ನೀವು ಕೇಳಿರದ ರಾಜಾರಾಮ್ ಮೋಹನ್ ರಾಯ್

ನೀವು ಕೇಳಿರದ ರಾಜಾರಾಮ್ ಮೋಹನ್ ರಾಯ್

ಭಾರತದ ಇತಿಹಾಸದ ಅದೆಷ್ಟೋ ಘಟನೆಗಳು ಇಂದಿಗೂ ಬಹಿರಂಗವಾಗದೆ ಹಾಗೆಯೇ ಉಳಿದಿವೆ. ಜಾತ್ಯತೀತತೆಯ‌ ಹೆಸರಿನಲ್ಲಿ ಅದೆಷ್ಟೋ ಸತ್ಯಗಳನ್ನು ಸುಳ್ಳುಗಳೆಂದು ಹಾಗೂ ಸುಳ್ಳುಗಳನ್ನು ಸತ್ಯಗಳೆಂದು ಬಿಂಬಿಸಿ, ಜನರಿಂದ ಸತ್ಯತೆಯನ್ನು ಇಂದಿನವರೆಗೂ ಅಡಗಿಸುತ್ತಲೇ ಬಂದಿದ್ದಾರೆ ಈ ಜಾತ್ಯಾತೀತವಾದಿಗಳು. ಈ ಅಡಗಿಸಿಟ್ಟ ಪಟ್ಟಿಯಲ್ಲಿ ರಾಜಾರಾಮ್ ಮೋಹನ್ ರಾಯ್ ಅವರ ಬದುಕಿನ ಚಿತ್ರಣವೂ ಸೇರಿದೆ. 

ರಾಮ್ ಮೋಹನ್ ರಾಯ್ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ರಾಧಾನಗರ ಎಂಬ ಊರಿನಲ್ಲಿ ಜನಿಸಿದರು. ಬ್ರಾಹ್ಮಣ ಸಂಪ್ರದಾಯಸ್ಥರ ಮನೆಯಲ್ಲಿ ಜನಿಸಿದವರು. ತಂದೆಯು ವೈಷ್ಣವ ಪಂಥದವರು ಹಾಗೂ ತಾಯಿ ಶೈವ ಪಂಥದ ಅನುಯಾಯಿಗಳಾಗಿದ್ದರು. ಎಲ್ಲಾ ಬೆಂಗಾಲಿ ಬ್ರಾಹ್ಮಣರು ಕಲಿಯುವಂತೆ ರಾಮ್ ಮೋಹನ್ ರಾಯ್ ಅವರು ಕೂಡ ಬೆಂಗಾಲಿ ಮತ್ತು ಪರ್ಷಿಯನ್ ಭಾಷೆಯನ್ನು ಕಲಿತು ಸಂಸ್ಕೃತ ಕಲಿಯಲು ಬನಾರಸಕ್ಕೆ ಬರುತ್ತಾರೆ. ಮದರಸದಲ್ಲಿ ಪರ್ಷಿಯನ್ ಭಾಷೆಯನ್ನು ಕಲಿತಿದ್ದರಿಂದ, ಅಲ್ಲಿನ ಮೌಲ್ವಿಗಳ ಪ್ರಭಾವಕ್ಕೆ ಒಳಗಾಗಿ ಬಹುದೇವಾರಾಧನೆಯನ್ನು ಬಿಟ್ಟು ಏಕದೇವಾರಾಧನೆಯ ಕಡೆಗೆ ಹೆಚ್ಚು ಒಲವನ್ನು ತೋರುತ್ತಾರೆ. ಸಂಸ್ಕೃತವನ್ನು ಕಲಿತು ವಾಪಸ್ ಬಂಗಾಳಕ್ಕೆ ಮರಳಿದ ಇವರು, ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸಕ್ಕೆ ಸೇರುತ್ತಾರೆ. ಅಲ್ಲಿ ಇವರಿಗೆ ವಿಲಿಯಂ ಕ್ಯಾರಿ ಎಂಬಾತನ ಪರಿಚಯವಾಗುತ್ತದೆ. ವಿಲಿಯಂ ಕ್ಯಾರಿ, ಲಾರ್ಡ್ ಮೆಕಾಲೆಗಿಂತಲೂ ಮೊದಲೇ, ಭಾರತದಲ್ಲಿ ಸಂಸ್ಕೃತ ಭಾಷೆ ಮತ್ತು ಗುರುಕುಲವನ್ನು ಹೋಗಲಾಡಿಸಿ, ಆಂಗ್ಲ ಭಾಷೆ ಮಾದರಿಯ ಶಿಕ್ಷಣ ವ್ಯವಸ್ಥೆಯನ್ನು ತರಬೇಕೆಂದು ಕನಸು ಕಂಡಿದ್ದನು. ವಿಲಿಯಂ ಕ್ಯಾರಿಯ ಸಹಾಯದಿಂದ ಆಂಗ್ಲ ಭಾಷೆಯನ್ನು ಕಲಿತ ಮೋಹನ್ ರಾಯ್,‌ ಕ್ರೈಸ್ತರ ಪವಿತ್ರ ಗ್ರಂಥವಾದ ಬೈಬಲ್ ಅನ್ನು ಬೆಂಗಾಲಿ ಭಾಷೆಗೆ ಮತ್ತು ಸಂಸ್ಕೃತದ ಗ್ರಂಥಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿದನು. ಸತಿ ದಹನ ಹಾಗೂ ಬಾಲ್ಯ ವಿವಾಹಗಳಂತಹ ಸಾಮಾಜಿಕ ಪಿಡುಗುಗಳ  ವಿರುದ್ಧ ಮೋಹನ್ ರಾಯ್ ಹೋರಾಡಿದನೆಂದು ವಿವರಿಸುವ ನಮ್ಮ ಪಠ್ಯಪುಸ್ತಕಗಳು ಅದರ ಹಿಂದೆ ನಡೆದ ಎಷ್ಟೋ ಘಟನೆಗಳನ್ನು ಬಹಿರಂಗಪಡಿಸಿಲ್ಲ. ಹೌದು, ಈ ಸಾಮಾಜಿಕ ಪಿಡುಗುಗಳು ಸಮಾಜಕ್ಕೆ ಒಳಿತಲ್ಲ ಹಾಗೂ ಇದರ ವಿರುದ್ಧ ಹೋರಾಡಿದ ಮೋಹನ್ ರಾಯ್ ಅವರ ಕಾರ್ಯ ಶ್ಲಾಘನೀಯ, ಆದರೆ ರಾಜಾರಾಮ್ ಮೋಹನ್ ರಾಯ್ ಈ ಹೋರಾಟದಲ್ಲಿ ಕೇವಲ ಹೆಸರು ಮಾತ್ರ. ಇದರ ಹಿಂದೆ ವಿಲಿಯಂ ಕ್ಯಾರಿ ಅವರ ಒಂದು ಕಾರ್ಯತಂತ್ರವೂ ಅಡಗಿತ್ತು. ವಿಲಿಯಂ ಕ್ಯಾರಿಯವರು ಈ ಹೋರಾಟದಲ್ಲಿ ಮಿಷನರಿ ಚಟುವಟಿಕೆಗಳನ್ನು ನಡೆಸುತ್ತಿದ್ದರು. ಅವರು ಭಾರತೀಯರಿಗೆ, "ನೀವು ಅನಾಗರಿಕರು, ನೀವು ಕತ್ತಲೆ ಜಗತ್ತಿನಲ್ಲಿ ಬದುಕುತ್ತಿದ್ದೀರಿ, ನಿಮ್ಮ ಧರ್ಮವೇ ಹೀಗೆ ಅನಾಗರಿಕತೆಯ ಆಚರಣೆಗಳಿಂದ ತುಂಬಿದೆ, ನಿಮಗೆ ವಿಜ್ಞಾನ ತಿಳಿದಿಲ್ಲ..." ಎಂದು ಹೇಳಿ ಕೀಳರಿಮೆಯ ಬೀಜವನ್ನು ಮನಸ್ಸಿನಲ್ಲಿ ಹುಟ್ಟಿಸಿ ಅವರನ್ನು ಕ್ರೈಸ್ತ ಧರ್ಮಕ್ಕೆ ಮಾನಸಿಕವಾಗಿ ಮತಾಂತರಗೊಳಿಸುತ್ತಿದ್ದರು. ಅಷ್ಟೇ ಅಲ್ಲದೆ ರಾಮ್ ಮೋಹನ್ ರಾಯ್ ಅವರು ಬ್ರೀಟಿಷ್ ಗವರ್ನರ್ ಗೆ ಒಂದು ಪತ್ರವನ್ನು ಬರೆಯುತ್ತಾರೆ(೧೮೨೩). ಆ ಪತ್ರದಲ್ಲಿ, "ಭಾರತದವರು ಸಂಸ್ಕೃತ ಭಾಷೆಯಿಂದ ಹಿಂದುಳಿದಿದ್ದಾರೆ. ಸಂಸ್ಕೃತದ ಪುರಾಣ ಹಾಗೂ ಉಪನಿಷತ್ತುಗಳಿಂದ ಕಲಿಯುವುದು ಏನು ಇಲ್ಲ. ಅವುಗಳಿಂದ ನಮ್ಮ ದೇಶವು ಕತ್ತಲೆಯಲ್ಲೇ ಉಳಿದಿದೆ, ದಯವಿಟ್ಟು ನಮ್ಮ ದೇಶದಲ್ಲಿರುವ ಸಂಸ್ಕೃತ ಭಾಷೆಯನ್ನು, ಸಂಸ್ಕೃತ ಪಾಠಗಳನ್ನು ಹೋಗಲಾಡಿಸಿ ನಿಮ್ಮ ಯುರೋಪಿನ ಆಂಗ್ಲ ಭಾಷೆ ಮಾದರಿಯ ಶಿಕ್ಷಣ ವ್ಯವಸ್ಥೆಯನ್ನು ಭಾರತಕ್ಕೆ ತಂದು ಬೆಳಕು ಚೆಲ್ಲಬೇಕು..." ಎಂದು ಕೇಳಿಕೊಳ್ಳುತ್ತಾರೆ. ಹೀಗೆ ವಿಲಿಯಮ್ ಕ್ಯಾರಿ ರಾಜಾರಾಮ್ ಮೋಹನ್ ರಾಯ್ ಅವರನ್ನು ಉಪಯೋಗಿಸಿಕೊಂಡು ಬಂಗಾಳದಲ್ಲಿ ಗುರುಕುಲ ಪದ್ಧತಿಯನ್ನು ಹೋಗಲಾಡಿಸಿ ಆಂಗ್ಲ ಭಾಷೆಯ ಶಾಲಾ ಕಾಲೇಜುಗಳನ್ನು ತೆರೆದನು. ಇದು ಹೀಗೆಯೇ ಮುಂದುವರೆದು, ಮುಂದೆ ಲಾರ್ಡ್ ಮೆಕಾಲೆ ಅವರು ಸಂಪೂರ್ಣವಾಗಿ ಗುರುಕುಲ ಪದ್ಧತಿಯನ್ನು ಹೋಗಲಾಡಿಸಿ ಆಂಗ್ಲ ಮಾಧ್ಯಮದ ಶಾಲೆಗಳನ್ನು ಭಾರತಕ್ಕೆ ತಂದರು. ವಿಪರ್ಯಾಸವೆಂದರೆ, ಅದೇ ಕಾಲಘಟ್ಟದಲ್ಲಿ ಫ್ರಾನ್ಸ್, ಬ್ರಿಟನ್ ಹಾಗೂ ಮುಂತಾದ ಯೂರೋಪ್ ದೇಶಗಳಲ್ಲಿ ಸಂಸ್ಕೃತ ಭಾಷೆಯ ಅಧ್ಯಾಯನ ಕೇಂದ್ರಗಳು ಶುರುವಾದವು. 

ಹೀಗೆ ಅದೆಷ್ಟೋ ರಾಮ್ ಮೋಹನ್ ರಾಯ್ ಗಳ ಸಹಾಯದಿಂದ ಬ್ರೀಟಿಷರು ಭಾರತೀಯರನ್ನು ಮಾನಸಿಕವಾಗಿ ತಮ್ಮತನವನ್ನು ಮರೆತು ಪಾಶ್ಚಿಮಾತ್ಯ ಪದ್ಧತಿಗಳಿಗೆ ಹೊಂದಿಕೊಳ್ಳುವಂತೆ ಮಾಡಿದರು. ಇಲ್ಲಿಂದ ಕದ್ದು ತೆಗೆದುಕೊಂಡು ಹೋದ ಅದೆಷ್ಟೋ ಸಂಸ್ಕೃತ ಗ್ರಂಥಗಳನ್ನು ಅಧ್ಯಯನ ಮಾಡಿ ಯುರೋಪಿನ ಬಹುತೇಕ ರಾಷ್ಟ್ರಗಳು ಜ್ಞಾನವನ್ನು ಪಡೆದುಕೊಂಡವು. ಆಂಗ್ಲ ಶಿಕ್ಷಣ ಪದ್ಧತಿ ಭಾರತಕ್ಕೆ ಬಂದದ್ದು ಕೆಟ್ಟದ್ದಲ್ಲ, ಆದರೆ ಯಾರದ್ದೋ ಮಾತನ್ನು ಕೇಳಿ, ಅದರ ಪ್ರಭಾವಕ್ಕೆ ಒಳಗಾಗಿ, ನಾವು ನಮ್ಮ ಜ್ಞಾನ ಹಾಗೂ ಸಂಸ್ಕೃತಿಯುನ್ನು ಸಂಪೂರ್ಣವಾಗಿ ಮರೆತುಬಿಟ್ಟವಲ್ಲ ಎಂಬ ನೋವು ಅಷ್ಟೇ. ಈಗಲೂ ಕೆಲವರು ಆಂಗ್ಲ ಶಿಕ್ಷಣ ಪದ್ಧತಿ ನಮ್ಮ ದೇಶಕ್ಕೆ  ಬಂದಿದ್ದರಿಂದಲೇ ನಾವು ಮುಂದುವರೆದೆವು ಎಂದು ಮಾತನಾಡುತ್ತಾರೆ, ಆದರೆ ಅವರಿಗೆ ಅರಿವಿಲ್ಲ. ನಮ್ಮ ವಿಜ್ಞಾನ ಹಾಗೂ ಸಂಸ್ಕೃತಿಯು ಸಾವಿರಾರು ವರ್ಷಗಳಿಂದ ತುಂಬಿ ತುಳುಕುತ್ತಲೇ ಇತ್ತು. ಈಗಲೂ ಚೀನಾ, ಜಪಾನ್ ನಂತಹ ದೇಶಗಳಲ್ಲಿ ಆಂಗ್ಲ ಭಾಷೆಯ ಶಿಕ್ಷಣವಿಲ್ಲ, ಆದರೂ ಅವುಗಳು ಮುಂದುವರೆದ ದೇಶಗಳಾಗಿವೆ. ಇತಿಹಾಸದಲ್ಲಿ ಬರುವ ಅದೆಷ್ಟೋ ವ್ಯಕ್ತಿಗಳ ಪೂರ್ಣ ಚಿತ್ರಣವನ್ನು ನಮ್ಮ ಶಾಲಾ ಪಠ್ಯಪುಸ್ತಕಗಳಲ್ಲಿ ತೆರೆದಿಟ್ಟಿಲ್ಲ. ಇಲ್ಲಿ ರಾಜಾರಾಮ್ ಮೋಹನ್ ರಾಯ್ ಅವರ ಬಗ್ಗೆ ಪಠ್ಯಪುಸ್ತಕದಲ್ಲಿಲ್ಲದ ಸಂಗತಿಯನ್ನು, ಸಂಪೂರ್ಣವಾಗಿ ಅಲ್ಲದಿದ್ದರೂ ತಿಳಿದಷ್ಟು,  ಹಂಚಿರುವೆ. ಅವರು ಮಾಡಿದ ಕಾರ್ಯಗಳು ಸರಿಯೋ ತಪ್ಪೋ ಎಂಬುದನ್ನು ನಿರ್ಧರಿಸವುದು ನಿಮಗೆ ಬಿಟ್ಟದ್ದು.

- ಧನುಷ್ ರೆಡ್ಡಿ ಕುರ್ನಾಳ್