ನಮ್ಮೊಳಗೆ ಬುದ್ಧನೊಬ್ಬ

`ನಮ್ಮೊಳಗೆ ಬುದ್ದನೊಬ್ಬʼ ಅರವು ಮತ್ತು ಬದುಕಿನ ಚಿಂತನೆಗಳು ಮಹಾದೇವ ಬಸರಕೋಡ ಅವರ ಕೃತಿಯಾಗಿದೆ. ಮಹಾದೇವ ಬಸರಕೋಡರ ಈ ಕೃತಿಯ ಪ್ರತಿ ಲೇಖನವೂ ಕಿರಿದೇ, ಆದರೆ ಒಳಗಿನ ಹೂರಣ ಘನ. ಬಸರಕೋಡರ ಕ್ಯಾನ್ಸಾಸ್ ಚಿಕ್ಕದೇ, ಆದರೂ ಅಲ್ಲೊಂದು ದೃಷ್ಟಾಂತವನ್ನಿಟ್ಟು ಮಾತಾಡಲು ಮರೆಯುವುದಿಲ್ಲ ಅವರು. ಹೀಗಾಗಿ ಈ ಬರಹಗಳು ಹೆಚ್ಚು ಆಪ್ತವಾಗುತ್ತವೆ ಕೂಡ. ಓದಲು ವೇಳೆಯಿಲ್ಲ ಅನ್ನುವವರ ಕಾಲವಿದು. ಆದರೆ ಈ ಕಿರು ಬರಹಗಳು ಬದುಕ ಪಾಠ ಅವಿತಿಟ್ಟ ಪುಟಾಣಿ ಗುಳಿಗೆಗಳಂತಿವೆ. ಇಲ್ಲಿ ಸೋತ ಮನಕ್ಕೆ ಸಂತೈಕೆ ಇದೆ, ಗೆಲುವಿನ ಹಾದಿ ತೋರುವ ಕೈಮರಗಳೂ ಇವೆ, ಒಳಗನ್ನು ತಿಳಿಗೊಳಿಸುವ ಸಂತನ ನುಡಿಮಾತೂ ಇದೆ. ಇಲ್ಲಿ ಹೇಳಿರುವ ಎಲ್ಲವೂ ನಮ್ಮೊಳಗೇ ಇವೆ, ಆದರೂ ಏನೂ ಇಲ್ಲವೆಂಬಂತೆ ನಾವು ಇದ್ದೇವೆ. ಅವುಗಳನ್ನು ತೆರೆದು ತೋರುವ ಪಯಣವೇ ಈ ಪುಸ್ತಕದ ಓದು. ಇದರ ಸಾಂಗತ್ಯ ನಮ್ಮ ಆಂತರ್ಯವನ್ನು ಬೆಳಗಿಸಬಲ್ಲುದು, ಬಾಳನ್ನೂ ಸಹ. ಹೀಗಾಗಿಯೇ ಇದು ಬುದ್ಧತ್ವದ ದಾರಿ, "ನಮ್ಮೊಳಗಿನ ಬುದ್ದನೊಬ್ಬ' ನನ್ನು ಕಂಡುಕೊಳ್ಳುವ ತಾಣ.
ಈ ಕೃತಿಗೆ ಮುನ್ನುಡಿಯನ್ನು ಬರೆದಿದ್ದಾರೆ ಶಶಿಧರ ಹಾಲಾಡಿ. ಅವರು ತಮ್ಮ ಮುನ್ನುಡಿಯಲ್ಲಿ “ಇಂದಿನ ಧಾವಂತದ ಬದುಕಿನಲ್ಲಿ ಎಲ್ಲರ ಜತೆಯಲ್ಲೇ ನಾವೂ ಓಡುತ್ತಾ ಸಾಗಿದರೆ, ಆ ವೇಗದಲ್ಲಿ ನಾವೆಲ್ಲಾ ಕಳೆದುಹೋಗುವ ಸಾಧ್ಯತೆ ಇದೆ; ಮಾತ್ರವಲ್ಲ, ಇಂದಿನ ತರಾತುರಿ, ಗುರಿ, ನಿರಂತರ ಯಶಸ್ಸಿನ ತುಡಿತ ಇವುಗಳು ನಮ್ಮ ಮೇಲೆ ಅದಾವ ಪರಿಯ ಒತ್ತಡವನ್ನು ಹೇರುತ್ತಿವೆಯೆಂದರೆ, `ಈ ರೀತಿ ನಿರಂತರವಾಗಿ ಓಡುತ್ತಾ ಇರುವುದೇ ನಮ್ಮ ಬದುಕಿನ ಗುರಿ' ಎಂದು ಬಹುಪಾಲು ಜನರು ತಿಳಿಯುವ ಸಾಧ್ಯತೆ ಇದೆ. ಇದರಿಂದಾಗುವ ದೊಡ್ಡ ನಷ್ಟವೆಂದರೆ, ನಮ್ಮ ಜೀವನದ `ನಿಜವಾದ ಗುರಿ' ಎಂಬುದು ಏನೆಂಬುದೇ ಮರೆತುಹೋಗುತ್ತದೆ! ಯಶಸ್ಸಿನ ಬೆನ್ನು ಹತ್ತುವ ಒತ್ತಡದ ಬದುಕಿನ ಏರಿಳಿತಗಳನ್ನು ನಿಭಾಯಿಸುತ್ತಾ, ಆ ರಭಸ ಅಲೆಗಳ ನಡುವೆ ಬದುಕನ್ನು ಸಮತೋಲನದಲ್ಲಿ ನಡೆಯುವುದೇ ನಮ್ಮ ಬದುಕಿನ ಗುರಿ ಎಂದು ತಿಳಿಯುವ ಸಾಧ್ಯತೆ ಇದೆ. ನಮ್ಮ ಸುತ್ತಲಿನ ಹಲವರನ್ನು ಗಮನಿಸಿದರೆ, ಅದು ನಿಜವೂ ಇರಬಹುದು ಎಂದು ನಿಮಗೂ ಅನಿಸಬಹುದು!
ಹಾಗಿದ್ದರೆ ನಮ್ಮ ಬದುಕಿನ ನಿಜವಾದ ಗುರಿ ಯಾವುದು ಮತ್ತು ಅದನ್ನು ಗುರುತಿಸುವುದು ಹೇಗೆ? ಇಂತಹ ಪ್ರಶ್ನೆಯನ್ನು ನಾವೇ ಕೇಳಿಕೊಂಡಾಗ, `ನಮ್ಮೊಳಗೆ ಒಬ್ಬ ಬುದ್ಧನಿದ್ದಾನೆ, ಅವನ ಮಾತುಗಳನ್ನು, ಅವನ ಸೂಚನೆಗಳನ್ನು, ಅವನ ಬೋಧನೆಗಳನ್ನು ಆಲಿಸುವುದು ಅಗತ್ಯ' ಎಂದೆನಿಸಲೂಬಹುದು. ಸದಾ ಶಾಂತಿಯನ್ನು ಬಯಸುವ, ಸುತ್ತಲಿನವರ ಜತೆ ನಮ್ಮ ಬದುಕು ನೆಮ್ಮದಿಯಿಂದ ಕೂಡಿರಬೇಕೆಂದು ಆಶಿಸುವ ಬೋಧನೆಗಳನ್ನು ಬುದ್ಧನಲ್ಲಿ ಕಾಣಬಹುದು. ನಮ್ಮೊಳಗೆ ಇರುವ ಬುದ್ಧ ಅದೆಷ್ಟೋ ಬಾರಿ ಸುಶುಪ್ತನಾಗಿರಬಹುದು; ಇಂದಿನ ಒತ್ತಡದ ಬದುಕಿನ ಧಾವಂತದಲ್ಲಿ, ನಾಗಾಲೋಟದಲ್ಲಿ, ಆತನ ಮಾತುಗಳನ್ನು ನಾವು ಕೇಳಿಸಿಕೊಳ್ಳದೇ ಇರಬಹುದು; ಆದರೆ ನಿಜವಾದ ಬದುಕಿನ ಗುರಿಯ ದಾರಿಯಲ್ಲಿ ಸಾಗಲು ನಮ್ಮೊಳಗಿರುವ ಬುದ್ಧನ ಮಾತುಗಳನ್ನು ಆಲಿಸಬೇಕು, ಆತನ ಯೋಚನೆಗಳನ್ನು ನಮ್ಮದಾಗಿಸಿಕೊಳ್ಳಬೇಕು.
ಇಂತಹ ಆಲಿಸುವ ಪ್ರವೃತ್ತಿಯನ್ನು ನೆನಪಿಸುವ ಒಂದು ಪ್ರಾಮಾಣಿಕ ಪ್ರಯತ್ನವನ್ನು `ನಮ್ಮೊಳಗೆ ಬುದ್ಧನೊಬ್ಬ' ಪುಸ್ತಕದ ಮೂಲಕ ಲೇಖಕ ಮಹಾದೇವ ಬಸರಕೋಡ ಮಾಡಿದ್ದಾರೆ ಎಂದೇ ನನ್ನ ಗ್ರಹಿಕೆ. ಪುಸ್ತಕದ ಶೀರ್ಷಿಕೆಯು ಅರ್ಥಪೂರ್ಣ ಎನಿಸಿದ್ದು, ಓದುಗರ ಮನಸ್ಸನ್ನು ಸಣ್ಣಗೆ ಎಚ್ಚರಿಸುತ್ತದೆ! ನಮ್ಮ ಜೀವನವೆಂದರೆ ಕೇವಲ ವೃತ್ತಿ ನಿಭಾಯಿಸುವುದು, ಹಣ ಗಳಿಸುವುದು, ಬಾಹ್ಯ ಸಂತಸವನ್ನು ಅನುಭವಿಸುವುದು, ಮೋಜಿನ ಜೀವನವನ್ನು ನಡೆಸುವುದು ಎಂಬುದು ಮಾತ್ರವಲ್ಲ, ಅದರ ಜತೆಯಲ್ಲೇ, ಶಾಂತಿ, ನೆಮ್ಮದಿ, ಪರ ಹಿತ, ಲೋಕ ಹಿತ, ಪರೋಪಕಾರ ಮತ್ತು ಇತರ ಸದ್ಗುಣಗಳನ್ನು ಒಳಗೊಂಡು ಬದುಕನ್ನು ಅನುಭವಿಸುವುದು ಎಂಬುದನ್ನು ಇಲ್ಲಿನ ಬರಹಗಳು ಹೇಳುತ್ತಿವೆ.
ಮಹಾದೇವ ಬಸರಕೋಡ ಅವರು ಇಲ್ಲಿನ ಬರಹಗಳನ್ನು ಬಹಳ ಸಮಾಧಾನದಿಂದ ಬರೆದಿದ್ದಾರೆ; ಶಾಂತವಾಗಿ ಹರಿವ ನದಿಯ ಸ್ವರೂಪ ಈ ಬರಹಗಳಿಗಿದೆ. ಈ ಬರಹಗಳಲ್ಲಿ ಇತರರಿಗೆ ಮಾರ್ಗದರ್ಶನ ನೀಡುವ ತುಡಿತವಿದೆ; ಆದರೆ, ಅಂತಹ ಮಾರ್ಗದರ್ಶನ ನೀಡುವ ಭರದಲ್ಲಿ, ತಮ್ಮ ಬರಹಗಳ ಮೂಲಕ ಅವರು `ನೆಮ್ಮದಿಯ ಬದುಕಿಗೆ ಇವೆಲ್ಲವೂ ಅಗತ್ಯವಾಗಿ ಬೇಕು, ನೀವು ಖಂಡಿತಾ ಅನುಸರಿಸಿ' ಎಂಬುದನ್ನು ತಾಕೀತು ಮಾಡುವುದಿಲ್ಲ, ಬದಲಿಗೆ, ಓದುಗರು ಅದನ್ನು ತಮ್ಮಲ್ಲೇ ಅರಿತುಕೊಳ್ಳುವಂತೆ ಮಾಡುತ್ತಾರೆ, ಆ ಮೂಲಕ ಓದುಗನೊಳಗಿರುವ ಬುದ್ಧನನ್ನು ಎಚ್ಚರಿಸುತ್ತಾರೆ. ಇದನ್ನು ಕೇವಲ ಹೊಗಳಿಕೆಗೆ ಹೇಳುವುದಲ್ಲ, ಅವರ ಬರಹಗಳ ಸ್ವರೂಪವನ್ನು ಗಮನಿಸಿದಾಗ ಇದು ವೇದ್ಯವಾಗುತ್ತದೆ. ಮೇಲ್ನೋಟಕ್ಕೆ ಸರಳವಾಗಿ ಕಾಣಿಸುವ ಇಲ್ಲಿನ ಬರಹಗಳು ಅಧ್ಯಾತ್ಮವೂ ಒಳಗೊಂಡಂತೆ, ಗಹನವಾದ ಇತರ ವಿಚಾರಗಳನ್ನು ಚರ್ಚಿಸುತ್ತವೆ; ಆ ಚರ್ಚೆಯು ಆಪ್ತ ಸಂವಾದದ ರೀತಿ ಓದುಗನ ಮನಸ್ಸನ್ನು ಪ್ರವೇಶಿಸಬಲ್ಲವು.
ಅಧ್ಯಾತ್ಮ ಮತ್ತು ನೆಮ್ಮದಿಯ ಜೀವನದಂತಹ ತುಸು ಸಂಕೀರ್ಣ ಸ್ವರೂಪದ ವಿಚಾರಗಳನ್ನು ನಿರೂಪಿಸಲು ಮಹಾದೇವ ಬಸರಕೋಡ ಅವರು ಅಲ್ಲಲ್ಲಿ ಒಂದು ತಂತ್ರವನ್ನು ಅಳವಡಿಸಿಕೊಂಡಿದ್ದಾರೆ; ಅದೇನೆಂದರೆ, ಪೌರಾಣಿಕ, ಐತಿಹಾಸಿಕ ಮತ್ತು ಸಮಕಾಲೀನ ವಿದ್ಯಮಾನಗಳನ್ನು ಕಥೆಯ ರೂಪದಲ್ಲಿ ಬಳಸುವುದು. ಹಲವು ಬಾರಿ, ನಾವು ನೀವು ದಿನನಿತ್ಯದಲ್ಲಿ ಕೇಳುವ ಐತಿಹ್ಯ ಮತ್ತು ಗಾದೆಯ ತಿರುಳು, ಕೆಲವೊಮ್ಮೆ ನಮ್ಮೆದುರು ನಡೆಯುವ ಸಣ್ಣ ಪುಟ್ಟ ಘಟನೆಗಳು ಸಹ ಇಲ್ಲಿ ಬದುಕಿನ ಅರ್ಥವನ್ನು ತಿಳಿಹೇಳುವ ಮೌಲಿಕ ಕಥನಗಳಾಗಿ ರೂಪುಗೊಳ್ಳುತ್ತವೆ.
ಇದಕ್ಕೆ ಉದಾಹರಣೆಯಾಗಿ ೩೬ನೆಯ ಲೇಖನವಾದ `ಕೆಲಸದಲ್ಲಿ ಇರಲಿ ಒಂದಷ್ಟು ಕಾಳಜಿ'ಯನ್ನು ನೋಡಬಹುದು. ಲೇಖನದ ಆರಂಭವು ನಮ್ಮ ಯಾಂತ್ರಿಕ ಬದುಕಿನ ಕೊರತೆಗಳನ್ನು ಎತ್ತಿ ತೋರಿಸುತ್ತದೆ. ಅತಿಯಾದ ಶಿಸ್ತು, ಬದ್ಧತೆಯನ್ನು ಅಳವಡಿಸಿಕೊಂಡು, ಬಾಹ್ಯ ಮತ್ತು ವ್ಯಾವಹಾರಿಕ ಜೀವನವನ್ನು ನಿಭಾಯಿಸುವುದು ಇಂದು ಹಲವರಿಗೆ ಅನಿವಾರ್ಯ ಎನಿಸಿದೆ. ಅದೇ ಬದ್ಧತೆ, ಪ್ರಾಮಾಣಿಕತೆ, ಶಿಸ್ತು ಹಲವು ಬಾರಿ ಮೇಲ್ನೋಟಕ್ಕೆ ಸಂತಸವನ್ನೂ ತರುತ್ತದೆ. ಈ ಶಿಸ್ತಿನ ಜೀವನಕ್ಕೆ ಕಟ್ಟು ಬಿದ್ದು, ನಾವು ಬೇರೆಯವರ ಕುರಿತು ಕಾಳಿಯವನ್ನು, ಸಹಾನುಭೂತಿಯನ್ನು ವ್ಯಕ್ತಪಡಿಸುವ ಆಪ್ತ ಭಾವವನ್ನೇ ಕಳೆದುಕೊಂಡಿರುವ ಸಾಧ್ಯತೆ ಇದೆ. ಇದನ್ನು ನಿರೂಪಿಸಲು ಅವರು ಅಪರಿಚಿತ ಊರಿನ ಆಟೊ ಡ್ರೈವರ್ ನ ಉದಾಹರಣೆ ನೀಡುತ್ತಾರೆ. ಆಟೊದಲ್ಲಿ ಕರೆದೊಯ್ದು, ನಿಗದಿತ ಜಾಗದಲ್ಲಿ ಇಳಿಸಿ, ಬಾಡಿಗೆ ಪಡೆದು ಸಾಗುವುದು ಆತನ ಶಿಸ್ತಿನ ವೃತ್ತಿ; ಅದರ ಜತೆಯಲ್ಲೇ, ತಾನು ಕರೆತಂದ ಪ್ರಯಾಣಿಕನು ಅಪರಿಚಿತ ಊರಿನಲ್ಲಿ ಪರದಾಡುವುದನ್ನು ಕಂಡು, `ನೀವು ಇಂತಹ ದಾರಿಯಲ್ಲಿ ಸಾಗಿ ನಡೆಯಿರಿ, ಆಗ ನಿಮ್ಮ ಗಮ್ಯ ಸಿಗುತ್ತದೆ' ಎಂದು ಮಾರ್ಗದರ್ಶನ ನೀಡುವ ಉದಾಹರಣೆ ನೀಡಿದ್ದಾರೆ; ಇದು ಆತನ ವೃತ್ತಿಗೆ ಮಿಗಿಲಾದ ಅಂತಃಕರಣ. ಇಂತಹ ಮನೋಭಾವವನ್ನು ಎಲ್ಲರೂ, ಎಲ್ಲಾ ವಲಯದಲ್ಲೂ ಅಳವಡಿಸಿಕೊಂಡಾಗ ನಮ್ಮ ಸುತ್ತಲಿನ ಬದುಕು ಹಸನಾಗುತ್ತದೆ. ಸರಕಾರಿ ಕಚೇರಿಯಲ್ಲಾಗಲಿ, ರಸ್ತೆಯ ಮೇಲೆ ಸಾಗುವಾಗಲಾಗಲೀ, ಹೊರ ಊರಿನ ಪ್ರವಾಸದಲ್ಲಾಗಲೀ, ಇಂತಹ ಸಹಾಯ, ಸಹಕಾರಗಳು ಪರಸ್ಪರ ಎಲ್ಲರಿಗೂ ದೊರೆತಾಗ, ಖಂಡಿತವಾಗಿಯೂ ಜೀವನ ನೆಮ್ಮದಿಯಿಂದ ಕೂಡುತ್ತದೆ. ಆ ರೀತಿಯ ಒಂದು ಸಹಾಯ ಮಾಡಿದಾಗ, ನಮ್ಮೊಳಗಿನ ಬುದ್ಧ ಎಚ್ಚರಗೊಂಡಿದ್ದಾನೆ ಎಂದೇ ಅರ್ಥ.
ಇದೇ ರೀತಿ, ನಮಗೆಲ್ಲಾ ಹೆಚ್ಚು ಪರಿಚಿತವಿರುವ ಹಲವು ಪೌರಾಣಿಕ ಕಥೆಗಳನ್ನೂ ಇಲ್ಲಿನ ಬರಹಗಳಲ್ಲಿ ಸೂಕ್ತವಾಗಿ ಬಳಸಲಾಗಿದೆ; ನ್ಯೂಟನ್ ರೀತಿಯ ವಿಜ್ಞಾನಿಗಳ ಬದುಕಿನ ಘಟನೆಗಳನ್ನು ಸಹ ಉದಾಹರಿಸಿ, ನಮ್ಮೊಳಗಿನ ಒಳಗಣ್ಣು ತೆರೆಸಲು ಈ ಬರಹಗಳು ಪ್ರಯತ್ನಿಸುತ್ತವೆ. ಸಣ್ಣ ಸಣ್ಣ ಘಟನೆಗಳನ್ನು, ಕಥೆಗಳನ್ನು ತಮ್ಮ ಬರಹಗಳಲ್ಲಿ ಅಳವಡಿಸುವ ಮೂಲಕ ಮಹಾದೇವ ಬಸರಕೋಡ ಅವರು ಇಲ್ಲಿನ ಲೇಖನಗಳನ್ನು ಪರಿಣಾಮಕಾರಿ ಯಾಗಿಸಿರುವುದರ ಜತೆಯಲ್ಲೇ, ಹಲವು ಬಾರಿ ಹೊಸದೇ ಆಯಾಮವನ್ನೂ ಒದಗಿಸಿದ್ದಾರೆ.” ಎಂದು ತಮ್ಮ ಅಭಿಪ್ರಾಯವನ್ನು ಹೇಳಿಕೊಂಡಿದ್ದಾರೆ.