ದೇಶದ ಹಣೆಬರಹ

ದೇಶದ ಹಣೆಬರಹ

ಕವನ

ಭಾರತ ದೇಶವು ದಿಗಂತಕ್ಕೇರಲು

ನಿತ್ಯವು ಬೇಕಿದೆ ಪರಿಪುಷ್ಠಿ

ಭವ್ಯತೆ ಒಡಲಲಿ ತುಂಬಿದ ಮುತ್ತನು

ಹೆಕ್ಕಬೇಕು ತಥ್ಯಕೆ ಮರುಪುಷ್ಠಿ||

 

ಗಾಂಧಿಯ ಕನಸನು ನನಸದು ಮಾಡಲು

ಹಗಲಿರುಳೆನ್ನದ ದುಡಿಮೆಯಲಿ

ರಾಮರಾಜ್ಯದ ಪ್ರತಿಸ್ಥಾಪನೆ ಅತ್ಯಗತ್ಯವದು

ಸಾರ್ಥೈಕ್ಯತೆಯ ದಿವ್ಯ ಸಾಧನೆಯಲಿ||

 

ಭ್ರಷ್ಟತೆ ಮೂಢತೆ ತೊಲಗಿಸಿ ನಿಂತರೆ

ದೇಶಕೆ ದೇಶವೇ ಅಭಿವೃದ್ಧಿ

ಕಾಯಕ ನಿಷ್ಠೆಗೆ ನೀಡುವ ದೇಣಿಗೆ

ನಾಡಿನ ಜನತೆಗೆ ಶ್ರೇಯೋಭಿವೃದ್ಧಿ||

 

ಐಕ್ಯತೆ ಮಂತ್ರದಿ ನಡೆದಿಹ ನಾಡಿಗೆ

ಆಂತರೀಕ ವೈಷಮ್ಯವೆ ಎದುರಾಗಿ

ಘನತೆಯು ಕುಗ್ಗುತ ಜನತೆಯ ಹಾದಿಗೆ

ದ್ವೇಷಾಸುಯಗಳ ಸುರಿಮಳೆಯು||

 

ಭಯೋತ್ಪಾದನೆ ಉಗ್ರರ ಭೀತಿಗೆ ತಲ್ಲಣ

ಗೊಂಡಿಹ ದೇಶವು ಚಿಂತೆಯಲಿ

ಅತ್ಯಾಚಾರ ಅನಾಚಾರದ ಭದ್ರ ಬುನಾದಿ

ನಿಲ್ಲದೆ ಸಾಗುವ ಹಾದಿಯಲಿ||

 

ಸತ್ಯನಿಷ್ಠೆ ಪ್ರಾಮಾಣಿಕತೆ ಬೀಜವ ಬಿತ್ತುತ್ತ

ನಡೆದರೆ ಖಂಡಿತ ಸಾಧನೆವಿನಹ

ಹಿಂಸೆಯ ಪಥದಲಿ ನಡೆದರೆ ನಿತ್ಯವು

ಬದಲಾಗದು ದೇಶದ ಹಣೆಬರಹ||

 

-ಅಭಿಜ್ಞಾ ಪಿ ಎಮ್ ಗೌಡ

 

ಚಿತ್ರ್