ನಕಲಿ ಅಂಕಪಟ್ಟಿ ಹಾವಳಿ ನಿಲ್ಲಲಿ

ನಕಲಿ ಅಂಕಪಟ್ಟಿ ಹಾವಳಿ ನಿಲ್ಲಲಿ

ಸರಕಾರಿ ನೇಮಕ ಪರೀಕ್ಷೆಗಳಲ್ಲಿ ನಡೆದ ಅಕ್ರಮಗಳಿಂದಾಗಿ ವ್ಯಾಪಕವಾಗಿ ಮುಜುಗರಕ್ಕೆ ತುತ್ತಾಗಿದ್ದ ಕಲ್ಯಾಣ ಕರ್ನಾಟಕಕ್ಕೆ ನಕಲಿ ಅಂಕಪಟ್ಟಿ ಸೃಷ್ಟಿಯ ಕಳಂಕವೂ ಮೆತ್ತಿಕೊಂಡಿರುವುದು ದುರದೃಷ್ಟಕರ. ಕರ್ನಾಟಕ ಪ್ರೌಢಶಿಕ್ಷಣಾ ಪರೀಕ್ಷಾ ಮಂಡಳಿಯ ಹೆಸರಿನಲ್ಲಿ ದುಷ್ಟ ಜಾಲಗಳು ಸೃಷ್ಟಿಸುತ್ತಿರುವ ಎಸ್ಸೆಸ್ಸೆಲ್ಸಿ ನಕಲಿ ಅಂಕಪಟ್ಟಿಗಳು ಗ್ರಾಮೀಣ ಅಂಚೆ ಸೇವಕರ ನೇಮಕ ಪರೀಕ್ಷೆಗಳಿಗೆ ಅಕ್ರಮದ ಮಸಿ ಬಳಿದಿರುವುದು ಆತಂಕಕಾರಿ ವಿದ್ಯಮಾನ. ಅಲ್ಲದೆ, ಕಲ್ಯಾಣ ಸೀಮೆಯಲ್ಲಿನ ಈ ಎಲ್ಲ ಬೆಳವಣಿಗೆಗಳು ಸರಕಾರಿ ನೇಮಕಾತಿ ಮೇಲಿನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಸಾಮಾನ್ಯವಾಗಿ ಕೆಳಹಂತದ ಡಿ ದರ್ಜೆಯಂತಹ ಪೋಸ್ಟ್ ಗಳಲ್ಲಿನ ನೇಮಕ ಪರೀಕ್ಷೆಗಳಲ್ಲಿನ ಅಕ್ರಮಗಳು ಹೊರಹೊತ್ತಿಗೆ ಅಷ್ಟಾಗಿ ಬೆಳಕಿಗೇ ಬರುವುದಿಲ್ಲ. ಸರಕಾರಿ ನೌಕರಿ ಬೇಕು ಎಂಬ ಹಂಬಲದಲ್ಲಿ ಬಡ ಮತ್ತು ಮಧ್ಯಮವರ್ಗದವರು ಸುಲಭವಾಗಿ ಇಂಥ ಅಕ್ರಮ ಅಂಕಪಟ್ಟಿ ಜಾಲದ ಬಲೆಗೆ ಬೀಳುತ್ತಿರುವುದು ದುರಂತ.

ಅಚ್ಚರಿಯೆಂದರೆ, ಅಂಚೆ ಇಲಾಖೆಯ ಇಂಥ ಹುದ್ದೆಗಳು, ಕಂದಾಯ ಇಲಾಖೆಯಲ್ಲಿನ ಗ್ರಾಮ ಲೆಕ್ಕಿಗರಂಥ ನೌಕರಿಗಳು, ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ಅತ್ಯುನ್ನತ ಅಂಕಪಡೆದವರಿಗಷ್ಟೇ ಮೀಸಲು ಎನ್ನುವ ಸ್ಥಿತಿ ಇದೆ. ನಕಲಿ ಅಂಕಪಟ್ಟಿ ಜಾಲಗಳು ಈ ಕಾರಣಕ್ಕಾಗಿಯೇ ಶೇ ೮೫, ಶೇ ೯೦, ಶೇ ೯೫ ಅಂಕಗಳ ಪಟ್ಟಿ ತಯಾರಿಸಿಕೊಡಲು ಒಂದೊಂದು ದರ ನಿಗದಿಪಡಿಸಿ, ವ್ಯಾಪಕ ದಂಧೆಗಿಳಿದಿವೆ. ಪ್ರಸ್ತುತ ಬಹುತೇಕ ಖಾಸಗಿ ಸಂಸ್ಥೆಗಳು ತಾವು ರಚಿಸಿದ ಪ್ರಶ್ನೆಪತ್ರಿಕೆ, ಸಂದರ್ಶನ ಕ್ರಮದ ಆಧಾರದ ಮೇಲೆಯೇ ನೇಮಕಗಳನ್ನು ಮಾಡಿಕೊಳ್ಳುತ್ತದೆ. ಭಾರತದ ವಿವಿಗಳಿಂದ ಪದವಿ, ಸ್ನಾತಕೋತ್ತರ ಪದವಿ ಪಡೆದು ಅಮೇರಿಕಕ್ಕೆ ಹೋದವರಿಗೂ ಅಲ್ಲಿನ ಸಂಸ್ಥೆಗಳು ಆ ಸರ್ಟಿಫಿಕೇಟುಗಳಿಗೆ ಹೆಚ್ಚಿನ ಮಾನ್ಯತೆ ನೀಡದೆ, ತಾವು ಸಿದ್ಧ ಪಡಿಸಿದ ಪರೀಕ್ಷೆಗಳನ್ನು ಎದುರಿಸಲು ಸೂಚಿಸಿರುತ್ತಾರೆ. ಈ ಮೂಲಕ ತಮಗೆ ಬೇಕಾದಂಥ, ಅರ್ಹ ಅಭ್ಯರ್ಥಿಗಳನ್ನು ಅಲ್ಲಿನ ಸಂಸ್ಥೆಗಳು ಆಯ್ಕೆ ಮಾಡಿಕೊಳ್ಳುತ್ತವೆ. ನೇಮಕ ಪರೀಕ್ಷೆಗಳಿಗೆ ವಿದ್ಯಾಸಂಸ್ಥೆಯ ಅಥವಾ ಮಂಡಳಿಗಳ ಅಂಕಪಟ್ಟಿಯೊಂದೇ ಮಾನದಂಡವಾದರೆ, ಇಂಥ ಅಕ್ರಮ ಸೃಷ್ಟಿಕರ್ತರಿಗೆ ಅನುಕೂಲವೇ ಆಗುತ್ತದೆ. ಕಣ್ಗಾವಲು ವ್ಯವಸ್ಥೆಯಡಿ ನೇಮಕ ಪರೀಕ್ಷೆಗಳನ್ನು ನಡೆಸಿಯೇ ಅಭ್ಯರ್ಥಿಗಳನ್ನು ಆರಿಸುವ ಪರಿಪಾಠವನ್ನು ಇನ್ನಾದರೂ ಅಂಚೆ ಇಲಾಖೆ ಸೇರಿ ಮತ್ತಿತರ ವಿಭಾಗಗಳು ರೂಢಿಸಿಕೊಳ್ಳುವುದು ಅವಶ್ಯ.

ಅಕ್ರಮವಾಗಿ ಆಯ್ಕೆಯಾಗಿರುವುದು ಕೇವಲ ಕೆಳಹಂತದ ಈ ನೌಕರರಷ್ಟೇ ಅಲ್ಲ. ಇಂಥವರು ಬೇರೆ ಬೇರೆ ಇಲಾಖೆಗಳಲ್ಲೂ ಇದ್ದಾರೆ ಎನ್ನುವ ಶಂಕೆಯೂ ಸಮಾಜದಲ್ಲಿದೆ. ಅಂಕಪಟ್ಟಿಗಳ ಆನ್ ಲೈನ್ ವೇರಿಫಿಕೇಶನ್ ಅನ್ನು ವ್ಯಾಪಕವಾಗಿ ನಡೆಸಿದರೆ, ಬೇರೆ ಇಲಾಖೆಗಳಲ್ಲಿಯೂ ಸಾಕಷ್ಟು ಅಕ್ರಮಗಳು ಬಹಿರಂಗಗೊಳ್ಳುವ ಸಾಧ್ಯತೆ ಇಲ್ಲದ್ದಿಲ್ಲ. ಎಸ್ಸೆಸ್ಸೆಲ್ಸಿ ಸೇರಿದಂತೆ ಪಿಯುಸಿ, ಡಿಗ್ರಿ, ಸ್ನಾತಕೋತ್ತರ ತರಗತಿಯ ಅಂಕಪಟ್ಟಿಗಳೂ ಪರಿಶೀಲನೆಗೆ ಒಳಪಡಿಸುವ ಬಗ್ಗೆ ಸರಕಾರ ಆದೇಶ ಹೊರಡಿಸಬೇಕಿದೆ. ಅಕ್ರಮ ಅಂಕಪಟ್ಟಿಗಳ ಹಾವಳಿ ನಿಯಂತ್ರಿಸಲು ಪ್ರತಿಯೊಂದು ಸಂಸ್ಥೆಗಳೂ ವಿಚಕ್ಷಣ ಸಿಬ್ಬಂದಿಯನ್ನು ಕಡ್ಡಾಯವಾಗಿ ನೇಮಿಸಿಕೊಳ್ಳಬೇಕು. ಹಾಗೆಯೇ, ಪ್ರಸ್ತುತ ಪ್ರಕರಣದಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮತ್ತು ನಕಲಿ ಅಂಕಪಟ್ಟಿ ನೀಡಿ ನೌಕರಿ ಪಡೆದು ವಂಚಿಸಿದವರ ವಿರುದ್ಧ ಅಂಚೆ ಇಲಾಖೆ ಪ್ರಕರಣ ದಾಖಲಿಸಿ, ಸಮಗ್ರ ತನಿಖೆ ನಡೆಸಬೇಕು. ಇಂಥ ಅಕ್ರಮಗಳು ಅರ್ಹ, ಪ್ರತಿಭಾವಂತ ಅಭ್ಯರ್ಥಿಗಳ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಬಾರದು. ಸರಕಾರ ಎಚ್ಚೆತ್ತುಕೊಳ್ಳಲಿ.

ಕೃಪೆ: ವಿಜಯ ಕರ್ನಾಟಕ, ಸಂಪಾದಕೀಯ, ದಿ: ೦೬-೦೧-೨೦೨೪

ಚಿತ್ರ ಕೃಪೆ: ಅಂತರ್ಜಾಲ ತಾಣ