ನಿಮಗೊಂದು ಪ್ರೀತಿ ಪೂರ್ವಕ ಆಹ್ವಾನ...

ನಿಮಗೊಂದು ಪ್ರೀತಿ ಪೂರ್ವಕ ಆಹ್ವಾನ...

ಇದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ. ಯುದ್ಧ ನಿಲ್ಲಲೇಬೇಕು ಮತ್ತು ನಿಲ್ಲಿಸಲೇಬೇಕು. ಈ ಕ್ಷಣದ ಮಾಹಿತಿಯ ಆಧಾರದ ಮೇಲೆ ಯೋಚಿಸಿದರೆ ರಷ್ಯಾ ಉಕ್ರೇನ್ ಸಮರ ಮತ್ತಷ್ಟು ವ್ಯಾಪಕತೆ ಪಡೆಯಬಹುದು, ಮೂರನೆಯ ಮಹಾಯುದ್ಧದ ಸಾಧ್ಯತೆ ಹೆಚ್ಚು ಮತ್ತು ಯಾವುದೇ ಕ್ಷಣದಲ್ಲಿ ಅಣು ಬಾಂಬ್ ಅಥವಾ ರಾಸಾಯನಿಕ ಅಸ್ತ್ರಗಳ ಬಳಕೆ ಆಗಬಹುದು. ಈಗಲೂ ನಾವೆಲ್ಲ ಮೌನವಹಿಸಿದರೆ ಭವಿಷ್ಯದಲ್ಲಿ ತುಂಬಾ ಕಷ್ಟವಾಗಬಹುದು. ಒಮ್ಮೆ ಯೋಚಿಸಿ ನೋಡಿ...

ಎಷ್ಟೊಂದು ಮಕ್ಕಳು ರೋಗಿಗಳು ಹಿರಿಯರು ಮೂಕ ಪ್ರಾಣಿಗಳು ಈಗ ನಡೆಯುತ್ತಿರುವ ಯುದ್ಧದಿಂದ ಅನುಭವಿಸುತ್ತಿರಬಹುದಾದ ಕಷ್ಟಗಳನ್ನು. ಯುದ್ದ ಭೂಮಿಯಿಂದ ಸಾಕಷ್ಟು ದೂರ ಇರುವ  ನಮ್ಮ ದೇಶದಲ್ಲೇ ‌ಅದರ ಪರೋಕ್ಷ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆ. ಇದು ಈ ಕ್ಷಣದ ಫಲಿತಾಂಶ. ಮುಂದೆ ಇನ್ನಷ್ಟು ಭೀಕರ ದಿನಗಳು ಬರಬಹುದು.

ಅದು ಆಗಬಾರದು ಎಂಬ ಅಭಿಪ್ರಾಯ ನಮ್ಮದಾಗಿದ್ದರೆ, ನಮ್ಮ ಎಲ್ಲಾ ಸಂಪರ್ಕ ಕ್ರಾಂತಿಯ ಮಾಧ್ಯಮ ಮತ್ತು ತಂತ್ರಜ್ಞಾನವನ್ನು ಉಪಯೋಗಿಸಿಕೊಂಡು ವಿಶ್ವದ ಎಲ್ಲಾ ಶಾಂತಿ ಪ್ರಿಯ ಮನಸ್ಸುಗಳು ಶಾಂತಿಯ ಪರವಾಗಿ ಧ್ವನಿ ಎತ್ತುವಂತೆ ಮಾಡಬೇಕು. ಬಹುಮುಖ್ಯವಾಗಿ ಎಲ್ಲಾ ರೀತಿಯ ಪತ್ರಕರ್ತರು, ಎಲ್ಲಾ ಧರ್ಮಗಳ ಧರ್ಮಾಧಿಕಾರಿಗಳು, ಎಲ್ಲಾ ಶಿಕ್ಷಕರು, ವೈದ್ಯರು, ಅಧಿಕಾರಿಗಳು, ಜನ ಪ್ರತಿನಿಧಿಗಳು, ಎಲ್ಲಾ ರೀತಿಯ ಸಂಘಟನೆಗಳ ಹೋರಾಟಗಾರರು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ಒಂದು ಬೃಹತ್ ಅಭಿಯಾನ ಪ್ರಾರಂಭಿಸಿದರೆ ಖಂಡಿತ ಶಾಂತಿಯ ಪರವಾಗಿ ಒತ್ತಡ ಹೆಚ್ಚುತ್ತದೆ. ನಮ್ಮ ಆಶಯ ‌ಇಷ್ಟೇ...

ಸಮಸ್ಯೆ ಉದ್ಭವವಾಗಿದೆ. ಕೆಲವು ದೇಶಗಳ ಭದ್ರತೆಗೆ ಅಪಾಯ ಇರಲೂಬಹುದು. ಕೆಲವು ದೇಶಗಳು ತಮ್ಮ ಲಾಭಕ್ಕಾಗಿ ಈ ಯುದ್ದವನ್ನು ಪ್ರೋತ್ಸಾಹಿಸುತ್ತಲೂ ಇರಬಹುದು. ಕಾರಣಗಳು ಹಲವಾರು. ಆದರೆ ಮುಖ್ಯ ವಿಷಯ ಇದರಿಂದಾಗಿ ಭೂಮಿ ಮತ್ತು ಜೀವ ಸಂಕುಲಕ್ಕೆ ಒದಗಬಹುದಾದ ಅಪಾಯಕ್ಕೆ ಯಾರು ಹೊಣೆ. ಯಾರೋ ಕೆಲವರ ಯುದ್ದ ದಾಹಕ್ಕೆ ಇಡೀ ವಿಶ್ವವನ್ನು ತೊಂದರೆಗೆ ಸಿಲುಕಿಸಬೇಕೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಇಲ್ಲವೇ. ಯುದ್ದದಿಂದ ಇಡೀ ಜೀವ ಸಂಕುಲವನ್ನೇ ಅಪಾಯಕ್ಕೆ ಸಿಲುಕಿಸುವುದು ಯಾವ ನ್ಯಾಯ?

ಹಾಗಾದರೆ ಈ ಒಂದು ವಿವಾದವನ್ನು ಬಗೆಹರಿಸಲು ವಿಶ್ವ ಸಂಸ್ಥೆ, ಅಂತರಾಷ್ಟ್ರೀಯ ನ್ಯಾಯಾಲಯವೂ ಸೇರಿ ಯಾರಿಗೂ ಸಾಧ್ಯವಿಲ್ಲವೇ ? ಯಾವ ದೇಶದ ಮಧ್ಯಸ್ಥಿಕೆಗೂ ಇದನ್ನು ಪರಿಹರಿಸಲು ‌ಆಗುವುದಿಲ್ಲವೇ ? ಅಷ್ಟೊಂದು ಹಠ ಕೋಪ‌ ದ್ವೇಷ ಅಸೂಯೆ ಭಂಡತನ ಈ‌ ಯುದ್ದೋನ್ಮಾದಿ ನಾಯಕರಲ್ಲಿದೆಯೇ ? ಹೌದು ಎಂದಾದರೆ ಈಗ ಶ್ರೀಸಾಮಾನ್ಯರಾದ ನಮ್ಮ ಧ್ವನಿ ಇಲ್ಲಿ ಅತ್ಯಂತ ಮಹತ್ವದ್ದಾಗುತ್ತದೆ. ಅಳಿಲು ಸೇವೆಯ ರೀತಿ ನಾವುಗಳು ಕನಿಷ್ಠ ಒಂದೊಂದು ಅಳಿಲಾಗಿ ಒಂದು ಸಣ್ಣ ಪ್ರಯತ್ನ ಪ್ರಾರಂಭಿಸಿದರೆ ಮುಂದೆ ಅದು ಯುದ್ದ ನಿಲ್ಲುವವರೆಗೂ ಮುಂದುವರಿಯಬಹುದು ಎಂಬ ಆಶಯದಿಂದ…

ಇಂದು 9/3/2022 ಬುಧವಾರ ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ಯುದ್ದ ನಿಲ್ಲಲಿ ಶಾಂತಿ ನೆಲೆಸಲಿ ಎಂಬ ಉದ್ದೇಶದಿಂದ " ಉಪವಾಸ ಸತ್ಯಾಗ್ರಹ " ಹಮ್ಮಿಕೊಳ್ಳಲಾಗಿದೆ. ದಯವಿಟ್ಟು ತಾವುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಈ ಮೂಲಕ ನಿಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ.

ಈ ರೀತಿಯ ಕಾರ್ಯಕ್ರಮಗಳು ಇತರ ನಗರಗಳು, ರಾಜ್ಯಗಳು, ದೇಶಗಳಲ್ಲಿಯೂ ನಡೆಯುವಂತೆ ಪ್ರೇರೇಪಿಸುವ ಆ ಮೂಲಕ ಯುದ್ದ ವಿರೋಧಿ ಭಾವನೆಗಳನ್ನು ವಿಶ್ವದಾದ್ಯಂತ ಜಾಗೃತ ಗೊಳಿಸಿ ಅಂತರಾಷ್ಟ್ರೀಯ ಒತ್ತಡ ಹೆಚ್ಚುವಂತೆ ಮಾಡುವ ಗುರಿ ಹೊಂದಿಲಾಗಿದೆ. ನಿಮ್ಮ ಆಗಮನದ ನಿರೀಕ್ಷೆಯಲ್ಲಿ,..

( ಈ ಕಾರ್ಯಕ್ರಮಕ್ಕೆ ಪೋಲೀಸರ ಅನುಮತಿ ಪಡೆಯಲಾಗಿದೆ )

ವಿವೇಕಾನಂದ ಹೆಚ್.ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ