ನನ್ನ ಕನ್ನಡ ತಾಯ್ನುಡಿ, ಕರುನಾಡ ಜನ-ಮನದ ಜೀವನಾಡಿ...

ನನ್ನ ಕನ್ನಡ ತಾಯ್ನುಡಿ, ಕರುನಾಡ ಜನ-ಮನದ ಜೀವನಾಡಿ...

ಕವನ

ತಾಯಿ ಭುವನೇಶ್ವರಿಯ ಪಾದಾರವಿಂದಕ್ಕೆ ನಮಸ್ಕರಿಸಿ,

ಕನ್ನಡ ಅಕ್ಷರಮಾಲೆಗೆ ತಲೆಬಾಗಿ ವಂದಿಸಿ,

ಸಾಗುತಿರುವೆ ನನ್ನ ತಾಯ್ನುಡಿ ಕನ್ನಡವ ಬರೆಯುತಾ ಪ್ರೀತಿಸಿ... 

 

ಅಮ್ಮ ಎಂದು ಮೊದಲು ತೊದಲು ನುಡಿದ ನನ್ನ ಕನ್ನಡ ನುಡಿ, 

ನನ್ನ ಹೃದಯ ಬಡಿತದ ನರನಾಡಿಯಲ್ಲೂ ನನ್ನ ಕನ್ನಡ ನುಡಿ, 

ನನ್ನ ತಾಯ್ನುಡಿ ಕನ್ನಡವೊಂದೇ ಕೈ ಹಿಡಿದು ಸಲಹುತಲಿಹುದು ನೋಡಿ, 

ಜಗದಗಲ ತನ್ನ ಕಂಪನು ಹರಡಿ.. 

 

ಜನನಿ ಜನ್ಮಭೂಮಿ ನಾನು ನಿಮ್ಮ ಪ್ರೇಮಿ, 

ಕನ್ನಡಮ್ಮನ ಮಡಿಲಲ್ಲಿ ನೆಲೆಯ ಕಂಡಿರುವ ಆಸಾಮಿ, 

ನನ್ನ ಕನ್ನಡವೆಂದರೆ ನನಗೆ ಎಲ್ಲಿಲ್ಲದ ಪ್ರೀತಿ, 

ಹಾಲು ಕುಡಿದಷ್ಟು ತೃಪ್ತಿ -ಸಂತೃಪ್ತಿ.... 

 

ಕನ್ನಡದ ಬಾವುಟ ಅರಿಶಿಣ ಕುಂಕುಮದ ಪ್ರತೀಕ, 

ಅರಿಶಿಣ ಕುಂಕುಮವು ಪ್ರತೀ ಹೆಣ್ಣಿನ ಹಣೆಯಲ್ಲಿ ರಾರಾಜಿಸುವ ಸೌಭಾಗ್ಯ ತಿಲಕ... 

 

ಕನ್ನಡಮ್ಮನು ಉಣಿಸುತ್ತಿರುವ ಕೈ ತುತ್ತಿನ ಸವಿಯಾದ ಪ್ರೀತಿ ಅತೀ-ಅತೀ, 

ಈ ಜಗದೊಳಗೆ ಕನ್ನಡಮ್ಮನು ನೀಡುವ ಪ್ರೀತಿಗಿಂತ ಮಿಗಿಲ್ಯಾವುದೈತಿ, 

ಕನ್ನಡಮ್ಮನಿಗೆ ಸಲ್ಲಿಸುತಿರುವೆ ನನ್ನ ಪುಟ್ಟ ಬರಹಗಳ ಪ್ರೀತಿ... 

 

ನೆಲೆಯ ಕಲ್ಪಿಸಿಹುದು ಕರುನಾಡ ಮಣ್ಣಿನ ಪ್ರತೀಕಣ, 

ನೆನೆವುದೆನ್ನ ಮನ ಕನ್ನಡವ ಪ್ರತೀಕ್ಷಣ,

ಕಣ-ಕಣದಲ್ಲೂ ಕನ್ನಡ ತೀರಿಸಲಾಗದು ಕನ್ನಡಮ್ಮನ ಋಣ.. 

 

ಹಲವು ಬಗೆಯ ಸೊಗಡಿನ ಕನ್ನಡ, 

ಹಲವು ಸೊಗಡಿನ ಕನ್ನಡವಿದ್ದರೂ ನಮ್ಮ ತಾಯ್ನುಡಿಯೊಂದೇ ಕನ್ನಡ, 

ಅವರವರ ಸೊಗಡಿನ ಆಡುಮಾತಿನ ಕನ್ನಡವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕು, 

ಕನ್ನಡ ಚಿರಸ್ಥಾಯಿಯಾಗಿ ರಾರಾಜಿಸುತಿರಬೇಕು...

 

ಕರುನಾಡಿನ ಮಣ್ಣಲ್ಲಿ ನೆಲೆ,

ಕನ್ನಡದಿಂದ ಸಿಕ್ಕಿದೆ ಬೆಲೆ,

ನೆಲೆಯ ಕಲ್ಪಿಸಿಹುದು ಕರುನಾಡಿನ ನೆಲ,

ದಾಹ ತೀರಿಸುತಲಿಹುದು ಕರುನಾಡಿನ ಜಲ,

ಹಸಿವ ನೀಗಿಸಿ ತುಂಬುತಿಹಳು ತೋಳ್ಬಲ,

ಕನ್ನಡದ ಕಂಪು ಪಸರಿಸಿದೆ ಜಗದಗಲ...

 

ಅಚ್ಚ ಹಸಿರಿನ ಸಿರಿಯ ಕಂಪು,

ಜನಪದ ಸೊಗಡಿನ ಇಂಪು,

ಕವಿ-ಸಾಹಿತಿ-ಬರಹಗಾರರ ಸಾಹಿತ್ಯದ ಛಾಪು,

ಹಳೆಯ ನೆನಪು-ಹೊಸದರ ಬಿಳುಪು-ಕನ್ನಡದ ಹೊಸಬಗೆಯ ಹೊಳಪು...

 

ಧಾರ್ಮಿಕ-ಸಾಂಸ್ಕೃತಿಕ-ಶೈಕ್ಷಣಿಕ ವೈಭವದ ಸೆಲೆ,

ನಾಟ್ಯ-ಸಂಗೀತ,ಕಲೆ-ಶಿಲ್ಪಕಲೆ,

ಯಕ್ಷಗಾನ-ಗಾಯನ-

ಅನ್ನದಾನಗಳಿಗೆ ಕಟ್ಟಲಾಗದು ಬೆಲೆ...

 

ಅಮ್ಮ ಎಂದು ಮೊದಲು ತೊದಲು ನುಡಿದ ಕನ್ನಡ,

ದೇಹದ ಪ್ರತೀ ಕಣ-ಕಣದಲ್ಲೂ ಕನ್ನಡ,

ಕನ್ನಡಕ್ಕಾಗಿ ಎಲ್ಲರೂ ಒಂದಾಗಿ,

ಕನ್ನಡದ ಮಾತುಗಳು ಹೊರಬರಲಿ ಸುಶ್ರಾವ್ಯ ಹಾಡುಗಳಾಗಿ..

 

-ಶಾಂತಾರಾಮ ಶಿರಸಿ, ಉತ್ತರ ಕನ್ನಡ..

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್