ಪಡಿತರ ವ್ಯವಸ್ಥೆ ಸಮರ್ಪಕವಾಗಲಿ

ಜನಸಾಮಾನ್ಯರು, ಕಡುಬಡವರಿಗೆ ಆಹಾರ ಸುರಕ್ಷೆಯನ್ನು ಖಾತರಿ ಪಡಿಸುವ ಉದ್ಡೇಶ ಹೊಂದಿರುವ ರಾಜ್ಯದ ಪಡಿತರ ಅಥವಾ ‘ರೇಶನ್’ ವ್ಯವಸ್ಥೆಯಲ್ಲಿ ಭಾರೀ ಪ್ರಮಾಣದ ಲೋಪದೋಷಗಳು ಇರುವುದನ್ನು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ (ಸಿಎಜಿ) ವರದಿಯಲ್ಲಿ ಗುರುತಿಸಲಾಗಿದೆ. ಪಡಿತರ ವ್ಯವಸ್ಥೆಯಲ್ಲಿ ನ್ಯಾಯಬೆಲೆಯ ಮೂಲಕ ವಿತರಿಸಲಾಗುವ ಆಹಾರ ಧಾನ್ಯಗಳನ್ನು ರಸಗೊಬ್ಬರಗಳು, ಸಿಮೆಂಟ್, ಕೀಟನಾಶಕಗಳ ಜತೆಗೆ ದಾಸ್ತಾನು ಇರಿಸುವುದು, ಅನಧಿಕೃತ, ನವೀಕರಿಸದ ತೂಕ ಮಾಪನ ಬಳಕೆ ಇತ್ಯಾದಿ ಹಲವು ಕುಂದುಕೊರತೆಗಳ ಬಗ್ಗೆ ಸಿಎಜಿ ವರದಿ ಬೆಟ್ಟು ಮಾಡಿದೆ. ಇದು ನಿಜಕ್ಕೂ ಖೇದಕರ. ಎಲ್ಲರಿಗೂ ಪೌಷ್ಟಿಕ ಆಹರ ಒದಗಿಸಬೇಕು ಎನ್ನುವ ಉದ್ಡೇಶದ ಈ ವ್ಯವಸ್ಥೆಯೇ ಗಮನಾರ್ಹ ಕುಂದುಕೊರತೆಗಳನ್ನು ಹೊಂದಿರುವುದು ವಿಪರ್ಯಾಸ. ಸಂಬಂಧಪಟ್ಟ ಇಲಾಖೆ, ಸರಕಾರ ಈ ಬಗ್ಗೆ ಮುತುವರ್ಜಿ ವಹಿಸಿ ಈ ವಿಷಯಗಳನ್ನು ಆದಷ್ಟು ಬೇಗನೆ ನೇರ್ಪುಗೊಳಿಸಿಕೊಳ್ಳಬೇಕಾಗಿದೆ.
ಅನೇಕ ಕಡೆಗಳಲ್ಲಿ ಕೃಷಿ ಪತ್ತಿನ ಸಹಕಾರ ಸಂಘಗಳೇ ನ್ಯಾಯ ಬೆಲೆ ಅಂಗಡಿಗಳಾಗಿಯೂ ಕಾರ್ಯನಿರ್ವಹಿಸುತ್ತಿವೆ. ಇಂಥ ಸೊಸೈಟಿಗಳ ದಾಸ್ತಾನು ಕೋಣೆಗಳಲ್ಲಿ ರಸಗೊಬ್ಬರ, ಕೀಟನಾಶಕಗಳ ಜೊತೆಗೆ ಪಡಿತರ ಆಹಾರ ಧಾನ್ಯಗಳನ್ನು ದಾಸ್ತಾನು ಮಾಡಲಾಗುತ್ತಿದೆ. ಇದರಿಂದಾಗಿ ಆಹಾರ ಧಾನ್ಯಗಳ ಗುಣಮಟ್ಟ ಕೆಡುವುದು, ವಿಷಕಾರಿಯಾಗುವುದು ಸಾಧ್ಯ. ಹೀಗಾಗಿ ಆಹಾರ ಸುರಕ್ಷೆಯ ಬಗ್ಗೆ ಸಿಎಜಿ ಕಳವಳ ವ್ಯಕ್ತಪಡಿಸಿದೆ. ಅನಧಿಕೃತ ಮತ್ತು ನವೀಕರಿಸದ ತೂಕ ಮಾಪನ ಯಂತ್ರಗಳ ಬಳಕೆಯಿಂದಾಗಿ ಗ್ರಾಹಕರಿಗೆ ಮೋಸವಾಗುವುದು ಸಾಧ್ಯ ಎಂದು ಸಿಎಜಿ ಗಮನಿಸಿದೆ. ಕೆಲಸದ ಅವಧಿಯಲ್ಲಿ ನ್ಯಾಯಬೆಲೆ ಅಂಗಡಿಗಳು ಮುಚ್ಚಿರುವುದು, ಪಡಿತರ ಸಾಮಗ್ರಿ ಸಾಗಾಟಕ್ಕೆ ಅಧಿಕೃತ ವಾಹನಗಳನ್ನು ಬಳಸದೇ ಇರುವುದು, ಪಡಿತರ ಸಾಗಾಟ ವಾಹನಗಳಿಗೆ ಜಿಪಿಎಸ್ ಉಪಯೋಗಿಸದೇ ಇರುವುದು, ನಿಗದಿತ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಪಡಿತರ ವಾಹಸ ಸಾಗಾಟ ಇತ್ಯಾದಿಗಳನ್ನು ಕೂಡಾ ಸಿಎಜಿ ೨೦೧೭ರಿಂದ ೨೦೨೨ರ ವರೆಗಿನ ಅವಧಿಯ ವರದಿಯಲ್ಲಿ ಹೇಳಿದೆ. ಪಡಿತರ ಸಾಗಾಟಕ್ಕೆ ಬಳಸಿದ ಗೋಣಿ ಚೀಲಗಳ ತೂಕವನ್ನು ಒಟ್ಟು ತೂಕದಿಂದ ಕಳೆಯದೆ ೧೧.೮೪ ಕೋಟಿ ರೂ. ನಷ್ಟ ಆಗಿರುವುದನ್ನು ಸಿಎಜಿ ಗುರುತಿಸಿದೆ.
ಈ ಲೋಪದೋಷಗಳನ್ನು ಗುರುತಿಸುವುದರ ಜತೆಗೆ ಸಿಎಜಿ ತನ್ನ ವರದಿಯಲ್ಲಿ ಪರಿಹಾರಾತ್ಮಕ ಕ್ರಮಗಳನ್ನು ಕೂಡ ಶಿಫಾರಸು ಮಾಡಿದೆ. ಆಹಾರ ನಿಗಮದ ಗೋದಾಮಿನ ನಿರ್ವಹಣೆಗೆ ಮಾರ್ಗಸೂಚಿ ರೂಪಿಸುವುದು, ನ್ಯಾಯಬೆಲೆ ಅಂಗಡಿಗಳ ನಿಯಮಿತ ತಪಾಸಣೆ, ತಪ್ಪಿತಸ್ಥ ನ್ಯಾಯಬೆಲೆ ಅಂಗಡಿ ಮಾಲಕರ ಪರವಾನಗಿ ರದ್ದು, ತಪ್ಪು ತೂಕ ತಿಳಿಸುವ ಸಾಧನಗಳ ಬಳಕೆಗೆ ದಂಡ, ಸಿಬಂದಿಯನ್ನು ಹೊಣೆ ಮಾಡುವುದು ಇತ್ಯಾದಿ ಕ್ರಮಗಳನ್ನು ಸೂಚಿಸಿದೆ.
ನೇರವಾಗಿ ಹೇಳುವುದಾದರೆ ಪಡಿತರ ಎಂಬ ವ್ಯವಸ್ಥೆ ಇರುವುದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಆಹಾರದ ಸುರಕ್ಷತೆ ಇರಬೇಕು ಎಂಬ ಉದ್ದೇಶದಿಂದ, ಗುಣಮಟ್ಟದ ಆಹಾರ ಎಲ್ಲರ ಹಕ್ಕು. ಅದು ಮಾರುಕಟ್ಟೆಯ ಪೈಪೋಟಿಯೋ, ಇನ್ಯಾವುದೋ ಕಾರಣಕ್ಕಾಗಿ ಜನಸಾಮಾನ್ಯರಿಗೆ ದುರ್ಲಭವಾಗಬಾರದು ಎಂಬ ಸಾಮಾಜಿಕ ನ್ಯಾಯವೇ ನ್ಯಾಯ ಬೆಲೆ ವ್ಯವಸ್ಥೆಯ ಉದ್ದೇಶ. ಆದರೆ ಸಿಎಜಿ ಪತ್ತೆ ಹಚ್ಚಿರುವ ಲೋಪದೋಷಗಳು ಪಡಿತರ ವ್ಯವಸ್ಥೆಯ ಈ ಉದ್ದೇಶ ವ್ಯರ್ಥವಾಗುತ್ತಿದೆಯೇ ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ಸರಕಾರ ಹಾಗೂ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಈ ಬಗ್ಗೆ ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು. ಪಡಿತರ ವ್ಯವಸ್ಥೆಯಲ್ಲಿ ಇರುವ ಲೋಪದೋಷಗಳನ್ನು ಸಿಎಜಿ ನೀಡಿರುವ ಶಿಫಾರಸುಗಳ ಆಧಾರದಲ್ಲಿ ಸರಿಪಡಿಸಿ ಸಮರ್ಪಕವಾಗುವಂತೆ ನೋಡಿಕೊಳ್ಳಬೇಕು. ಸರಕಾರವೇ ಹೇಳುತ್ತಿರುವ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಇದು ತತ್ ಕ್ಷಣ ಆಗಬೇಕಾದ ಕಾರ್ಯವಾಗಿದೆ.
ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೧೭-೧೨-೨೦೨೪
ಚಿತ್ರ ಕೃಪೆ: ಅಂತರ್ಜಾಲ ತಾಣ