ನೇತಾಜಿ ಸುಭಾಷ್ ಚಂದ್ರ ಬೋಸ್- ಭಾರತ ಕಂಡ ಧೀಮಂತ ನಾಯಕ

ನೇತಾಜಿ ಸುಭಾಷ್ ಚಂದ್ರ ಬೋಸ್- ಭಾರತ ಕಂಡ ಧೀಮಂತ ನಾಯಕ

ಸೈನಿಕ ಶಕ್ತಿಯ ಹುಟ್ಟು ಹಾಕಿದವರು, ಸಂಘಟಕ  ಶಕ್ತಿಯ ದಂಡ ನಾಯಕರಿವರು, ಗುರಿಯೇ ಸಾಧನೆ ಹೋರಾಡಿ ಎಂದವರು, ದೇಶ ಸೇವೆಯೇ ಈಶ ಸೇವೆ ಎಂದರಿವರು- ಹೀಗೆ ಹೇಳಿದವರು, ನೋವನುಂಡವರು, ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀಮಂತ ರಾಷ್ಟ್ರನಾಯಕರೇ ಅಮರ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್, ಎಲ್ಲರ ನೆಚ್ಚಿನ ನೇತಾಜಿಯವರು.

ಜನವರಿ ೨೩, ೧೮೯೭ ರಲ್ಲಿಜಾನಕಿನಾಥ ಬೋಸ್, ಪ್ರಭಾವತಿ ಬೋಸ್ ದಂಪತಿಗಳಿಗೆ ಜನಿಸಿದರು. ನೇತಾಜಿ ಎಂಬ ಹೆಸರೇ ದೇಶಪ್ರೇಮವನ್ನು ಮೂಡಿಸುತ್ತದೆ. ಇಂಡಿಯನ್ ನ್ಯಾಷನಲ್ ಆರ್ಮಿಯನ್ನು ಹುಟ್ಟುಹಾಕಿದ ಹೋರಾಟಗಾರರು. ತೋಟದ ಕೆಲಸಗಾರರನ್ನು, ಹೋದೆಡೆಯಲ್ಲಿ ಇದ್ದ ಯುದ್ಧ ಖೈದಿಗಳನ್ನು ಒಟ್ಟಾಗಿಸಿ ಹುರಿದುಂಬಿಸಿದರು. ವಿಶ್ವದ ಅನೇಕ ರಾಷ್ಟ್ರಗಳನ್ನು ಸಂದರ್ಶಿಸಿದರು. ಭಾರತದ ಸ್ವತಂತ್ರ್ಯದ ಕಿಚ್ಚಿನ ಮಹತ್ವವನ್ನು ತಿಳಿಸಿದ ಮುತ್ಸದ್ಧಿಯಿವರು. ಸ್ವಾರ್ಥವನ್ನು ಬದಿಗೊತ್ತಿದ ಶ್ರೀಮಂತ ಹೃದಯವಂತರು. ಗಾಂಧೀಜಿಯವರ ಕೆಲವು ಧೋರಣೆಗಳು ನೇತಾಜಿಯವರಿಗೆ ಇಷ್ಟವಾಗುತ್ತಿರಲಿಲ್ಲವಂತೆ.

“ಸ್ವಾತಂತ್ರ್ಯವನ್ನು ಯಾರೂ ಕೊಡಲಾರರು, ನಾವೇ ಪಡೆದುಕೊಳ್ಳಬೇಕೆಂದು” ಕರೆಯಿತ್ತರು. ಆದರೆ ಸತತ ಪರಿಶ್ರಮ, ಹೋರಾಟ, ದೃಢನಿಲುವು, ಅಚಲ ವಿಶ್ವಾಸ, ನಂಬಿಕೆ ಬೇಕೆಂದರು. ಕ್ರಾಂತಿಯಿಲ್ಲದಿದ್ದರೆ ಏನೂ ದೊರೆಯದೆಂದರು. ಶಾಂತಿ ಬೇಕು, ಹಾಗೆಂದು ಎಲ್ಲಾ ಕಡೆ ಕೆಲಸಕ್ಕೆ ಬಾರದು. ಇವರ ಹೋರಾಟಕ್ಕೆ ಬ್ರಿಟಿಷ್ ನಾಯಕರು ಬೆರಗಾಗಿದ್ದರಂತೆ. ಶ್ರೀ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಮಹರ್ಷಿ ಅರವಿಂದರ ತತ್ವಗಳಡಿ ದುಡಿದವರು, ಇವರೆಲ್ಲಾ ನೇತಾಜಿ ಮೇಲೆ ಅತ್ಯಂತ ಪ್ರಭಾವ ಬೀರಿದ ಮಹನೀಯರುಗಳು.

ಸ್ವಾತಂತ್ರ್ಯವೀರ ಸಾವರ್ಕರ್ ಭೇಟಿ ನೇತಾಜಿಯವರ ಜೀವನದ ಗತಿ,ಹೋರಾಟದ ಹಾದಿಯನ್ನೇ ಬದಲಾಯಿಸಿತಂತೆ. ‘ಆಜಾದ್ ಹಿಂದ್’ ಮೂಲಕ ‘ಜೈಹಿಂದ್’ ಘೋಷಣೆ ಒಕ್ಕೊರಲಿನಿಂದ ಹೊಮ್ಮುವಂತೆ ಮಾಡಿದರು. ಓರ್ವ ನಿಷ್ಠಾವಂತ ರಾಜಕಾರಿಣಿಯಾದ ಅಪ್ರತಿಮ ದೇಶಭಕ್ತರಿವರು. ೧೯೪೫ರ ಆ.೧೮ರಂದು ವಿಮಾನ ಅಪಘಾತದಲ್ಲಿ ನಿಧನರಾದರೆಂದು ಹೇಳಲಾಗುತ್ತಿದೆ. ಸಾವಿನಲ್ಲೂ ನಿಗೂಢತೆಯಿದೆ. ಧೀಮಂತ ನಾಯಕನ ಸಾವಿಗೆ ಕಾರಣವನ್ನು ಅಂದಿನ ಸರಕಾರವೇ ಕಂಡುಹಿಡಿಯಬೇಕಿತ್ತೆಂದು ಅನ್ನಿಸುವುದಿದೆ. ಏನೇ ಇರಲಿ ನೇತಾಜಿಯವರ ಪ್ರಾಮಾಣಿಕ ಸೇವೆ, ಸ್ವಾತಂತ್ರ್ಯದ ಕಿಡಿಗಳು ಯಾವ ಭಾರತೀಯನಿಗೂ ಮರೆಯಲಸದಳ. ಇವರ ನಿಧನಕ್ಕೆ ತಾಯಿ ಭಾರತಾಂಬೆ ಖಂಡಿತಾ ಕಣ್ಣೀರ ಅಭಿಷೇಕ ಮಾಡಿರಬ‌ಹುದು. ನೆನೆಯೋಣವೀದಿನ, ನಮನಗಳು.

-ರತ್ನಾ ಕೆ ಭಟ್, ತಲಂಜೇರಿ

(ಸಂಗ್ರಹ: ಸ್ವಾತಂತ್ರ್ಯ ವೀರರು)

ಚಿತ್ರ ಕೃಪೆ: ಇಂಟರ್ನೆಟ್ ತಾಣ