ದೇವ್ರು

ದೇವ್ರು

ಪುಸ್ತಕದ ಲೇಖಕ/ಕವಿಯ ಹೆಸರು
ಪದ್ಮನಾಭ ಭಟ್ ಶೇವ್ಕಾರ
ಪ್ರಕಾಶಕರು
ಅಂಕಿತ ಪುಸ್ತಕ, ಬಸವನಗುಡಿ, ಬೆಂಗಳೂರು. ದೂ: ೦೮೦-೨೬೬೧೭೧೦೦
ಪುಸ್ತಕದ ಬೆಲೆ
ರೂ. ೩೫೦.೦೦, ಮುದ್ರಣ: ೨೦೨೧

ಕಥೆಗಾರ, ಪತ್ರಕರ್ತ ಪದ್ಮನಾಭ ಭಟ್ ಅವರು ಬರೆದ ‘ದೇವ್ರು' ಪುಸ್ತಕದ ಬಗ್ಗೆ ಖುದ್ದು ಲೇಖಕರೇ ತಮ್ಮ ಮಾತುಗಳಲ್ಲಿ ಹೇಳಿರುವುದು ಹೀಗೆ..."ಇದನ್ನು ಬರೆಯಲು ಕೂಡುವ ಹೊತ್ತಿಗೆ, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಬೇಡ್ತಿ ನದಿ ಉಕ್ಕಿ, ನನ್ನೂರಿಗೂ ಹೊರಜಗತ್ತಿಗೂ ಸಂಪರ್ಕ ಕಲ್ಪಿಸುತ್ತಿದ್ದ ಸೇತುವೆ ನಡುಮಧ್ಯ ಮುರಿದು ಬಿದ್ದಿದೆ. ಪ್ರತಿವರ್ಷ ಹೊಳೆ ಬಂದಾಗ ಆ ಸೇತುವೆ ಮೇಲೆ ನಿಂತು ನೋಡುವುದು, ಅದರ ಕಂಭಕ್ಕೆ ಹೊಳೆಯಲ್ಲಿ ತೇಲಿಬಂದ ದಿಮ್ಮಿಗಳು ಬಡಿದು ಕಂಪಿಸಿದಾಗ ಭಯಭೀತ ರಾಗುವುದು... ಎಷ್ಟೆಲ್ಲ ನೆನಪುಗಳು ಉಕ್ಕುತ್ತಿವೆ. ಮತ್ತೊಂದೆಡೆ ಪ್ರವಾಹದ ವಿವಿಧ ಚಿತ್ರ, ದೃಶ್ಯದ ತುಣುಕುಗಳು, ಉತ್ಸಾಹದಿಂದ ಕೊಡುತ್ತಿರುವ ವೀಕ್ಷಕ ವಿವರಣೆಯ ಪರಿಚಿತ ಧ್ವನಿಗಳು ಮೊಬೈಲ್‌ನೊಳಗೆ ಸಂದಣಿಗಟ್ಟಿ ಹೇಷಾರವಗೈಯುತ್ತಿವೆ...

ಕೆಂಪಗೆ ಹೊಳೆಹೊಳೆಯುತ್ತ ಹರಿಯುತ್ತಿರುವ ಹೊಳೆಯ ಸರೀ ಒಳಸುಳಿಯ ಜಾಗಕ್ಕೇ ನಮ್ಮನ್ನು ಕರೆದೊಯ್ದು ಬಿಡುವಂತೆ ಕಾಣುತ್ತಿರುವ ಭಗ್ನ ಸೇತುವೆಯ ಚಿತ್ರ, ನಿಗೂಢ ರೂಪಕವಾಗಿಯೂ, ಗಾಢ ವಾಸ್ತವವಾಗಿಯೂ ದಿಕ್ಕೆಡಿಸುತ್ತಿರುವ ಈ ಹೊತ್ತಿನಲ್ಲಿ...

ಒಂದು ಕೃತಿ ಬರೆದು ಮುಗಿಸಿದ ಮೇಲೆ ಬರೆದವನ ಮನಸಲ್ಲಿ ಹುಟ್ಟುವ ಭಾವ ಯಾವುದು? ಸಂತೋಷವೋ? ನಿರಾಳವೋ? ಹೆಮ್ಮೆಯೋ?ಬಹುಶಃ ವಿಷಾದ... ತನ್ನೊಳಗೇ, ತನ್ನ ಭಾಗವಾಗಿಯೇ ತನ್ನಷ್ಟಕ್ಕೆ ಇದ್ದದ್ದು ಹರಿದು ಬೇರಾಗುತ್ತಿರುವ ವಿಷಾದ... ರಪಗುಟ್ಟಿ ಹೊಡೆಯುತ್ತಲೇ ಇರುವ ಅಲೆಗಳ ದೂರ ತಳ್ಳಲೂ ಆಗದೆ, ಬರಸೆಳೆದುಕೊಳ್ಳಲೂ ಆಗದೆ ಭರಿಸುತ್ತಲೇ ಇರುವ ದಡದ ರೇವಿನ ಮೌನ ವಿಷಾದ... ಮುಳ್ಳಿನ ಮೊನೆಯನ್ನು ಸೂಜಿತುದಿಯು ಮುಟ್ಟಿದ ಹಾಗೆ, ಬರಹದ ಬೆರಳ ತುದಿಯಲ್ಲಿಯೇ ಬದುಕಿನ ಯಾವುದೋ ಆಳವನ್ನು ಸವರಿದಾಗ ಘಟಿಸುವ ಚುಳ್ಳನೆಯ ವಿಷಾದ... ಏಕಕಾಲದಲ್ಲಿ ಇಂದಿನಲ್ಲಿ ನಿಂತೇ ಮುಂದನ್ನು ಕಂಡೂ ಅತ್ತಲೇ ಸಾಗಬೇಕಾದ ವಿಷಾದ...ಅಥವಾ ಇದಾವುದೂ ಅಲ್ಲವೋ ಏನೋ...ಅದನ್ನು ಇದೇ ಅಂತ ಹಿಡಿದು ತೋರಲು ಸಾಧ್ಯವಿದ್ದರೆ ಸಾಹಿತ್ಯ ಯಾಕೆ ಬೇಕು?”

ಪುಸ್ತಕದ ಬಗ್ಗೆ ಕಾದಂಬರಿಗಾರ ವಿವೇಕ ಶಾನುಭಾಗಗ ಹೇಳಿರುವುದರ ಆಯ್ದ ಭಾಗ ಹೀಗಿದೆ… “ವಲಸೆಯಿಂದ ಹುಟ್ಟುವ ಘರ್ಷಣೆ ಮತ್ತು ಅನುಸಂಧಾನ ಮನುಷ್ಯ ಚರಿತ್ರೆಯ ಒಡಲಲ್ಲಿದೆ. ನೆಲೆ ಹುಡುಕುತ್ತ ಹೊರಟವರ ಚಲನಶೀಲತೆಯು ಇಂದು ಧರ್ಮ, ದೇಶ, ಭಾಷೆ, ವರ್ಣ ಇತ್ಯಾದಿಗಳ ನೆಪದಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ಇಂಥ ಮುಖ್ಯ ಸಮಸ್ಯೆಯೊಂದರ ಬಹುಮುಖಗಳನ್ನು ಅದರೆಲ್ಲ ಸಂಕೀರ್ಣತೆಯೊಡನೆ ಹಿಡಿಯುವ ಮಹತ್ವಾಕಾಂಕ್ಷೆ ಈ ಕಾದಂಬರಿಗಿದೆ. ಸಹ್ಯಾದ್ರಿ ತಪ್ಪಲಿನ ಹಳ್ಳಿಯೊಂದರ ಜೀವನವನ್ನು ಅದರ ಸೌಂದರ್ಯ, ಕ್ರೌರ್ಯ ಮತ್ತು ಕಟುವಾಸ್ತವತೆಯ ಹಿನ್ನೆಲೆಯಲ್ಲಿ ಶೋಧಿಸುತ್ತಲೇ ನಗರದ ಸಹವಾಸಗಳನ್ನೂ ಈ ಕಥನವು ಎದುರಿಗಿಡುತ್ತದೆ. ಆಧುನಿಕ ತಂತ್ರಜ್ಞಾನವು ನಮ್ಮೊಳಗೆ ಹುಟ್ಟಿಸಿರುವ ಹುಸಿ ತಿಳಿವಳಿಕೆಯ ಅಹಂಕಾರದ ಪುಗ್ಗೆಯನ್ನು ಒಡೆಯುತ್ತ, ಮನುಷ್ಯ-ಪ್ರಕೃತಿಯ ಸಂಬಂಧದ ಜಟಿಲತೆಯನ್ನು ಅರಿಯಲು ಅಗತ್ಯವಿರುವ ತಾಳ್ಮೆ, ಸಂಯಮ, ವಿನಯಗಳ ಮಹತ್ವವನ್ನು ಮನಗಾಣಿಸುತ್ತದೆ.

ವಿಶಾಲವಾದ ಹರಹಿನ ಕೃತಿಯುದ್ದಕ್ಕೂ ಕಾಣುವ ಸೂಕ್ಷ್ಮಜ್ಞತೆ, ಬದುಕಿನ ವಿಪರ್ಯಾಸಗಳನ್ನು ಕಾಣುವ ಎಚ್ಚರ, ನಿಲುವಿಗಾಗಿ ಹಾತೊರೆಯುವ ಆತುರವಿಲ್ಲದ ಬರವಣಿಗೆಯು ಸಶಕ್ತ, ಪ್ರತಿಭಾವಂತ ಕಾದಂಬರಿಕಾರನ ಬರುವನ್ನು ಸಾರುತ್ತಿದೆ.
‘ದೇವ್ರು’ ಕೃತಿಯಿಂದ ಆಯ್ದ ಭಾಗವನ್ನು ನಿಮ್ಮ ಓದಿಗಾಗಿ ನೀಡಲಾಗಿದೆ… “ಮನೆಗೆ ಹೋದಾಗ ಅತ್ತೆ, ಮಾವ ಇವರ ಬರುವಿಕೆಗೇ ಕಾದಿದ್ದವರಂತೆ ಬಾಗಿಲಲ್ಲೇ ನಿಂತಿದ್ದರು. ಅವರ ಮುಖದಲ್ಲಿನ ಕಾತರ ನೋಡಿಯೇ ದಿವ್ಯಾಳಿಗೆ ಇದು ಎಲ್ಲರೂ ಸೇರಿ ಹೆಣೆದಿರುವ ಜಾಲ ಎಂದು ಹೊಳೆದುಬಿಟ್ಟಿತು. ಸುಮಿತ್ರಕ್ಕ ಕುತೂಹಲ ಹತ್ತಿಕ್ಕಿಕೊಂಡು ಕಾಳಜಿ ತೋರಿಸುತ್ತ, ‘ಏನು? ಏನಂದ್ರು ಡಾಕ್ಟರು? ಪಿತ್ತ ಆಗಿದ್ಯಂತಾ? ಯಾಕ್ ವಾಂತಿ ಆಯ್ತು?’ ಎಂದು ಒಂದರ ಹಿಂದೆ ಇನ್ನೊಂದು ಪ್ರಶ್ನೆಗಳನ್ನು ಕೇಳುತ್ತಲೇ ಹೋದರು. ದಿವ್ಯಾ, ‘ಹೂ, ಪಿತ್ತ ಸಿಕ್ಕಾಪಟ್ಟೆ ಜಾಸ್ತಿ ಆಗಿದ್ಯಂತೆ. ಇಳಿಸ್ಕೊಳ್ಳಿ ಅಂದ್ರು’ ಎಂದು ಹೇಳಿ ತನ್ನ ಕೋಣೆಗೆ ಬಂದುಬಿಟ್ಟಳು. ಹರ್ಷ ಮತ್ತೆ ಅಪ್ಪ ಅಮ್ಮನ ಪಿಸುಮಾತು ಅವಳನ್ನು ಹಿಂಬಾಲಿಸಿತು.

ರೂಮಿನಲ್ಲಿ ಕೂತು, ಚೂಡಿದಾರದೊಳಗಿಂದ ಕೈ ತೂರಿಸಿ ತನ್ನ ಹೊಟ್ಟೆಯನ್ನು ಸವರಿಕೊಂಡಳು. ತನ್ನ ಜೀವದೊಳಗೆ ಇನ್ನೊಂದು ಜೀವ ರೂಪುಗೊಳ್ಳುತ್ತಿದೆ ಎಂಬ ಸಂಗತಿಯೇ ಅವಳಿಗೆ ಪುಳಕ ಹುಟ್ಟಿಸಿ, ಮೈ ರೋಮಗಳೆಲ್ಲ ನಿಮಿರಿದವು. ಹೊಟ್ಟೆಯೊಳಗೇ ಜೀವ ತಳೆದು, ಹೊರಬಂದು, ಅತ್ತು, ಹರೆದು, ಅಂಬೆಗಾಲಿಕ್ಕಿ, ನಡೆದು, ಬೆಳೆದು, ಶಾಲೆ, ಕಾಲೇಜಿಗೆಲ್ಲ ಹೋಗಿ ಏನೋ ಮಾಡುವ, ಎಲ್ಲೋ ಮುಟ್ಟುವ ಜೀವವೊಂದು ತನ್ನ ಜೀವನವನ್ನು ನನ್ನ ಹೊಟ್ಟೆಯೊಳಗಿಂದ ಶುರುಮಾಡುತ್ತಿದೆ ಎಂಬೆಲ್ಲ ಅಸ್ಪಷ್ಟ ಬಿಡಿ ಚಿತ್ರಗಳು ಮನಸಲ್ಲಿ ಮೂಡಿ, ಭಾವುಕತೆಯಲ್ಲಿ ಕಣ್ಣು ಒದ್ದೆಯಾಯ್ತು.

ಅದೇ ಸಮಯಕ್ಕೆ ಸರಿಯಾಗಿ ಸುಮಿತ್ರಕ್ಕ, ನರಸ ಹೆಗಡೆ, ಹರ್ಷ ಒಟ್ಟಿಗೇ ಒಳಗೆ ಬಂದರು. ದಿವ್ಯಾ ಕಣ್ಣೀರು ಒರೆಸಿಕೊಂಡಳು.

‘ಅರೆ, ಖುಷಿ ಸುದ್ದಿ ಹೇಳ್ಲೇ ಇಲ್ಲ ನೀನು. ಅಲ್ಲಾ ಕಣ್ಣೀರೆಂತಕ್ಕೆ? ಜಗತ್ತಲ್ಲಿ ಎಷ್ಟೋ ಜನರಿಗೆ ಮಕ್ಕಳೇ ಆಗೂದಿಲ್ಲ. ಅಂಥದ್ರಲ್ಲಿ ನಿಂಗೆ ಇಷ್ಟು ಬೇಗ ತಾಯಿ ಆಗೋ ಭಾಗ್ಯ ಕೊಟ್ಟಿದಾನೆ ದೇವ್ರು. ಖುಷಿಪಡು ಖುಷಿಪಡು’ ಎಂದು ವಿಚಿತ್ರ ಕೀರಲು ದನಿಯಲ್ಲಿ ಹೇಳುತ್ತ ಹೆಗಲು ಸವರಿದಳು ಸುಮಿತ್ರಕ್ಕ. ದಿವ್ಯಾಳಿಗೆ ಮೈಮೇಲೆ ಚೇಳು ಹರಿದಾಡಿದಂತಾಯ್ತು. ಮನಸ್ಸು ಕಲ್ಲು ಮಾಡಿಕೊಂಡು ಗಟ್ಟಿ ಕೂತಳು.

‘ಏನೇ ಆಗ್ಲಿ, ಪಾಪೂನ ಇವ್ರ ಹಾಗೆ ಬೆಳೆಸ್ಬಾರ್ದು. ಅದು ನನ್ನ ಹಾಗೆ ಮೋಸ ಹೋಗ್ಬಾರ್ದು. ಯಾವ್ದು ಸರಿ, ಯಾವ್ದು ತಪ್ಪು ಅಂತ ತಿಳಿಯೋ ಹಾಗೆ, ಗಟ್ಟಿ ಗಟ್ಟಿ ಮಾಡಿ ಬೆಳೆಸ್ಬೇಕು’ -ಹೊರಗಿನಿಂದ ಅತ್ತೆ, ಮಾವ, ಗಂಡ ಏನೇನೋ ಹೇಳುತ್ತಿರುವಾಗ, ದಿವ್ಯಾಳ ಮನಸ್ಸು ಹೀಗೆಲ್ಲ ಯೋಚಿಸುತ್ತಿತ್ತು.

ನಂತರದ ಕೆಲವು ದಿನಗಳು ಬಸಿರಿನ ಪುಳಕ, ಸಂಭ್ರದಲ್ಲಿಯೇ ಕಳೆಯಿತಾದರೂ ಅದು ಬಹುಬೇಗ, ಏರಿದ ಜ್ವರದ ಹಾಗೆ ಇಳಿಯುತ್ತ ಬಂತು. ಊಟಕ್ಕೆ ಕೂತಾಗ, ರಾತ್ರಿ ಮಲಗಿದ್ದಾಗ, ದೇವರ ಮುಂದಿದ್ದಾಗ, ಹೀಗೆ ಎಲ್ಲೆಂದರಲ್ಲಿ ವಾಕರಿಕೆ ಬರುತ್ತಿತ್ತು. ಆಗೆಲ್ಲ ಉಳಿದವರು ಅಸಹ್ಯಭಾವದಲ್ಲಿ ಅವಳನ್ನು ನೋಡುತ್ತಿರುವಂತೆ ಭಾಸವಾಗುತ್ತಿತ್ತು. ವಿಪರೀತ ಹೊಟ್ಟೆ ಹಸಿವು; ಆದರೆ ಬಾಯಿಗೆ ಏನು ಹಾಕಿದರೂ ಮರುಕ್ಷಣ ವಾಂತಿ. ‘ಮೂರು ತಿಂಗಳು ಕಳೆಯೋವರೆಗೂ ಇದೆಲ್ಲ ಇರೂದೇ. ಕೆಲವೊಬ್ರಿಗೆ ಐದು ತಿಂಗ್ಳಾದ್ರೂ ಇರ್ತದೆ’ ಎಂದು ಸುಮಿತ್ರಕ್ಕೆ ಹೇಳಿಬಿಟ್ಟಿದ್ದರು. ಕೊನೆಕೊನೆಗೆ ಎಲ್ಲರಿಗೂ ಅದು ರೂಢಿಯಾಗಿ ದಿವ್ಯಾಳಿಗೆ ವಾಂತಿ ಬಂದರೆ, ತಲೆಸುತ್ತು ಬಂದು ಕೂತರೆ ಯಾರೂ ನೋಡುತ್ತಲೂ ಇರಲಿಲ್ಲ.

ಸುಮಿತ್ರಕ್ಕ ಅಟ್ಟದ ಮೇಲಿನ ಚೀಲದಿಂದ ಯಾವ್ಯಾವುದೋ ಬೇರು ತಳೆದು ಕೊಡಲು ಶುರುಮಾಡಿದಳು. ದಿವ್ಯಾಳಿಗೆ ಅಡುಗೆ ವಾಸನೆ ಬಂದರೆ ಹೊಟ್ಟೆ ತೊಳಿಸುತ್ತಿತ್ತು. ಮೊದಮೊದಲು ಅತ್ತೆ ಕೊಡುತ್ತಿದ್ದ ಬೇರುಗಳನ್ನೆಲ್ಲ ತಿಂದಳು. ಕೊನೆಕೊನೆಗೆ ಅದರ ವಾಸನೆಗೂ ಹೊಟ್ಟೆ ತೊಳಿಸಲಾರಂಭಿಸಿತು. ‘ಬೇಡ’ ಅಂದ್ರೆ, ‘ಇದು ನಿಂಗಲ್ಲ. ನಿನ್ ಹೊಟ್ಟೆಲಿರೋ ನನ್ನ ಮೊಮ್ಮಗಂಗೆ. ತಿನ್ನು’ ಎಂದು ಹೇಳಿ ಒತ್ತಾಯ ಮಾಡುತ್ತಿದ್ದರು. ‘ಮೊಮ್ಮಗ ಅಂತ್ಲೇ ಹೇಗ್ ಹೇಳ್ತೀರಿ? ಮೊಮ್ಮಗಳಾದ್ರೆ?’ ಎಂದು ದಿವ್ಯಾ ಮರುಪ್ರಶ್ನೆ ಎಸೆದಳು. ‘ಹೂಂ, ಅದ್ಕೆಲ್ಲ ವ್ಯವಸ್ಥೆ ಮಾಡ್ಲಿಕ್ಕಾಗ್ತದೆ. ನಮ್ ಮನೆತನದಲ್ಲಿ ಎಲ್ಲರಿಗೂ ಮೊದ್ಲು ಗಂಡೇ ಹುಟ್ಟೂದು’ ಎಂದು ಎದ್ದು ಹೋದರು. ದಿವ್ಯಾಳಿಗೆ ಅವರ ಬಗೆಗಿನ ತಿರಸ್ಕಾರ ಇನ್ನಷ್ಟು ಹೆಚ್ಚಾಯ್ತು. ಏನು ಮಾತಾಡಿದರೂ, ‘ಇದು ನಿಂಗಲ್ಲ, ನಿನ್ನ ಹೊಟ್ಟೆಲಿರೋ ನನ್ ಮೊಮ್ಮಗಂಗೆ’ ಅನ್ನುವ ಮಾತು ಬರತೊಡಗಿತು. ದಿವ್ಯಾಳಿಗೆ ಆ ಮಾತು ಕೇಳಿ ಮೈಯೆಲ್ಲ ಉರಿಯುತ್ತಿತ್ತು. ‘ದೇವ್ರೇ ಇದು, ಹೆಣ್ಣುಮಗೂವೇ ಆಗಿರಲಿ’ ಎಂದು ಪ್ರಾರ್ಥಿಸಿಕೊಳ್ಳುತ್ತಿದ್ದಳು.” ೩೬೦ ಪುಟಗಳ ಈ ಕೃತಿಯು ಒಂದು ಉತ್ತಮ ಓದಿಗೆ ನಾಂದಿಯಾಗುವ ಎಲ್ಲಾ ಲಕ್ಷಣ ಇದೆ.