ಪರೀಕ್ಷೆ ವೇಳೆ ಭಾವನೆಗಳ ಕೆದಕುವ ಘಟನೆ ಮರುಕಳಿಸದಿರಲಿ

ಪರೀಕ್ಷೆ ವೇಳೆ ಭಾವನೆಗಳ ಕೆದಕುವ ಘಟನೆ ಮರುಕಳಿಸದಿರಲಿ

ರಾಜ್ಯದಲ್ಲಿ ನಡೆದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ವಿದ್ಯಾರ್ಥಿಗಳ ಜನಿವಾರ ಕತ್ತರಿಸಿದ, ತೆಗೆಯಿಸಿದ್ದು ತೀವ್ರ ವಿವಾದಕ್ಕೆ ಕಾರಣವಾದದ್ದು ಹಸುರಾಗಿರುವಂತೆಯೇ ರವಿವಾರ ನಡೆದ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ (ನೀಟ್)ನಲ್ಲೂ ಕೆಲವೆಡೆ ಇಂಥದ್ದೇ ಪ್ರಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಕಲಬುರಗಿಯ ಪರೀಕ್ಷಾ ಕೇಂದ್ರವೊಂದರಲ್ಲಿ ವಿದ್ಯಾರ್ಥಿಗೆ ಜನಿವಾರ ತೆಗೆಯುವಂತೆ ಸೂಚಿಸಲಾಗಿದ್ದು, ಆತ ಶೈಕ್ಷಣಿಕ ಭವಿಷ್ಯವನ್ನು ಗಮನದಲ್ಲಿ ಇರಿಸಿ ಕೊಂಡು ಜನಿವಾರ ತೆಗೆದಿಟ್ಟು ಪರೀಕ್ಷೆ ಬರೆದಿದ್ದಾನೆ. ಇದರ ಬೆನ್ನಲ್ಲೇ ಪ್ರತಿಭಟನೆಗಳು, ಆರೋಪ ಪ್ರತ್ಯಾರೋಪಗಳು ಆರಂಭಗೊಂಡಿವೆ. ಇಂತಹ ಎಲ್ಲ ಸನ್ನಿವೇಶಗಳನ್ನು ವಿದ್ಯಾರ್ಥಿಗಳ ಹಿತವನ್ನು ಕಾಪಾಡುವ ಗುರಿ ಇರಿಸಿಕೊಂಡು ನಿಭಾಯಿಸಬೇಕಾಗಿದೆ. ಇದಕ್ಕಾಗಿ ಪರೀಕ್ಷಾ ಕೇಂದ್ರಗಳಲ್ಲಿ ಕರ್ತವ್ಯನಿರತರು ವಿವೇಚನೆಯಿಂದ ವರ್ತಿಸುವ, ಪರೀಕ್ಷಾ ಅಕ್ರಮಗಳನ್ನು ತಡೆಯಲು ಪರ್ಯಾಯ ಕ್ರಮಗಳನ್ನು ಅನುಸರಿಸುವ ನಿಟ್ಟಿನಲ್ಲಿ ಚಿಂತಿಸಬೇಕಾಗಿದೆ.

ಇತ್ತೀಚೆಗೆ ನಡೆದ ಸಿಇಟಿ ಪರೀಕ್ಷೆಯ ವೇಳೆ ರಾಜ್ಯದ ಹಲವೆಡೆ ಪರೀಕ್ಷಾ ಕೇಂದ್ರ ಗಳಲ್ಲಿ ಪರೀಕ್ಷಾರ್ಥಿಗಳು ಧರಿಸಿದ್ದ ಜನಿವಾರವನ್ನು ತೆಗೆಸಲಾಗಿತ್ತು. ಇದು ವಿವಾದ ವಾದ ಬೆನ್ನಿಗೆ ರೈಲ್ವೇ ಇಲಾಖೆಯ ಪರೀಕ್ಷೆಯಲ್ಲಿ ಇಂಥದೇ ಸನ್ನಿವೇಶ ಏರ್ಪಡುವುದನ್ನು ಮನಗಂಡು ಕೇಂದ್ರ ಸಚಿವರು ಧಾರ್ಮಿಕ ಸಂಕೇತಗಳಿಗೆ ವಿನಾಯಿತಿ ಸೂಚಿಸಿ ಆದೇಶಿಸಿದ್ದರು. ಈಗ ನೀಟ್ ಪರೀಕ್ಷೆಯ ವೇಳೆ ಕಲಬುರಗಿಯ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ತೆಗೆಯಿಸಲಾಗಿದೆ. ಇದು ವಿವಾದದ ಸ್ವರೂಪ ಪಡೆದಿದೆ. ಪ್ರತಿಭಟನೆ ನಡೆಯುತ್ತಿದ್ದಂತೆ ಪರೀಕ್ಷಾ ಕೇಂದ್ರದ ಸಿಬಂದಿಯಿಬ್ಬರ ವಿರುದ್ಧ ದೂರು ದಾಖಲಾಗಿದ್ದು, ಅವರ ಬಂಧನವೂ ಆಗಿದೆ.

ಸಿಇಟಿ ಆಗಲಿ, ನೀಟ್ ಆಗಲಿ; ಇಂತಹ ಯಾವುದೇ ಪರೀಕ್ಷೆಗಳಲ್ಲಿ ಅಕ್ರಮಗಳನ್ನು ತಡೆಯುವ ಉದ್ದೇಶದಿಂದ ಡಿಜಿಟಲ್ ಗ್ಯಾಜೆಟ್‌ಗಳು, ಪೂರ್ಣ ತೋಳಿನ ಶರಟು, ಲೋಹದ ತೊಡುಗೆಗಳು, ಸರ ಇತ್ಯಾದಿಗಳನ್ನೆಲ್ಲ ನಿಷೇಧಿಸಿರುತ್ತಾರೆ. ಅತೀ ಸೂಕ್ಷ್ಮ ವಾದ ಡಿಜಿಟಲ್ ಸಂಪರ್ಕ ಸಾಧನಗಳನ್ನು ಇರಿಸಿಕೊಂಡು ಅಕ್ರಮ ಎಸಗುವ ಸಾಧ್ಯತೆ ಇರುವುದೇ ಇದಕ್ಕೆ ಕಾರಣ. ಆದರೆ ಇಂತಹ ನಿಷೇಧಿತ ತೊಡುಗೆಗಳ ಪಟ್ಟಿಯಲ್ಲಿ ಜನಿವಾರ ಇಲ್ಲ ಎಂಬುದು ಒಂದು ಅಂಶ. ಜನಿವಾರ ಧರಿಸುವ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳ ಪಾಲಿಗೆ ಪರೀಕ್ಷಾ ಕೇಂದ್ರದಲ್ಲಿಯೇ ಆಗಲಿ, ಇನ್ನೆಲ್ಲೇ ಆಗಲಿ, ಅದನ್ನು ತೆಗೆಯಬೇಕು ಎಂದಾಗ ಆಘಾತವಾಗುವುದು ಸಹಜ. ಮಂಗಳಸೂತ್ರಕ್ಕೆ ನಿಷೇಧ ಇದ್ದು, ಇದರ ವಿಷಯವೂ ಹೀಗೆಯೇ ಇದೆ.

ಇಂತಹ ಸಂದರ್ಭದಲ್ಲಿ ಕಾನೂನು, ನಿಯಮ ಪರಿಪಾಲನೆ ಕುಂದಿಲ್ಲದಂತೆ ನಡೆಯುತ್ತದೆಯಾದರೂ ವಿದ್ಯಾರ್ಥಿಗಳ ಪಾಲಿಗೆ ಅದು ಆಘಾತವನ್ನು ಉಂಟು ಮಾಡುತ್ತದೆ. ಸಿಇಟಿಯ ಸಂದರ್ಭದಲ್ಲಿ ಒಬ್ಬ ವಿದ್ಯಾರ್ಥಿ ಜನಿವಾರ ತೆಗೆಯಲು ನಿರಾಕರಿಸಿ ಪರೀಕ್ಷೆಯನ್ನು ಬರೆದಿಲ್ಲವಾದರೆ ಇನ್ನು ಕೆಲವೆಡೆ ವಿದ್ಯಾರ್ಥಿಗಳು ಜನಿವಾರ ತೆಗೆದು ಪರೀಕ್ಷೆ ಬರೆದಿದ್ದಾರೆ. ಇಂತಹ ಸನ್ನಿವೇಶಗಳಲ್ಲಿ ಪರೀಕ್ಷಾ ಕೇಂದ್ರಗಳಲ್ಲಿ ಕರ್ತವ್ಯ ನಿರತರು ವಿವೇಚನೆಯಿಂದ ವರ್ತಿಸಬೇಕು. ನಿಯಮವನ್ನು ಅಕ್ಷರಶಃ ಪಾಲಿಸುವ ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳುವ ಬದಲು ಮೇಲಧಿಕಾರಿಗಳ ಜತೆಗೆ ಸಮಾಲೋಚಿಸಿ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ. ಪರೀಕ್ಷೆಗಳನ್ನು ನಡೆಸುವ ಸಂಬಂಧಿತ ಸರಕಾರಿ ಇಲಾಖೆಗಳು, ಸಂಸ್ಥೆಗಳು ಈ ಬಗ್ಗೆ ವಿವೇಕಯುತವಾದ ನಿರ್ಧಾರ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಇಂತಹ ಸನ್ನಿವೇಶಗಳು ಏರ್ಪಡದಂತೆ ಎಚ್ಚರ ವಹಿಸಬೇಕು. ಪರೀಕ್ಷಾ ಅಕ್ರಮಗಳನ್ನು ತಡೆಯುವ ಇತರ ಪರಿಣಾಮಕಾರಿ ಮಾರ್ಗಗಳನ್ನು ಹುಡುಕಬೇಕು.

ಇನ್ನೊಂದೆಡೆ, ಇಂತಹ ಭಾವನಾತ್ಮಕ ಪ್ರಕರಣಗಳನ್ನು ರಾಜಕೀಯವಾಗಿ ಉಪಯೋಗಿಸಲಾಗುತ್ತದೆ. ಇದಕ್ಕೆ ಕೂಡ ಪೂರ್ಣ ವಿರಾಮ ಬೀಳಬೇಕು. ಅಂತಿಮವಾಗಿ ಇಲ್ಲಿ ವಿದ್ಯಾರ್ಥಿಗಳ ಹಿತ ಮುಖ್ಯ ಎಂಬುದನ್ನು ಎಲ್ಲರೂ ಗಮನದಲ್ಲಿ ಇರಿಸಿಕೊಂಡು ಮುನ್ನಡೆಯಬೇಕಾಗಿದೆ.

ಕೃಪೆ: ಉದಯವಾಣಿ, ಸಂಪಾದಕೀಯ, ದಿ: ೦೬-೦೫-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ