ನಾನು ನನ್ನ ಸಂಸಾರ

ನಾನು ನನ್ನ ಸಂಸಾರ

ಬರಹ

ಭಾನುವಾರ ಬೆಳಿಗ್ಗೆ Breaking News ನ ಹುಡುಕಾಟದಲ್ಲಿ News Paper ಓದುತ್ತ Hall ನಲ್ಲಿ ಕೂತಿದ್ದೆ . ಆದರೆ ಆ Breaking News ನಮ್ಮ ಮನೆಯಲ್ಲೇ ನಡೆಯುತ್ತದೆಂದು ಕನಸಿನಲ್ಲೂ ಯೋಚಿಸಿರಲಿಲ್ಲ . "ರೀ ... ಇವತ್ತು ಉಪ್ಪಿಟ್ಟು ಮಾಡುತ್ತೇನೆ ... ಅಡುಗೆ ಮನೆಯಿಂದ ನನ್ನವಳು ಉಲಿದಳು. ಎದೆ ಝಾಲ್ಲೆಂದಿತು!!!!! ತಕ್ಷಣ ಮೊಬೈಲ್ ಫೋನ್ ನ Contact list ನಲ್ಲಿದ್ದ ಎಲ್ಲರಿಗೂ ಕರೆ ಮಾಡಿ ಮಾತಾಡಿದೆ . "ಏನೋ ..... ಬೆಳಿಗ್ಗೆ ಬೆಳಿಗ್ಗೆ ಫೋನ್ ಮಾಡಿ ಬಿಟ್ಟಿದ್ದೀಯಾ !!!!! ಎಂದು ಎಲ್ರೂ ಕೇಳಿದ್ರು ... ಹೌದು ಮಧ್ಯಾನ್ನ ಹೇಗಿರ್ತೀನಿ ಅಂತ sure ಇಲ್ಲ ಅದಕ್ಕೆ ಈಗಲೇ ಮಾಡಿದೆ ಎಂದೆನು. ಕಳೆದ ಬಾರಿ ನನ್ನವಳ "ಹಸ್ತಗುಣದ" ಬಲಿಪಶುವಾಗಿದ್ದ ರಮೇಶಣ್ಣ ... ಲೋ Insurance Premium ಕಟ್ಟಿದ್ದೀಯ ತಾನೇ ?? ಎಂದು ಕೇಳಿದ . ಹೌದು ಎಂದೆನು . ನನ್ನವಳು ಮನೆಯೊಳಗಿದ್ದರೆ ನನಗೂ ಕೋಟಿ ರುಪಾಯಿ . ಆದರೆ ಅಡುಗೆ ಮನೆ ಹೊಕ್ಕರೆ ಸ್ವಲ್ಪ ಭಯವಾಗುವುದು ಸಹಜ .

ಒಹ್ ..... ಕ್ಷಮಿಸಿ ನನ್ನವಳ ಪರಿಚಯ ಮಾಡುವುದೇ ಮರೆತು ಹೋದೆ . ಇವಳ ಹೆಸರು ಶಾಂತಿ . ದೇವರಾಣೆಗೂ ಇದು ಕೇವಲ ಅಂಕಿತನಾಮ . ನನ್ನ ಅತ್ತೆ ಮಾವಂದಿರ ಏಕೈಕ ಪುತ್ರಿ . ಅವರ ಕುಟುಂಬದಲ್ಲಿ ಇವಳ ತಂದೆ ತಾಯಿ ಬಿಟ್ಟು ಬೇರೆ ಎಲ್ಲರಿಗೂ ಗಂಡು ಮಕ್ಕಳು. ಇದರಿಂದಾಗಿ "ಪಾರ್ವತಿಯ " ತರಹ ಇವಳು ಕೂಡ "ಮುದ್ದಿನ ಮನೆಮಗಳು ". " ಆರತಿ ತೆಗೊಂಡರೆ ಗರ್ಮಿ ತೀರ್ಥ ತೆಗೊಂಡರೆ ಶೀತ " ಅಂತಾರಲ್ಲ ಅದೇ ಪಂಗಡಕ್ಕೆ ಸೇರಿದವಳು .ಕಬ್ಬು ತಿಂದರೆ ಹಲ್ಲಿಗೆ ನೋವಾಗುತ್ತದೆಂದು Dry Fruits ತಿಂದೇ ಬೆಳೆದವಳು. ಕಲಿತಿದ್ದು ಇಂಜಿನಿಯರಿಂಗ್ ಆದರೂ ಗಂಜಿ ನೀರು ಬೇಯಿಸಲಿಕ್ಕು ಬರುವುದಿಲ್ಲ . ಇವಳ ತಪ್ಪಿಲ್ಲ ಬಿಡಿ . ಇವಳು ಅಡುಗೆ ಮನೆ ಕಡೆ ಬಂದರೂ "ನೀನು ಓದ್ಕೋ ಪುಟ್ಟಿ " ಎಂದು ಹೇಳಿ ಹೊರಗೆ ಕಳಿಸಿದರೆ ಏನು ಮಾಡುವುದು ?? ಈ ಪುಟ್ಟಿ ಹೆಸರಿನ ಹಸ್ತಾಂತರ ಇಂದಿಗೂ ಆಗಿಲ್ಲ . ಈಗ ನಾವು ನಮ್ಮ ಮಗಳನ್ನು ಇವಳ ತವರು ಮನೆಗೆ ಕರೆದುಕೊಂಡು ಹೋದರೆ ಅವಳನ್ನು "ಪುಟ್ಟಿ ಮಗಳು " ಎಂದು ಕರೆಯುತ್ತಾರೆ . ನೋಡುವವರಿಗೆ ನಾನೇನು ಇವಳನ್ನು ಬಾಲ್ಯವಿವಾಹ ಮಾಡಿಕೊಂಡಿರುವಂತೆ ಅನಿಸುತ್ತದೆ .

ಹೌದ್ರಿ ... ನಮ್ಮ ಮನೆಯಲ್ಲಿ ನಾನೇ ಅಡಿಗೆ ಮಾಡೋದು .. ಅರೆ !!! ಅದರಲ್ಲೇನು ನಾಚಿಕೆ ?? ನೀವು ರಾಮಾಯಣ ಮಹಾಭಾರತ ಓದಿದ್ದೀರ ತಾನೇ ?? ಅದರಲ್ಲಿ ನಳಪಾಕ , ಭೀಮಪಾಕದ ಉಲ್ಲೇಖ ಬಿಟ್ಟರೆ "ದಮಯಂತಿ ಪಾಕ " "ದ್ರೌಪದಿ ಪಾಕ" ದ ಬಗ್ಗೆ ಎಲ್ಲಾದರೂ ಕೇಳಿದ್ದೀರಾ ?? ಮತ್ತೆ ಅಜ್ಞಾತ ವಾಸದ ಕಾಲದಲ್ಲಿ ದ್ರೌಪದಿಯನ್ನು ಅಡುಗೆ ಕೆಲಸಕ್ಕೆ ಕಳಿಸಲು ತಯಾರಿ ಮಾಡಿದ್ದರು ಆದರೆ ಅವಳು "ಏನ್ರಿ ... ನಾನು ದುರ್ಯೋಧನ ಸಾಯೋವರ್ಗೂ Comb ಮಾಡ್ಕೊಳ್ಳೋಲ್ಲ ಅಂತ ಶಪಥ ಮಾಡಿದ್ದೀನಿ ಆಮೇಲೆ ಸಾಂಬಾರಿನಲ್ಲಿ ಕೂದಲು ಬಂದ್ರೆ ಕಷ್ಟ .. ನೀವೇ ಹೋಗಿ ಬನ್ರಿ .. ಎಂದು ಭೀಮನನ್ನು ಏಮಾರಿಸಿದಳು . ಆದರೆ ನನ್ನವಳು ಹಾಗಲ್ಲ ನಾನೇ ಮಾಡುತ್ತೇನೆ ಎಂದು ಮುಂದೆ ಬಂದರೂ ನಾನು ಬಿಡುವುದಿಲ್ಲ . ನಮ್ಮ ಅಡುಗೆ ಕೋಣೆಯ ಹೊಸ್ತಿಲಿನಲ್ಲಿ ಎರಡು ಲಕ್ಷ್ಮಣ ರೇಖೆ ಎಳೆದಿದ್ದೇನೆ ಒಂದು ಜಿರಳೆಗೆ ಮತ್ತೊಂದು ನನ್ನ ಹೆಂಡತಿಗೆ .

ಮದುವೆಯಾದ ಹೊಸತರಲ್ಲಿ ಪರಸ್ಪರ impress ಮಾಡುವ ಕಾರ್ಯ ಭರದಿಂದ ನಡೆಯುವುದು ಸಾಮಾನ್ಯ . ನಾನೂ ಹಾಗೇನೇ. ಆಗ ನಮ್ಮ ಮದುವೆಯಾಗಿ 2 ವಾರವಷ್ಟೇ ಕಳೆದಿತ್ತು . ಅಡುಗೆಯಲ್ಲಿ ಇವಳ ಪರಾಕ್ರಮ ಅರಿತಿರಲಿಲ್ಲ . ಆಫೀಸಿಗೆ ಹೋಗುವ ಅವಸರದಲ್ಲಿದ್ದೆ . ರೀ breakfast ಮಾಡ್ಕೊಂಡು ಹೋಗಿ ಅಂದಳು . ಸರಿ ಎಂದು ತಿಂದು impress ಮಾಡುವ ನಿಟ್ಟಿನಲ್ಲಿ "ಕಾಫಿ ಚೆನ್ನಾಗಿದೆ " ಎಂದೆನು . " ನಾನು ಟೀ ಮಾಡಿದ್ದು" ಎಂದು ಹೇಳಿ ಮುಖ ಸಣ್ಣದು ಮಾಡಿಕೊಂಡು ಒಳಗೆ ಹೋದಳು . " ಸ್ವಲ್ಪ ಸಾವರಿಸಿಕೊಂಡು "ಹಹ್ಹಹ್ಹ ... ತಮಾಷೆ ಹೇಗಿತ್ತು ??? ಎಂದು ಕೇಳಿ ಮಾತಿನ ಓಘ ಬದಲಿಸಿ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡೆ . ಆಫೀಸಿನಿಂದ ಫೋನ್ ಮಾಡಿ ಹೀಗೆ ಮಾತಾಡುತ್ತಾ " ನಾಳೆ ಏನು ಸ್ಪೆಷಲ್ ?? ಎಂದು ಕೇಳಿದೆ . "ನೀವೇ ಹೇಳ್ರಿ " ಎಂದಳು . ಇಡ್ಲಿ ಮಾಡು ... ಬೇಳೆ ಸ್ವಲ್ಪ ಹೆಚ್ಚೇ ನೆನೆಸು ನಾಳೆ ನನ್ನ ನಾಲ್ಕು ಗೆಳೆಯರು ಮನೆಗೆ ಬರುತ್ತಾರೆ ಎಂದೆನು . ಸಂಜೆ ಮನೆಗೆ ಹೋದವನಿಗೆ ತಲೆ ತಿರುಗುವುದೊಂದು ಬಾಕಿ ನನ್ನ ಅರ್ಧಾಂಗಿ ಅರ್ಧ ಚೀಲ ತೊಗರಿಬೇಳೆ ನೆನೆಸಿ ಇಟ್ಟಿದ್ದಾಳೆ . ನನ್ನ ನೋಡಿ "ರೀ ... ಸಾಕಾ ಇಷ್ಟು ?? ಎಂದಳು . ಸಾಕಮ್ಮ ಸಾಕು ..... ನಮ್ಮ ಮದುವೆ ದಿನ ಕೂಡ ಇಷ್ಟು ಬೇಳೆ ನೆನೆಸಿಟ್ಟಿರಲಿಕ್ಕಿಲ್ಲ ಎಂದೆನು .ಅತ್ತೆ ಮಾವ ಬರುವ ನೆಪ ಮಾಡಿ ಗೆಳೆಯರ ಕಾರ್ಯಕ್ರಮವನ್ನು ಮುಂದೆ ಹಾಕಿದೆನು . ಆಮೇಲೆ ಒಂದು ವಾರ ಬೆಳಿಗ್ಗೆ ತಿಂಡಿಗೆ "ದಾಲ್ ಖಿಚಡಿ " ಊಟಕ್ಕೆ ಬೇಳೆಸಾರು .ಹೀಗೆ ದಾಲಿನ ಧಾಳಿಯಿಂದ ಹತ್ತು ದಿನ ಹೊಟ್ಟೆಯಲ್ಲಿ ....... ಬೇಡ ಬಿಡಿ... ಅದನ್ನೆಲ್ಲಾ ಯಾಕೆ ಬರೆಯುವುದು .....ನಿಮಗೆ ಅರ್ಥವಾಯಿತಲ್ಲ ಅಷ್ಟೆ ಸಾಕು .

ರಮೇಶಣ್ಣನ ಪ್ರಸಂಗ :- ರಮೇಶಣ್ಣ ನನ್ನ ಚಡ್ಡಿ ದೋಸ್ತಿ . ಸಂಬಂಧಿ ಕೂಡ ಸ್ನೇಹಿತ ಕೂಡ . ನನಗಿಂತ 2 ವರ್ಷ ದೊಡ್ಡವನಾಗಿದ್ದರೂ ಸಣ್ಣ ಪ್ರಾಯದಿಂದ ನನ್ನ ಒಡನಾಡಿ . ಮದುವೆ ಆದ ನಂತರ ಒಂದು ದಿನ ಅವನನ್ನು ಊಟಕ್ಕೆ ಕರೆದೆ . ಅವನಿಗೆ ನುಗ್ಗೆ ಕಾಯಿ ತುಂಬಾ ಇಷ್ಟ . ಅದಕ್ಕೆ ನನ್ನಾಕೆಗೆ ನುಗ್ಗೆಕಾಯಿ ಹಾಕಿ ಸಾಂಬಾರು ಮಾಡಲು ಹೇಳಿದೆ . ಅವಳು ಮಾಡಿದಳು .ರಮೇಶಣ್ಣ ತಿಂದವನೇ .." ನುಗ್ಗೆಕಾಯಿಯನ್ನು ಯಾವ ಕಟ್ಟಿಗೆ ಡಿಪೋದಿಂದ ತಂದೆ ?? ಎಂದು ಕೇಳಿದ . ಎಲ್ಲ ಬಲಿತಿರುವ ನುಗ್ಗೆಕಾಯಿಗಳು . ಇವಳನ್ನು ಕೇಳಿದರೆ "ರೀ ಮಾರ್ಕೆಟಿಗೆ ಹೋಗಿದ್ದೆ ಆ ತರಕಾರಿ ಅಂಗಡಿಯವನು ಸಣ್ಣ ನುಗ್ಗೆಕಾಯಿ ಕೊಡಲು ಬಂದ ದಬಾಯಿಸಿ ದೊಡ್ಡ ದೊಡ್ಡ ನುಗ್ಗೆ ಕಾಯಿ ಹಾಕಿಸಿಕೊಂಡು ಬಂದೆ " ಅಂದಳು . ಅವಳ ಮುಖದ ಮೇಲೆ ದಿಗ್ವಿಜಯ ಸಾಧಿಸಿದ ಸೇನಾಧಿಕಾರಿಯ ಸಂಭ್ರಮ . ನನಗೋ ಅಪ್ಪ ಹೇಳಿದ "ದೊಡ್ಡ ಪಾವಣೆ" ಕತೆ ನೆನಪಾಯಿತು .ಇಷ್ಟ ಮಾತ್ರವಲ್ಲ ...

ಚಪಾತಿ - ಉಂಡೆ -ಒಬ್ಬಟ್ಟಿನೊಟ್ಟಿಗೆ
ಬೇಕೇ ಬೇಕು ಚಾಕು ಕತ್ತರಿ ಸುತ್ತಿಗೆ ||
ಪೂರಿಯಲಿ ಅಡಗಿಹುದು ಎಣ್ಣೆಯಾ ಗಿರಣಿ
ಅಡುಗೆ ಮಾಡಿದರೆ ಇವಳು ಮಕ್ಕಳದು ಧರಣಿ.||

ಮಾಡಿದರೆ ಗೋಬಿ ಮಂಚೂರಿ
ಅಗ್ನಿಶಾಮಕ ದಳ ಪಕ್ಕದಲ್ಲಿದ್ದರೆ ಸರಿ
ಪನ್ನೀರು ತಿಂದರೆ ಕಣ್ಣೀರು
ಹೇಗೆ ?? ನನ್ನವಳ ದರ್ಬಾರು ??

ಸಾರಿನಲ್ಲಿ ಉಪ್ಪಿಲ್ಲ ಪಾಯಸದಿ ಬೆಲ್ಲ
ಬೇಳೆ ಸಾರಿನಲ್ಲಿ ಬೇಳೆ ಬೆಂದಿರುವುದಿಲ್ಲ||
ಪಲ್ಯದಲಿ ಅಡಗಿಹುದು ನೂರೆಂಟು ಸೊತ್ತು
ನನ್ನವಳ ಅಡುಗೆ ನನಗೆ ನುಂಗಲಾಗದ ತುತ್ತು ||

ಅಡುಗೆ ಮನೆಯಲ್ಲಿ ಮಾತ್ರ ಇವಳ ಕಾರ್ಯವ್ಯಾಪ್ತಿ ಮುಗಿಯೊಲ್ಲ . ಇವಳು ಮನೆಯಲ್ಲಿದ್ದರೆ ಅಥವಾ ಪಾದಚಾರಿಯಾಗಿ ಹೊರಗೆ ಬಂದರೆ ಇಡೀ ಊರಿಗೆ ಶಾಂತಿ . ಆದರೆ ಅಪ್ಪಿ - ತಪ್ಪಿ ವಾಹನ ಏರಿದರೆ ಈಕೆ ಪ್ರಳಯಾಂತಕಿ. ಊರಿನಲ್ಲಿ ಕರ್ಫ್ಯೂ ಜಾರಿ . ಹೆಸರೇನೋ ಸುಶಾಂತಿ . ಇದನ್ನು "ಶಾಂತಿ ಅಶಾಂತಿಗಳ ಇರುವಿಕೆ ಯಾರ ಮೇಲೆ ಅವಲಂಬಿತವಾಗಿದೆಯೋ ಅವಳು"(ವಾಹನ ಸಂಚಾರ ಸಮಾಸ ) ಎಂದು ಅರ್ಥೈಸಬಹುದು. ಊರಿನಲ್ಲಿನ ಎಲ್ಲ ಘಟಾನುಘಟಿಗಳು "ಜೀವ ಇದ್ರೆ ಬೆಲ್ಲ ಬೇಡಿ ತಿಂಬೆ" ಎನ್ನುತ್ತಾ ಮನೆಯಲ್ಲಿ ಕೂರುವುದು ಸತ್ಯ .

ನೀವು ಉಡುಪಿಯಿಂದ ಭಟ್ಕಳಕ್ಕೆ ಹೋಗುತ್ತಿದ್ದೀರಾ ?? ಏನು ?? via ಕುಂದಾಪುರಾನಾ ??? ಬೇಡ .... ಈಗಲೇ ಎಚ್ಚರಿಸುತ್ತಿದ್ದೇನೆ . ನೋಡಿ ಸರ್ .. ಹಣ ಹೋದರೆ ನಾಳೆ ಸಂಪಾದಿಸಬಹುದು .ಕೊಳಲಗಿರಿ -ಪೆರ್ಡೂರು-ಹೆಬ್ರಿ -ಶಿವಮೊಗ್ಗ -ಸಿದ್ದಾಪುರ -ಕೊಲ್ಲೂರು - ಬೈಂದೂರು ಮಾರ್ಗದಿಂದ ಭಟ್ಕಳಕ್ಕೆ ಬನ್ನಿ . ಯಾಕೆ ಎಂದು ಕೇಳುತ್ತಿದ್ದೀರಾ ?? " ಸುಶಾಂತಿ ಇದ್ದಾಳೆ ಎಚ್ಚರಿಕೆ " ಏನು ?? ನಮ್ಮ ಬಳಿ license ಇದೆ ನಾವು ಹೀಗೆ ಹೋಗುತ್ತೇವೆ ಅನ್ನುತ್ತೀರಾ ?? ಅವಳ ಬಳಿ ಇಲ್ಲಾ ಸ್ವಾಮೀ ...

ಏನಿಲ್ಲ ಮೊನ್ನೆ ಇವಳು ದ್ವಿಚಕ್ರ ವಾಹನ ಕಲಿಯುವ ಹುಮ್ಮಸ್ಸಿನಲ್ಲಿ ನನ್ನ Honda Activa ಏರಿದಳು ನೋಡಿ . ಇವಳು ಮೊದಲೇ ಎಲೆಕ್ಟ್ರಿಕಲ್ ಇಂಜಿನಿಯರ್ . ಅದೂ 85 % ಅಂಕಗಳೊಂದಿಗೆ . ಕಲಿತ ವಿದ್ಯೆಯನ್ನೆಲ್ಲ ವಾಹನದ ಮೇಲೆ ಪ್ರಯೋಗ ಮಾಡಿದರೆ ಹೇಗೆ ನೋಡಿ ??ವಾಹನ ಹತ್ತಿದ ತಕ್ಷಣ " When a tow wheeler is started and you twist the acceleratore the fingers which encircle the accelarator will give the direction of motion" ಎಂಬ " THUMB RULE " apply ಮಾಡಿಯೇ ಬಿಟ್ಟಳು . ಅಂದರೆ ವಾಹನ ನಿಲ್ಲಿಸಲು accelarator ನ್ನು ಹಿಂದೆ ತಿರುಗಿಸಲು ಶುರು ಮಾಡಿದಳು . ಆ ದ್ವಿಚಕ್ರ ವಾಹನಕ್ಕೆ ಈ ನಿಯಮ ಗೊತ್ತಿಲ್ಲದಿದ್ದರೆ ಅದು ಇವಳ ತಪ್ಪೇ ?? ದಿಕ್ಕಾಪಾಲಾಗಿ ಓಡಲು ಶುರು ಮಾಡಿತು . ಪುಣ್ಯಕ್ಕೆ ಮೈದಾನದಲ್ಲಿ ಬಿಡುತ್ತಿದ್ದಳು . ಇಲ್ಲದಿದ್ದರೆ ಆ ದಿನ ಉಡುಪಿ ಜಿಲ್ಲೆಯ ಎಲ್ಲ ಆಸ್ಪತ್ರೆಗಳು " HOUSE-FULL " ಬೋರ್ಡ್ ಹಾಕುತ್ತಿದ್ದವೋ ಏನೋ . !!!!!!!!!! ದೂರದಿಂದಲೇ ಇದನ್ನು ನೋಡಿದ ಊರ ಜನರು ಮರುದಿನದಿಂದ ಇವಳು ಮನೆಯಿಂದ ಹೊರನಡೆದರೆ ನಡೆದುಕೊಂಡು ಹೋಗುತ್ತಿದ್ದಾಳೋ ಅಥವಾ ವಾಹನದಲ್ಲೋ ಎಂದು ಮನೆಯ ಕಿಟಕಿಯಿಂದಲೇ confirm ಮಾಡಿಕೊಂಡು ಆಮೇಲೆ ಮನೆಯಿಂದ ಹೊರಬೀಳುತ್ತಿದ್ದರು .

ಇನ್ನು ಇವಳು ಕಾರು ಕಲಿಯ ಹೊರಟಳು . ಆ ಡ್ರೈವಿಂಗ್ ಸ್ಕೂಲ್ ನ ತರಬೇತುದಾರ ನೋಡಿ ಮೇಡಂ
10 km speed --1st gear
20km speed --second gear
30 km speed -- 3rd grear ----- ಹೀಗೆ ಸರಳ ಲೆಕ್ಕಾಚಾರ ಹೇಳಿದ . ಅದೇ ಅವನು ಮಾಡಿದ ತಪ್ಪು . ರಸ್ತೆ ನೋಡುವುದು ಬಿಟ್ಟು ಓಡೋ ಮೀಟರ್ ನೋಡುತ್ತಾ ಕುಳಿತಳು . ಮತ್ತೆ ಇವಳು ಗಾಡಿ ಬಿಡುವಾಗ ಕಡಿಮೆ ಎಂದರೂ ಒಂದು ಮೂವರು assistants ಬೇಕು .
1) Pen - Paper ಹಿಡಿದುಕೊಂಡು ಗಾಡಿ ಯಾವ gear ನಲ್ಲಿದೆ ಮತ್ತು ಗಾಡಿಯ speed ಎಷ್ಟು ಎಂದು ಲೆಕ್ಕ ಹಾಕಿ chaart Prepare ಮಾಡಿ ಹಿಂದಿನಿಂದ ಹೇಳಲು ಒಬ್ಬ .

2)ಅವನ ಮಾತು ಕೇಳಿ ಈಕೆ gear change ಮಾಡುತ್ತಾಳಲ್ಲ ಆಗ ಸ್ಟೇರಿಂಗ್ ಹಿಡಿದುಕೊಳ್ಳಲು ಒಬ್ಬ .

3) ಗಾಡಿಯ ಮುಂದೆ ಚಲಿಸುತ್ತ ರೋಡ್ ಹಂಪ್, ಟರ್ನ್ ಪಾಯಿಂಟ್ ಎಲ್ಲಿ ಬರುತ್ತದೆ ಮುಂತಾದ ವಿಷಯಗಳ ಲೇಟೆಸ್ಟ್ update ಕೊಡಲು ಇನ್ನೊಬ್ಬ .

ಮತ್ತೆ ಬಲಕ್ಕೆ ತಿರುಗುವಾಗ ಎಡಗಡೆಯ indicator ಹಾಕುವುದು horn ಎಂದು ವೈಪರ್ ಶುರು ಮಾಡುವುದು ಇದೆಲ್ಲ ಕಾಮನ್ ಬಿಡಿ . ಮುಂದೆ RTO ದವರು license ಕೊಡುವ ಮೊದಲು ಕುಂದಾಪುರದಲ್ಲಿ 2 ತಿಂಗಳು ಡ್ರೈವ್ ಮಾಡಿ ಬಂದಿರಬೇಕೆಂಬ ಕಂಡೀಷನ್ ಹಾಕಬಹುದು.

ಹೀಗೆ ಮನೆ-ಆಫೀಸು -ಅಡುಗೆ ಎಂದು ಸುಸ್ತಾಗುತ್ತೇನೆ . ಬಳಲಿ ಬೆಂಡಾಗಿ ಮನೆಗೆ ಮರಳಿದಾಗ ಮನೆ ಬಾಗಿಲಿನಲ್ಲಿ ಗೋಣು ಉದ್ದ ಮಾಡಿಕೊಂಡ ನನ್ನವಳು " ರೀ ನಿಮಗೋಸ್ಕರ ಕಾಯ್ತಾ ಇದ್ದೆ... ಬೇಗ ಟೀ ಮಾಡ್ರಿ..... ಎಂದು ತುಟಿಯಂಚಿನಲ್ಲಿ ನಕ್ಕಾಗ ಆ ನಗುವಿನಲ್ಲಿ ಸುಸ್ತೆಲ್ಲಾ ಮರೆತು ಹೋಗುತ್ತದೆ . ಏನೇ ಹೇಳಿ "ನನ್ನವಳು ನನ್ನೆದೆಯ ಹೊನ್ನಾಡನಾಳುವಳು " . ಇದೇ ನಾನು ಮತ್ತು ನನ್ನ ಸಂಸಾರದ ಕತೆ
==============================ವಿಕಟಕವಿ==================