ನಮ್ಮ ಯೋಚನಾ ಶಕ್ತಿಯ ಮೂಲಗಳು..

ನಮ್ಮ ಯೋಚನಾ ಶಕ್ತಿಯ ಮೂಲಗಳು..

ಕ್ರಮವಾಗಿ....

ಸೃಷ್ಟಿಯ ಮೂಲದಿಂದ ಹುಟ್ಟುವ ಚಿಂತನೆಗಳು.....

ಜೀವಪರ ನಿಲುವಿನ ವಿಚಾರಗಳು. ‌‌.‌..

ಮಾನವೀಯ ಮುಖದ ಚಿಂತನೆಗಳು....

ಸತ್ಯದ ಮೂಲದಿಂದ ಹೊಳೆಯುವ ಚಿಂತನೆಗಳು...

ಅನುಭವದ ಆಧಾರದ ಮೇಲೆ ಅರಿಯುವ ವಿಚಾರಗಳು....

ಜ್ಞಾನದ ಆಧಾರದಿಂದ ಬರುವ ಚಿಂತನೆಗಳು........

ನಾಗರಿಕತೆಯ ನಡವಳಿಕೆಗಳಿಂದ ಮೂಡುವ ಅಂಶಗಳು....

ಒಂದು ಪ್ರದೇಶ ಅಥವಾ ದೇಶದ ಕಾರಣದಿಂದಾಗಿ ಹುಟ್ಟುವ ವಿಚಾರಗಳು......

ಧರ್ಮದ ಮೂಲದಿಂದ ರೂಪಿಸಿಕೊಳ್ಳುವ ವಿಚಾರಗಳು......

ಆಡಳಿತ ವ್ಯವಸ್ಥೆಯಿಂದ ಮೂಡುವ ಚಿಂತನೆಗಳು....

ಪಕ್ಷದ ದೃಷ್ಟಿಕೋನದಿಂದ ಬರುವ ಚಿಂತನೆಗಳು..

ಭಾಷೆಯ ಬಲದಿಂದ ಸೃಷ್ಟಿಯಾಗುವ ವಿಚಾರಗಳು....

ಸಂಬಂಧಗಳ ಆಧಾರದಲ್ಲಿ ಬೆಳೆಯುವ ಚಿಂತನೆಗಳು....

ಕುಟುಂಬದ ನೆರಳಲ್ಲಿ ಬೆಳೆಯುವ ಚಿಂತನೆಗಳು..

ಸ್ವಾರ್ಥದ ಮೂಲದಿಂದ ಹೊಳೆಯುವ ವಿಚಾರಗಳು.....

ದುರಹಂಕಾರದಿಂದ ಮೊಳೆಯುವ ವಿಚಾರಗಳು.....

ಕೋಪದಿಂದ ಮೂಡುವ ಚಿಂತನೆಗಳು.......

ಅಸೂಯೆಯಿಂದ ಹುಟ್ಟುವ ವಿಚಾರಗಳು......

ಹೀಗೆ ನಮ್ಮಲ್ಲಿ ಇವುಗಳಲ್ಲಿ ಯಾವ ಆಧಾರದಲ್ಲಿ ನಮ್ಮ ಚಿಂತನೆಗಳು ಅಭಿಪ್ರಾಯಗಳು ಮೂಡಿವೆ ಎಂಬುದರ ಆಧಾರದಲ್ಲಿ ನಮ್ಮ ವ್ಯಕ್ತಿತ್ವ ರೂಪಗೊಂಡಿರುತ್ತದೆ.

ನೀವು ಮೇಲಿನ ಕ್ರಮಾಂಕದಲ್ಲಿ ಯೋಚಿಸುವವರಾಗಿದ್ದರೆ, ಖಂಡಿತವಾಗಿಯೂ ವಿಶಾಲ ಹೃದಯಿಗಳು, ಸಮಚಿತ್ತ ಮನೋಭಾವದವರು, ಶಾಂತಿ ಪ್ರಿಯರು ಆಗಿರುತ್ತೀರಿ. ಇವರು ಸೃಷ್ಟಿಗೆ ಸಮಾಜಕ್ಕೆ ಒಂದು ದೊಡ್ಡ ಆಸ್ತಿ.

ಹಾಗೆಯೇ ಕೆಳಗಿನ ಕ್ರಮಾಂಕದಲ್ಲಿ ಯೋಚಿಸುವವರಾಗಿದ್ದರೆ, ಸಣ್ಣ ಮನಸ್ಸಿನವರು, ಅಸಹಿಷ್ಣುಗಳು, ಸ್ವಾರ್ಥಿಗಳು, ಗಲಭೆಕೋರರು, ಸಮಾಜ ದ್ರೋಹಿಗಳು ಆಗಿರುತ್ತೀರಿ. ಇವರುಗಳು ಸಮಾಜಕ್ಕೆ ಒಂದು ಕಂಟಕ.

ನಮ್ಮ ಚಿಂತನೆಗಳು ಹೀಗೆ ವಿವಿಧ ಪ್ರಕಾರಗಳಲ್ಲಿ ಮೂಡಲು ಅನೇಕ ಸಹಜ ಅಸಹಜ ಸ್ವಾಭಾವಿಕ ಕಾರಣಗಳು ಇರುತ್ತವೆ. ಕೆಲವು ನಮ್ಮ ನಿಯಂತ್ರಣದಲ್ಲಿ ಇದ್ದರೆ ಮತ್ತೆ ಕೆಲವು ಮಾನವ ನಿಯಂತ್ರಣದ ಹೊರತಾಗಿರುತ್ತದೆ.

ನಿಜವಾಗಿಯೂ ನಮ್ಮಲ್ಲಿ ಆತ್ಮ ಸಾಕ್ಷಿ ಇದ್ದರೆ,

ನಮ್ಮನ್ನು ಅರಿಯುವ ಆಸಕ್ತಿ ಇದ್ದರೆ,

ನಾವು ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎನಿಸಿದರೆ,

ನಮ್ಮ ಯೋಚನಾ ಶಕ್ತಿಯನ್ನು ವಿಶಾಲಗೊಳಿಸಿಕೊಳ್ಳುವ ಮನಸ್ಸಿದ್ದರೆ,

ಒಮ್ಮೆ ಮೌನವಾಗಿ, ಏಕಾಂಗಿಯಾಗಿ ಕುಳಿತು ನಮ್ಮ ವ್ಯಕ್ತಿತ್ವವನ್ನು ಈ ಮೇಲಿನ ಚಿಂತನೆಗಳ ಆಧಾರದಲ್ಲಿ ನಾವೇ ಆತ್ಮವಿಮರ್ಶೆ ಮಾಡಿಕೊಳ್ಳಬಹುದು. ನಾವು ಯಾವ ಕ್ರಮಾಂಕದಲ್ಲಿ ಇದ್ದೇವೆ ಎಂದು ನಿರ್ಧರಿಸಿಕೊಂಡು ಬದಲಾವಣೆಯ ಅವಶ್ಯಕತೆ ಇದ್ದರೆ ಮೇಲಿನ ಕ್ರಮಾಂಂಕಕ್ಕೆ ಯೋಚನೆಗಳನ್ನು ವಿಸ್ತರಿಸಲು ಪ್ರಯತ್ನಿಸಬಹುದು. 

ಮೇಲಿನ ಕ್ರಮಾಂಕದಲ್ಲಿ ಯೋಚಿಸುವವರ ಬದುಕು ಹೆಚ್ಚು ಸರಳವಾಗಿ ನೆಮ್ಮದಿಯಿಂದ ಜೀವನದ ಗುಣಮಟ್ಟ ಉತ್ತಮವಾಗಿರುತ್ತದೆ.

ಕೆಳಗಿನ ಕ್ರಮಾಂಕದಲ್ಲಿ ಯೋಚಿಸುವವರ ಬದುಕು ಸಂಕೀರ್ಣವಾಗಿ, ಅಸಹನೆಯಿಂದ, ಸದಾ ಅತೃಪ್ತಿಯಿಂದ ನರಳುತ್ತಿರುತ್ತದೆ.

ಈ ಚಿಂತನೆಗಳ ಕ್ರಮಾಂಕಗಳೇ ನಮ್ಮ ಬದುಕನ್ನು ರೂಪಿಸುತ್ತದೆ. ಇದೀಗ ಮತ್ತೊಂದು ಅವಕಾಶ ನಮಗಿದೆ. ದಯವಿಟ್ಟು ನಮ್ಮ ನಮ್ಮ ಬದುಕಿನ ಗುಣಮಟ್ಟ ಹೆಚ್ಚಿಸಿಕೊಳ್ಳಲು ಮತ್ತೆ ಮತ್ತೆ ನಾವು ಆತ್ಮಾವಲೋಕನ ಮಾಡಿಕೊಳ್ಳುತ್ತಾ ಸಾಗೋಣ.

ಇದರಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಎಲ್ಲವೂ ಪಡೆಯುವುದೆ.

ಈ ಪ್ರಕ್ರಿಯೆಯಲ್ಲಿ ನಾವು ನಮ್ಮನ್ನು ತೊಡಗಿಸಿಕೊಳ್ಳದಿದ್ದರೆ ನಮ್ಮ ಬದುಕು ಅಪೂರ್ಣ ಎಂದು ಭಾವಿಸಬಹುದು. ನಾವು ಈಗಿರುವ ನಮ್ಮ ಸ್ಥಾನ ಅಥವಾ ಹಂತದಲ್ಲಿಯೇ ಇದನ್ನು ಮಾಡಬಹುದು. ಒಮ್ಮೆ ಪ್ರಯತ್ನಿಸಿ ಎಂಬ ಕಳಕಳಿಯ ಮನವಿಯೊಂದಿಗೆ......

  • ಜ್ಞಾನ ಭಿಕ್ಷಾ ಪಾದಯಾತ್ರೆಯ  93 ನೆಯ ದಿನ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ವಾಸ್ತವ್ಯ.

-ವಿವೇಕಾನಂದ. ಹೆಚ್.ಕೆ., ಬೆಂಗಳೂರು