ದೇಹವೆಂಬ ದೇವಾಲಯ

ದೇಹವೆಂಬ ದೇವಾಲಯ

ಬರಹ

‘ದೇಹೋ ದೇವಾಲಯಃ ಪ್ರೋಕ್ತೋ, ಜೀವೋ ಹಂಸಃ ಸನಾತನಃ
ತ್ಯಜೇದಜ್ಞಾನ ನಿರ್ಮಾಲ್ಯಂ ಸೋಹಂ ಭಾವೇನ ಪೂಜಯೇತ್.’


ನಮ್ಮ ಹಿರಿಯರು ಕಂಡುಕೊಂಡಿದ್ದ ಆತ್ಮಾರಾಧನೆಯನ್ನು ವಿವರಿಸುವ ಈ ಶ್ಲೋಕ ದೇಹವನ್ನೇ ದೇವಾಲಯವೆಂದು ಭಾವಿಸು ಎಂದು ಹೇಳುತ್ತದೆ. ದೇಹವೆಂಬ ದೇವಾಲಯದಲ್ಲಿ ನೆಲೆಗೊಂಡಿರುವ ಜೀವಾತ್ಮವೆಂಬ ಹಂಸವೇ ಭಗವಂತ ಸ್ವರೂಪಿ. ಅಜ್ಞಾನವೆಂಬ ನಿರ್ಮಾಲ್ಯವನ್ನು ತೆಗೆದುಹಾಕಿ ಅವನೇ ನಾನೆಂಬ ಭಾವದಿಂದ ಪೂಜಿಸಬೇಕು ಎನ್ನುವುದು ತಾತ್ಪರ್ಯ.

ಬಸವಣ್ಣ ಹೇಳಿದ ಉಳ್ಳವರು ಶಿವಾಲಯ ಮಾಡುವರು, ನಾನೇನು ಮಾಡಲಿ ಬಡವನಯ್ಯಾ ಎಂಬುದು ಕೂಡ ದೇಹವನ್ನೇ ದೇವಾಲಯವೆಂದು ಬಣ್ಣಿಸಿದ ಒಂದು ವಚನ. ಶಿರವನ್ನು ಹೊನ್ನ ಕಳಸವೆಂದು ಪರಿಭಾವಿಸಿ ಶರೀರವನ್ನು ದೈವ ಪ್ರಭೆಯ ಪ್ರತೀಕವೆಂದು ಭಾವಿಸುವುದು ಉದಾತ್ತ ದೃಷ್ಟಿಕೋನ. ಮೂರು ದಿನ ಬದುಕಿ ಮಣ್ಣ ಪಾಲಾಗುವ ಈ ದೇಹವನ್ನು ಭಗವಂತನ ಆವಾಸ ಸ್ಥಾನವೆಂಬ ಔತ್ಯನ್ನೇಕಿರಿಸುವುದು ಜೀವನ್ಮುಖಿ ಪರಿಕಲ್ಪನೆ ಮತ್ತು ಅದ್ವೈತ ದರ್ಶನದ ಸಹಜ ತಾತ್ಪರ್ಯವೂ ಆಗಿದೆ.

ಹೀಗೆ ದೇಹಕ್ಕೊಂದು ದೇವಾಲಯದ ಕಲ್ಪನೆಯನ್ನಿರಿಸಿಕೊಂಡು, ಅದನ್ನೊಂದು ಆರಾಧನಾ ಮಂದಿರವನ್ನಾಗಿ ಪರಿಭಾವಿಸುವುದು ಮೋಹದ ಜೊತೆಗೇ ಮಮಕಾರವನ್ನೂ ಉಳಿಸುತ್ತದೆ ಎನ್ನುವವರೂ ಇದ್ದಾರೆ. ಆದರೆ ದೇಹವನ್ನೆ ದೇಗುಲವನ್ನಾಗಿ ಪರಿಭಾವಿಸುವವನು ತನ್ನ ಕರ್ತವ್ಯದ ಅರಿವನ್ನೂ ಕಾಣುತ್ತಾನೆ. ಕೇವಲ ದೈಹಿಕ ಸ್ತರದಲ್ಲೇ ಬದುಕಲಾರದ ಮನುಷ್ಯ ಮನಸ್ಸೆಂಬ ಸೇತುವೆಯನ್ನೂ ಈ ದೇಹದೊಂದಿಗೇ ಕಲ್ಪಿಸಿಕೊಂಡಿದ್ದಾನೆ. ಒಬ್ಬರ ಬದುಕಿನುದ್ದಕ್ಕೂ ಚೈತನ್ಯದ ಆಶ್ರಯ ಸ್ಥಾನವಾದ ದೇಹವು ಅದನ್ನು ನಿಯಂತ್ರಿಸುವ ಬುದ್ಧಿ ಮತ್ತು ಶರೀರದ ಕ್ರಿಯೆಗಳಿಗೆ ಭಾವಸ್ಪಂದನದವೊದಗಿಸುವ ಮನಸ್ಸಿಗೂ ಆಧಾರವಾಗಿರುವುದನ್ನು ಗಮನಿಸಬೇಕು. ಹಾಗಾಗಿಯೇ ದೇಹ-ಮನಸ್ಸು-ಬುದ್ಧಿ ಭಾವಗಳ ಸಮ್ಮಿಲನವನ್ನು ದೇಗುಲವೆನ್ನಲೇ ಬೇಕಾಗುತ್ತದೆ. ಈ ದೇವಾಲಯ ಒಂದು ಪೂಜಾಮಂದಿರವಾಗಬೇಕೆಂದರೆ ಅಲ್ಲಿಯೂ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಗಳ ಶೃಂಗವಾಗಲೇಬೇಕು. ಮನಸ್ಸು ಮತ್ತು ಶರೀರಗಳ ಹತೋಟಿ ಇದ್ದಲ್ಲಿ ಮಾತ್ರ ಲೌಕಿಕದ ಬದುಕೂ ಸಹನೀಯವಾಗಿರುತ್ತದೆ ಇಲ್ಲದೆ ಹೋದರೆ ಅದು ನರಕಸದೃಶವಾಗುತ್ತದೆ, ಪಾಪ ಯಾತ್ರೆಯ ಅಂಕಿತವಾಗುತ್ತದೆ.

ದೈಹಿಕ ಆರೋಗ್ಯ ಮತ್ತು ಮಾನಸಿಕ ಸೌಖ್ಯ ನಮ್ಮ ಅಸ್ತಿತ್ವವನ್ನು ತೋರ್ಪಡಿಸಲು ಅಗತ್ಯವಾಗಿ ಬೇಕಾದ ಮೂಲದ್ರವ್ಯಗಳಾಗಿವೆ. ಅಂದರೆ ದೈಹಿಕ ಆರೋಗ್ಯದ ಜೊತೆಜೊತೆಗೇ ಮಾನಸಿಕ ಸ್ವಾಸ್ಥ್ಯವೂ ದೇಹವನ್ನು ದೇಗುಲವನ್ನಾಗಿಸಿಕೊಳ್ಳಲು ಸಹಕರಿಯಾದ ಅಂಶವಾಗಿದೆ. ಯಾವಾಗ ಮನುಷ್ಯ ಸಮಂಜಸವಾಗಿ ಬುದ್ಧಿ ಭಾವಗಳನ್ನೂ, ದೈಹಿಕ ಕಾಮನೆಗಳನ್ನೂ ನಿಯಂತ್ರಿಸುವುದನ್ನು ಮರೆಯುತ್ತಾನೆಯೋ, ಆ ಕ್ಷಣದಿಂದಲೇ ದೇಹ ದೇಗುಲವು ಕುಸಿಯಲು ಪ್ರಾರಂಭವಾಗುತ್ತದೆ. ಆಹಾರ, ಪಾನೀಯ, ಜೀವನ ಶೈಲಿಗಳಲ್ಲಿ ಸ್ವೇಚ್ಛೆಯ ಕೈ ಮೇಲಾದರೆ ಮೈ ಮನಸ್ಸುಗಳ ಆರೋಗ್ಯ ಕೆಡುತ್ತದೆ. ಬದುಕು ಅಸಹನೀಯವಾಗುತ್ತದೆ.

ಶಿವಾಲಯವಾಗಬೇಕಿದ್ದ ದೇಹ ಶವಾಲಯ ಸೇರಿಸುವ ಲೌಕಿಕದ ಆಕರ್ಷಣೆಗಳನ್ನು ಮೀರಿ ನಿಲ್ಲುವ ತಾಕತ್ತು ಸುಲಭವಾಗಿ ಸಿಗುವಂಥಹುದೇನೂ ಅಲ್ಲ. ಅದೂ ಒಂದು ತಪಸ್ಸು. ದೇಹ ಮನಸ್ಸುಗಳ ಮೇಲಣ ಸುಲಭಕ್ಕೆ ದಕ್ಕದ ನಿರಂತರ ಗೆಲುವು ಅದು.

ಇಂದ್ರಿಯಗಳ ದಾಸನಾಗದೇ ರಾಗದ್ವೇಷಗಳನ್ನು ನಿಯಂತ್ರಿಸಿದರೆ ಮನಸ್ಸಿಗೆ ಕ್ಲೇಷವೊದಗದೇ ಅಂತಃಕರಣ ಶುದ್ಧಿ ಸಾಧ್ಯವಾಗುತ್ತದೆ ಎನ್ನುತ್ತದೆ ಭಗವದ್ಗೀತೆ. ಶರೀರ ಮತ್ತು ಬುದ್ಧಿ ಮನಸ್ಸುಗಳ ಮೇಲೆ ನಿಯಂತ್ರಣ ಸಾಧಿಸಿ, ದೇಹವನ್ನು ಕಾಯಕಕ್ಕೆ ಸಮರ್ಪಿಸಿಕೊಂಡರೆ ಮುಕ್ತಿ ಸಿಗುತ್ತದೆ ಎನ್ನುತ್ತದೆ ಕರ್ಮಯೋಗ. ಹೀಗೆ ತಮ್ಮ ದೇಹದ ಮೇಲೆ ಸ್ವನಿಯಂತ್ರಣ ಹೇರಿಕೊಂಡು, ಬುದ್ಧಿ ಭಾವಗಳನ್ನು ಮನಸ್ಸನ್ನೂ ಅಂಕಿತದಲಿಟ್ಟುಕೊಂಡವರ ದೇಹ ದೇಗುಲವೇ ಆಗುತ್ತದೆ. ಅವರಿಗೆ ಅಲ್ಲೆಲ್ಲೋ ಇರುವ ಶಿವಾಲಯಕ್ಕಿಂತಲೂ ತಮ್ಮೊಳಗಿರುವ ಅಂತರಾತ್ಮವೇ ದೇವರಾಗಿ ಕಾಣುತ್ತದೆ. ಅಂಥವರು ಹೊರಗಣ ಬಯಲಿಗೆ ಹೋಗದೆಯೂ ಒಡಲಲ್ಲೆ ಗುಡಿಯನ್ನು ಕಾಣುತ್ತಾರೆ. ಅಂಥವರು ಅಳಿಯುವ ಸ್ಥಾವರಕ್ಕಿಂತಲೂ ಮುಖ್ಯವಾದ ಜಂಗಮ ದೇಗುಲದ ಒಡೆಯರಾಗುತ್ತಾರೆ. ಅಂಥವರಿಗಷ್ಟೇ ದೇಹೋ ದೇವಾಲಯಃ ಪ್ರೋಕ್ತೋ ಎನ್ನುವ ಶ್ಲೋಕದ ಅಂತರಾರ್ಥ ತಿಳಿಯುತ್ತದೆ.