ಧರಣಿಮಂಡಲ ಮಧ್ಯದೊಳಗೆ (ವಿಶ್ವಕಥಾಕೋಶ -೧)

ಧರಣಿಮಂಡಲ ಮಧ್ಯದೊಳಗೆ (ವಿಶ್ವಕಥಾಕೋಶ -೧)

ಪುಸ್ತಕದ ಲೇಖಕ/ಕವಿಯ ಹೆಸರು
ಪ್ರಧಾನ ಸಂಪಾದಕರು: ನಿರಂಜನ
ಪ್ರಕಾಶಕರು
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಪುಸ್ತಕದ ಬೆಲೆ
ರೂ. ೬೫.೦೦, ಮುದ್ರಣ: ೨೦೧೧

“೧೯೮೦. ಇದು ನವಕರ್ನಾಟಕ ಪ್ರಕಾಶನ ಸಂಸ್ಥೆಯ ೨೦ನೇ ಹುಟ್ಟು ಹಬ್ಬದ ವರ್ಷ. ಈ ಸಂದರ್ಭದ ನೆನಪಿಗಾಗಿ ಕೆಲವು ಉತ್ಕೃಷ್ಟ ಸಾಹಿತ್ಯ ಕೃತಿಗಳನ್ನು ಪ್ರಕಟಿಸಬೇಕೆಂಬ ಹಂಬಲ ನಮ್ಮನ್ನು ಕಾಡಿತು. ಅದರ ಪರಿಣಾಮವಾಗಿ ವಿಶ್ವಕಥಾಕೋಶ ಯೋಜನೆ ರೂಪುಗೊಂಡಿತು.

ಜಗತ್ತಿನ ಸಾರಸ್ವತ ಭಂಡಾರದ ಒಂದು ಭಾಗವನ್ನು ಕನ್ನಡ ಓದುಗರ ಮುಂದೆ ವಿಶ್ವಕಥಾಕೋಶ ತಂದಿಡುತ್ತದೆ. ನಾನಾ ದೇಶಗಳಿಂದ, ಭಾಷೆಗಳಿಂದ ಆಯ್ದ ಸುಮಾರು ೪೦೦ ಸಣ್ಣ ಕಥೆಗಳ ರಸದೌತಣ ಓದುಗರಿಗಾಗಿ ಇದರಲ್ಲಿ ಕಾದಿದೆ. ಭಾರತೀಯ ಭಾಷೆಗಳಲ್ಲಿ ಇಂತಹ ಒಂದು ಪ್ರಕಟಣೆ ಇದೇ ಮೊತ್ತಮೊದಲನೆಯದು.

ಇದೊಂದು ಬೃಹತ್ ಯೋಜನೆ. ಒಟ್ಟು ೨೫ ಸಂಪುಟಗಳಲ್ಲಿ ಇದರ ಪ್ರಕಟಣೆ. ಜಗತ್ತಿನ ಅತ್ಯುತ್ತಮ ಸಣ್ಣ ಕಥೆಗಳ ಈ ಮಹಾ ಸಂಕಲನವನ್ನು ಸಂಪಾದಿಸುವ ಗುರುತರವಾದ ಹೊಣೆಯನ್ನು ಹೊತ್ತವರು ಖ್ಯಾತ ಸಾಹಿತಿಯೂ, ಸ್ವತಃ ಶ್ರೇಷ್ಟ ಕಥೆಗಾರರೂ ಆದ ನಿರಂಜನರು.”

ಇದು ವಿಶ್ವಕಥಾಕೋಶದ ಮೊದಲ ಮುದ್ರಣದ ಸಮಯದಲ್ಲಿ ಬರೆದ ಪ್ರಕಾಶಕರ ನುಡಿ. ಈ ಕಥಾಕೋಶದ ಎಲ್ಲಾ ಪ್ರತಿಗಳು ಮುಗಿದು ಹೋದ ಕಾರಣ, ಹೊಸ ಓದುಗರಿಗೂ ಪುಸ್ತಕ ದೊರೆಯಬೇಕು ಎಂಬ ಸದಾಶಯದಿಂದ ೨೦೧೧ರಲ್ಲಿ ಎಲ್ಲಾ ಪುಸ್ತಕಗಳ ದ್ವಿತೀಯ ಮುದ್ರಣ ಮಾಡಲಾಯಿತು. ಆ ಸಮಯದಲ್ಲಿ ಪ್ರಕಾಶಕರ ನುಡಿ ಹೀಗಿದೆ.

“ನವಕರ್ನಾಟಕ ಪ್ರಕಾಶನದ ೫೦ರ ಸಂಭ್ರಮದಲ್ಲಿ ‘ವಿಶ್ವಕಥಾಕೋಶ'ದ ಇಪ್ಪತ್ತೈದು ಸಂಪುಟಗಳನ್ನು ಪುನರ್ಮುದ್ರಿಸಿ ಓದುಗರ ಕೈಗಿಡುತ್ತಿದ್ದೇವೆ. ಮೂವತ್ತು ವರ್ಷಗಳ ಕಾಲ ಅಲಭ್ಯವಾಗಿದ್ದ ಜಗತ್ತಿನ ಸಾಹಿತ್ಯ ಕಥಾ ಕಣಜ ಬೆಳಕು ಕಾಣುವ ಸಮಯದಲ್ಲಿ ಈ ಯೋಜನೆಯ ಹೊಣೆ ಹೊತ್ತ ಶ್ರೇಷ್ಟ ಕಥೆಗಾರ, ಸಾಹಿತಿ ನಿರಂಜನರು ನಮ್ಮೊಂದಿಗೆ ಇದ್ದಿದ್ದರೆ, ನವಕರ್ನಾಟಕದ ಚಿನ್ನದ ಹಬ್ಬ ಹೆಚ್ಚು ಅರ್ಥಪೂರ್ಣವಾಗುತ್ತಿತ್ತು. ಈ ಸಂಪುಟಗಳನ್ನು ಅವರಿಗೆ ಅರ್ಪಿಸಿ, ಅವರನ್ನು ನೆನೆಯುತ್ತೇವೆ.”

ಈ ಸಂಪುಟದ ಬೆಲೆ ಕೈಗೆಟಕುವಂತಿದೆ. ಅದಕ್ಕೆ ಕಾರಣ ಇನ್ಫೋಸಿಸ್ ಫೌಂಡೇಶನ್ ಇದರ ಅಧ್ಯಕ್ಷೆಯಾದ ಶ್ರೀಮತಿ ಸುಧಾ ಮೂರ್ತಿಯವರು. ಈಗ ನಮ್ಮ ಕೈಯಲ್ಲಿರುವುದು ವಿಶ್ವಕಥಾಕೋಶದ ಮೊದಲನೆಯ ಸಂಪುಟ - ಧರಣಿಮಂಡಲ ಮಧ್ಯದೊಳಗೆ. ಈ ಕಥಾ ಸಂಕಲನದಲ್ಲಿ ಹಲವಾರು ಖ್ಯಾತನಾಮರು ಬರೆದ ೨೨ ಸಣ್ಣ ಕಥೆಗಳಿವೆ. 

ಈ ಸಂಕಲನದ ಮುಖ್ಯ ಸಂಪಾದಕರಾದ ನಿರಂಜನ ಅವರು ತಮ್ಮ ಪ್ರಸ್ತಾವನೆಯಲ್ಲಿ “ ಧರಣಿಮಂಡಲ ಮಧ್ಯದೊಳಗೆ... ಬಹಳ ಹಳೆಯದಿರಬೇಕು. ಈ ಕವಿತೆ. ಗೋವಳರಾಗಿ ಅಲೆಯುತ್ತ ಬಂದವರ ಯಾವುದೋ ಭಾಷೆಯ ಒಂದು ಗೀತೆಯಿಂದ ಕನ್ನಡದ ಪ್ರಾಚೀನ ಕವಿಯೊಬ್ಬ ಸ್ಪೂರ್ತಿ ಪಡೆದು ಕಾಳಿಂಗಗೊಲ್ಲನ ಮತ್ತು ಅವನ ಗೋವಿನ ಕಥೆಯನ್ನು ಹಾಡಿರಲೂ ಸಾಕು. ಅಲ್ಲದೆ, ಎಲ್ಲ ಪ್ರಾಚೀನರಿಗೂ ಅವರು ನಿಂತ ನೆಲವೇ ವಿಶ್ವದ ಕೇಂದ್ರಬಿಂದು. 

ಅಂದ ಮೇಲೆ ವಿಶ್ವಕಥಾಕೋಶವನ್ನು ಕನ್ನಡದ ಕಥೆಗಳ ಸಂಪುಟದಿಂದಲೇ ಆರಂಭಿಸುವುದರಲ್ಲಿ ಔಚಿತ್ಯ ಇದ್ದೇ ಇದೆ. ಈ ಸಂಪುಟದಲ್ಲಿ ಇಪ್ಪತ್ತೆರಡು ಕಥೆಗಳಿವೆ. ನಾಲ್ಕು ತಲೆಮಾರುಗಳ ಕಥೆಗಾರರ (ಮೂವರು ಕಥೆಗಾರ್ತಿಯರು) ಒಂದೊಂದು ಕಥೆ. ಶ್ರೀನಿವಾಸರಿಂದ ಮಹಾದೇವರ ತನಕ.” ಎಂದಿದ್ದಾರೆ. ಈ ಪುಸ್ತಕದಲ್ಲಿರುವ ಕಥೆಗಳೆಂದರೆ ಟಾಲ್ ಸ್ಟಾಯ್ ಮಹರ್ಷಿಯ ಭೂರ್ಜ ವೃಕ್ಷಗಳು (ಶ್ರೀನಿವಾಸ), ನಾನು ಕೊಂದ ಹುಡುಗಿ (ಆನಂದ), ಮಣ್ಣಿನ ಮಗ (ಅ.ನ.ಕೃಷ್ಣರಾಯ), ಮೋಚಿ ( ಭಾರತೀಪ್ರಿಯ), ಪ್ರಾಯಶ್ಚಿತ್ತ (ಗೊರೂರು ರಾಮಸ್ವಾಮಿ ಅಯ್ಯಂಗಾರ್), ತುಚೀಪ್ ತುದಾಂಡ್ ತುಬದ್ -ರೆಡೀ (ಚದುರಂಗ), 0-0=0 (ತರಾಸು), ಬೂಟ್ ಪಾಲಿಶ್ (ಬಸವರಾಜ ಕಟ್ಟೀಮನಿ), ಮುಕ್ಕಣ್ಣನ ಮುಕ್ತಿ (ಕೋ.ಚೆನ್ನಬಸಪ್ಪ), ಕೋಡೀಹಳ್ಳಿಯ ಜಮೀನುದಾರರು (ಪಾಟೀಲ ಪುಟ್ಟಪ್ಪ), ಕಾಡು ಮಲ್ಲಿಗೆ (ವ್ಯಾಸರಾಯ ಬಲ್ಲಾಳ), ಸಮಸ್ಯೆಯ ಮಗು (ತ್ರಿವೇಣಿ), ಮಣ್ಣು ದಿಬ್ಬದ ಮೇಲೆ (ಅನುಪಮಾ ನಿರಂಜನ), ಹನುಮಾಪುರದಲ್ಲಿ ಹನುಮಜಯಂತಿ (ವೀಣಾ ಶಾಂತೇಶ್ವರ), ನಲ್ಲಿಯಲ್ಲಿ ನೀರು ಬಂದಿತು!!! (ಕೆ.ಸದಾಶಿವ), ಕುರುಡು ಕಾಂಚಾಣ ( ಪಿ.ಲಂಕೇಶ್), ಪ್ರಕೃತಿ (ಯು.ಆರ್,ಅನಂತಮೂರ್ತಿ), ಹೊಲತಿಯ ಹಾಳು (ಕ.ವೆಂ. ರಾಜಗೋಪಾಲ), ಮಾರಿಕೊಂಡವರು (ದೇವನೂರು ಮಹಾದೇವ), ರಾಜಮಾ (ಶಿವೇಶ್ವರ ದೊಡ್ಡಮನಿ), ಮುನಿಸಾಮಿಯ ವಾಲಗ !(ಅ.ಸೋಗಾಲ), “ಎಣ್ಣೆ! ಚಿಮಿಣಿ ಎಣ್ಣೆ !... (ನಿರಂಜನ).

ಇಲ್ಲಿರುವ ಎಲ್ಲಾ ಲೇಖಕರ ಬಗ್ಗೆ ಪುಟ್ಟದಾದ ಮಾಹಿತಿಯನ್ನು ಕೊನೆಯ ಪುಟಗಳಲ್ಲಿ ನೀಡಲಾಗಿದೆ. ಇದರಿಂದ ಸ್ವಲ್ಪ ಅಪರಿಚಿತರಾಗಿರುವ ಕೆಲವು ಲೇಖಕರನ್ನು ಪರಿಚಯ ಮಾಡಿಕೊಳ್ಳಲು ಸಹಕಾರಿಯಾಗಿದೆ. ಈ ದ್ವಿತೀಯ ಮುದ್ರಣವನ್ನು ಪ್ರಕಾಶಕರು ಈ ಸಂಪುಟದ ಮುಖ್ಯ ಸಂಪಾದಕರಾದ ನಿರಂಜನ ಅವರಿಗೇ ಅರ್ಪಿಸಿದ್ದಾರೆ. ಪುಸ್ತಕ ೨೦೦ ಪುಟಗಳನ್ನು ಹೊಂದಿದೆ. ಅಂದಿನ ಸಮಯದ ಕಥೆಗಳನ್ನು ಈಗ ಓದಿ ಆನಂದಿಸಲು ಇದು ಸೂಕ್ತ ಪುಸ್ತಕವಾಗಿದೆ.