ನಮ್ಮ ಹೆಮ್ಮೆಯ ಭಾರತ (ಭಾಗ 73 - 74)

ನಮ್ಮ ಹೆಮ್ಮೆಯ ಭಾರತ (ಭಾಗ 73 - 74)

೭೩.ಚದುರಂಗ ಆಟದ ತವರೂರು - ಭಾರತ
ಚದುರಂಗದ ತವರೂರು ನಮ್ಮ ಭಾರತ. ೬ನೇ ಶತಮಾನದಲ್ಲಿ ಗುಪ್ತ ಸಾಮ್ರಾಜ್ಯದ ಕಾಲದಲ್ಲಿ ಚದುರಂಗ ಪ್ರಚಲಿತವಾಗಿತ್ತು ಎಂದು ನಂಬಲಾಗಿದೆ. ಅನಂತರ, ಚದುರಂಗ ಭಾರತದಿಂದ ಪರ್ಷಿಯಾ ದೇಶದಲ್ಲಿ ಪ್ರಚಲಿತವಾಗಿ, ರಾಜವಂಶಸ್ಥರ ಶಿಕ್ಷಣದ ಭಾಗವಾಯಿತು. ತದನಂತರ, ಪಶ್ಚಿಮ ಯುರೋಪ್ ದೇಶಗಳಿಗೂ ರಷ್ಯಾ ದೇಶಕ್ಕೂ ಚದುರಂಗ ಕಾಲಿಟ್ಟಿತು.

ಯುರೋಪಿನಲ್ಲಿ ಈ ಜನಪ್ರಿಯ ಆಟದಲ್ಲಿ ಹಲವಾರು ಬದಲಾವಣೆಗಳನ್ನು ತರಲಾಯಿತು. ಈಗಂತೂ, ಭಾರತದ ವಿಶ್ವನಾಥನ್ ಆನಂದ್ ಜಾಗತಿಕ ಚದುರಂಗದಲ್ಲಿ ಭಾರತದ ಪಾರಮ್ಯದ ಪ್ರತೀಕವಾಗಿದ್ದಾರೆ. ಮಹಿಳಾ ಚದುರಂಗದಲ್ಲಿ ಭಾರತದ ಕೊನೆರು ಹಂಪಿ ಜಗತ್ತಿನಲ್ಲೇ ಎರಡನೇ ಸ್ಠಾನ ಗಳಿಸಿದ್ದಾರೆ.

೭೪.ಕ್ರಿಕೆಟ್ ಆಟದ ದಂತಕತೆ ಭಾರತದ ಸಚಿನ್ ತೆಂಡುಲ್ಕರ್
ಭಾರತದ ಸಚಿನ್ ತೆಂಡುಲ್ಕರ್ ತನ್ನ ೧೧ನೆಯ ವಯಸ್ಸಿನಲ್ಲಿ ಕ್ರಿಕೆಟ್ ಬ್ಯಾಟ್ ಹಿಡಿದು, ೧೬ನೆಯ ವಯಸ್ಸಿನಲ್ಲಿ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಗಳಿಸಿದರು. ಅನಂತರ, ಕ್ರಿಕೆಟ್ ಆಟದಲ್ಲಿ ದಾಖಲೆಗಳ ಸರದಾರ ಎನಿಸಿದರು. ೨೦೦೫ರಲ್ಲಿ, ಕ್ರಿಕೆಟ್ ಟೆಸ್ಟ್ ಪಂದ್ಯಗಳಲ್ಲಿ ೩೫ ಸೆಂಚುರಿ ಬಾರಿಸಿದ ಪ್ರಪ್ರಥಮ ಕ್ರಿಕೆಟ್ ಆಟಗಾರ ಎಂಬ ಹೆಗ್ಗಳಿಕೆ ಮತ್ತು ೨೦೦೭ರಲ್ಲಿ, ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ೧೫,೦೦೦ ರನ್ ಗಳಿಸಿದ ದಾಖಲೆ ಅವರದಾಯಿತು.

೨೪ ವರುಷಗಳ ತನ್ನ ಕ್ರಿಕೆಟ್ ಸಾಧನೆಯ ವರುಷಗಳಲ್ಲಿ ಹಲವಾರು ದಾಖಲೆಗಳನ್ನು ತನ್ನದಾಗಿಸಿಕೊಂಡರು. ಅವರು ಆಡಿದ ೬೬೪ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಿಂದ ಗಳಿಸಿದ ರನ್ ೩೪,೩೫೭. ೧೬ ನವಂಬರ್ ೨೦೧೩ರಂದು, ಮುಂಬೈಯ ವಾಂಖೆಡೆ ಕ್ರೀಡಾಂಗಣದಲ್ಲಿ ತನ್ನ ೨೦೦ನೇ ಮತ್ತು ಕೊನೆಯ ಟೆಸ್ಟ್ ಪಂದ್ಯವನ್ನು ವೆಸ್ಟ್-ಇಂಡೀಸ್ ತಂಡದ ವಿರುದ್ಧ ಆಡಿ ನಿವೃತ್ತರಾದರು. ಅವರ ಸಾಧನೆಗಾಗಿ ಅವರಿಗೆ “ಭಾರತ ರತ್ನ" ಪುರಸ್ಕಾರ ನೀಡಲಾಗಿದೆ. 

ಫೋಟೋ ೧: ಚದುರಂಗದ ಮಣೆ ಮತ್ತು ಕಾಯಿಗಳು

ಫೋಟೋ ೨: ಸಚಿನ್ ತೆಂಡುಲ್ಕರ್