ಧೃಢನಿರ್ಧಾರ ಇತಿಹಾಸದ ಗತಿಯನ್ನೇ ಬದಲಿಸಬಲ್ಲದು!

ಧೃಢನಿರ್ಧಾರ ಇತಿಹಾಸದ ಗತಿಯನ್ನೇ ಬದಲಿಸಬಲ್ಲದು!

     ನಮ್ಮ ಎಲ್ಲಾ ಭೌತಿಕ ಚಟುವಟಿಕೆಗಳಿಗೆ ಮತ್ತು ಮಾತಿನ ಮೂಲಕ ನಾವು ಹೊರಸೂಸುವ ಎಲ್ಲಾ ಭಾವಗಳಿಗೆ ಮನಸ್ಸೇ ಕಾರಣಕರ್ತವಾಗಿದೆ. ಇಂತಹ ಪ್ರಬಲ ಮನಸ್ಸಿನ ಹಿಂದೆ ಒಂದು ನಿರ್ದಿಷ್ಟ ಚಿಂತನೆಯ ಚಟುವಟಿಕೆ ಇದ್ದು ಅದು ಮನಸ್ಸನ್ನು ಹಿಡಿದಿಡಬಲ್ಲುದು. ಅದನ್ನೇ ಇಚ್ಛಾಶಕ್ತಿ ಅಥವ ಸಂಕಲ್ಪ ಎನ್ನುತ್ತಾರೆ. ಈ ಇಚ್ಛಾಶಕ್ತಿ ಅನುಸರಿಸಿ ಮನಸ್ಸು ಕೆಲಸ ಮಾಡುತ್ತದೆ. ಪ್ರತಿಯೊಂದು ಸಂಗತಿ/ವಿಷಯದ ಹಿಂದೆ ಒಂದು ನಿರ್ದಿಷ್ಟ ಇಚ್ಛಾಶಕ್ತಿ ಇರುತ್ತದೆ. ಪಂಚಭೂತಗಳಾದ ಆಕಾಶ, ವಾಯು, ಅಗ್ನಿ, ಭೂಮಿ, ನೀರುಗಳ ಗುಣ, ಸ್ವಭಾವಗಳ ಹಿಂದೆ ಅವುಗಳದೇ ಆದ ಇಚ್ಛಾಶಕ್ತಿ ಇದ್ದು, ಅದು ಅವುಗಳ ಗುಣ, ಸ್ವಭಾವ, ಅಸ್ತಿತ್ವಗಳನ್ನು ಉಳಿಸಿಕೊಳ್ಳುವುದಕ್ಕೆ ಕಾರಣವಾಗಿದೆ. ಹಾಗೆ ಇರದಿದ್ದರೆ ಒಂದು ಇನ್ನೊಂದರ ಗುಣಗಳನ್ನು ಅರಗಿಸಿಕೊಂಡು ಎಲ್ಲವೂ ಒಂದೇ ಆಗಿಬಿಡುತ್ತಿದ್ದವು. ಈ ವಿಶ್ವದಲ್ಲಿ ಇಚ್ಛಾಶಕ್ತಿಯಿಲ್ಲದ ಯಾವ ಒಂದು ಸೃಷ್ಟಿಯೂ ಇಲ್ಲ, ಅಣುವೂ ಇಲ್ಲ. ಇದು ವಿಶ್ವಶಕ್ತಿ! ಜೀವಿಗಳೂ ಸಹ ಇಚ್ಛಾಶಕ್ತಿಯಿಂದಲೇ ಅಸ್ತಿತ್ವ ಕಂಡುಕೊಂಡಿವೆ. ನಮ್ಮ ದೇಹರಚನೆ, ಉಸಿರಾಟ, ಹೃದಯದ ಬಡಿತ, ರಕ್ತಪರಿಚಲನೆ ಮುಂತಾದುವುಗಳನ್ನೂ ನಿರ್ದಿಷ್ಟ ಇಚ್ಛಾಶಕ್ತಿ ನಿಯಂತ್ರಿಸುತ್ತಿದೆ. ವಿಷಯದ ಆಳಕ್ಕೆ ಹೋಗದೆ, ನಮ್ಮ ದೈನಂದಿನ ಬದುಕಿನಲ್ಲಿ ಸಂಕಲ್ಪದ ಮಹತ್ವಕ್ಕೆ ಇಂದಿನ ಜಿಜ್ಞಾಸೆಯನ್ನು ಸೀಮಿತಗೊಳಿಸಿ ಚರ್ಚಿಸೋಣ.

     ದೈನಂದಿನ ವ್ಯವಹಾರಗಳಲ್ಲಿ ಸಂಕಲ್ಪ ಎಂದರೆ ಯಾವುದಾದರೂ ವಿಷಯದಲ್ಲಿ ನಾವು ಕೈಗೊಳ್ಳುವ ನಿರ್ಧಾರ ಎಂದುಕೊಳ್ಳಬಹುದು. ಈ ಸಂಕಲ್ಪ ಮಾಡುವುದಕ್ಕೂ ಸಾಮರ್ಥ್ಯ ಇರಬೇಕು. ಅದನ್ನು ಗಳಿಸಿಕೊಳ್ಳುವುದು ಹೇಗೆ? ಅದನ್ನು ಹೊಸದಾಗಿ ಗಳಿಸಿಕೊಳ್ಳಬೇಕಿಲ್ಲ, ಅದು ನಮ್ಮೊಳಗೆಯೇ ಇದೆ, ಉಪಯೋಗಿಸಿಕೊಳ್ಳಬೇಕಷ್ಟೆ. ಹೆಂಡ ಕುಡಿಯುವುದು ಕೆಟ್ಟದ್ದು, ಸಿಗರೇಟು ಸೇದುವುದರಿಂದ ನಮ್ಮ ಆರೋಗ್ಯದ ಜೊತೆಗೆ ಇತರರ ಆರೋಗ್ಯವೂ ಹಾಳಾಗುತ್ತದೆ ಎಂಬುದು ಕುಡಿಯುವವರಿಗೂ ಗೊತ್ತು, ಧೂಮಪಾನಿಗಳಿಗೂ ಗೊತ್ತು. ಆದರೂ ಅವರು ಕುಡಿಯುತ್ತಾರೆ, ಸಿಗರೇಟು ಸೇದುತ್ತಾರೆ. ಏಕೆಂದರೆ ಅವರಲ್ಲಿನ ಇಚ್ಛಾಶಕ್ತಿಯನ್ನು ಅವರು ಉಪಯೋಗಿಸಿಕೊಳ್ಳಲು ಅವರ ಮನಸ್ಸು ಬಿಡುವುದಿಲ್ಲ. ಮಧುಮೇಹದಿಂದ ನರಳುತ್ತಿರುವವನ ಮನಸ್ಸು ಇದೊಂದು ಸಲ ಹೋಳಿಗೆ ತಿಂದುಬಿಡು, ಒಂದು ಮಾತ್ರೆ ಜಾಸ್ತಿ ತೆಗೆದುಕೊಂಡರಾಯಿತು ಎಂದು ಪುಸಲಾಯಿಸುತ್ತದೆ. ಚಂಚಲ ಮನಸ್ಸಿಗೆ ಕಡಿವಾಣ ಹಾಕಬೇಕೆಂದರೆ ನಮ್ಮ ಅಂತರಂಗದ ಧ್ವನಿಗೆ ಕಿವಿಗೊಡಲೇಬೇಕು.

     ಮನಸ್ಸಿನ ನಿಯಂತ್ರಣಕ್ಕೆ ಮತ್ತು ಇಚ್ಛಾಶಕ್ತಿಯ ಉಪಯೋಗಕ್ಕೆ ಕೆಲವು ಆಂತರಿಕ ಮತ್ತು ಬಾಹ್ಯ ಆಚರಣೆಗಳು ನೆರವಾಗುತ್ತವೆ. ಯಾವುದಾದರೂ ಶುಭ ಕಾರ್ಯ ಮಾಡುವ ಮುನ್ನ ಸಂಕಲ್ಪ ಮಾಡುವ, ಕಂಕಣ ಕಟ್ಟಿಕೊಳ್ಳುವ ಸಂಪ್ರದಾಯವಿದೆ. ನಾವು ಮಾಡುವ ಈ ಕೆಲಸದಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂಬ ನಿಶ್ಚಯದಿಂದ ಆ ಕೆಲಸ ಮುಗಿಯುವವರೆಗೂ ಶ್ರದ್ಧೆಯಿಂದ ಮಾಡುವವರು ಇರುತ್ತಾರೆ. ಅಂತಹ ಕೆಲಸಗಳಿಂದ ಮನಸ್ಸಿಗೆ ನೆಮ್ಮದಿ, ಸಂತೋಷವೂ ಸಿಗುತ್ತದೆ. ಸ್ವಾಮಿ ಅಯ್ಯಪ್ಪನ ದರ್ಶನ ಮತ್ತು ಪೂಜೆಯ ಸಲುವಾಗಿ ಮಾಲೆ ಧರಿಸುವವರ ನಡವಳಿಕೆಗಳನ್ನು ನಾವು ಕಂಡಿರುತ್ತೇವೆ ಅಲ್ಲವೇ? ಅವರು ವ್ರತದಲ್ಲಿರುವ ಅವಧಿಯಲ್ಲಿ ಅವರು ಎಲ್ಲರನ್ನೂ ಸ್ವಾಮಿ ಎಂದೇ ಸಂಬೋಧಿಸುತ್ತಾರೆ, ಸ್ತ್ರೀ ಸಂಗ ಮಾಡುವುದಿಲ್ಲ, ಯಾರ ಮೇಲೂ ಸಿಟ್ಟಿಗೇಳುವುದಿಲ್ಲ, ಕುಡಿಯುವ, ಮಾಂಸ ತಿನ್ನುವ ಅಭ್ಯಾಸವಿರುವವರು ಆ ಅವಧಿಯಲ್ಲಿ ಅವನ್ನೆಲ್ಲಾ ವರ್ಜಿಸುತ್ತಾರೆ. ಇದನ್ನೆಲ್ಲಾ ಅವರುಗಳು ಮಾಡುವುದು ಅವರ ಸಂಕಲ್ಪದ ಕಾರಣದಿಂದ! ಒಳ್ಳೆಯ ನಿರ್ಧಾರಗಳನ್ನು ಮುಂದುವರೆಸಲು ಅವಕಾಶವಿದೆ ಅಲ್ಲವೇ? ಇದು ಅವರವರ ವೈಯಕ್ತಿಕ ಸ್ವಭಾವಗಳನ್ನು ಅವಲಂಬಿಸಿರುತ್ತದೆ. ವ್ರತದಲ್ಲಿ ಇರುವವರೆಗೂ ತಮ್ಮನ್ನು ನಿಯಂತ್ರಿಸಿಕೊಳ್ಳುವ ಕೆಲವರು ವ್ತತದ ಅವಧಿ ಮುಗಿದ ತಕ್ಷಣ ಅದುವರೆಗೆ ತಡೆಹಿಡಿದಿಟ್ಟುಕೊಂಡಿದ್ದ, ಕುಡಿಯುವ, ತಿನ್ನುವ, ಧೂಮಪಾನ ಮಾಡುವ, ಇತ್ಯಾದಿ ತಮ್ಮ ದುರಭ್ಯಾಸಗಳನ್ನು ಹಪಾಹಪಿಯಿಂದ ಎಂಬಂತೆ ಮುಂದುವರೆಸುವುದನ್ನೂ ಕಾಣುತ್ತೇವೆ. ಇಂತಹ ಪ್ರವೃತ್ತಿ ಸಲ್ಲದು. ಸರ್ವೇ ಜನಾಃ ಸುಖಿನೋ ಭವನ್ತು, ಎಲ್ಲರಿಗೂ ಒಳ್ಳೆಯದಾಗಲಿ ಎಂದು ಸಂಕಲ್ಪ ಮಾಡಿ, ಸ್ವತಃ ತಾವೇ ಒಳ್ಳೆಯ ನಡವಳಿಕೆಯವರಾಗದಿದ್ದರೆ ಸಂಕಲ್ಪಕ್ಕೆ ಬೆಲೆಯೇನು? 

     ಭಜನೆ, ಪೂಜೆ, ಪುನಸ್ಕಾರ, ಇತ್ಯಾದಿಗಳು ಮನಸ್ಸನ್ನು ನಿಯಂತ್ರಿಸಲು, ಶಾಂತಗೊಳಿಸಲು ಪೂರಕ ಸಹಕಾರ ಕೊಡುತ್ತವೆ. ಇವುಗಳನ್ನು ಅಂತರಂಗ ಒಪ್ಪುವ ರೀತಿಯಲ್ಲಿ ಮಾಡಬೇಕಷ್ಟೆ. ತೋರಿಕೆಯ ಆಚರಣೆಗಳು ತೋರಿಕೆಯ ಫಲ ಕೊಟ್ಟಾವು! ಸಜ್ಜನರ ಸಹವಾಸ, ಗುರು-ಹಿರಿಯರ ಮಾರ್ಗದರ್ಶನಗಳು, ಸಂಸ್ಕಾರಯುತ ನಡವಳಿಕೆಗಳು, ಸುಯೋಗ್ಯ ಶಿಕ್ಷಣ, ಉತ್ತಮ ವೃತ್ತಿ, ಪ್ರವೃತ್ತಿಗಳು ಸಹ ಹುಚ್ಚು ಕುದುರೆಯಂತೆ ಓಡುವ ಮನಸ್ಸಿಗೆ ಕಡಿವಾಣ ಹಾಕಲು ಸಹಕಾರಿ. ಮನಸ್ಸು ಹೀಗೆ ನಮ್ಮ ಅಧೀನಕ್ಕೆ ಬರಲು ಇಂತಹ ಸತ್ಸಂಗಗಳು, ಸಜ್ಜನ ಸಹವಾಸ, ಗುರು-ಹಿರಿಯರ ಮಾರ್ಗದರ್ಶನ ಬಯಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಿಯಮಿತವಾದ ಒಳ್ಳೆಯ ಅಭ್ಯಾಸಗಳು- ಪ್ರತಿನಿತ್ಯ ವಾಕಿಂಗ್ ಮಾಡುವುದು, ವ್ಯಾಯಾಮ, ಯೋಗಾಭ್ಯಾಸ, ಇತ್ಯಾದಿಗಳಲ್ಲಿ ತೊಡಗುವುದು, ಉತ್ತಮ ಸಾಹಿತ್ಯವನ್ನು ಓದಲು ಸಮಯ ಮಾಡಿಕೊಳ್ಳುವುದು, ಆರೋಗ್ಯಕರವಾದ ಆಹಾರ ಸೇವನೆ, ಇತ್ಯಾದಿಗಳೂ ಸಹ ಮನಸ್ಸನ್ನು ಹಿಡಿತದಲ್ಲಿಡಲು ಉಪಯೋಗಕಾರಿ. ಹಿಡಿತದಲ್ಲಿರುವ ಮನಸ್ಸಿಗೆ ಇಚ್ಛಾಶಕ್ತಿಯ ಆದೇಶವನ್ನು ಪಾಲಿಸುವ ಮನಸ್ಸು ಬರುತ್ತದೆ.

     ಸಂಕಲ್ಪ ಮಾಡಲೂ ಸಾಮರ್ಥ್ಯ ಇರಬೇಕು ಎಂದು ಮೊದಲೇ ಹೇಳಿದೆಯಲ್ಲವೇ? ಒಬ್ಬ ಸಣಕಲ ತಾನು ಒಬ್ಬ ದೊಡ್ಡ ಪೈಲ್ವಾನ್ ಆಗುತ್ತೇನೆ ಎಂದರೆ, ಭ್ರಷ್ಠಾಚಾರವೇ ಉಸಿರಾಗಿರುವ ರಾಜಕಾರಣಿಯೊಬ್ಬ ರಾಮರಾಜ್ಯವನ್ನು ತರುವುದು ತನ್ನ ಸಂಕಲ್ಪ ಎಂದು ಘೋಷಿಸಿದರೆ ಅದಕ್ಕಿಂತ ಆರ್ಥಹೀನ ಸಂಗತಿ ಮತ್ತೊಂದಿಲ್ಲ. ಹಾಗೆ ಮಾಡುತ್ತೇನೆ, ಹೀಗೆ ಮಾಡುತ್ತೇನೆ ಎಂದು ಬೊಗಳೆ ಬಿಡುವವರಿಗಿಂತ ನಿರ್ಧರಿಸಿದಂತೆ ಮಾಡಿ ತೋರಿಸಿದವರು ಎತ್ತರದ ಸ್ಥಾನದಲ್ಲಿ ನಿಲ್ಲುತ್ತಾರೆ, ಆದರಣೀಯರಾಗುತ್ತಾರೆ. ಧೃಢ ಸಂಕಲ್ಪ ಮಾಡಿದರೆ ಸಾಧಿಸಲಾಗದುದು ಏನೂ ಇಲ್ಲವೆಂಬುದಕ್ಕೆ ಅನೇಕ ಸಾಕ್ಷಿಗಳು ಸಿಗುತ್ತವೆ. ನಂದರ ದುರಾಡಳಿತವನ್ನು ಚಂದ್ರಗುಪ್ತನನ್ನು ಬೆಳೆಸುವ ಮೂಲಕ ಸಾಧಿಸಿದ ಚಾಣಕ್ಯ, ಹಕ್ಕ-ಬುಕ್ಕರನ್ನು ಮುಂದಿಟ್ಟು ವಿಜಯನಗರ ಸಾಮ್ರಾಜ್ಯ ಸ್ಥಾಪಿಸಿದ ವಿದ್ಯಾರಣ್ಯ ಮುಂತಾದವರ ಆದರ್ಶ ನಮ್ಮ ಮುಂದಿದೆ. ಧೃಢಕಾಯರೂ ಸಾಧಿಸುವುದು ಕಷ್ಟವೆನಿಸಿದ ಹಿಮಾಲಯದ ಎವರೆಸ್ಟ್ ಶಿಖರವನ್ನು ಕಾಲು ಕಳೆದುಕೊಂಡಿದ್ದರೂ ಅಳವಡಿಸಿದ್ದ ಕೃತಕ ಕಾಲಿನ ಸಹಾಯದಿಂದ, ಕೇವಲ ಸಂಕಲ್ಪದ ಬಲದಿಂದ ಏರಿದ್ದ ಗಟ್ಟಿಗಿತ್ತಿ ಉತ್ತರಪ್ರದೇಶದ ಅಂಬೇಡ್ಕರ್‌ನಗರದ ಅರುಣಿಮಾ ಸಿನ್ಹಾ.

     ಇತ್ತೀಚಿನ ಉದಾಹರಣೆ ನೋಡೋಣ. ಶ್ರೀ ಸೀತಾರಾಮ ಕೆದಿಲಾಯ ಒಬ್ಬ ಆರೆಸ್ಸೆಸ್ ಪ್ರಚಾರಕರು. ಅವರ ಮನಸ್ಸಿಗೆ ಭಾರತವನ್ನು ಕಾಲುನಡಿಗೆಯಲ್ಲಿ ಸುತ್ತಬೇಕೆಂದು ಮನಸ್ಸಿಗೆ ಬಂದಿತು. ಆ ಯಾತ್ರೆ ಹೇಗಿರಬೇಕೆಂದು ಚಿಂತಿಸಿ ಸಂಕಲ್ಪ ಮಾಡಿ 9.8.2012ರಂದು ಕನ್ಯಾಕುಮಾರಿಯಿಂದ ಪಾದಯಾತ್ರೆ ಪ್ರಾರಂಭಿಸಿಯೇಬಿಟ್ಟರು. ದಿನಕ್ಕೆ 10-15 ಕಿ.ಮೀ. ನಡಿಗೆ. ಕೊನೆಯಲ್ಲಿ ಸಿಗುವ ಹಳ್ಳಿಯಲ್ಲಿ ವಾಸ್ತವ್ಯ. ಗ್ರಾಮದ ಯುವಕರು, ಮುಖ್ಯಸ್ಥರುಗಳೊಂದಿಗೆ ಸಮಾಲೋಚನೆ, ಅಶಕ್ತರ, ಕಾಯಿಲೆಯಿಂದ ನರಳುವವರ, ದೀನ-ದುರ್ಬಲರ ಕುರಿತು ಕರ್ತವ್ಯಪ್ರಜ್ಞೆ, ಜಾಗೃತಿ ಮೂಡಿಸುವ ಕೆಲಸ, ಗಿಡ ನೆಡುವುದು, ಇತ್ಯಾದಿಗಳು ಅಲ್ಲಿನ ಕಾರ್ಯಕ್ರಮದಲ್ಲಿ ಸೇರಿರುತ್ತಿದ್ದವು. ಮರುದಿನ ಮುಂದಿನ ಗ್ರಾಮಕ್ಕೆ ನಡಿಗೆ ಮುಂದುವರೆದಾಗ ಅಲ್ಲಿನ ಗ್ರಾಮಸ್ಥರೂ ಅವರೊಡನೆ ಕೆಲವು ಕಿ.ಮೀ. ನಡೆದು ಬೀಳ್ಕೊಡುತ್ತಿದ್ದರು. ಒಂದು ರಾಜ್ಯದ ಪ್ರವಾಸ ಮುಗಿದಾಗ ಅಲ್ಲಿನ ಸಮಸ್ಯೆಗಳು, ಪರಿಹಾರ ಇತ್ಯಾದಿ ಕುರಿತು ಅಲ್ಲಿನ ಮುಖ್ಯಮಂತ್ರಿಯವರಿಗೆ ಪತ್ರ ಬರೆಯುತ್ತಿದ್ದರು. ಹೀಗೆ ಸತತವಾಗಿ 5 ವರ್ಷಗಳ ಕಾಲ ಒಟ್ಟು 1797 ದಿನಗಳು ನಡೆದು, 23 ರಾಜ್ಯಗಳು, 2350 ಹಳ್ಳಿಗಳನ್ನು ಸಂದರ್ಶಿಸಿದ ಅವರು ನಡೆದ ದೂರ 23100 ಕಿ.ಮೀ.ಗಳು. ಕಳೆದ 9.7.2017ರ ಗುರುಪೂರ್ಣಿಮೆ ದಿನದಂದು ಮರಳಿ ಕನ್ಯಾಕುಮಾರಿ ತಲುಪಿದಾಗ ಅವರಿಗೆ ಭವ್ಯ ಸ್ವಾಗತ ಸಿಕ್ಕಿತು. 5 ವರ್ಷಗಳ ಹಿಂದೆ ವಾಮನನಾಗಿ ಹೊರಟಿದ್ದ ವ್ಯಕ್ತಿ ತ್ರಿವಿಕ್ರಮನಾಗಿ ಜನಮನವನ್ನು ಗೆದ್ದುಬಿಟ್ಟಿದ್ದರು. ಅವರ ಘೋಷವಾಕ್ಯ, "ಭಾರತವನ್ನು ತಿಳಿಯಿರಿ, ಭಾರತವೇ ಆಗಿ, ಭಾರತವನ್ನು ವಿಶ್ವಗುರುವನ್ನಾಗಿಸಿ" ಎಂಬುದಾಗಿತ್ತು. 

     ದೂರದೃಷ್ಟಿ, ಕಠಿಣ ಶ್ರಮ, ಧೃಢ ನಿರ್ಧಾರ ಮತ್ತು ಅರ್ಪಣಾ ಮನೋಭಾವಗಳಿದ್ದರೆ ಏನ್ನಾದರೂ ಸಾಧಿಸಬಹುದು. ದೌರ್ಭಾಗ್ಯವೆಂದರೆ ಸಾಧಕರುಗಳನ್ನು ನಾವು ದೇವರುಗಳಂತೆ ಕಂಡು ಗುಡಿ ಕಟ್ಟಿ ಪೂಜಿಸಿ ಧನ್ಯರಾದೆವೆಂದುಕೊಳ್ಳುತ್ತೇವೆ. ಅವರುಗಳಿಗೆ ಸಲ್ಲಿಸಬಹುದಾದ ನಿಜವಾದ ಗೌರವವೆಂದರೆ ಅವರುಗಳು ತೋರಿದ ಹಾದಿಯಲ್ಲಿ ನಡೆದು ನಾವುಗಳೂ ಅಂತಹ ಸಾಧನಾ ಪರಂಪರೆ ಮುಂದುವರೆಸುವುದು. ಪ್ರಯತ್ನಿಸುವ ನಿರ್ಧಾರದಿಂದ ಸಾಧನೆ ಆರಂಭವಾಗುತ್ತದೆ. ಸಾವಿರ ಮೈಲುಗಳ ಪ್ರಯಾಣ ಆರಂಭವಾಗುವುದೂ ಇಡುವ ಮೊದಲ ಸಣ್ಣ ಹೆಜ್ಜೆಯಿಂದಲೇ! ಆ ಹೆಜ್ಜೆಯಿಡಲು ಬೇಕಿರುವುದು ಇಚ್ಛಾಶಕ್ತಿ! ವಿವೇಕಾನಂದರು ಹೇಳುತ್ತಿದ್ದುದೂ ಇದನ್ನೇ- ಧೃಢನಿರ್ಧಾರದ ಒಬ್ಬ ವ್ಯಕ್ತಿ ಗಮನಾರ್ಹ ಬದಲಾವಣೆ ತರಬಲ್ಲ; ಧೃಢ ನಿರ್ಧಾರ ಹೊಂದಿದ ಒಂದು ಸಣ್ಣ ಜನರ ಗುಂಪು ಇತಿಹಾಸದ ಗತಿಯನ್ನೇ ಬದಲಾಯಿಸಬಲ್ಲದು!

-ಕ.ವೆಂ.ನಾಗರಾಜ್.