ವ್ಯಕ್ತಿಯು ತಾನು ಹಿಂದುಗಳ ರೀತಿಯಲ್ಲೇ ದೇವಾಲಯದ ಆಚರಣೆಗಳನ್ನು ಅನುಸರಿಸುವುದಾಗಿ ಬರೆದು ಕೊಡಬೇಕು ಎಂಬುದಾಗಿಯೂ ನ್ಯಾಯಾಲಯ ಸೂಚಿಸಿದೆ. ನ್ಯಾಯಾಲಯದ ಈ ಆದೇಶವು ಹಿಂದೂ ದೇವಾಲಯಗಳ ಪಾವಿತ್ರ್ಯ ಕಾಪಾಡುವಲ್ಲಿ ಒಂದು ಮಹತ್ವದ ಬೆಳವಣಿಗೆ ಎಂಬುದರಲ್ಲಿ ಎರಡು ಮಾತಿಲ್ಲ.
ಕೃಪೆ: ಹೊಸ ದಿಗಂತ, ಸಂಪಾದಕೀಯ, ದಿ: ೦೧-೦೨-೨೦೨೫
ಚಿತ್ರ ಕೃಪೆ: ಅಂತರ್ಜಾಲ ತಾಣ