ನವಜಾತ ಶಿಶು ರಕ್ಷಣೆಗಾಗಿ - ಶಿಶು ಸಂರಕ್ಷಣಾ ದಿನ

ಮಕ್ಕಳು ಭಗವಂತನಿತ್ತ ವರ, ಮಕ್ಕಳು ಈ ಜಗದ ಸುಂದರ ಪುಷ್ಪಗಳು, ಮಕ್ಕಳನ್ನು ನಾಜೂಕಾಗಿ ಬೆಳೆಸೋಣ. ಮಕ್ಕಳಲ್ಲಿರುವ ಸೃಜನಶೀಲತೆಗಳಿಗೆ ಪ್ರೋತ್ಸಾಹಿಸೋಣ. ಅವರ ಮನದಲ್ಲಿ ಅರಿಷಡ್ವರ್ಗಗಳ ತುಂಬದಿರೋಣ, ನವಜಾತ ಶಿಶುಗಳನ್ನು ಬಹಳ ಜಾಗ್ರತೆಯಿಂದ ನೋಡಿಕೊಳ್ಳೋಣ. ಆದಷ್ಟೂ ಶಿಶು ಮರಣವನ್ನು ತಪ್ಪಿಸೋಣ.
ಕರ್ನಾಟಕ ಸರಕಾರವು ಬಸಿರು, ಬಾಣಂತಿ, ನವಜಾತ ಶಿಶುಗಳ ಆರೋಗ್ಯ, ಆರೈಕೆ, ಆಹಾರ, ತಾಯಿ ಎದೆಹಾಲಿನ ಮಹತ್ವ, ವೈದ್ಯಕೀಯ ಚಿಕಿತ್ಸೆ, ಶಿಶು ಬಾಣಂತಿಯರ ಮರಣ ಈ ಎಲ್ಲವನ್ನೂ ದೃಷ್ಟಿಯಲ್ಲಿಟ್ಟುಕೊಂಡು ‘ಜನನಿ ಸುರಕ್ಷಾ ಯೋಜನೆ’ಯನ್ನು ಜಾರಿಗೆ ತಂದಿತು. ಓರ್ವ ಹೆಣ್ಣುಮಗಳು ಬಸುರಿಯಾದ ದಿನದಿಂದ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಆಕೆಗೆ ಬೇಕಾದ ಎಲ್ಲಾ ವೈದ್ಯಕೀಯ ಸಲಹೆಗಳನ್ನೂ ನೀಡಲಾಗುತ್ತದೆ. ಅಲ್ಲದೆ ಹೆಚ್ಚಿನ ಚಿಕಿತ್ಸೆ ಬೇಕಾದಲ್ಲಿ ಮೇಲಿನ ಆಸ್ಪತ್ರೆಗಳಿಗೆ ಸಾರಿಗೆಯೊಡನೆ ಕಳುಹಿಸುವ ವ್ಯವಸ್ಥೆ ಸಹ ಮಾಡಲಾಗುತ್ತದೆ.
ಸ್ಥಳೀಯ ಅಂಗನವಾಡಿಗಳಲ್ಲಿ, ಆಶಾ ಕಾರ್ಯಕರ್ತೆಯರ ಮೂಲಕ, ಹಾಗೆಯೇ ಸ್ಥಳೀಯ ಪ್ರಾಥಮಿಕ ಕೇಂದ್ರಗಳಲ್ಲೂ ತಪಾಸಣೆ ಮತ್ತು ಸಲಹೆಯಿದೆ. ಪ್ರಸೂತಿ ಪೂರ್ವ, ಪ್ರಸವ ,ಪ್ರಸವಾ ನಂತರ ಮೂರು ರೀತಿಯ ಸಲಹೆ, ಔಷಧ ನೀಡುತ್ತಾರೆ. ನವಜಾತ ಶಿಶುವಿಗೆ ತಾಯಿಯ ಎದೆಹಾಲಿನ ಪ್ರಾಮುಖ್ಯತೆಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಆಗಾಗ ತಪಾಸಣೆಯನ್ನು ಮಾಡಿ, ಗರ್ಭದೊಳಗಿನ ಶಿಶುವಿನ ಆರೋಗ್ಯ, ಹಂತ ಹಂತವಾದ ಬೆಳವಣಿಗೆ, ಗರ್ಭಿಣಿಯ ತೂಕ ಎಲ್ಲವನ್ನೂ ಪರಿಶೀಲಿಸಿ, ಏನಾದರೂ ತೊಂದರೆ ಹುಟ್ಟಲಿರುವ ಮಗುವಿಗೆ ಇದೆ ಎಂದಾದರೆ, ಕಾನೂನಿನ ಚೌಕಟ್ಟಿನೊಳಗೆ, ದಂಪತಿಗಳಿಗೆ ಕಾರಣವನ್ನು ವಿವರಿಸಿ, ವೈದ್ಯಕೀಯ ಗರ್ಭಪಾತ ಮಾಡುವುದೂ ಇದೆ.
ಶಿಶು ಜನನದ ಅನಂತರ ಜೋಪಾನವಾಗಿ ಆರೈಕೆ ಮಾಡುವುದನ್ನು, ಮನೆಗೆ ಬಂದು ಆಶಾಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಮಾಹಿತಿ ನೀಡುವರು. ಇತ್ತೀಚೆಗೆ ತಾಯಿಕಾರ್ಡು ಹೊಂದಿದವರಿಗೆ ಜನನಿ ಕಿಟ್ ಸಹ ನೀಡಲಾಗುತ್ತದೆ. ಮುಂದಿನ ಭವಿಷ್ಯದ ನಮ್ಮ ಸಂತಾನಗಳನ್ನು ಆರೋಗ್ಯಯುತವಾಗಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಇಷ್ಟೆಲ್ಲಾ ಸೌಲಭ್ಯಗಳಿದ್ದರೂ ಎರಡು ದಿನಗಳ ಹಿಂದೆ ನಡೆದ ಅವಳಿ ಮಕ್ಕಳ ಪ್ರಸವದ ಹೃದಯ ವಿದ್ರಾವಕ ದೃಶ್ಯ ನಾಗರಿಕ ಸಮಾಜ ತಲೆತಗ್ಗಿಸುವ ಹಾಗಿತ್ತು.ಯಾವ ತಾಯಿಗೂ ಇಂತಹ ಕಷ್ಟ ಬರಬಾರದೆಂದು ಭಗವಂತನಲ್ಲಿ ಪ್ರಾರ್ಥಿಸುವೆ.ಕಿಂಚಿತ್ತಾದರೂ ಮಾನವೀಯತೆಯಿರಲಿ. ನಾವೆಲ್ಲರೂ ತಾಯಗರ್ಭದಿಂದಲೇ ಬಂದವರಲ್ಲವೇ? ನಮ್ಮ ವಂಶದ ಕುಡಿಗಳು, ಅವರಿಗೆ ಪ್ರಪಂಚದ ಬೆಳಕನ್ನು ತೋರಿಸುವ ತಾಯಂದಿರ ಬಗ್ಗೆ ಕಾಳಜಿಯಿರಲಿ.
(ನವೆಂಬರ್ ೭ನ್ನು ‘ಶಿಶು ರಕ್ಷಣಾ ದಿನವನ್ನಾಗಿ ಆಚರಣೆ ಮಾಡಲಾಗುತ್ತದೆ)
-ರತ್ನಾ ಕೆ.ಭಟ್,ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ