"ಪರಿವೃತ್ತ ಪಾರ್ಶ್ವಕೋನಾಸನ"
ನಮ್ಮ ದೇಶದಲ್ಲಿ ಈಗ ಭ್ರಷ್ಟಾಚಾರದ ಕೋಲಾಹಲ. ದೇಶವನ್ನು ಹಗಲು ದರೋಡೆ ಮಾಡುತ್ತಿರುವ ರಾಜಕಾರಣಿ-ಉದ್ಯಮಿ ನೆಕ್ಸಸ್ ಜನರ ಸಹನೆ ಕೆಡಿಸಿದೆ. ಒಮ್ಮೆ ಶ್ರೀಲಂಕಾ ಮೂಲದ ನನ್ನ ಸಹೋದ್ಯೋಗಿ ತನ್ನ ದೇಶದ ಅಧ್ಯಕ್ಷ ಮಹೇಂದ್ರ ರಾಜಪಕ್ಸ ಮತ್ತು ಆತನ ಪರಿವಾದವರ ಮುಗಿಲು ಮುಟ್ಟಿದ ಭ್ರಷ್ಟಾಚಾರ ಯಾವ ರೀತಿ ದೇಶ ಮುಂದವರಿಯಲು ಅನುವು ಮಾಡಿ ಕೊಡುತ್ತಿಲ್ಲ ಮತ್ತು ಅವರುಗಳ ಕಪಿ ಮುಷ್ಠಿಯಲ್ಲಿ ದೇಶ ಯಾವ ರೀತಿ ಸಿಲುಕಿದೆ ಎಂದು ಹೇಳುವಾಗ ನಾನು ಸಂಭ್ರಮದಿಂದ ನಮ್ಮ ದೇಶದಲ್ಲಿ ಈ ರೀತಿಯ ಲಂಚಗುಳಿತನ ಸಾಧ್ಯವಿಲ್ಲ. ಕೆಳಸ್ತರದಲ್ಲಿ ಮಾತ್ರ ಒಂದಿಷ್ಟು ಭ್ರಷ್ಟಾಚಾರ ಇದೆ, ವ್ಯವಸ್ಥೆಯ ಮೇಲ್ಪದರದಲ್ಲಿ ಅದರ ಹಾವಳಿ ಇಲ್ಲ, ನಮ್ಮ ಮಾಧ್ಯಮ, ನ್ಯಾಯಾಲಯಗಳು, ವ್ಯಕ್ತಿ ಎಷ್ಟೇ ದೊಡ್ಡವನಾದರೂ ಅವನನ್ನು ಬಿಡುವುದಿಲ್ಲ, ನಮ್ಮದು ಏಷ್ಯಾ ಉಪಖಂಡದ freest, transparent democracy ಎಂದೆಲ್ಲಾ ಬೀಗುತ್ತಾ ಹೇಳುವಾಗ ಆತನ ಕಣ್ಣುಗಳಲ್ಲಿ ಅಸೂಯೆ ಮಿಶ್ರಿತ ಮೆಚ್ಚುಗೆ ಕಾಣಬಹುದಿತ್ತು. ಆದರೆ ಇತ್ತೀಚೆಗೆ ಒಂದೇ ಸಮನೆ ಹಗರಣಗಳ ಮೇಲೆ ಹಗರಣಗಳು ನಮ್ಮ ಕೊರಳಿಗೆ ಮಾಲೆಯಾಗಿ ನಮ್ಮ ಉಸಿರುಗಟ್ಟಿಸಲು ಶುರುಮಾಡಿದಾಗ ನನಗನ್ನಿಸಿತು ನಾನೆಂಥಾ novice ಎಂದು. ಶ್ರೀಲಂಕಾ ರಾಜಪಕ್ಸ ಪರಿವಾರದ ಕಪಿ ಮುಷ್ಠಿಯಲ್ಲಿ ಮಾತ್ರ ಇರೋದು, ಅದೇ ನಮ್ಮ ದೇಶ ಯಾರ್ಯಾರಿಗೆ ಬಲವಾದ, ಬಿಗಿಯಾದ, ಮುಷ್ಠಿಯಿದೆಯೋ ಅವರುಗಳೆಲ್ಲರ ಕೈಯ್ಯಲ್ಲಿ ಸಿಕ್ಕು ನರಳುತ್ತಿದೆ. ಚಾರ್ಲ್ಸ್ ಡಾರ್ವಿನ್ ನ survival of fittest ಸಿದ್ಧಾಂತ ಕ್ಕೆ ಜ್ವಲಂತ ನಿದರ್ಶನ ನಮ್ಮ ಲಂಚಗುಳಿ ರಾಜಕಾರಣಿಗಳು ಮತ್ತು ಅವರ ಆಶ್ರಯದಲ್ಲಿ ಮೆರೆಯುತ್ತಿರುವ ಉದ್ಯಮಿಗಳು. ತಾಕತ್ತಿರುವವರೆಲ್ಲಾ ಲೂಟಿಗೆ ಅರ್ಹರು.
ರಾಜಕಾರಣಿಗಳು ನಮ್ಮ ಕನಸುಗಳನ್ನು, ಆಶಯಗಳನ್ನು ಅಮೇರಿಕನ್ ಡಾಲರ್ ಗಳ ರೂಪಕ್ಕೆಪರಿವರ್ತಿಸಿ ಸ್ವಿಸ್ ಬ್ಯಾಂಕುಗಳಲ್ಲೂ, ಕಪ್ಪು ಹಣದ ರೂಪದಲ್ಲೂ ಜಮಾವಣೆ ಮಾಡಲು ಆರಂಬಿಸಿದ್ದರಿಂದ ಈ ಬೇಡಿಕೆಗೆ ಒತ್ತಾಸೆಜನರಿಂದ. ಶುಭ್ರ ಖಾದಿಗಳು ತಮ್ಮ ಕೊಳಕು antics ಗಳಿಂದ ನಮ್ಮನ್ನು ನಿರಾಶೆ ಗೊಳಿಸಿದಾಗ ಸಹಜವಾಗಿಯೇ ಜನ unconventional ಪರಿಹಾರದಕಡೆ ನೋಟ ಹರಿಸಲು ಆರಂಭಿಸಿದರು. ದೇಹವನ್ನ ದಂಡಿಸಿ ಸರಕಾರದ ಮನವೊಲಿಸಲು ಯತ್ನಿಸಿದರು. ಯೋಗ ಖ್ಯಾತಿಯ ಬಾಬಾ ರಾಮ್ ದೇವ್ ಸರಕಾರದ ಲಂಚ ಕುರಿತ ಸರಕಾರದ ನಿರ್ಲಿಪ್ತ ನೀತಿಗೆ ಸೆಡ್ಡು ಹೊಡೆದರು. ಅದರಲ್ಲೇನು ತಪ್ಪು?
ಯೋಗ ಗುರು ರಾಮ್ ದೇವ್ ಜನರ ನಾಡಿ ಮಿಡಿತಕ್ಕೆ ಪ್ರತಿಸ್ಪಂದಿಸಿ ಸಮಾನಾಸಕ್ತರನ್ನು ಕಲೆ ಹಾಕಿ ರಾಮ ಲೀಲಾ ಮೈದಾನಕ್ಕೆ ಕರೆತಂದರು. ರಾಮಲೀಲಾ ಮೈದಾನ ಬದಲಾವಣೆಯ ‘ತಹ್ರೀರ್’ ಚೌಕ (ಈಜಿಪ್ಟ್) ಆಗಬಹುದು ಎಂದು ನಿರೀಕ್ಷಿಸಿದ್ದ ಜನರಿಗೆ ಕಾಣಲು ಸಿಕ್ಕಿದ್ದು miniature ತಿಯಾನನ್ಮೆನ್ ಚೌಕ. ಬೀಜಿಂಗ್ ನ ಚೌಕದಲ್ಲಿ ಟ್ಯಾಂಕುಗಳು ರಾರಾಜಿಸಿದರೆ ದಿಲ್ಲಿಯ ಮೈದಾನದಲ್ಲಿ lathi ಗಳು ರಾರಾಜಿಸಿದವು.
ಭ್ರಷ್ಟಾಚಾರದ ಬಗ್ಗೆ ಸರಕಾರದ ಅಸಡ್ಡೆ, ಉದಾಸೀನ ನೀತಿಗೆ ಬೇಸತ್ತ ಸಮಾಜ ಸೇವಕ ಅಣ್ಣಾ ಹಜಾರೆ ಅಮರಣಾಂತ ಉಪವಾಸಕ್ಕೆ ಹೊರಟಾಗ ಸರಕಾರ ಗಾಭರಿಯಾಗಿ ಲೋಕ ಪಾಲ್ ಮಸೂದೆ ಮಂಡಿಸಿ ಲಂಚ ರಿಶ್ವತ್ತನ್ನು ಪರಲೋಕ ಪಾಲ್ ಮಾಡ್ತೀವಿ ಎಂದು ನಂಬಿಸಿ ನಾಮ ಎಳೆದ ಸರಕಾರಕ್ಕೆ ಬಿಸಿ ಮುಟ್ಟಿಸಲು ರಾಮ್ ದೇವ್ ತಯಾರಾದಾಗ ಸರಕಾರ ಬೆದರಿತು.
ಯೋಗ ಗುರುವಿನ ನೇತೃತ್ವದಲ್ಲಿ ಜಮಾಯಿಸಿದ್ದ ಹತ್ತಾರು ಸಾವಿರ ಜನ ಬಯಸಿದ್ದು ಸರಕಾರದಿಂದ ಒಂದು ಸಿಂಪಲ್ ಆಸನವನ್ನು. ಅದೇ ‘ಬದಲಾವಣೆ’ ಯ ಆಸನ. change. “Change we can believe in” ಇಷ್ಟೇ ಆಗಿತ್ತು ಜನರ ಬೇಡಿಕೆ. ಲೂಟಿ ಮಾಡಿ ದೇಶಾಂತರ ಹೋದ ಗಂಟು ಮರಳಿ ದೇಶಕ್ಕೆ ಬರಲಿ, ಇನ್ನು ಮುಂದೆ ಹೀಗಾಗದಂತೆ ಬೇಲಿ ಕಟ್ಟಿ ಎನ್ನುವ ಸಿಂಪಲ್ ಬೇಡಿಕೆ. ಲಂಚ ಮುಗಿಲು ಮುಟ್ಟಿದೆ, ನೈತಿಕತೆ ಪಾತಾಳ ಅಪ್ಪಿದೆ ಸ್ವಲ್ಪ ಬದಲಾಗಿ ಎಂದಷ್ಟೇ ಆಗಿತ್ತು ಜನರ ಬಯಕೆ. ಸರಕಾರ ಜಪ್ಪಯ್ಯ ಅನ್ನದಿದ್ದಾಗ ಬೇಸತ್ತ ಜನ ತಮಗೆ ತಿಳಿದ ಶಾಂತಿಯುತ ಪ್ರತಿಭಟನೆಯ ಮಾರ್ಗ ಅನುಸರಿಸಿದರು. ಬದಲಾವಣೆ ಎನ್ನುವ ಅತಿ ಸುಲಭದ ಆಸನಕ್ಕೆ ಒಪ್ಪದ ಸರಕಾರ ಜನರ ಮೇಲೆ ಪ್ರಯೋಗಿಸಿದ್ದು ಸ್ವಲ್ಪ ಕ್ಲಿಷ್ಟಕರವಾದ “ಪರಿವೃತ್ತ ಪಾರ್ಶ್ವಕೋನಾಸನ”. ಮೊದಲು cajoling, ನಂತರ ಬೆದರಿಕೆ, ಸ್ವಲ್ಪ ನಂತರ ಅಪವಾದ, ಕೊನೆಗೆ ಬಲಪ್ರಯೋಗ. revolving lateral angle position ಎಂದು ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಈ ಆಸನ ಬಹು ಸಲೀಸಾಗಿ ಕೆಲಸಕ್ಕೆ ಬಂತು. ತುರ್ತು ಪರಿಸ್ಥಿತಿಯಲ್ಲೂ ಈ ಆಸನ ಉಪಯೋಗಕ್ಕೆ ಬಂದಿತ್ತು. ಅದರ ನಂತರ ಹಲವು ರಾಜ್ಯಗಳಲ್ಲಿ ಹಲವು ಉದ್ದೇಶಗಳಿಗಾಗಿಯೂ ಈ ಆಸನ handy ಆಗಿ ಬಂತು ಸರಕಾರಗಳಿಗೆ.
ಯಾರಿಗೆ ಆದರೂ ಈ “ಬದಲಾಗು” ಎನ್ನುವ ಆಸನ ಬಹು ಕಷ್ಟಕರ. ಹೊಸ ವರ್ಷದ ಆರಂಭದಲ್ಲೂ, ಹಿರಿಯರಿಂದ ತಿವಿಸಿ ಕೊಂಡಾಗಲೂ ಪಾಲಕರಿಂದ ಉಗಿಸಿ ಕೊಂಡಾಗಲೂ ಈ ಆಸನದ ಮೇಲೆ ಆಸಕ್ತಿ ತೋರಿದರೂ ಅದು ತಾತ್ಕಾಲಿಕ. ಸುಲಭವಾಗಿ ಬಲೆಗೆ ಬೀಳಲೊಲ್ಲದು.
ಇನ್ನೊಂದು ಬೆಳವಣಿಗೆ ಗಮನಿಸಿದಿರಾ? ಭ್ರಷ್ಟ ರಾಜಕಾರಣಿಗಳ ಪಾಪ ತೊಳೆಯಲು ಯೋಗಿಗಳು, ಸಮಾಜ ಸೇವಕರು ಮುಂದೆ ಬರಬೇಕು. ಏಕೆ, ಭ್ರಷ್ಟಾಚಾರಿಗಳಲ್ಲದ ರಾಜಕಾರಣಿಗಳು extinct ಆಗಿ ಹೋದರೆ ‘ಡೋಡೋ’ ಪಕ್ಷಿ ಥರ? ಈ ಬಾಬಾ ಮತ್ತು ಸಮಾಜ ಸೇವಕರನ್ನು ಬೆಂಬಲಿಸುತ್ತಿರುವ, ಅವರ ಪರವಾಗಿ ಅರಚುತ್ತಿರುವ ರಾಜಕಾರಣಿಗಳೇಕೆ ಈ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸರು?
ಒಂದು digression: ಈ ಉಪವಾಸದ ಗಲಾಟೆ ಮಧ್ಯೆ ಯಾವುದೇ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನಿರುವ ಕಂಪ್ಯೂಟರ್ ತಂತ್ರಾಂಶವೊಂದು ವಿವಾದಕ್ಕೆ ಎಳೆಯಲ್ಪಟ್ಟಿದ್ದು RSS ಹಿನ್ನೆಲೆ ಬಾಬಾರಿಗೆ ಇದೆ ಎನ್ನುವ ಅಪವಾದ ನನ್ನಂಥವರನ್ನು ತಬ್ಬಿಬ್ಬುಗೊಳಿಸಿದೆ. ಹೌದು rss ಗೂ ಬಾಬಾ ಗೂ ಇರೋ ಸಂಬಂಧ ಒಂದು ರೀತಿಯ ಶ್ರೀ ಕೃಷ್ಣ ಜನ್ಮಾಷ್ಟಮಿ ಗೂ ಇಮಾಂ ಸಾಹೇಬರಿಗೂ ಇರುವ ವ್ಯಾತ್ಯಾಸದ ರೀತಿ ಅಲ್ಲವೇ? RSS ಎಂದರೆ Really Simple Syndication ಎನ್ನುವ ಒಂದು ಚೊಕ್ಕ ಉಪಯೋಗಿ ತಂತ್ರಾಂಶ. ನಮಗೆ ಇಷ್ಟವಾದ ತಾಣಗಳ LIVE FEED ಗಳನ್ನು ಸುಲಭವಾಗಿ ನೀಡುವ ಈ ತಂತ್ರಾಂಶಕ್ಕೂ ಬಾಬಾ ರಿಗೂ ಇರಬಹುದಾದ ಸಂಬಂಧದ ಬಗ್ಗೆ ಯೋಚಿಸುತ್ತಾ ನನ್ನೀ ಲೇಖನ ಮುಕ್ತಾಯ.
ಚಿತ್ರ ಕೃಪೆ: http://janetyogahut.blogspot.com
Comments
ಉ: "ಪರಿವೃತ್ತ ಪಾರ್ಶ್ವಕೋನಾಸನ"