ಪಮ್ಮಿ ಉರ್ಫ್ ಪ್ರಮೀಳಾ ಪರಿಣಯ

ಪಮ್ಮಿ ಉರ್ಫ್ ಪ್ರಮೀಳಾ ಪರಿಣಯ

On the anniversary of Demonetisation-ಹೀಗೇ ಸುಮ್ಮನೆ..
ಸೂತ್ರಧಾರ    :    ಧರಣಿ ಮಂಡಳ ಮಧ್ಯದೊಳಗೆ, ಮೆರೆಯುತಿಹ ಕರ್ಣಾಟ ರಾಜ್ಯದೊಳು,
      ಬೆಂಗಳೂರೆಂಬ ಮಾಯಾನಗರಿಯಲ್ಲಿ ಒಂದು ಸಂಸಾರ - ಸೀತಾರಾಮ
      ಜಾನಕಿಯರದ್ದು.  ಅವರಿಗೊಬ್ಬಳು ಮದುವೆಗೆ ಬಂದ ಮಗಳು- ಹೆಸರು ಪಮ್ಮಿ, ಪ್ರಮೀಳಾ ಅಂತ.  
      ಸೀತಾರಾಮ SBI ನಲ್ಲಿ  VRS ತಗೊಂಡಾತ.  ಮಮ್ಮಿ ಮತ್ತು ಪಮ್ಮಿ ಸ್ತ್ರೀ ಸ್ವಾತಂತ್ರ್ಯ  
      ಹೋರಾಟದ ಮುಂಚೂಣಿಗರು.  ಪಮ್ಮಿ ಮದುವೆಗೆ ದಂಪತಿಗಳ ಹರಸಾಹಸ.  ತನ್ನನ್ನು ನೋಡಲು
      ಬಂದ ಹತ್ತು ಗಂಡುಗಳಿಗೆ ನಕಾರ ಹೇಳಿದವಳು ಪಮ್ಮಿ.  ಇಂತಿಪ್ಪ ಸಂಸಾರದಲ್ಲಿ ಮುಂದೇನಾಯ್ತು
      ನೋಡೋಣವೇ?
                    ----------
(ಸೀತಾರಾಮ, ಶಾಮಣ್ಣರೊಡನೆ ನಡೆದು ಬರುತ್ತಾ)
ಸೀತಾರಾಮ    :    ಶಾಮಣ್ಣೋರೇ, ಈ ಸಂಬಂಧ ಏನಾದರೂ ಕುದುರಿದ್ರೆ  ತಲೆ ಮೇಲಿಂದ ದೊಡ್ಡ  ಭಾರ ಇಳೀತದೆ.
ಶಾಮಣ್ಣ    :    ಯಾಕೆ ಯೋಚ್ನೆ ಸ್ವಾಮಿ, ನನ್ನ ಕೆಲಸಾನೇ ಅದಲ್ವೇ.  ಈ ಹುಡುಗನ್ನ ನಿಮ್ಮ ಮಗಳು ಹೇಗೆ
       ಬೇಡಾಂತಾಳೆ ನಾನೂ ನೋಡೇ ಬಿಡ್ತೀನಿ.  ನಿಮ್ಮಾಕೇದೇ ಏನೂಂತ ಗೊತ್ತಾಗ್ಬೇಕು.
ಸೀತಾರಾಮ    :    ಅದ್ಬಿಡಿ, ನಾನು ಹ್ಞೂ ಅಂದ್ರೆ ಮುಗೀತು ನಮ್ಮನೇಲಿ.
ಶಾಮಣ್ಣ    :    ಹೌದೇ, ಪರ್ವಾಗಿಲ್ವೇ, ನೋಡಿದ್ರೆ ಹಾಗನ್ಸೋದಿಲ್ವೇ!
ಸೀತಾರಾಮ    :    ಯಾಕೆ ಒಂದು dose ಕೊಡ್ಲಾ – ಅದೂ ಡಾ|| ರಾಜ್   style ನಲ್ಲಿ..
ಸೀತಾರಾಮ    :    ಜಾನಕೀ,  ಕಣ್ಣಲ್ಲಿ ಕೆಕ್ಕರಿಸಿ ನೋಡಿ ನನ್ನನ್ನು ನೀನು ಗೆಲ್ಲಲಾರೆ. . .
ಜಾನಕಿ    :    ಆ್ಞಂ, ಏನಂದ್ರೀ?
ಸೀತಾರಾಮ    :    ಕ್ಕೆ ಕ್ಕೆ ಕ್ಕೆ.. ಕೆಲಸಾ ಆಯ್ತಾ ಅಂದೆ ಜಾನೂ, ಅಷ್ಟೇ.
ಜಾನಕಿ    :    ಹೌದಾ, ಏನೋ ಗುರಾಯಿಸಿದ ಹಾಗಿತ್ತು, ಅದಿರ್ಲಿ ಯಾರಿವ್ರು?
ಸೀತಾರಾಮ    :    ಇವ್ರಾ ಶಾಮಣ್ಣ, ಮದುವೆ ಬ್ರೋಕರ್ ಶಾಮಣ್ಣ.  ನಂ ಪಮ್ಮೀಗೆ  ಗಂಡು ಫಿಕ್ಸ್ ಮಾಡಿಯೇ
        ಶುದ್ಧಾಂತ ಹೇಳ್ತಿದಾರೆ.
ಜಾನಕಿ    :    ವಾವ್, ಸದ್ಯ ಅದೊಂದ್ ಆಗ್ಲಿ ಬೇಗ.  ಗಂಡು ಹುಡ್ಕಿದೀರಾನ್ನಿ.
ಶಾಮಣ್ಣ    :    ನಿಂ ಹುಡ್ಗೀಗೆ ಗಂಡು ಹುಡ್ಕಕ್ಕಾಗತ್ತಾ – ಗಂಡು ಗಂಟು ಹಾಕಬೇಕಷ್ಟೇ!
ಜಾನಕಿ    :    ಏನಂದ್ರೀs?
ಶಾಮಣ್ಣ    :    ಏನಿಲ್ಲಮ್ಮಾ, ಒಂದೊಳ್ಳೇ ಗಂಡಿನ ಜಾತಕದ ಜೊತೆಗೇ  ಬಂದಿದ್ದೀನಿ.
ಜಾನಕಿ    :    ಗಂಡು ಪ್ರಾಣಿ  ಏನ್ಮಾಡ್ಕೊಂಡಿದ್ಯೋ?
ಶಾಮಣ್ಣ    :    ಏನ್ಕೇಳ್ತೀರಿ, SBIನಲ್ಲಿ ಮ್ಯಾನೇಜರ್ರು.
ಜಾನಕಿ    :    ಅಯ್ಯೋ ಬಡ್ಕೋಬೇಕು.  ಇವ್ರನ್ನ ಕಟ್ಟಿಕೊಂಡು ನಾನು ಅನುಭವಿಸದ್ದಲ್ದೇ, ನನ್ನ ಮಗಳೂ  ಅನುಭವಿಸಬೇಕೇ? ಮಕ್ಳು  ಏಳೋ ಮುಂಚೆ ಆಫೀಸ್‍ಗೆ  ಹೋದ್ರೆ, ಅವ್ರು ಮಲಗಿದ್ಮೇಲೆ
        ಮನೇಗೆ ಬರ್ತಾರೆ.  ರಜೆ ದಿವಾಸಾನೂ ಮನೇನಲ್ಲಿರಲ್ಲ. ಫೋಟೋ ತೋರಿಸಿ  ಇವರೇ ನಿಮ್ಮಪ್ಪ  ಅನ್ಬೇಕು!
ಶಾಮಣ್ಣ    :    ಅಯ್ಯೋ ಎಲ್ಲಾ ಹಾಗಿರಲ್ಲಾ ತಾಯಿ.
ಜಾನಕಿ    :    ಬೇಡಾಪ್ಪ, ನನಗಂತೂ ಸುತರಾಂ ಒಪ್ಪಿಗೆ ಇಲ್ಲ.
ಸೀತಾರಾಮ    :    ಅಲ್ಲಾ ಕಣೇ ಅದೂ . .
ಜಾನಕಿ        :    ಏ ನೀವು  ಸುಮ್ನಿರೀಂದ್ರೆ. ನಿಮಗೇನೂ ಗೊತ್ತಾಗಲ್ಲ.
ಶಾಮಣ್ಣ        :    ಬಿಡಿ ರಾಯರೇ, ಅಮ್ಮಾವ್ರಿಗೆ ಇಷ್ಟವಿಲ್ಲಾಂದ್ರೆ ಬೇಡ ಬಿಡಿ.
ಸೀತಾರಾಮ    :    ಸರಿ ಬಿಡೇ, ಒಂದರ್ಧರ್ಧ ಕಾಫೀನಾದ್ರೂ ಮಾಡು.
ಜಾನಕಿ        :    ಕಾಫೀ ಡಿಕಾಕ್ಷನ್ ಖಾಲಿ, ಟೀ ಪುಡಿ ಇಲ್ಲಾಂತ ಮೂರ್ದಿವ್ಸದಿಂದ ಹೇಳ್ತಿದೀನಿ.  ನನ್ಮಾತು
            ಯಾವತ್ತಾದ್ರೂ ಕೇಳಿದ್ದಿದೆಯಾ?
ಸೀತಾರಾಮ    :    ಓ ಸರೀಪ್ಪಾ. ಬನ್ನಿ ಶಾಮಣ್ಣ ವಿದ್ಯಾರ್ಥಿ ಭವನ್ ಕಡೆ ಹೋಗಿ ಬರೋಣ.
ಶಾಮಣ್ಣ        :    ಯಾರೋ ತಾವು ಮನೇಲಿ ಹುಲಿ ಅಂತ ಹೇಳ್ತಾ ಇದ್ರು...
ಸೀತಾರಾಮ    :    ಇಲ್ಲಾಂದವ್ರು  ಯಾರು ಶಾಮಣ್ಣ.  ನಾನು ಹುಲೀನೇ,  ಮೇಲೆ ದುರ್ಗೆ ಕೂತಿರ್ತಾಳಷ್ಟೇ.

                                           ಅಂಕ -2
ಜಾನಕಿ        :    ಏನೂಂದ್ರೆ, ಈ ಮನೇಲಿ ನಾವು ಮೂವರಿದ್ವಲ್ಲಾ, ಸದ್ಯದಲ್ಲೇ ನಾಕಾಗ್ತೀವಿ.
ಸೀತಾರಾಮ    :    ಇದೇನೇ ಈ ವಯಸ್ಸಿನಲ್ಲಿ!! (ಬಸುರಿ ಹೊಟ್ಟೆ ತೋರಿಸುತ್ತ) ನಂಬಕ್ಕಾಗ್ತಿಲ್ಲ!
ಜಾನಕಿ        :    ಅಯ್ಯೋ ಬಡ್ಕೋಬೇಕು, ಸದಾಶಿವಂಗೆ ಅದೇ ಧ್ಯಾನ. ನಾನಂದಿದ್ದು, ನಮ್ಮಮ್ಮ ಬರ್ತಾ
            ಇದಾರೇಂತ.
ಸೀತಾರಾಮ    :    ಆಂಡವನೇ, ಕಾಳಿ ದುರ್ಗೆಯರ ಜೊತೆ ಭದ್ರಕಾಳೀನೂ free ಆಗಿ ಕೊಟ್ರೆ ಹೇಗಪ್ಪಾ?
ಸೀತಾರಾಮ    :    ನನ್ನ ಮೇಲ್ಯಾಕಪ್ಪಾ ಈ ಕೋಪಾ?
ಜಾನಕಿ        :    ಏನಂದ್ರೀ?
ಸೀತಾರಾಮ    :    ಏನಿಲ್ಲ, ಜೋಪಾನಾಂದೆ – ವಯಸ್ಸಾಯ್ತಲ್ಲಾ ನಿಮ್ಮಮ್ಮಂಗೆ, ಜೋಪಾನಾಂದೆ, ಅಂದ್ಹಾಗೆ
            ಯಾವ ಮಹಾತ್ಕಾರ್ಯಕ್ಕಾಗಿ ಈ ಬಿಜಯಂಗೈವಿಕೆ?
ಜಾನಕಿ        :    ನೋಡಿ, ಪಮ್ಮೀಗೆ ನನ್ನ ಮಮ್ಮೀ ಒಂದು ಸಂಬಂಧ ಕುದುರಿಸಿದ್ದಾರೆ.
ಸೀತಾರಾಮ    :    ಆ ಪುಣ್ಯಪುರುಷ ಯಾರೋ?
ಜಾನಕಿ        :    ಇದಕ್ಕೇನೂ ಕಮ್ಮಿಯಿಲ್ಲ. ನಿಮ್ಮ ಕೈಲಿ ಏನಾಗುತ್ತೆ ಹೇಳಿ ನೋಡೋಣ.
ಸೀತಾರಾಮ    :    ಯಾಕೆ ಜಾನೂ, ಪಮ್ಮೀನ ಕೊಟ್ಟಿಲ್ವೇನೇ?
ಜಾನಕಿ        :    ನಿಮ್ಮನ್ನ ನಂಬಿದ್ದಿದ್ರೆ ಅದೂ ಆಗ್ತಿರ್ಲಿಲ್ಲ!
ಸೀತಾರಾಮ    :    ಆ್ಞಂ, ಏನೇ ಇದು . . .
ಜಾನಕಿ        :    ಅಯ್ಯೋ ಹಾಗಲ್ರೀ... ಡಾ|| ಹತ್ರ ಹೋಗಿದ್ದಕ್ಕೆ ಆಯ್ತು ಅಂದಿದ್ದು. ಈಗ ವಿಷಯಕ್ಕೆ ಬನ್ನಿ.
            ಗಂಡು real estate  ಬಿಸಿನೆಸ್‍ನಲ್ಲಿದಾನಂತೆ.  ಮುಖ್ಯ ವರದಕ್ಷಿಣೆ ಬೇಡ್ವಂತೆ! ಅವರ
            ಅಂತಸ್ತಿಗೆ ತಕ್ಕಂತೆ ಮದುವೆ ಮಾಡಿಕೊಟ್ರೆ ಸಾಕಂತೆ.
ಸೀತಾರಾಮ    :    ಅವ್ರದ್ದು ಎಷ್ಟು ಅಂತಸ್ತಂತೆ?
ಜಾನಕಿ        :    ಕೊಂಕಾಡೋದ್ಬಿಟ್ಟು, ಮದುವೆಗೆ ಒಂದಿಷ್ಟು ತಯಾರೀನಾದ್ರೂ ಮಾಡಿ. ನಂಗೆ  ಕೆಲಸ ಇದೆ. ನಿಂ
            ಪುರಾಣ ಕೇಳೋಷ್ಟು ಪುರುಸೊತ್ತಿಲ್ಲ.
ಸೀತಾರಾಮ    :    ಅಯ್ಯಾ ಭಕ್ತವತ್ಸಲಾ, ಏನೀ ಪರೀಕ್ಷೆ?
ಆಕಾಶವಾಣಿ    :    ಕಂದಾ, ಮದುವೆಯಾದ ಮೇಲೆ ಇವೆಲ್ಲಾ ಇದ್ದದ್ದೇ.  ನಂದೂ ಅದೇ ಗತಿ, ವತ್ಸಾ!
(ದೇವರು)
ಸೀತಾರಾಮ    :    ಆ್ಞಂ, . .

                                                   ಅಂಕ-3
ಸೂತ್ರಧಾರ    :    ಇವತ್ತು ನವೆಂಬರ್ 11, 2016, ಪ್ರಧಾನಿ ಮೋದಿ Demonetisation  ಜಾರಿ ಮಾಡಿದ
            ನಂತರದ 2ನೇ ದಿನ ಬ್ಯಾಂಕಿನಲ್ಲಿ –
ಸೀತಾರಾಮ    :    ಏನು ಈ  ಪಾಟೀ ರಷ್ಷು. ಬ್ಯಾಂಕ್ ದಿವಾಳಿ ಎದ್ದಿದೆ ಅಂತ ಜನಗಳಿಗೆ ಡೌಟಾ ಹ್ಯಾಂಗೆ?
            (cashier ಹತ್ರ ಹೋಗಿ ಚೆಕ್ ನೀಡ್ತಾನೆ.  cashier ಊs  ಊs  ಅಂತ ಚೆಕ್
            ಹಿಂತಿರುಗಿಸ್ತಾನೆ)
ಸೀತಾರಾಮ    :    self  ಚಕ್ಕಪ್ಪಾ 2 ಲಕ್ಷ ಬೇಕು. ನಾನೇ ಬಂದಿದ್ದೀನಿ.
ಅಚಿshieಡಿ    :    ಊs  ಊs  (ಮ್ಯಾನೇಜರ್ ಕಡೆ ತೋರಿಸ್ತಾನೆ)

ಸೀತಾರಾವi    :    ಇದೇನಪ್ಪಾ ರೋಗ. ನನ್ನ ಅಕೌಂಟ್‍ನಿಂದ ದುಡ್ಡು  ತೆಗೆಯೋಕ್ಕೂ ಮ್ಯಾನೇಜರ್ ಹತ್ರ
            ಹೋಗ್ಬೇಕಾ? ಕರ್ಮ ಕರ್ಮ (ಮ್ಯಾನೇಜರ್ ಹತ್ರ ಬಂದು)
ಸೀತಾರಾಮ    :    ಅಡ್ಡಬಿದ್ದೆ  ಮ್ಯಾನೇಜರ್ ಸಾಹೇಬರಿಗೆ.
ಮ್ಯಾನೇಜರ್    :    ಓ ಬನ್ನಿ ಬನ್ನಿ,  ಸೀತಾರಾಮಯ್ಯಗಾರಿ ಮನವರಾಲು, ಹೇಗಿದ್ದೀರಿ?
ಸೀತಾರಾಮ    :    ಚೆನ್ನಾಗಿದ್ದೀನಿ. 2 ಲಕ್ಷ ದುಡ್ಡು ತೆಗೆಯೋದಿತು. ನಿಂ cashier ನಿಮ್ಹತ್ರ ಕಳಿಸ್ತಾನಲ್ಲ!
ಮ್ಯಾನೇಜರ್    :    ಆ್ಞಂ, . . ಏನ್ಸಾಮೀ ನೀವು ಪೇಪರ್ ಓದೋದಿಲ್ವೇ?
ಸೀತಾರಾಮ    :    ಬ್ಯಾಂಕಿನಲ್ಲಿದ್ದಾಗ ಪಾಂಕ್ತವಾಗಿ  ಪೇಪರ್ ಓದ್ತಾ ಇದ್ದೆ. V R ತೊಗೊಂಡ್ನಾ,  ಮನೆ ಕೆಲಸ ಎಲ್ಲಾ
            ನಂ ತಲೆ ಮೇಲೆ ಬಿತ್ತು.  ಪೇಪರ್  ಓದೋಕ್ಕೂ ಪುರುಸೊತ್ತಿಲ್ಲ. ಯಾಕೇ ಕೇಳಿದ್ದು?
ಮ್ಯಾನೇಜರ್    :    ನೋಟಿನ ಅಮಾನ್ಯೀಕರಣದಿಂದ  cash  ವ್ಯವಹಾರಗಳ ಮೇಲೆ ಸಾಕಷ್ಟು  restrictions
            ಬಂದಿವೆ, ಗೊತ್ತಿಲ್ವೇ?
ಸೀತಾರಾಮ    :    ಆ್ಞಂ, . . ಅಮಾನ್ಯೀಕರಣ, ಹಾಗಂದ್ರೇನು? ಸ್ವಲ್ಪ ಕನ್ನಡದಲ್ಲಿ ಹೇಳೀಪ್ಪಾ.
ಮ್ಯಾನೇಜರ್    :    ಅದೇರೀ Demonetisation.
ಸೀತಾರಾಮ    :    ಓ Demonetisation  ಆ? ಹಾಗೆ ಕನ್ನಡದಲ್ಲಿ ಹೇಳಿ ಅರ್ಥವಾಯ್ತು ಬಿಡಿ.
ಮ್ಯಾನೇಜರ್    :    ನೋಡಿ, ಇದು ನಮ್ಮ ಕನ್ನಡಿಗರ ಪರಿಸ್ಥಿತಿ! ನೋಡಿ ಸರ್, ವಾರಕ್ಕೆ 2000/- ತಗೀಬಹ್ದು ಅಷ್ಟೆ.
ಸೀತಾರಾಮ    :    ಸ್ವಾಮೀ, ನಮ್ದುಡ್ಡು ನಮಗೆ ಕೊಡೀಪ್ಪಾ. ನಾನೇನ್ ಸಾಲ ಕೇಳ್ಳೀಕ್ಕೆ ಬಂದಿಲ್ಲಾ.
ಮ್ಯಾನೇಜರ್    :    ಇದು RBI ರೂಲ್ಸು ಸ್ವಾಮೀ ನಂದಲ್ಲಾ. ನಾವೇನು ಮಾಡಕ್ಕಾಗುತ್ತೆ ಹೇಳಿ.
ಸೀತಾರಾಮ    :    ಸರಿ FD ಮುರಿದು ಕೊಡಿ.
ಮ್ಯಾನೇಜರ್    :    ಅಯ್ಯೋ ಸಾರ್, FD ಮುರಿದ್ರೂ ಅಷ್ಟೇ, ಹರಿದ್ರೂ ಅಷ್ಟೇ.
ಸೀತಾರಾಮ    :    ಸರಿ ಬಿಡಿ, ATM ನಲ್ಲೇ ಪ್ರತಿ ದಿವ್ಸ ಡ್ರಾ ಮಾಡ್ತೀನಿ.
ಮ್ಯಾನೇಜರ್    :    ದುಡ್ಡು  ಬಂದ್ಹಾಗೇ ಆಯ್ತು. ATMನಲ್ಲಿ ಡ್ರಾ ಮಾಡೋದೂ ಸೇರಿ ವಾರಕ್ಕೆ 2000/- ಅದೂ ಅಲ್ದೇ
           ATMಗೆ ದುಡ್ಹಾಕಕ್ಕೆ ನಂ ಹತ್ರಾನೇ ದುಡ್ಡಿಗೆ ಪರದಾಟ!
ಸೀತಾರಾಮ    :    ಹೇ ಕೇಶವಾ, ಊಟಕ್ಕಿಲ್ಲದ ಉಪ್ಪಿನಕಾಯಿ ಆಯ್ಯಲ್ಲಪ್ಪಾ ನಂದುಡ್ಡು.  ಪಮ್ಮಿ ಮದುವೆ ಗತಿ?!

                                                              ಅಂಕ-4
ಸೂತ್ರಧಾರ    :    ಒಂದು ತಿಂಗಳ ನಂತರ,  ಮದುವೆ- ಮುಂಜೀಗಂತ, ಪ್ರಧಾನಿಯಿಂದ  cash transactions
            ನಲ್ಲಿ ನಿಯಮ ಸಡಿಲಿಕೆ – 2.50 ಲಕ್ಷ ಹಣ ಪಡೀಬಹ್ದು ಬ್ಯಾಂಕಿಂದ – Proof ಇದ್ರೆ ಮಾತ್ರ.
            ನಮ್ಮ ನಾಯಕಿ ಜಾನಕಿ, Event Manager (EM)  ಹತ್ರ ಬರ್ತಿದ್ದಾಳೆ.
ಜಾನಕಿ        :    ಒಳಕ್ಕೆ ಬರಬಹುದಾ?
EM         :    ಬನ್ನಿ ಮೇಡಂ office  ಇರೋದೇ ತಮ್ಮಂಥ ಗ್ರಾಹಕರಿಗಾಗಿ. ಏನು ಸೇವೆ ಮಾಡ್ಲಿ
            ತಮಗೆ?
ಜಾನಕಿ        :    ಏನು ಸೇವೇನೂ ಬೇಡಾ. ನನ್ನ ಮಗಳಿಂದು  ಮದುವೆ fix ಆಗಿದೆ.  ಮದುವೆ
           arrangement A to Z  ಮಾಡಿಕೊಡಬೇಕು, ಆಗುತ್ತಾ?
E M         :    ನಾವಿರೋದೇ ಅದಕ್ಕೆ, ಅಂದ್ಹಾಗೆ  ಮದುವೆಗೆ ಅಂದಾಜು ಎಷ್ಟು ಜನ ಆಗ್ತಾರೆ?
ಜಾನಕಿ        :    ಅಯ್ಯೋ, ಅದ್ಯಾಕೆ ಕೇಳ್ತೀರಾ. ಕರೀದಲೇ ಇದ್ರೂ ನಂ ಯಜಮಾನ್ರ ಪೈಕೀಲಿ 500-600 ಜನ
            ಆಗ್ತಾರೆ.  ನಮ್ಕಡೆಯವ್ರೂ ಸೇರಿದ್ರೆ 1000 ಆಗ್ಬಹ್ದು.
E M         :    ನಿಂ ಬಜೆಟ್ಟು?
ಜಾನಕಿ        :    ಮೋದೀ ಭಾಗ್ಯದಿಂದ ಈ ಶಾದೀಭಾಗ್ಯಕ್ಕೆ 2.50 ಲಕ್ಷ. ಅದಕ್ಕಿಂತ ಹೆಚ್ಚಿಗೆ ಸಿಗೋಲ್ವೇ?
E M       :    ಏನ್ತಾಯೀ, ಹಾಸ್ಯ ಮಾಡ್ಲಿಕ್ಕೆ ನಾನೇ ಬೇಕಿತ್ತೆ ನಿಮಗೆ. ಸಾವಿರ ಜನಾನ್ನ ಕರೆಸಿಬಿಟ್ಟು. ಅದ್ಧೂ..ರಿಯಾಗಿ
            ಮದುವೆ ಮಾಡಿ, 2.50 ಲಕ್ಷ ನಂ ಕೈಲಿಟ್ರೆ, ನಮಗೆ ಚಿಕ್ಕನಾಯ್ಕನಹಳ್ಳಿ ಚಿಪ್ಪೇ ಗತಿ.

ಜಾನಕಿ        :    ನಾವೇನು ಮಾಡ್ಲೀಕಾಗ್ತದೆ.  ಏನೋ ಸ್ವಲ್ಪadjust ಮಾಡ್ಕೋಬೇಕಪ್ಪಾ.  ದೇಶಕ್ಕಾಗಿ ಅಷ್ಟೂ
            ಮಾಡಕ್ಕಾಗೋಲ್ವೇ?
E M         :    ದೇಶಕ್ಕಾಗಿ ಖಂಡಿತ ಮಾಡೋಣ ಮೇಡಂ. ಅದ್ರೆ ನಿಂ offer ನನ್ನ ಕೈಗೆ ಚೊಂಬು
            ಹಿಡ್ಸೋದು ಗ್ಯಾರಂಟಿ.  ಅಂದ್ಹಾಗೆ, ನೀವು ತಪ್ಪು ತಿಳಿಯಲ್ಲಾಂದ್ರೆ ಒಂದು  suggestion
            ಕೊಡ್ಲಾ?
ಜಾನಕಿ        :    ನೋಡ್ರೀ, 2.50 ಲಕ್ಷದಲ್ಲಿ ಮದುವೆ ಆಗೋದಾದ್ರೆ, ನಾನು ಯಾವುದಕ್ಕೂ ರೆಡಿ.
E M        :    ಏನಿಲ್ಲ, ನೀವ್ಯಾಕೆ ಮದುವೇನ ದೇವಸ್ಥಾನದಲ್ಲಿ ಸರಳವಾಗಿ ಮಾಡ್ಬಾರ್ದು? ದುಡ್ಡೂ ಉಳಿಯುತ್ತೆ!
ಜಾನಕಿ        :    ಇದ್ ಹೇಳಲಿಕ್ಕೆ ನೀವೇ ಆಗಬೇಕಿತ್ತೇ? ಆಗಲ್ಲಾಂದ್ರೆ ಆಗಲ್ಲ ಅಂತ್ಹೇಳಿ.  ಅದ್ ಬಿಟ್ಟು, ಬೇಡದ್ದನ್ನೆಲ್ಲ
            ಮಾತಾಡ್‍ಬೇಡಿ. ನಿಮಗೂ  ನಿಮ್ಮಾಫೀಸಿಗೂ  ದೊಡ್ ನಮಸ್ಕಾರ.  ಈ ಗಂಡಸರ ಬುದ್ಧೀನೇ
            ಇಷ್ಟು. ಹಾಳಾದವ್ರು. ಮೊದಲು ಮನೆಗೆ ಹೋಗ್ಬೇಕಪ್ಪಾ . . . .

                                                            ಅಂಕ- 5
ಶಾಮಣ್ಣ        :    ಏನ್ ಮ್ಯಾನೇಜರ್ ಸಾಹೇಬ್ರು ಯಾವುದೋ ಯೋಚನೇಲಿ ಬಿದ್ಹಾಗಿದೆ.
ಮ್ಯಾನೇಜರ್    :    ಏನಿಲ್ರೀ ಶಾಮಣ್ಣ.  ಈ Demonetisation, ಬ್ರಾಂಚು, ಕಸ್ಟಮರ್‍ಗಳನ್ನು ಸಂಭಾಳಿಸೋದ್ರಲ್ಲಿ
            ಸಾಕು ಸಾಕಾಗಿ ಹೋಗ್ತದೆ.  ವಿಪರೀತ  pressure ಉ. ಈ ಕಡೆ ಹೊಸಾ ನೋಟು ಅರೆಂಜ್
            ಮಾಡ್ಬೇಕು.  ಕಳ್ಳ ದಾರೀಲಿ note convert ಮಾಡಕ್ಕೆ ಬರೋವ್ರನ್ನ ತಡೀಬೇಕು.  ಅದಕ್ಕೂ
            ಹೆಚ್ಚಾಗಿ, ಗ್ರಾಹಕರಿಗೆ ಏನು ಉತ್ತರ ಹೇಳೋಣ ಹೇಳಿ. 1 ತಿಂಗಳ ಹಿಂದೆ ಸೀತಾರಾಮು ಬಂದಿದ್ರು.
            ಮಗಳ ಮದುವೆಗೆ ದುಡ್ಡು-ಅದೂ ಅವರ ಹತ್ರ ಇರೋ ದುಡ್ಡು- ತೆಗೆಯಲಾಗದೇ ಒದ್ದಾಡಿ
                    ಹೋದ್ರು. ನಂಗೂ ತುಂಬಾನೇ ಬೇಜಾರಾಯ್ತು.
ಶಾಮಣ್ಣ        :    ಸರೀ ಹೇಳಿದ್ರಿ. ಈ  Demonetisation ನಿಂದ  ದೇಶ ಹಾಳಾಗಿ ಹೋಯ್ತು.  ಬಡಜನರ
            ಬದುಕು ಮೂರಾಬಟ್ಟೆ ಆಗ್ಹೋಯ್ತ. business  ಪೂರಾ dull. ನಂ ಬಿಸಿನೆಸ್ಸಂತೂ nill!
ಮ್ಯಾನೇಜರ್    :    ಶಾಮಣ್ಣ ಅಲ್ಲೇ ನೀವು ತಪ್ತಿರೋದು. ಮೋದಿ ಇದನ್ನ ಮಾಡಿದ್ದು ಆರ್ಥಿಕತೆ ರೈಲಿನ ಹಳಿ
            ತಪ್ಪಿಸಲಿಕ್ಕಲ್ಲ.  ಸರಿ ದಾರಿಗೆ ತರಲಿಕ್ಕೆ.  ಇದರಿಂದ  unaccounted ಹಣ ಪುನಃ
            ವ್ಯವಸ್ಥೆಗೆ ಬರುತ್ತೆ.  ಇದರಿಂದ ಕಪ್ಪು ಹಣದ ಚಲಾವಣೆಗೆ  break ಬೀಳತ್ತೆ.  ಕಪ್ಪು ಹಣ
            ಇಲ್ಲವಾದ್ರೆ ನಮಗೆ ತಾನೇ ಒಳ್ಳೇದು? ಆ ಒಳ್ಳೇ ಉದ್ದೇಶಕ್ಕೆ ಸ್ವಲ್ಪ ಕಷ್ಟ ಸಹಿಸಿದ್ರೆ ತಪ್ಪೇನು?
            ಜ್ವರ ಬಂದಾಗ ಕಹಿ ಮಾತ್ರೆ ತೊಗೊಳೊಲ್ವೇನು? ಮಾತ್ರೆ ಕಹಿ, ತೊಗೋಳ್ಳೋಕೆ ಕಷ್ಟಾಂತ,
            ಜ್ವರಾನೇ ಇರ್ಲಿ ಅಂತ ಅನ್ನಕ್ಕಾಗತ್ತಾ?
ಶಾಮಣ್ಣ        :    ಸಾಹೇಬ್ರೇ, business ನಿಂತ್ಹೋದ್ರೆ ಆರ್ಥಿಕತೆ ಚಕ್ರ ತಿರುಗೋದು ಹ್ಯಾಗೆ? ಇದರಿಂದ ಎಷ್ಟು
            ಜನ ಬೀದಿ ಪಾಲಾಗಿಲ್ಲ? ನಮಗಿದು ಬೇಕಿತ್ತಾ?
ಮ್ಯಾನೇಜರ್    :    ಶಾಮಣ್ಣೋರೇ ಇದು temporary,  ತಾತ್ಕಾಲಿಕ‌. Long run ನಲ್ಲಿ ಇದು ಬಹಳ
            ಒಳ್ಳೇ ಫಲ ಕೊಡುತ್ತೆ.
ಶಾಮಣ್ಣ        :    ಏನ್ಕೊಡ್ತದೋ ಏನೋ? ನಂ ಕಷ್ಟ ನಮಗೆ, ನಿಂ ಕಷ್ಟ ನಿಮಗೆ, ಈ Arguement
            ಮುಗ್ಯೋದಿಲ್ಲ. ಹಾಳಾಗ್ಲಿ, ಒಂದರ್ಧ‌ ಕಾಫೀ ಕೊಡಿಸ್ತೀರೋ ಇಲ್ವೋ?
ಮ್ಯಾನೇಜರ್    :    ಅಯ್ಯೋ, ಶಾಮಣ್ಣಂಗೆ  ಇಲ್ಲಾಂದು ಬದ್ಕೋದುಂಟೇ. ಯಾಕಿಲ್ಲ.  ಆದ್ರೆ ನನ್ಹತ್ರ ಇರೋದು
            2000/- ನೋಟು ಮಾತ್ರ!
ಶಾಮಣ್ಣ        :    ಅರ್ಥವಾಯ್ತು ಬಿಡಿ! ನಾನೇ ಕೊಡಿಸ್ತೀನಿ! ಹ್ಹ. . ಹ್ಹ. . ಹ್ಹಾ. .

                                                                       ಅಂಕ-6
ಸೀತಾರಾಮ    :    ಲೇ ಜಾನೂ, ಜಾನಕೀs
            ಝಾನ್ಸಿರಾಣಿ ಲಕ್ಷ್ಮೀಬಾಯೀ s
ಜಾನಕಿ        :    ಏನೂಂದ್ರೆ ಯಾಕೆ ಹಾಗೆ ಅರಚ್ಕೊತಾ ಇದೀರಾ?
ಸೀತಾರಾಮ    :    ನೋಡಿ ಝಾನ್ಸಿರಾಣಿ ಅಂದ್ರಷ್ಟೇ ಕೇಳೋದು ಇವಳಿಗೆ.
ಜಾನಕಿ        :    ಏನಾಯ್ತೀಗ?
ಸೀತಾರಾಮ    :    ಎಷ್ಟ್ ಸಲಾ ಹೇಳಿದೀನಿ, ಮೊಬೈಲಲ್ಲಿ ಮುಳುಗಿ ಅಡುಗೆ ಮಾಡ್ಬೇಡಾಂತ! ನೋಡಿಲ್ಲಿ, ಸಾರಿಗೆ
            ಉಪ್ಪಿಲ್ಲ, ಹುಳಿಯಿಲ್ಲ, ಖಾರ ಇಲ್ಲ!
ಜಾನಕಿ        :    ನಾನೂ ನಿಮಗೆ ಸಾವಿರ ಸಲಾ ಹೇಳಿದೀನಿ.  ಮೊಬೈಲ್ ನೋಡ್ಕೊಂಡು ಊಟಾ ಮಾಡ್ಬೇಡೀಂತ!
            ಈಗ ನೀವು ಅನ್ನಕ್ಕೆ ಸುರ್ಕೊಂಡಿರೋದು, ಸಾರಲ್ಲ, ನೀರು.
ಸೀತಾರಾಮ    :    ಅಯ್ . . . . ಸರಿ ಬಿಡು, ನಂ ನಮ್ಮಲ್ಯಾಕೆ ಜಗಳ. ಅರೆ ಮರ್ತೇ ಬಿಟ್ಟಿದ್ದೆ.  courrier ನವ್ನು
            cover ಕೊಟ್ಟಿದ್ದ.  ನೋಡೋಕೆ ಟೈಂ ಆಗ್ಲಿಲ್ಲ.
ಜಾನಕಿ        :    ಎಲ್ಲಿಂದ ಬಂದಿದೇರೀ?
ಸೀತಾರಾಮ    :    ನಂ ಭಾವೀ ಅಳಿಯನಿಂದ  ಕಣೇ.
ಜಾನಕಿ        :    ಬಡ್ಕೋಬೇಕು. ನಿಮಗೇನಾದ್ರೂ ಜವಾಬ್ದಾರಿ ಅನ್ನೋದಿದ್ಯಾ?  ಪಮ್ಮಿ ಮದುವೆಯಷ್ಟು
            important ವಿಷ್ಯಾನೂ ಮರ್ತು ಊರೆಲ್ಲಾ ಪುರಾಣ ಹುಡ್ಕೊಂಡು ಬಂದು, ಈಗ
            ನೆನಪಿಸ್ಕೊತಾ ಇದೀರಾ! ನೀವೂ ಒಬ್ರು ತಂದೆ! ತಂದೇ, ಇವ್ರನ್ನ ಎಲ್ಲಿಂದೆ ತಂದೆ!
ಸೀತಾರಾಮ    :    ನಿನ್ನ ವರಾತ ನಿಲ್ಲಿಸಿದ್ರೆ. ಸ್ವಲ್ಪ ಪತ್ರ ಓದ್ತೀನಿ. ಓದಬಹುದಾ?. . . . .
            (ಮುಖ ವಿಕಾರವಾಗುತ್ತೆ)
ಜಾನಕಿ        :    ಅದ್ಯಾಕ್ರೀ ಕರೆಂಟು ಹೊಡ್ದಿರೋ ಕಾಗೆ ಥರಾ ಮುಖ ಮಾಡಿದೀರಾ?
ಸೀತಾರಾಮ    :    ಅಯ್ಯೋ ನನ್ಮುಖ ಇರೋದೇ ಹಾಗೆ!
ಜಾನಕಿ        :    ಅದು ನನಗೂ ಗೊತ್ತು. ಬರೀ information ಗೆ  ಹೇಳಿದೆ ಅಷ್ಟೇ (ನಗು)
ಸೀತಾರಾಮ    :    ನಗಬೇಡ. ಇದರಲ್ಲಿರೋ  information ನಿನಗೂ ಕರೆಂಟು ಹೊಡೆಸತ್ತೆ.
ಜಾನಕಿ        :    ಏನ್ರೀ ಅದು?
ಸೀತಾರಾಮ    :    ಪುಣ್ಯಾತ್ಮ ಬರ್ದಿದಾನೆ. demonetisation ಇಂದ ಅವ್ನ ಬಿಸಿನೆಸ್ ಬಿದ್ಹೋಗಿ ಪಾಪರ್
            ಆದ್ನಂತೆ.  ಸ್ವಾಮೀ,ಕೆಲವರ ಕಾಲ್ಗುಣದಿಂದ ಮನೆ ಹಾಳಾಗೋದುಂಟು ನಿಮ್ಮ ಮಗಳ ಕಾಲ್ಗುಣದಿಂದ
            ದೇಶಾನೇ ಮಕಾಡೆ ಮಲಗಿದೆಯಲ್ರೀ ಅಂತ ಬರ್ದಿದಾನೆ.
ಜಾನಕಿ        :    ಅಯ್ಯೋ ಈ ಸಂಬಂಧಾನೂ ಬಿತ್ತಾ? .....
                    ಬೀಳಲಿ ಬಿಡಿ ಒಳ್ಳೇದೇ ಆಯ್ತು.  ಅವಂದು ಕಪ್ಪು ಹಣದ ಃusiಟಿess ಇರ್ಬೇಕು.  ಹಾಗೇ ಆಗ್ಬೇಕು. ನಂ ಪಮ್ಮೀಗೆ ಇದೊಂದೇ ಗಂಡಾ? ಚಿನ್ನ-ಚಿನ್ನದಂಥವನು ಸಿಗ್ತಾನೆ. ಅವನ್ನ   
                    ನೋಡಿದಾಗಲೇ ಅನ್ಸಿತ್ತು - ಬಹಳ ಕೊಬ್ಬು ಈ ಪ್ರಾಣೀಗೆ ಅಂತ!
ಸೀತಾರಾಮ    :    ಆ್ಞಂ U-turn!!!
ಜಾನಕಿ        :    ನಂ ಪಮ್ಮಿ ಎಲ್ಲಿ, ಆ ಕರಡಿ ಎಲ್ಲಿ. ಅವಳಂತೂ ನಾ ಹಾಕಿದ ಗೆರೆ ದಾಟಲ್ಲ. ಚಿನ್ನದಂಥಾ
            ಹುಡುಗ ಎಷ್ಟಂದ್ರೂ ನನ್ಮಗಳು.
ಸೀತಾರಾಮ    :    ಯಾಕೋ, ನಂದಲ್ವೇನೋ?
ಜಾನಕಿ        :    ನಿಂ ಜೀನ್ಸ್ ಅವಳ ಹತ್ರಾನೂ ಸುಳಿಯಲಿಕ್ಕೆ ಬಿಟ್ಟಿಲ್ಲ ನಾನು.
ಸೀತಾರಾಮ    :    ಅದ್ಸರಿ ಅನ್ನು, ಅವಳ್ಯಾಕೆ ನಂ ಜೀನ್ಸ್ ಹಾಕ್ತಾಳೆ. ಅವಳದ್ದೇ 108 ಇರ್ಬೇಕಾದಾಗ!
ಜಾನಕಿ        :    ಇದೇನ್ರೀ TV ಮೇಲೆ ಚೀಟಿ (ಚೀಟಿ ಓದುತ್ತಾಳೆ)
ಜಾನಕಿ        :    ಅಯ್ಯೋ ಶಿವನೇs
ಸೀತಾರಾಮ    :    ಯಾಕೇ ಏನಾಯ್ತೇs ?
ಜಾನಕಿ        :    (ಅಳುತ್ತ) ನೀವೇ ನೋಡಿ
ಸೀತಾರಾಮ    :    (ಓದಿ) ಅಯ್ಯೋ ಪಮ್ಮಿಗ್ಯಾಕೇ ಈ ಹಾಳು ಬುದ್ಧಿ ಬಂತು? ಚೀಟಿ ಬರ್ದಿಟ್ಟು ಮೂಲೆ ಮನೆ ಮಾದೇಶನ ಜೊತೆ ಓಡಿ ಹೋಗಿದ್ದಾಳಲ್ಲೇ! ಒಂದೊಳ್ಳೇ ಟೇಸ್ಟೂ ಬೇಡ್ವೇ! ನಾವಿಲ್ಲಿ      ಮ‌ದುವೆಗೇಂತ       ಒದ್ದಾಡ್ತಿದ್ರೆ, ಇದ್ಯಾವುದೇ ಪ್ರೇಮ ಪ್ರಸಂಗ? ನಮಗೆ ಸುಳಿವೇ ಸಿಗದ ಹಾಗೆ..ಅಲ್ಲಾ ನೀ ಹಾಕಿದ ಗೆರೆ . . . .
ಜಾನಕಿ        :    ಎಲ್ಲಾ ನಿಮ್ಮಿಂದ್ಲೇ (ಒಳಕ್ಕೆ ಓಡಿ ಹೋಗುತ್ತಾಳೆ)
ಸೀತಾರಾಮ    :    ತಂದೇ, ಯಾಕಪ್ಪಾ ಹೀಗೆ?
ಆಕಾಶವಾಣಿ    :    ಕಂದಾ, ಆಗೋದಲ್ಲಾ ಒಳ್ಳೇದಕ್ಕೇ, ಸುಮ್ನಿರು.  ಅವ್ಳು ಸ್ತ್ರೀ ಸ್ವಾತಂತ್ರ್ಯದವ್ಳು. ಹಾರಿ ಹೋದ್ಳು  ಅಷ್ಟೇ!

* * * *