ನಮ್ಮ ಹೆಮ್ಮೆಯ ಭಾರತ (19 - 20)

ನಮ್ಮ ಹೆಮ್ಮೆಯ ಭಾರತ (19 - 20)

೧೯.ಜಗತ್ತಿನ ಅಪ್ರತಿಮ ಕಲಾರಚನೆ ಆಗ್ರಾದ ತಾಜಮಹಲ್
ಆಗ್ರಾದ ತಾಜಮಹಲನ್ನು ಜಗತ್ತಿನ ಅತ್ಯಂತ ಸುಂದರ ಮತ್ತು ಭವ್ಯ ಸ್ಮಾರಕ ಎನ್ನಬಹುದು. ಇದು ಮೊಘಲ್ ರಾಜ ಷಾಜಹಾನ್, ತನ್ನ ಪ್ರೀತಿಯ ಪತ್ನಿ ಮಮ್ತಾಜಳ ನೆನಪಿಗಾಗಿ ನಿರ್ಮಿಸಿದ ಸ್ಮಾರಕ. ತನ್ನ ಮಗ ಔರಂಗಜೇಬನಿಂದಲೇ  
ಬಂಧಿಸಲ್ಪಟ್ಟ ರಾಜ ಷಾಜಹಾನ್ ತನ್ನ ಕೊನೆಗಾಲವನ್ನು ತಾಜಮಹಲನ್ನು ಖಿನ್ನತೆಯಿಂದ ನೋಡುತ್ತ ಕಳೆಯ ಬೇಕಾಯಿತು ಎಂಬುದು ದುರಂತ. ಅವನ ಮರಣಾ ನಂತರ ಅವನನ್ನೂ ಮಮ್ತಾಜಳ ಸಮಾಧಿ ಪಕ್ಕದಲ್ಲೇ ಸಮಾಧಿ ಮಾಡಲಾಯಿತು.

ಯಮುನಾ ನದಿಯ ದಡದಲ್ಲಿರುವುದೇ ತಾಜಮಹಲಿನ ಭವ್ಯತೆಯ ಗುಟ್ಟು! ಹಿಂಭಾಗದಲ್ಲಿ ನದಿ ಹರಿಯುತ್ತಿರುವ ಕಾರಣ, ತಾಜಮಹಲಿಗೆ ಯಾವಾಗಲೂ ಅಗಾಧ ಆಕಾಶವೇ ಹಿನ್ನೆಲೆ. ಅದರಿಂದಾಗಿ ತಾಜಮಹಲಿಗೊಂದು ಭವ್ಯ ನೋಟ ಲಭ್ಯ. ಸುಮಾರು ೨೦,೦೦೦ ಕೆಲಸಗಾರರೂ ಕುಶಲಕರ್ಮಿಗಳೂ ೨೦ ವರುಷ ಹಗಲೂರಾತ್ರಿ ದುಡಿದು ತಾಜಮಹಲನ್ನು ನಿರ್ಮಿಸಿದರು. ಅವರ ಶ್ರದ್ಧೆ, ದುಡಿಮೆ, ಕುಸುರಿ ಕೆಲಸ ಅಲ್ಲಿನ ಒಂದೊಂದು ಕಲ್ಲಿನಲ್ಲಿಯೂ ಎದ್ದು ಕಾಣುತ್ತದೆ.

ತಾಜಮಹಲಿನ ಶಿಲೆಗಳ ಕುಸುರಿ ಕೆಲಸ ನೋಡಲು ಒಂದು ದಿನ ಸಾಲದು. ಬೆಳದಿಂಗಳಿನಲ್ಲಿ ತಾಜಮಹಲನ್ನು ನೋಡುವುದು ಒಂದು ಅದ್ಭುತ ಅನುಭವ. ಎತ್ತರಿಸಿದ ಅಡಿಪಾಯದ ನಾಲ್ಕು ಮೂಲೆಗಳಲ್ಲಿರುವ ನಾಲ್ಕು ಗೋಪುರಗಳು ಮತ್ತು ಮುಖ್ಯ ಕಟ್ಟಡದ ಮಧ್ಯದಲ್ಲಿರುವ ಮುಗಿಲೆತ್ತರದ ಗೋಲ, ಇಡೀ ಶಿಲಾರಚನೆಗೊಂದು ವಿಲಕ್ಷಣ ರೂಪ ನೀಡಿವೆ.

ಜಗತ್ತಿನ ಎಲ್ಲೆಡೆಗಳಿಂದ ದಿನದಿನವೂ ಸಾವಿರಾರು ಪ್ರವಾಸಿಗರು ತಾಜಮಹಲನ್ನು ನೋಡಲು ಬರುತ್ತಾರೆ. ನೋಡುತ್ತ ನೋಡುತ್ತ ಮೈಮರೆಯುತ್ತಾರೆ. ಕೊನೆಗೆ ತಮ್ಮದೇ ಚಂದದ ನೆನಪುಗಳೊಂದಿಗೆ, ಬದುಕಿನಲ್ಲಿಡೀ ಮತ್ತೆಮತ್ತೆ ನೋಡಬಹುದಾದ ತಾಜಮಹಲಿನ ಹಿನ್ನೆಲೆಯ ತಮ್ಮ ಫೋಟೋಗಳೊಂದಿಗೆ ವಿದಾಯ ಹೇಳಿ ಹೊರಡುತ್ತಾರೆ.

 ಪ್ರಕೃತಿ ಮತ್ತು ವನ್ಯಜೀವಿಗಳು
೨೦.ಭಾರತದ ಪ್ರಾಕೃತಿಕ ಸಂಪತ್ತಿನ ಖಜಾನೆ: ಪಶ್ಚಿಮ ಘಟ್ಟಗಳು
ಭಾರತದ ಪಶ್ಚಿಮ ಕರಾವಳಿಯ ಉದ್ದಕ್ಕೆ ೧,೬೦೦ ಕಿ.ಮೀ. ವ್ಯಾಪಿಸಿರುವ ಪರ್ವತ ಶ್ರೇಣಿಯೇ ಪಶ್ಚಿಮ ಘಟ್ಟಗಳು. ಇಲ್ಲಿನ ಅಗಾಧ ಜೀವವೈವಿಧ್ಯತೆಯಿಂದಾಗಿ ಇವನ್ನು ಭಾರತದ ಪ್ರಧಾನ ಪ್ರಾಕೃತಿಕ ಸಂಪತ್ತಿನ ಖಜಾನೆ ಎಂದು ಪರಿಗಣಿಸಲಾಗಿದೆ.

ಭಾರತದ ಒಟ್ಟು ಸಸ್ಯ ಮತ್ತು ಪ್ರಾಣಿ ಪ್ರಭೇದಗಳ ದೊಡ್ಡ ಪಾಲು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತದೆ. ಇಲ್ಲಿರುವ ಕೆಲವು ಪ್ರಭೇದಗಳು ಜಗತ್ತಿನಲ್ಲಿ ಬೇರೆಲ್ಲಿಯೂ ಕಾಣ ಸಿಗುವುದಿಲ್ಲ. ಭಾರತದ ಆನೆಗಳ, ಹುಲಿಗಳ ಮತ್ತು ಸಿಂಹ-ಬಾಲದ ಕೋತಿಗಳ
ಬಹುಪಾಲು ಪಶ್ಚಿಮ ಘಟ್ಟಗಳಲ್ಲಿದೆ.

ಅದಲ್ಲದೆ, ಭಾರತದ ಸುಮಾರು ಮೂವತ್ತು ಕೋಟಿ ಜನರು ವಾಸ ಮಾಡುವ ರಾಜ್ಯಗಳಿಗೆ ನೀರು ಸಿಗುತ್ತಿರುವುದು ಪಶ್ಚಿಮ ಘಟ್ಟಗಳಲ್ಲಿ ಹುಟ್ಟಿ ಪಶ್ಚಿಮ ಅಥವಾ ಪೂರ್ವಕ್ಕೆ ಹರಿಯುವ ವಿವಿಧ ನದಿಗಳಿಂದ. ಅಂದರೆ ಕೋಟಿಗಟ್ಟಲೆ ಜನರು ತಮ್ಮ ಜೀವನೋಪಾಯಕ್ಕಾಗಿ ಪಶ್ಚಿಮ ಘಟ್ಟಗಳನ್ನು ಅವಲಂಬಿಸಿದ್ದಾರೆ.
ಫೋಟೋ ಕೃಪೆ: ಇಂಟರ್-ನೆಟ್