ನಾ ಹೀಗೇಕೆ..

ನಾ ಹೀಗೇಕೆ..

ಹೌದು ಈ ಪ್ರಶ್ನೆ ಕಾಡುತ್ತಿದೆ. ಬಹುಶಃ ಅನೇಕರಿಗೂ ಈ ಪ್ರಶ್ನೆ ಕಾಡುತ್ತಿರಬಹುದು.

ಸ್ವಲ್ಪ ಆರಾಮಾಗಿ ಉತ್ತರ ಹುಡುಕುವ. ಈಗ ನಾವು ನೀವು ವ್ಯವಸ್ಥೆ ಅಥವಾ

ಸರಕಾರವನ್ನು ಸುಲಭವಾಗಿ ಟೀಕಿಸುತ್ತೇವೆ.ನಮ್ಮ ದೇಶದಲ್ಲಿ ಅಭಿವ್ಯಕ್ತಿಸ್ವಾತಂತ್ರ್ಯ ಇನ್ನೂ ಇದೆ

ಹೀಗಾಗಿ ನಾವು ಪೆನ್ನಿಂದ,ಕೀಲಿಮಣೆ ಕುಟ್ಟುವುದರಿಂದ ನಮ್ಮ ಕಹಿಭಾವನೆಗಳನ್ನು

ಮುಕ್ತವಾಗಿ ಕಾರುತ್ತೇವೆ. ಅದು ನಮ್ಮ ಹಕ್ಕು ನಿಜ. ಅದನ್ನು ನಾವು ಚಲಾಯಿಸುತ್ತೇವೆ ಕೂಡ.

ಅನೇಕ ರೀತಿಯಲ್ಲಿ ಅಂದರೆ ಫೇಸಬುಕ್, ಟ್ವೀಟರ್ ಹಿಡಿದು ವಾಚಕರ ವಾಣಿವರೆಗೂ ನಮ್ಮ

ಆಕ್ರೋಶ ಹರಿಯುತ್ತದೆ. ನಮ್ಮ ಈ ಕಾರುವಿಕೆಯಿಂದ ಏನಾದರೂ ಬದಲಾಗಿದೆಯೇ..

ನಮ್ಮ ಬೀದಿಯಲ್ಲಿ ಹಗಲು ದೀಪ ಉರಿಯುವುದು ಬಂದಾಗಿದೆಯೇ..ನಮ್ಮ ನಲ್ಲಿಯಲ್ಲಿ ನೀರು

ನಿರಂತರ ಹರಿಯುತ್ತಿದೆಯೇ ಅಥವಾ ಉಗಿಸಿಕೊಂಡೂ ಕುರ್ಚಿಮೇಲೆ ಕೂಡುವ ರಾಜಕಾರಣಿ

ಒಂದರೆಕ್ಷಣ ವಿಚಾರ ಮಾಡಿದ್ದಾನೆಯೇ..? ಈ ಪ್ರಶ್ನೆಗಳಿಗೆ ಪರಿಹಾರ ಸಿಕ್ಕಿಲ್ಲ ಯಾಕೆಂದರೆ

ಇವು ನಾವು ಈಗಿರುವ ಸದ್ಯದ ಪರಿಸ್ಥಿತಿಯ ದ್ಯೋತಕ ವಾಗಿವೆ. ಹಾಗೂ ಇವುಗಳಿಗೆ ನಾವು

ಚೆನ್ನಾಗಿ ಒಗ್ಗಿಕೊಂಡಿರುವೆವು..ನಮಗೂ ಗೊತ್ತು ಇವುಗಳಿಂದ ಬಿಡುಗಡೆ ಸಾಧ್ಯವಿಲ್ಲ ಅಂತ.

ಆದರೇ ಕಾರುವುದು ಇನ್ನೂ ನಿಂತಿಲ್ಲ ..ಈಗ ಅದು ಹೊಸ ಆಯಾಮ ಪಡೆದುಕೊಂಡಿದೆ

ನಮಗೆ ನಮ್ಮ ದನಿ ಕೇಳಿಸಲು ಹೊಸ ಮುಖವಾಡಗಳು ಬಂದಿವೆ...ಅವರನ್ನು ನಾವು ನಮ್ಮನ್ನು

ಉದ್ಧಾರ ಮಾಡಲೆಂದೆ ಬಂದ ಅವತಾರಪುರುಷ ರನ್ನಾಗಿ ನೋಡುತ್ತಿದ್ದೇವೆ..ಜೈಕಾರ ಹೇಳುತ್ತಿದ್ದೇವೆ

ಅವರು ನಮ್ಮ ಸಲುವಾಗಿ ಉಪವಾಸ ಕೂತಿದ್ದಾರೆ.ಮರಗುತ್ತಿದ್ದಾರೆ ಕೂಡ.

 

ಹೌದು ಅಣ್ಣಾಹಜಾರೆ ಇಂದು ಅನೇಕರ ಕಣ್ಣಲ್ಲಿ ಹಿರೋ. ಗೂಗಲ್ ಕ್ಲಿಕ್ನಲ್ಲಿ ಅವರು ಕತ್ರೀನಾಗಿಂತ

ಹಿಂದಿದ್ದರೂ ಅವರ ಹೆಸರು ಈಗ ಎಲ್ಲರ ನಾಲಿಗೆಮೇಲೆ ಇದೆ.ಸರಕಾರಕ್ಕೂ ನಡುಕವಿದೆ..

ರಾವಲ್ಗಾವ್ ಸಿದ್ದಿಯಿಂದ ದೆಹಲಿವರೆಗೆ ಅಣ್ಣಾ ಪಯಣಿಸಿದ್ದಾಗಿದೆ.ಮೊನ್ನೆ ಸಿಎನೆನ್-ಐಬಿನ್ ಅವರು

ಪ್ರಶಸ್ತಿ ಸಹ ನೀಡಿ ಗೌರವಿಸಿದ್ದಾರೆ. ಜನಲೋಕಪಾಲ್ ದಲ್ಲಿ ತಮ್ಮ ಅಂಶಗಳನ್ನು ಸೇರಿಸಿಕೊಳ್ಳದಿದ್ದಲ್ಲಿ

ಜೇಲ್ ಭರೋ ಸುರುಮಾಡುವುದಾಗಿ ಅವರು ಕರೆ ನೀಡಿದ್ದಾರೆ.ಅವರ ಮಾತಿನಲ್ಲಿ ತೂಕವಿದೆ ಜನ

ಏನೋ ಪವಾಡದ ನಿರೀಕ್ಷೆಯಲ್ಲಿದ್ದಾರೆ.ಜನಲೋಕಪಾಲ್ ಜಾರಿಯಿಂದ ಭ್ರಷ್ಟಾಚಾರ ನಾಶವಾಗಲಿದೆಯೇ

ಈ ಪ್ರಶ್ನೆಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಕೆಲವರಾದರೂ ಯೋಚಿಸುತ್ತಿದ್ದಾರೆಯೇ ಅಥವ ಕೆಲ ಬುದ್ಧಿಜೀವಿಗಳು

ಹೇಳುವ ಹ್ಆಗೆ "ಸಮೂಹ ಸನ್ನಿ"ಯ ಪ್ರಭಾವಳಿಯ ಶಿಕಾರಿಯಾಗುತ್ತಿದ್ದೇವೆಯೇ..? ಹೌದು ಈ ಪ್ರಶ್ನೆ

ನನ್ನನ್ನು ಕಾಡುತ್ತಿದೆ. ಈ ಚಳುವಳಿಗಳು ಬೇಕಾಗಿದ್ದವು ಯಾಕ ಅಂದರ ನಾವು ಆರಿಸಿ ಕಳಿಸಿದ, ನಮ್ಮ ನೆಲ

ಜಲ,ಪ್ರಾಣಗಳ ರಕ್ಷಣೆಯ ಜವಾಬ್ದಾರಿ ಹೊತ್ತು ವಿಧಿವಿಧಾನ ತಗೊಂಡ ರಾಜಕಾರಣಿಗಳು ತಮ್ಮ ಹೆಸರಲ್ಲಿ,

ಮಕ್ಕಳ ಹೆಸರಲ್ಲಿ ಆಸ್ತಿ ಮಾಡಕೊಂಡ್ರು..ನಮ್ಮ ದುಡ್ಡಿನ್ಯಾಗ ಮಾರಿಷಸ್ ಗೆ ಕುಟುಂಬ ಸಮೇತ ಪ್ರವಾಸ ಮಾಡಿ

ಬಂದ್ರು ಹಂಗ ಸ್ವಾಮಿಗೋಳಿಗೆ ದಕ್ಷಿಣಿ ಕೊಟ್ಟು ಅಡ್ಡೂ ಬಿದ್ರು..!! ನಮಗ ಇದೆಲ್ಲ ನೋಡಿ ರೋಸಿ ಹೋಗಿತ್ತು.

ಒಂದು ಬದಲಾವಣಿ ಬೇಕಾಗಿತ್ತು.ಇಂಥಾ ಟೈಮದಾಗ ಅಣ್ಣಾ, ರಾಮದೇವ್, ಬೇಡಿ ಇವರು ಅವತಾರ ಪುರುಷರಾಗಿ

ಕಂಡ್ರು. ಅವರ ಹಿಂದ ಹೊರಟೇವಿ ದಡಾ ಮುಟ್ಟತೇವೋ ಇಲ್ಲೋ ಗೊತ್ತಿಲ್ಲ. ಆದ್ರ ಈ ದೋಣಿಯಾನದಾಗ

ನನ್ನಂಥ ಸಿನಿಕರೂ ಸೇರಿಕೊಂಡಾರ. ನನಗ ಹಲವಾರು ಪ್ರಶ್ನೆಗಳಿವೆ..ಉತ್ತರ ಹುಡುಕಿ ಸೋತಿರುವೆ..

 

೧) ಅಣ್ಣಾ ಚಳುವಳಿಗೆ ಈಗ ವಿರೋಧ ಪಕ್ಷದ ಬೆಂಬಲ ಸಿಕ್ಕಿದೆ. ಭಾಜಪ, ಅಥವಾ ಎಡಪಂಥೀಯರು ತಾವು

ಪ್ರಾಮಾಣಿಕರು..ಎಂದು ಎದೆ ತಟ್ಟಿ ಹೇಳಿಕೊಳ್ಳಬಲ್ಲರೇ..? ಅವರು ಆಳಿದ/ಆಳುತ್ತಿರುವ ರಾಜ್ಯದಲ್ಲಿ

ಲಂಚಗುಳಿತನ ಇರಲಿಲ್ಲವೇ,,?ಹಾಗಿದ್ದರೆ ಯಾವ ನೈತಿಕತೆ ಮೇಲೆ ಅವರು ಅಣ್ಣಾ ಜೊತೆ ವೇದಿಕೆ ಹಂಚಿಕೊಂಡ್ರು

ಸ್ವತಃ ಅಣ್ಣಾ ಅವರಿಗೆ ಈ ದ್ವಂದ್ವ ಕಾಡಲಿಲ್ಲವೇ...?

೨) ಅಣ್ಣಾ ಉಪವಾಸ ಮಾಡುತ್ತಾರೆ.ಜನ ಸ್ವಪ್ರೇರಣೆಯಿಂದ ಸೇರುತ್ತಾರೆ. ಹಾಡು,ಭಜನೆ ಇತ್ಯಾದಿ ನಡೆಯುತ್ತವೆ. ಆಣ್ಣಾ

ಕುಳಿತುಕೊಳ್ಳುವ ಪೆಂಡಾಲು, ಜನರ ಉಸ್ತುವಾರಿ ಇವುಗಳಿಗೆಲ್ಲ ದುಡ್ಡು ಬೇಕು. ಆ ದುಡ್ಡು ಬಂದ ಮೂಲಯಾವುದು

ಅದೇನು ಚಂದಾಹಣವೇ ಅಥವಾ ದಾನಿಯೊಬ್ಬ ಕೊಟ್ಟ ಬಳುವಳಿಯೇ , ಒಂದು ವೇಳೆ ದಾನಿ ಕೊಟ್ಟಿದ್ದರೆ ಅವನ

ವಿವರಗಳೇನು ಅಥವ ಆ ದುಡ್ಡು ತೆರಿಗೆ ತಪ್ಪಿಸಿ ಇಲ್ಲಿ ಸುರಿದದ್ದೋ?


ಹೌದು ಮೇಲಿನ ಪ್ರಶ್ನೆ ನೋಡಿ ನನ್ನ ಮೊಸರಿನಲ್ಲಿ ಕಲ್ಲುಹುಡುಕುವ ಚಾಳಿಯವ ಅಂತ ನೀವು ಕರೆಯಬಹುದು.

ಆದರೆ ಒಂದು ಜನಾಂದೋಲನ ಯಶಸ್ಸು ಕಾಣಬೇಕು ಇದು ನನ್ನ ಹಂಬಲ ಕೂಡ ಆದರೆ ಜೊತೆಗೆ ಮೇಲಿನ

ಪ್ರಶ್ನೆಗಳಿಗೆ ಉತ್ತರ ಸಿಗಬೇಕು ಇದು ಬಯಕೆ..!