ನ್ಯಾನೋ ಕಥೆ: ಸಂಯಮ

ನ್ಯಾನೋ ಕಥೆ: ಸಂಯಮ

ರೈತ ರಾಮಣ್ಣ ಸಾಲಮಾಡಿ ಎರಡು ಎಕರೆ ಗದ್ದೆಯಲ್ಲಿ ಬೇಸಾಯ ಮಾಡಿದ್ದ. ಬಿಸಿಲ ಝಳಕ್ಕೆ ಪೈರು ಒಣಗಿ, ನೀರಿಲ್ಲದೆ ನಾಶವಾಯಿತು. ರಾತ್ರಿ ದೃಢ ನಿರ್ಧಾರ ಮಾಡಿ ಗದ್ದೆ ಬದಿಗೆ ಹೋದವ, ಇನ್ನು ಬದುಕಿ ಪ್ರಯೋಜನವಿಲ್ಲ, ಸಾಯುವುದೇ ಮೇಲೆಂದು ತೀರ್ಮಾನಿಸಿದ್ದ. ಸಾಲ ಕಟ್ಟುವುದು ಹೇಗೆ? ಕೈಸಾಲದವರು ಮನೆಬಾಗಿಲಿಗೆ ಬಂದು ಬಯಿದು, ಹಂಗಿಸಿ, ಅವಮಾನ ಮಾಡುವುದನ್ನು ಯೋಚಿಸಿಯೇ ಮೈನಡುಗಿತು. ಬ್ಯಾಂಕ್ ನವರೂ ಬಿಡುವುದಿಲ್ಲ. ಒಮ್ಮೆ ಪತ್ನಿ, ಮಕ್ಕಳು ಕಣ್ಣೆದುರು ಬಂದರು. ಆಗ ಒಳಮನಸ್ಸು ‘ಜೀವ ಕಳಕೊಂಡರೆ ನಾಲ್ಕು ದಿನ ಕಣ್ಣೀರು ಹಾಕಿ, ಮೊದಲಿನಂತೆ ಆದಾರು, ಆದರೆ ನಿನ್ನ ಜೀವ ಪುನಃ ಬಾರದು, ಸಂಯಮ ತಂದುಕೊ’ ಎಂದು ಎಚ್ಚರಿಸಿತು. ಈ ವರ್ಷ ಅಲ್ಲದಿದ್ದರೆ ಮುಂದಿನ ವರ್ಷ ಎಂದು ಮನೆಗೆ ಬಂದು ಏನೂ ಆಗದವನಂತೆ ನಿದ್ದೆಗೆ ಜಾರಿದ.

-ರತ್ನಾ ಕೆ ಭಟ್ ತಲಂಜೇರಿ

ಇಂಟರ್ನೆಟ್ ಚಿತ್ರ ಕೃಪೆ