ನಿಮ್ಮ ಜೀವನ ನಿಮ್ಮ ಕೈಯಲ್ಲಿದೆಯೇ?

ನಿಮ್ಮ ಜೀವನ ನಿಮ್ಮ ಕೈಯಲ್ಲಿದೆಯೇ?

ಪುಸ್ತಕದ ಲೇಖಕ/ಕವಿಯ ಹೆಸರು
ಜಿಡ್ಡು ಕೃಷ್ಣಮೂರ್ತಿ
ಪ್ರಕಾಶಕರು
ವಸಂತ ಪ್ರಕಾಶನ, ಜಯನಗರ, ಬೆಂಗಳೂರು.
ಪುಸ್ತಕದ ಬೆಲೆ
ರೂ.200.00, ಮುದ್ರಣ: 2022

ಮೇಧಾವಿ ಜಿಡ್ಡು ಕೃಷ್ಣಮೂರ್ತಿ ಚಿಂತಕರಾಗಿ, ಉಪನ್ಯಾಸಕರಾಗಿ, ಲೇಖಕರಾಗಿ, ಮಾರ್ಗದರ್ಶಿಯಾಗಿ ಇಡೀ ಜಗತ್ತಿನ ಅಸಂಖ್ಯಾತ ಚಿಕಿತ್ಸಕ ಬುದ್ಧಿಜೀವಿಗಳಿಗೆಲ್ಲಾ ಪರಮಗುರು ಎನಿಸಿದ್ದಾರೆ. ಅವರು ಆಂಧ್ರಪ್ರದೇಶದ ಮದನಪಲ್ಲಿಯಲ್ಲಿ 1895 ಮೇ 11 ಜನಿಸಿದರು. 1909ರ ವರ್ಷದಲ್ಲಿ ಕೃಷ್ಣಮೂರ್ತಿಯವರನ್ನು ಬೋಧಿಸತ್ವ ಅಂತಃಕರಣದ ಮೈತ್ರೇಯ ಅವತಾರಿ - ವಿಶ್ವಗುರು ಎಂದು ಪ್ರಚಾರ ನೀಡಲಾಯಿತು. 1929ರಲ್ಲಿ ಕೃಷ್ಣಮೂರ್ತಿಯವರು ತಾವು ನೇತೃತ್ವ ವಹಿಸಿದ್ದ ‘ಆರ್ಡರ್ ಆಫ್ ದಿ ಸ್ಟಾರ್ ಇನ್ ಈಸ್ಟ್’ ಸಂಘಟನೆಯನ್ನು ಯಾವ ಮುಲಾಜೂ ಇಲ್ಲದೆ ತೊರೆದ ಧೀಮಂತರೆನಿಸಿಕೊಂಡರು.

ಈ ಕೃತಿ ಜೆ ಕೃಷ್ಣಮೂರ್ತಿ ಅವರ ವಚನ ಸಂಕಲನ, ಪ್ರಸ್ತುತ ಕೃತಿಯ ಮಹತ್ವ ವಿಷಯಸೂಚಿ ಹಂಚಿಕೆ ಆಗಿದೆ. ಜಿಡ್ಡು ಕೃಷ್ಣಮೂರ್ತಿ (1895-1986) ಭಾರತೀಯರಾಗಿದ್ದು, ಇಂಗ್ಲೆಂಡಿನಲ್ಲಿ ವಿದ್ಯಾಭ್ಯಾಸ ಮಾಡಿ ಜಗತ್ತಿನೆಲ್ಲೆಡೆ ಉಪನ್ಯಾಸಗಳನ್ನು ನೀಡಿದ್ದಾರೆ. ಅವರು ಯಾವುದೇ ಜಾತಿ, ರಾಷ್ಟ್ರೀಯತೆ ಅಥವಾ ಧರ್ಮದ ಜತೆ ತಮ್ಮನ್ನು ಗುರುತಿಸಿಕೊಂಡವರಲ್ಲ ಮತ್ತು ಯಾವುದೇ ಸಂಪ್ರದಾಯಕ್ಕೆ ಗಂಟುಬಿದ್ದವರಲ್ಲ. ಅವರ ಬೋಧನೆಗಳು 20,000,000 ಪದಗಳನ್ನು ಮೀರಿದ್ದು 75 ಕ್ಕೂ ಹೆಚ್ಚು ಗ್ರಂಥಗಳ ರೂಪದಲ್ಲಿ ಪ್ರಕಟವಾಗಿವೆ; ಅಲ್ಲದೆ ಅವರ ಬೋಧನೆಗಳು 700 ಧ್ವನಿಸುರುಳಿಗಳ 1200 ವಿಡಿಯೊಗಳ ರೂಪದಲ್ಲಿ ಲಭ್ಯ. ಇಪ್ಪತ್ತೆರಡು ಭಾಷೆಗಳಲ್ಲಿ ಮುದ್ರಿತವಾದ ಅವರ ಗ್ರಂಥಗಳ 4,000,000 ಪ್ರತಿಗಳು ಮಾರಾಟವಾಗಿವೆ. ದಲೈ ಲಾಮಾ ಮತ್ತು ಮದರ್ ಥೆರೆಸಾ ಅವರ ಜತೆಗೆ ಕೃಷ್ಣಮೂರ್ತಿ ಅವರನ್ನು ಟೈಮ್' ಮ್ಯಾಗಜಿನ್ ಇಪ್ಪತ್ತನೆಯ ಶತಮಾನದ ಐವರು ಸಂತರಲ್ಲಿ ಒಬ್ಬರೆಂದು ಘೋಷಿಸಿದೆ. ಅರುವತ್ತೈದು ವರ್ಷಗಳ ಕಾಲ ಅವರು ಜಗತ್ತಿನ ವಿವಿಧ ಭಾಗಗಳಲ್ಲಿ ಸಂಚರಿಸಿ ತಮ್ಮ ಜೀವಿತದ ಕೊನೆಗಾಲದ ತನಕ ಅಂದರೆ 90ರ ಪ್ರಾಯದವರೆಗೆ ಬೃಹತ್ ಸಭೆಗಳನ್ನು ಉದ್ದೇಶಿಸಿ ಸತತವಾಗಿ ಮಾತನಾಡಿದ್ದಾರೆ. ತನ್ನದೂ ಸೇರಿದಂತೆ ಎಲ್ಲ ಬಗೆಯ ಆಧ್ಯಾತ್ಮಿಕ ಹಾಗೂ ಮಾನಸಿಕ ಅಧಿಕಾರ ನಿರಾಕರಣವು ಅವರ ಬೋಧನೆಯ ಮೂಲತತ್ತ್ವ, ಮನುಷ್ಯ ಸ್ವಜ್ಞಾನದ ಮೂಲಕ ಭಯ, ಅನುಬಂಧನ, ಅಧಿಕಾರ ಮತ್ತು ಅಂಧಶ್ರದ್ಧೆಗಳಿಂದ ಮುಕ್ತನಾಗಬೇಕು ಎಂದು ಅವರು ಹೇಳಿದರು. ಇದರಿಂದ ವ್ಯವಸ್ಥೆಯ ಹಾಗೂ ನಿಜವಾದ ಮಾನಸಿಕ ಬದಲಾವಣೆ ಉಂಟಾಗುತ್ತದೆ ಎಂದು ಅವರು ಸೂಚಿಸಿದರು ಎಂದು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ. ಸುಮಾರು 200 ಪುಟಗಳ ಈ ಪುಸ್ತಕವನ್ನು ಓದಿದರೆ ನಿಮಗೆ ಹಲವಾರು ಆಸಕ್ತಿ ಕೆರಳಿಸುವ ಮಾಹಿತಿಗಳು ಸಿಗಬಹುದು.

-ಸಂತೋಷ್ ಕುಮಾರ್, ಸುರತ್ಕಲ್