ಪರ್ಯಾಯ ರಾಜಕೀಯ ಶಕ್ತಿಯ ನಿರೀಕ್ಷೆಯಲ್ಲಿ ಕನ್ನಡಿಗರು...(ಭಾಗ 1)

ಪರ್ಯಾಯ ರಾಜಕೀಯ ಶಕ್ತಿಯ ನಿರೀಕ್ಷೆಯಲ್ಲಿ ಕನ್ನಡಿಗರು...(ಭಾಗ 1)

ಇತ್ತೀಚಿನ ಕೆಲವು ವರ್ಷಗಳಿಂದ ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಪಕ್ಷವೊಂದರ ಅವಶ್ಯಕತೆಯ ಬಗ್ಗೆ ಚರ್ಚೆಗಳು ಪ್ರಾರಂಭವಾಗಿದೆ.  ಕಾಂಗ್ರೆಸ್ ಬಿಜೆಪಿ, ಜೆಡಿಎಸ್ ಹೊರತುಪಡಿಸಿದ, ಪ್ರಾದೇಶಿಕ ಹಿತಾಸಕ್ತಿಯನ್ನು ಕಾಪಾಡುವ, ಕರ್ನಾಟಕ ಮತ್ತು ಕನ್ನಡದ ಅಸ್ಮಿತೆಯನ್ನು ಉಳಿಸುವ ಮತ್ತೊಂದು ರಾಜಕೀಯ ಪಕ್ಷ ಬೇಕು ಎಂಬ ಕೂಗು ಬಹಳ ದಿನಗಳಿಂದಲೂ ಕೇಳಿ ಬರುತ್ತಿದೆ. ಆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಬಗ್ಗೆ ಒಂದು ಚಿಂತನೆ. 

ಕರ್ನಾಟಕದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಯಶಸ್ಸಿನ  ಸಾಧ್ಯತೆ ಎಷ್ಟಿದೆ ? ಬಹಳ ಜನ ರಾಜಕೀಯಾಸಕ್ತರ ಪ್ರಶ್ನೆ ಇದು. ಬದಲಾವಣೆ ಬಯಸುವ ಮನಸ್ಸುಗಳ ಕನಸು ಸಹ ಇದು. ಈ ವ್ಯವಸ್ಥೆಯ ಭ್ರಷ್ಟತೆಗೆ ರೋಸಿ ಹೋದ ಜನರ ಕುತೂಹಲವೂ ಇದೇ ಆಗಿದೆ. ಅದನ್ನು ಪರಿಶೀಲಿಸುವ ಮೊದಲು 1950 ರಿಂದ ಇಂದಿನವರೆಗೆ ಕರ್ನಾಟಕದ ರಾಜಕೀಯ ಹೋರಾಟದ ಇತಿಹಾಸದ ಒಂದು ಸಂಕ್ಷಿಪ್ತ ಅವಲೋಕನ.

1950 ರಿಂದ 1983 ರ ವರೆಗೂ ಅಂದರೆ ಆರ್ . ಗುಂಡೂರಾವ್ ಮುಖ್ಯಮಂತ್ರಿಯವರೆಗೆ ಕಾಂಗ್ರೆಸ್‌ ಪಕ್ಷದ್ದೇ ಆಡಳಿತ. ಕಮ್ಯುನಿಸ್ಟ್ ಮತ್ತು ಪ್ರಜಾ ಸೋಷಿಯಲಿಸ್ಟ್ ಪಕ್ಷಗಳು ಪ್ರಾರಂಭದ ವಿರೋಧ ಪಕ್ಷಗಳು. ನಂತರದಲ್ಲಿ ಜನತಾ ಪಕ್ಷ ಮುಖ್ಯ ವಿರೋಧ ಪಕ್ಷವಾಯಿತು. 1983 ರಲ್ಲಿ  ಮೊದಲ ಬಾರಿಗೆ ಜನತಾ ಪರಿವಾರವೆಂದು ಗುರುತಿಸಲ್ಪಡುವ ಈಗಿನ  ಜನತಾದಳ ಆಡಳಿತ ಪಕ್ಷವಾಗಿ ಮತ್ತು ನಂತರದ ವರ್ಷಗಳಲ್ಲಿ ವಿರೋಧ ಪಕ್ಷವಾಗಿ ಅಧಿಕಾರದ ಬದಲಾವಣೆ ಆಗಿ ಅದು ಈಗಲೂ ಅಸ್ತಿತ್ವದಲ್ಲಿದೆ. ಈ ಮಧ್ಯೆ ಜನಸಂಘ ಎಂಬ ಪಕ್ಷ ಭಾರತೀಯ ಜನತಾ ಪಕ್ಷವಾಗಿ ನಿಧಾನವಾಗಿ ಬೇರೂರಿ, ಪ್ರಬಲ ವಿರೋಧ ಪಕ್ಷವಾಗಿ, ಸಮ್ಮಿಶ್ರ ಸರ್ಕಾರದ ಭಾಗವಾಗಿ ನಂತರ ಮುಖ್ಯ ವಿರೋಧ ಪಕ್ಷ ಮತ್ತು ಆಡಳಿತ ಪಕ್ಷವಾಗಿ ಹೊರಹೊಮ್ಮಿದೆ.

ಈಗಿನ ವಾಸ್ತವ ಸನ್ನಿವೇಶವೆಂದರೆ, ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪ್ರಬಲ ಪಕ್ಷಗಳಾದರೆ ಜನತಾದಳ ಮೂರನೆಯ ಶಕ್ತಿಯಾಗಿದೆ.  ಉಳಿದ ಯಾವುದೇ ಪಕ್ಷಗಳು ಪ್ರಮುಖ ರಾಜಕೀಯ ಮಹತ್ವ ಪಡೆದಿಲ್ಲ. ಇದನ್ನು ಹೊರತುಪಡಿಸಿ ಪರ್ಯಾಯ ಶಕ್ತಿಗಳ ಪ್ರಯತ್ನಗಳ ಬಗ್ಗೆಯೂ ಒಂದಷ್ಟು ಮಾಹಿತಿ.

ಕಾರ್ಮಿಕ ಹೋರಾಟವನ್ನೇ ಮುಖ್ಯವಾಗಿ ಗುರಿಯಾಗಿಸಿಕೊಂಡಿದ್ದ ಕಮ್ಯೂನಿಸ್ಟ್ ಪಕ್ಷಗಳು ಮತ್ತು ಅದರ ನಾಯಕರು ಪ್ರಾರಂಭದಲ್ಲಿ ಪ್ರಬಲರಾಗಿದ್ದು ಕಾರ್ಮಿಕರ ಧ್ವನಿಯಾಗಿ ಹೋರಾಟಗಳನ್ನು ರೂಪಿಸಿದರು. ಅವರೇ ಮುಖ್ಯ ವಿರೋಧ ಪಕ್ಷವಾಗಿದ್ದರು. ಆದರೆ ನಂತರದಲ್ಲಿ ದುರ್ಬಲವಾಗುತ್ತಾ ಸಾಗಿ ಈಗ ರಾಜಕೀಯವಾಗಿ ಕರ್ನಾಟಕದಲ್ಲಿ ಅಂತಹ ಮಹತ್ವ ಪಡೆದಿಲ್ಲ.  ಶಾಂತವೇರಿ ಗೋಪಾಲಗೌಡರ ಸಮಯದಲ್ಲಿ ಸಮಾಜವಾದಿ ಪಕ್ಷ ಪ್ರತಿಭಟನೆ, ಹೋರಾಟ ಮತ್ತು ವಿಧಾನಸಭಾ ಅಧಿವೇಶನದಲ್ಲಿ ಅತ್ಯಂತ ಪರಿಣಾಮಕಾರಿಯಾಗಿದ್ದರೂ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯುವಷ್ಟು ಬಲಶಾಲಿಯಾಗಿರಲಿಲ್ಲ.

ಕಾಂಗ್ರೆಸ್ ಪಕ್ಷದಿಂದ ವಿಭಜನೆ ಹೊಂದಿ ಒಂದು ಪರ್ಯಾಯ ಶಕ್ತಿಯ ಪ್ರಯತ್ನ ಮಾಡಿದ ಎಸ್. ನಿಜಲಿಂಗಪ್ಪ ಮತ್ತು ವೀರೇಂದ್ರ ಪಾಟೀಲರು ಸಹ ಯಶಸ್ವಿಯಾಗಲಿಲ್ಲ. ಕಾಂಗ್ರೆಸ್ ವಿರುದ್ಧ ಬಂಡಾಯವೆದ್ದ ದೇವರಾಜ ಅರಸು ಒಂದಷ್ಟು ಪರಿಣಾಮ ಬೀರಿ ಮುಂದೆ ಅದು ಕ್ರಾಂತಿರಂಗದ ರೂಪ ಪಡೆದು ಮೊದಲ ಕಾಂಗ್ರೆಸ್ಸೇತರ ಪಕ್ಷ ರಾಮಕೃಷ್ಣ ಹೆಗಡೆ ನೇತೃತ್ವದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು. ಅದೇ ಜನತಾ ಪರಿವಾರ ಎಂದು ಕರೆಯಲಾಗುತ್ತಿದ್ದ ಈಗಿನ ಜನತಾದಳ.

ಕಾಂಗ್ರೆಸ್ ಪಕ್ಷದಿಂದ ಸಿಡಿದ ಎಸ್‌. ಬಂಗಾರಪ್ಪ, ಜನತಾ ಪರಿವಾರದಿಂದ ಸಿಡಿದ‌ ದೇವೇಗೌಡ, ಭಾರತೀಯ ಜನತಾ ಪಕ್ಷದಿಂದ ಸಿಡಿದ ಯಡಿಯೂರಪ್ಪ, ಶ್ರೀರಾಮಲು, ಜನತಾ ದಳದಿಂದ ಸಿಡಿದ ಸಿದ್ದರಾಮಯ್ಯ ಯಾವುದೇ ಪರ್ಯಾಯ ಒದಗಿಸುವಲ್ಲಿ ವಿಫಲರಾದರು. ಸಣ್ಣ ಮಟ್ಟದ ಯಶಸ್ಸನ್ನು ಮಾತ್ರ ಪಡೆದರು. ಅಧಿಕಾರದಲ್ಲಿ ಇದ್ದ ಪಕ್ಷಗಳನ್ನು ಸೋಲಿಸುವಲ್ಲಿ ಮಾತ್ರ ಯಶಸ್ವಿಯಾದರು.

ಇದನ್ನು ಹೊರತುಪಡಿಸಿ ಇನ್ನೂ ಕೆಲವು ಪ್ರಯತ್ನಗಳು ನಡೆದವು. ರೈತ ಹೋರಾಟವನ್ನು ಹುಟ್ಟುಹಾಕಿ ಅದನ್ನು ರಾಜಕೀಯಗೊಳಿಸಿದ ಪ್ರೊಫೆಸರ್ ನಂಜುಂಡ ಸ್ವಾಮಿಯವರ ರೈತ ಸಂಘ, ಸಾಹಿತಿ, ಪತ್ರಕರ್ತ ಪಿ. ಲಂಕೇಶ್ ಅವರ ಪ್ರಗತಿರಂಗ, ವಾಟಾಳ್ ನಾಗರಾಜ್ ಅವರ ಕನ್ನಡ ಚಳವಳಿ ಪಕ್ಷ,  ವಿಜಯ್ ಮಲ್ಯ ಅವರ ಜನತಾ ಪಕ್ಷ, ವಿಜಯ್  ಸಂಕೇಶ್ವರ ಅವರ ಕನ್ನಡ ನಾಡು ಪಕ್ಷ, ಮುಸ್ಲಿಂ ಲೀಗ್, ಮಹದಾಯಿ ಹೋರಾಟ ಸಮಿತಿಯ ರೈತ ಪಕ್ಷಗಳು ಯಾವುದೇ ದೊಡ್ಡ ಪರ್ಯಾಯ ರಾಜಕೀಯ ಶಕ್ತಿಯಾಗಿ ಬೆಳೆಯಲಿಲ್ಲ.

ಜೊತೆಗೆ ಬಿಎಸ್ಪಿ, ಸಮಾಜವಾದಿ ಪಕ್ಷ, ಸಂಯುಕ್ತ ಜನತಾದಳ, ಪ್ರಮೋದ್ ಮುತಾಲಿಕ್ ಅವರ ಶ್ರೀರಾಮ ಸೇನೆ, ಶರದ್ ಪವಾರ್ ಅವರ ಎನ್ಸಿಪಿ, ಮುಸ್ಲಿಂ ಸಂಘಟನೆಗಳ ಪಿಎಫ್ಐ, ಎಸ್ಡಿಪಿಐ,  ದೇವನೂರು ಮಹಾದೇವ ಮುಂತಾದವರ ಇತ್ತೀಚೆಗಷ್ಟೇ  ಯೋಗೇಂದ್ರ ಯಾದವ್ ಅವರ ಸ್ವರಾಜ್ ಪಕ್ಷದಲ್ಲಿ ವಿಲೀನವಾದ ಸರ್ವೋದಯ, ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ, ವೆಂಕಟಸ್ವಾಮಿ ಅವರ ಸಮತಾ ಸೈನಿಕ ದಳ, ರವಿಕೃಷ್ಣಾರೆಡ್ಡಿಯವರ ಕರ್ನಾಟಕ ರಾಷ್ಟ್ರ ಸಮಿತಿ, ಉಪೇಂದ್ರ ಅವರ ಪ್ರಜಾಕೀಯ ಎಲ್ಲವೂ ಪರ್ಯಾಯ ಶಕ್ತಿಯಾಗಿ ಹೊರಹೊಮ್ಮಲು ಪ್ರಯತ್ನಿಸುತ್ತಿವೆ.

ಇಷ್ಟು ಇತಿಹಾಸವಿರುವ ಕರ್ನಾಟಕ ರಾಜ್ಯದ ರಾಜಕೀಯದಲ್ಲಿ ಪರ್ಯಾಯ ಶಕ್ತಿಗೆ ಇರುವ ಅವಕಾಶವಾದರೂ ಎಷ್ಟು ? ( ಕೆಲವು ಮಾಹಿತಿ ಬಿಟ್ಟು ಹೋಗಿದ್ದರೆ ಕ್ಷಮಿಸಿ. ಅದನ್ನು ನೆನಪಿಸಿದರೆ ಸ್ವಾಗತ ) ಯಾರು ಏನೇ ಹೇಳಿದರು, ರೈತ ಸಂಘಗಳು, ದಲಿತ ಸಂಘಟನೆಗಳು, ಕನ್ನಡ ಸಂಘಟನೆಗಳು, ಮಹಿಳಾ ಸಂಘಟನೆಗಳು, ಅಹಿಂದ ಸಂಘಟನೆ ಎಷ್ಟೇ ವ್ಯವಸ್ಥಿತವಾಗಿ ಹೋರಾಟ ಮಾಡುತ್ತಿದ್ದರೂ ಸಹ ಚುನಾವಣಾ ರಾಜಕೀಯದಲ್ಲಿ ಜನರ ಬಹುಮತಗಳನ್ನು ಪಡೆಯುವಲ್ಲಿ ವಿಫಲರಾಗುತ್ತಿದ್ದಾರೆ. ಹೋರಾಟಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುವಲ್ಲಿ ಈ ಸಂಘಟನೆಗಳು ಯಶಸ್ವಿಯಾದರೂ ಜನರು ಮಾತ್ರ ಚುನಾವಣೆಯಲ್ಲಿ ಮತವನ್ನು  ಸಾಂಪ್ರದಾಯಿಕ ಪಕ್ಷಗಳಿಗೇ ಆಧ್ಯತೆ ನೀಡುತ್ತಾರೆ. ಬಹುಶಃ ಬಡತನದ ಅನಿವಾರ್ಯತೆ, ಜಾತೀಯತೆ ಮತ್ತು ಅಜ್ಞಾನ ಕಾರಣವಾಗಿರಬಹುದು.

(ಇನ್ನೂ ಇದೆ)

-ವಿವೇಕಾನಂದ. ಎಚ್. ಕೆ., ಬೆಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ