ನಾವು ಬಳೆವೆಡಕದ ಜೀವ ಕಿತ್ತಂತೆ ಪರಿಸರ ನಮ್ಮ ಹಲ್ಲು ಕೀಳುವ ಕಾಲ ದೂರವಿಲ್ಲ!
"ಪರಿಸರದ ಮಿತಿಯನ್ನು ಮೀರುವುದು ಹಾಗೂ ಅಸಹಜ ಗತಿಯಲ್ಲಿ ಬದಲಾವಣೆ ಹೊಂದುವುದು ಆಧುನಿಕ ಜೀವನ ಪದ್ಧತಿಯನ್ನು ಗುರುತಿಸುವ ಪ್ರಮುಖ ಲಕ್ಷಗಣಗಳು ಎನ್ನಬಹುದು" - ದೇಸಿ ಜೀವನ ಪದ್ಧತಿಯ ಪ್ರತಿಪಾದಕ ಪ್ರಸನ್ನ ಅವರು ಸೂಚ್ಯವಾಗಿ ನಮ್ಮ ಅದುಮಿದ ಆಸೆಗಳಿಗೆ ಚುಚ್ಚುತ್ತಾರೆ.
ಪರಿಸರ ಪತ್ರಕರ್ತ ನಾಗೇಶ ಹೆಗಡೆ ತಮ್ಮ ಬಹು ಚರ್ಚಿತ ಪುಸ್ತಕ ‘ಸುರಿಹೊಂಡ - ಭರತಖಂಡ’ದಲ್ಲಿ ಹೇಳುವಂತೆ -"ಟೆಕ್ನಾಲಾಜಿ, ನಿಸರ್ಗವನ್ನು ತಿದ್ದಿ ತೀಡಿ ಪೋಷಿಸಿ ಒಲಿಸಿಕೊಳ್ಳುವ ಬದಲು ಬಗ್ಗುಬಡಿದು ಧಮಕಿ ಹಾಕಿ ಒಗ್ಗಿಸಿಕೊಳ್ಳಬೇಕು ಎಂಬ ಪಾಠವನ್ನು ನಮಗೆ ಹೇಳುತ್ತದೆ!".
ಈ ಅಭಿವೃದ್ಧಿಯ ಹಾದಿಯಲ್ಲಿ ಹುಟ್ಟಿಕೊಂಡಿರುವ ಸಮಸ್ಯೆಗಳು ಅಷ್ಟಿಷ್ಟಲ್ಲ. ಇವುಗಳಲ್ಲಿ ಹೆಚ್ಚಿನವು ಪಾಶ್ಚಾತ್ಯ ಅಭಿವೃದ್ಧಿ ಮಾದರಿಗಳಿಂದಲೇ ಸೃಷ್ಟಿಯಾದವು. ಎಗ್ಗಿಲ್ಲದ ನಗರೀಕರಣ, ಕೈಗಾರಿಕೀಕರಣದಿಂದಾಗಿ ವಸತಿ ಸಮಸ್ಯೆ, ಪರಿಸರ ಮಾಲಿನ್ಯ, ಕುಡಿಯುವ ನೀರು - ವಿದ್ಯುತ್ ಅಭಾವ, ಸಂಕೀರ್ಣ ಸಾರಿಗೆ ವ್ಯವಸ್ಥೆ, ಬೃಹತ್ ಯೋಜನೆಗಳಿಂದಾಗಿ ಜನರ ಒಕ್ಕಲೆಬ್ಬಿಸುವಿಕೆ..ಹೀಗೆ ಮುಂದುವರೆದು ಪರಿಸರವನ್ನು ಬಗ್ಗುಬಡಿಯುವ ಹಂತಕ್ಕೆ ನಾವು ಹೋದೆವು. ಆದರೆ ಈ ಭೂಮಿಯ ಮೇಲೆ ಮಾನವನಂತೆ ಇನ್ನುಳಿದ ಜೀವಿಗಳೂ ಇವೆಯಲ್ಲ ಎಂಬ ಸಂಗತಿ ಮರೆಯಿತು. ಸತತ ಒತ್ತುವರಿ ಮಾಡಿ ಅವುಗಳ ಮನೆ ಕಸಿದುಕೊಂಡು ಬಂಗ್ಲೆ ಕಟ್ಟಿಕೊಂಡ ನಮ್ಮನ್ನು ಇಂದು ಅವು ತಮ್ಮ ಹಕ್ಕು ಕೇಳಲು ಬರುತ್ತಿವೆ.
ನಿನ್ನೆ ನಮ್ಮ ಮಾಳಮಡ್ಡಿಗೂ ಒಂದು ಪ್ರಾಣಿ ಭೇಟಿ ಮಾಡಿ ತನ್ನ ಹಕ್ಕಿಗಾಗಿ ಹೋರಾಡಿ ತಮ್ಮ ಕರ್ತವ್ಯ ಮರೆತ ಮಾನವರಿಂದ ದುರಂತ ಅಂತ್ಯ ಕಂಡಿತು. Russell's Viper -ಬಳೆವೆಡಕ ಹಾವು ಅದು. ಸಾಮಾನ್ಯವಾಗಿ ನಿಶಾಚರಿ. ಪಾಪ ಬಿಸಿಲಿನ ಕಾವಿಗೆ ನೆಲ ಕಾಯ್ದಿದ್ದರಿಂದ ಅನಿವಾರ್ಯವಾಗಿ ಅಂದು ಮಧ್ಯಾನ್ಹ ತಂಪು ಜಾಗೆ ಹುಡುಕಿ ಹೊರಟ ಅದು ಜನರ ಕೈಗೆ ಸಿಕ್ಕಿತ್ತು. ಮಾನವ ಪ್ರಾಯೋಜಿತ ಜಾಗತಿಕ ತಾಪಮಾನದ ಬಿಸಿ ಹೇಗೆ ಇತರ ಜೀವಿಗಳಿಗೂ ತಟ್ಟುತ್ತಿದ್ದೆ ನೋಡಿ. ಪಾಪ ಜನನಿಬಿಡ ಪ್ರದೇಶದಲ್ಲಿ ಅದು ಕಾಣಸಿಗುತ್ತಿದ್ದಂತೆ ಹುಲ್ಲೆಯ ಮೇಲೆ ಹುಲಿ ಎಗರಿದಂತೆ ಜನ ಎಗರಿ ಹತ್ತಾರು ಏಟಿಗೆ ಕೊಂದೇ ಹಾಕಿದರು. ಸ್ಥಳಕ್ಕೆ ಧಾವಿಸಿದ ಪ್ರೊ. ಗಂಗಾಧರ ಕಲ್ಲೂರ್ ಎಂದಿನಂತೆ ಮರುಗಿ, ಅಲ್ಲಿದ್ದವರನ್ನು ಚದುರಿಸಿ ಕೈಗೆತ್ತಿಕೊಂಡು ರಸ್ತೆಯ ಮಧ್ಯದಲ್ಲಿಯೇ ಪಾಠ ಮಾಡಿದರು. ಮುಂದೆಂದೂ ಅನವಶ್ಯಕವಾಗಿ ಯಾವ ಪ್ರಾಣಿಯನ್ನೂ ಕೊಲ್ಲದಂತೆ ಎಚ್ಚರಿಸಿದರು.
ಬಳೆವೆಡಕ ಹಾವುಗಳು ತನ್ನ ಆಹಾರಗಳಾದ ಇಲಿ-ಕಪ್ಪೆಗಳನ್ನು ಬೆನ್ನಟ್ಟಿ ಸಂಜೆಯ ವೇಳೆ ತುಸು ತಂಪಾದ ವಾತವರಣದಲ್ಲಿ ಬಿಲದಿಂದ ಹೊರಬರುತ್ತದೆ. ಹಗಲು ಹೊತ್ತಿನಲ್ಲಿ ಅತ್ಯಂತ ಆಲಸಿಯಾಗಿ ಮರದ ತುಂಡಿನಂತೆ ಅಲುಗಾಡದೇ ಪೊದೆಗಳ ನೆರಳಿನಲ್ಲಿ ಬಿದ್ದುಕೊಂಡಿರುತ್ತದೆ. ವಿನಾಕಾರಣ ಯಾವ ಪ್ರಾಣಿಯನ್ನೂ ಕಚ್ಚದ ಈ ಬಳೆವೆಡಕ ಸುರುಳಿ ಸುತ್ತಿ ತನ್ನ ತಲೆ ಹುದುಗಿಸಿಕೊಂಡು ಮಲಗುವ ರೀತಿ ಅನನ್ಯ.
ಯಾರದರೂ ಆಕಸ್ಮಿಕವಾಗಿ ತುಳಿದರೆ ತನ್ನ ತಲೆಯನ್ನು ಮೇಲಕ್ಕೆತ್ತಿ ಭಯಂಕರ ಸಪ್ಪಳ ಮಾಡುತ್ತದೆ. ಬಳೆವೆಡಕದ ಸಪ್ಪಳ ಫುಟ್ ಬಾಲ್ ‘ರಬ್ಬರ ಚೀಲ’ದಿಂದ ಗಾಳಿಯನ್ನು ಹೊರದಬ್ಬುವಾಗ ಬರುವ ಸಿಳ್ಳಿನ ಶಬ್ದಕ್ಕೆ ಹೋಲಿಸಬಹುದು. ಕೂಡಲೇ ಕಾಲು ಕಿತ್ತಿದರೆ ಅಪಾಯವಿಲ್ಲ. ತಡ ಮಾಡಿದರೆ ಹಾಗೆ ಶಬ್ದ ಹೊರಡಿಸುತ್ತ ಬಾಯಿಯನ್ನು ಬಹಳ ಅಗಲವಾಗಿ ಹಿಗ್ಗಿಸಿ ಅರ್ಧ ಇಂಚಿನಷ್ಟು ಉದ್ದದ ವಿಷದಂತಗಳನ್ನು ಮುಂದಕ್ಕೆ ಚಾಚಿ ಕಚ್ಚ ಬೇಕಾದ ಜಾಗದ ಮೇಲೆ ಬಿರುಸಾಗಿ ಕುಕ್ಕಿ ಆಳವಾದ ಗಾಯಗಳನ್ನು ಮಾಡುತ್ತದೆ. ಆ ಗಾಯದಲ್ಲಿ ದಂತಗಳನ್ನು ಮಾಂಸಖಂಡಗಳೊಳಗೆ ತೂರಿಸಿ ವಿಷ ಸುರಿಸುತ್ತದೆ. ಈ ಕ್ರಿಯೆ ೩ ಸೆಕೆಂಡುಗಳಲ್ಲಿ ಪೂರ್ಣಗೊಳ್ಳುತ್ತದೆ! ವಿಷದ ಉಗ್ರತೆಯಲ್ಲಿ ಕಾಳಿಂಗ ಸರ್ಪದ ತರುವಾಯು ಎರಡನೇ ಸ್ಥಾನ ಬಳೆವೆಡಕಕ್ಕೆ. ಕಚ್ಚಿದ ೨೪ ಗಂಟೆಗಳಲ್ಲಿ ಸೂಕ್ತ ಚಿಕಿತ್ಸೆ ದೊರಕದಿದ್ದರೆ ಸಾವು ಸಂಭವಿಸಬಹುದು.
ಬಳೆವೆಡಕಕ್ಕೆ ಕೊಳಕು ಮಂಡಲ ಎಂಬ ಹೆಸರೂ ಉಂಟು. Russell's Viper ಕಚ್ಚಿದ ಭಾಗಕ್ಕೆ ಸರಿಯಾದ ಚಿಕಿತ್ಸೆ ದೊರಕದಿದ್ದರೆ ಕೊಳೆಯುತ್ತದೆ ಎನ್ನುತ್ತಾರೆ ತಜ್ಞರು. ವಿಜ್ಞಾನ ಲೋಕಕ್ಕೆ ಈ ಹಾವನ್ನು ೧೭೯೬ ರಲ್ಲಿ ಬೆಳಕಿಗೆ ತಂದವರು Patrik Russell. ಹಾಗಾಗಿ ಈ ಹಾವಿಗೆ ಗೌರವಾರ್ಥ ಆ ತಜ್ಞರ ಹೆಸರಿನಿಂದಲೇ ನಾಮನಿರ್ದೇಶನ ಮಾಡಲಾಗಿದೆ. ಹೃದಾಯಾಕಾರದ ತಲೆ ಇದ್ದು, ತಲೆಯ ಮೇಲೆಲ್ಲ ಹುರುಪೆಗಳಿದ್ದು (Scale), ಬೆನ್ನಿನ ಮೇಲೆ ಉಂಗುರದಂತೆ ಸರಪಳಿಯ ಹಾಗೆ ಮೂರು ಕಪ್ಪು ಗುರುತುಗಳ ಸರಪಳಿ ಎದ್ದು ಕಾಣುತ್ತವೆ. ಹಾಗಾಗಿ ಇದಕ್ಕೆ ‘ಸರಪಳಿ ಮಂಡಲ’ ಎಂದು ಸಹ ಕರೆಯಲಾಗುತ್ತದೆ. ಮಧ್ಯದ ಉಂಗುರುಗಳ ಸಾಲು ಪೂರ್ಣವಿದ್ದು, ಸಾಲಿನ ಆರಂಭದ ಎರಡೂ ಕಡೆ ಅರ್ಧ ಮಾತ್ರ ಉಂಗುರಗಳಿವೆ. ಮೂಗಿನ ಹೊರಳೆಗಳು (Nostrils) ಉಳಿದ ಹಾವುಗಳಿಗಿಂತಲೂ ತುಸು ದೊಡ್ಡವು. ಬಾಲದ ಕೆಳಗಿನ ಫಲಕಗಳು (Subcaudals) ಎರಡಾಗಿ ಒಡೆದು, ಮೇಲೆ ಹಳದಿ, ಹೊಟ್ಟೆಯ ಭಾಗದಲ್ಲಿ ಬಿಳಿಯಾಗಿ ಕಾಣಿಸುತ್ತದೆ. ಈ ತರಹದ ಬಣ್ಣ ಪರಿಸರಕ್ಕೆ ಹೊಂದಿಕೊಂಡು ವೈರಿಗಳ ಕಣ್ಣಿನಿಂದ ಸುಲಭವಾಗಿ ತಪ್ಪಿಸಿಕೊಳ್ಳಲು ಬಳೆವೆಡಕಕ್ಕೆ ಸಹಾಯ ಮಾಡುತ್ತದೆ.
ಭಾರತ, ಭರ್ಮಾ, ಶ್ರೀಲಂಕಾ, ಸುಮಾತ್ರಾ, ಸಯಾಮಾ, ಬ್ರಹ್ಮಪುತ್ರ ಕೊಳ್ಳ ಹಾಗೂ ಭೂತಾನದ ಗುಡ್ಡದಡಿಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿ Russell's Viper ಕಾಣಸಿಗುತ್ತವೆ. ಬಂಡೆಗಳ ಪ್ರದೇಶ, ಹೊಲ ಗದ್ದೆಗಳಲ್ಲಿ ಇವುಗಳ ವಾಸ. ಧಾರವಾಡದ ಕರ್ನಾಟಕ ವಿಜ್ಞಾನ ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದಲ್ಲಿ ಈ ಹಾವಿನ ಕಳೆವರ ಸುಸ್ಥಿತಿಯಲ್ಲಿ ಸಂರಕ್ಷಿಸಿ ಇಟ್ಟಿದ್ದನ್ನು ಕಾಣಬಹುದು. ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸತ್ತ ಸ್ಥಿತಿಯಲ್ಲಿ ದೊರಕಿದ ಬಳೆವೆಡಕಗಳನ್ನು ಸಂರಕ್ಷಿಸಿ ಇಡಲಾಗಿದೆ.
ಹಾವೇ..ಹಾವೇ ಏನೀ ನಿನ್ನಯ ಠಾವೇ?..ಹೆಬ್ಬಾವು (Python) , ಬಳೆವೆಡಕ (Russell's Viper), ನಾಗರಹಾವು (Cobra) ಮತ್ತು ಮೂಷಕ ಹಾವು (Rat Snake) ಹಾವುಗಳ ಚರ್ಮದಿಂದ ಆಕರ್ಷಕವಾದ ವಸ್ತುಗಳು ತಯಾರಾಗುತ್ತವೆ. ನಡುಪಟ್ಟಿ (Belt) , ಸಂಚಿ (Wallet), ಹಣವಿರಿಸುವ ಚೀಲ (Purse), ಕೈ ಚೀಲ (Hand Bag), ಜಂಬದ ಚೀಲ (Vanity Bag), ಬಾಚಣಿಕೆ ಪೆಟ್ಟಿಗೆ (Comb Box), ಸಿಗರೇಟ್ ಪೆಟ್ಟಿಗೆ (Cigarette Box), ತಂಬಾಕು ಚಂಚಿ (Tobacco Purse), ಕ್ರೀಡಾಪಟುಗಳು ಧರಿಸುವ ಜಾಕೀಟು, ಟೊಪ್ಪಿಗೆ, ಕೊರಳಪಟ್ಟಿ (Scarf), ಕೊರಳ ಲಂಗೋಟಿ (Neck Tie), ಚಪ್ಪಲಿ, ಬೂಟುಗಳು, ದೀಪದ ಮುಚ್ಚಳ (Lamp Shade), ಪುಸ್ತಕ ಹೊದಿಕೆ (Book's Cover), ಚಾಕು ಚೀಲ ಮುಂತಾದವುಗಳು ಮುಖ್ಯವಾದವು. ಬ್ರೆಝಿಲ್ ದೇಶದಲ್ಲಿ ಹೊತ್ತಿಗೆಗಳನ್ನು ಹಾವುಗಳ ಚರ್ಮದಿಂದ ಬೈಂಡ್ ಮಾಡಲಾಗುತ್ತದೆ! ಹೆರಿಗೆಯ ನೋವು ಅನುಭವಿಸುತ್ತಿರುವ ತಾಯಿಗೆ ಸೊಂಟದ ಸುತ್ತ ಹಾವಿನ ಚರ್ಮದ ನಡು ಪಟ್ಟಿ ಬಿಗಿದರೆ ಸುಲಭವಾಗಿ ಹೆರಿಗೆಯಾಗುತ್ತದೆ ಎಂಬ ನಂಬಿಕೆ ಯುರೋಪಿನ ದೇಶದಲ್ಲಿ ವ್ಯಾಪಕವಾಗಿದೆ. ಉತ್ತರ ಅಮೇರಿಕೆಯಲ್ಲಿ Rattle Snake ಹಾವಿನ ಚರ್ಮ ಒಣಗಿಸಿ ಪುಡಿ ಮಾಡಿ ಗರ್ಭಪಾತಕ್ಕೆ ಸಹ ಬಳಸುವ ಮನೆಮದ್ದಿದೆ.
ನಿಜವಾಗಿಯೂ ಹಾವುಗಳು ಮನುಷ್ಯನಿಗೆ ಉಪಕಾರಿ. ಕೃಷಿಕನ ಮಿತ್ರ. ಹಾವುಗಳು ಇಲ್ಲದೇ ಹೋಗಿದ್ದರೆ ಇಡಿ ಜಗತ್ತು ಬಹುಶ: ಇಲಿಗಳಿಂದ ತುಂಬಿ ಹೋಗುತ್ತಿತ್ತು. ಕೋಟ್ಯಂತರ ರೂಪಾಯಿ ಬೆಳೆ -ವಸ್ತುಗಳು Simply wolud have gone to dogs! . ೧೯೧೯ ರಲ್ಲಿ Kunhardt ಎಂಬ ವಿಜ್ಞಾನಿ ಕಳೆದ ೨೦ ವರ್ಷಗಳ ಲೆಕ್ಕ ಹಾಕಿ ಹೇಳಿದರು.."ಇಲಿಗಳಿಂದ ೨೦ ವರ್ಷಗಳಲ್ಲಿ ಒಟ್ಟು ೧೨೪೧ ಕೋಟಿ ರೂಪಾಯಿ ನಷ್ಟವಾಗಿದೆ!" ನಮ್ಮ ದೇಶದಲ್ಲಿ ಪ್ರತಿವರ್ಷ ೨೦೦ ದಶಲಕ್ಷ ಮೆಟ್ರಿಕ್ ಟನ್ ಆಹಾರ ಧಾನ್ಯ ಉತ್ಪಾದನೆಯಾಗುತ್ತಿದ್ದು, ಇಲಿಗಳಿಂದಾಗಿ ೬ ದಶಲಕ್ಷ ಟನ್ ಆಹಾರ ಧಾನ್ಯ ನಷ್ಟವಾಗುತ್ತಿದೆ. ೬ ಇಲಿಗಳು ಸೇರಿ ಒಬ್ಬ ಮನುಷ್ಯನ ಆಹಾರ ಕಬಳಿಸಬಲ್ಲವು! ವರ್ಷವೊಂದಕ್ಕೆ ಒಂದು ಇಲಿ ಒಂದು ಕ್ವಿಂಟಾಲ್ ಧಾನ್ಯ ಹಾಳುಮಾಡುತ್ತದೆ. ಸಂತಾನೋತ್ಪತ್ತಿಯಲ್ಲೂ ಇಲಿಗಳು ಮುಂದಿದ್ದು ಒಂದು ಜೊತೆ ಇಲಿ ದಂಪತಿ ವರ್ಷವೊಂದಕ್ಕೆ ೮೦೦ ಮರಿಗಳನ್ನು ಹಾಗೂ ಮೂರು ವರ್ಷಗಳಲ್ಲಿ ೩೫ ಸಾವಿರದಷ್ಟು ತನ್ನ ಸಂತಾನ ಹೆಚ್ಚಿಸಬಲ್ಲವು! ದೇಶದಲ್ಲಿ ಸುಮಾರು ೬೦೦ ಕೋಟಿ ಇಲಿ ಇದ್ದಿರಬಹುದು ಎಂದು ಅಂದಾಜಿಸಿದ್ದಾರೆ ಪ್ರಾಣಿ ತಜ್ಞರು. ಕೆಲ ನೀರಿನ ಹಾವುಗಳಂತೂ ಮಲೇರಿಯಾ ರೋಗಕ್ಕೆ ಕಾರಣವಾಗಬಲ್ಲ ಸೊಳ್ಳೆಗಳ ಮೊಟ್ಟೆ-ಲಾರ್ವಾ ಸಹ ತಿಂದು ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತವೆ. ನಿಮಗೆ ಆಶ್ಚರ್ಯವೆನಿಸಬಹುದು ಆರ್ಕಟಿಕ್, ನ್ಯೂಝಿಲೆಂಡ್ ಹಾಗೂ ಐರ್ಲ್ಯಾಂಡ್ ದೇಶಗಳಲ್ಲಿ ಹಾವುಗಳೇ ಇಲ್ಲ!
ಸದ್ಯದಲ್ಲಿಯೇ, ‘ಭಾರತದಲ್ಲೂ ಹಾವುಗಳು ಉಳಿದಿಲ್ಲ’ ಎಂದು ಘೋಷಿಸಿ, ಹುಲಿಯ ಪಾದ, ಲದ್ದಿ ಹುಡುಕಿ ಗಣತಿ ಮಾಡಿದಂತೆ ಹಾವುಗಳ ಗಣತಿಗೆ ಇಳಿಯುವ ಕಾಲ ದೂರವಿಲ್ಲ.