ನಿರ್ಧಾರ - ಸಣ್ಣ ಕಥೆ
ಮನೆಯಿಂದ ಹೊರಹೋಗುವಿರಾ? ಅಲ್ಲ ನಾನೇ ಹೊರಹಾಕಲಾ? ಬೆಳೆದು ನಿಂತ ಮಗನ ಪ್ರಶ್ನೆಗೆ ತಬ್ಬಿಬ್ಬಾದರು ರಾಯರು. ಈ ಪ್ರಾಯಸಂದ ಕಾಲದಲ್ಲಿ ಎಲ್ಲಿಗೆ ಹೋಗಲಿ? ಎಂದು ಚಿಂತಿಸಿದರು. ಆಗಾಗ ಕಾಡುವ ಕೆಮ್ಮು ಸೊಸೆ ರಮ್ಯಳಿಗೆ ಅಸಹ್ಯವಾಗುತ್ತಿತ್ತು. ರಾಯರ ಸ್ಥಿತಿ ಅಯೋಮಯವಾಗಿತ್ತು. ತೋಟ, ಮನೆ, ಆಸ್ತಿ ಎಂದು ಕಷ್ಟಪಟ್ಟು ಬೆವರಿಳಿಸಿ ದುಡಿದು ಹಣ್ಣಾದವರು ರಾಯರು. ಪತ್ನಿಯನ್ನು ಕಳಕೊಂಡು ಮೊದಲೇ ನೊಂದಿದ್ದರು. ಓರ್ವನೇ ಮಗನೆಂದು ಮುದ್ದು ಮಾಡಿದ್ದಕ್ಕೆ ತಕ್ಕ ಉಡುಗೊರೆ ನೀಡಿದನೆಂದು ಮನದಲ್ಲೇ ಕೊರಗಿದರು. ಯಾವ ಪ್ರತಿಫಲ ಅಪೇಕ್ಷೆಯಿಂದಲೂ ಕೆಲಸ ಮಾಡಿದ್ದಲ್ಲ, ಕೇವಲ ಕರ್ತವ್ಯ ಮಾಡಿದೆ ಎಂದೆಣಿಸಿದವರನ್ನು ನಿರ್ಧರಿಸಿದಂತೆ ವೃದ್ಧಾಶ್ರಮ ಕೈಬೀಸಿ ಸ್ವಾಗತಿಸಿತು.
-ರತ್ನಾ ಕೆ.ಭಟ್, ತಲಂಜೇರಿ
ಚಿತ್ರ ಕೃಪೆ: ಇಂಟರ್ನೆಟ್ ತಾಣ
- Log in to post comments