ಪಾರ್ಶ್ವವಾಯು ಬಾರದಂತೆ ತಡೆಯಲು ಕೆಲವು ಸಲಹೆಗಳು

ಇಂದಿನ ಯಾಂತ್ರಿಕ ಯುಗದಲ್ಲಿ ನಮ್ಮ ಆಹಾರ, ಜೀವನ ಶೈಲಿ ಎಲ್ಲವೂ ಬದಲಾಗಿದೆ. ರಾಸಾಯನಿಕ ರಹಿತ ಆಹಾರ ಸೇವನೆ ಕಡಿಮೆಯಾಗಿ ಫಾಸ್ಟ್ ಫುಡ್ ಶೈಲಿಯ ಆಹಾರಕ್ಕೆ ಜನರು ಒಗ್ಗಿಗೊಂಡಿದ್ದಾರೆ. ಮನೆಯಲ್ಲೇ ಶುಚಿ-ರುಚಿಯಾಗಿ ತಯಾರಿಸುತ್ತಿದ್ದ ತಿಂಡಿ ಪದಾಥಗಳು ಈಗಿನ ಜನಾಂಗಕ್ಕೆ ರುಚಿಸದೇ ಹೋಟೇಲ್ ಊಟ, ತಿಂಡಿಗಳಿಗೆ ಮೊರೆ ಹೋಗಿ ಆಪತ್ತನ್ನು ಮೈಮೇಲೆ ಎಳೆದುಕೊಳ್ಳುತ್ತಿದ್ದಾರೆ. ಸಣ್ಣ ವಯಸ್ಸಿಗೇ ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ, ಮೂತ್ರಕೋಶದ ಸಮಸ್ಯೆಯಿಂದ ಬಳಲುವರ ಸಂಖ್ಯೆ ಅಧಿಕವಾಗುತ್ತಿದೆ. ಇದಕ್ಕೆ ಬಹಳಷ್ಟು ಕಾರಣ ನಮ್ಮ ಆಹಾರ ಮತ್ತು ಜೀವನಶೈಲಿ.
ಇಂದಿನ ಬದಲಾಗಿರುವ ಜೀವನ ಶೈಲಿಯಿಂದ ಅನೇಕ ಜನರಿಗೆ ಪಾರ್ಶ್ವವಾಯು ಸಮಸ್ಯೆ ಕಾಡುತ್ತಿದೆ. ಇದರ ಪರಿಣಾಮವಾಗಿ ದೇಹವು ನಮ್ಮ ಆಗುಹೋಗುಗಳಿಗೆ ಸ್ಪಂದಿಸದೇ ಸಮಸ್ಯೆ ತಂದೊಡ್ಡುತ್ತಿದೆ. ಯಾವುದೇ ಕೆಲಸ ಮಾಡಲು ಕೂಡ ಅಸಮರ್ಥವಾಗುತ್ತದೆ. ಹಾಸಿಗೆಯಲ್ಲೇ ಕುಳಿತು ಅಥವಾ ಮಲಗಿಕೊಂಡು ಬೇರೆಯವರ ಸಹಾಯದೊಂದಿಗೆ ನಮ್ಮ ದೈನಂದಿನ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಇದರಿಂದ ಕೂಡಲೇ ಹೊರಬಂದು ಮೊದಲಿನಂತಾಗುವುದು ಸಾಧ್ಯವಿಲ್ಲ. ಬಹಳಷ್ಟು ಸಮಯ ಔಷಧಿ, ವ್ಯಾಯಾಮದ ಅಗತ್ಯ ಇರುತ್ತದೆ. ಪಾರ್ಶ್ವವಾಯು ಅನ್ನು ತಡೆಗಟ್ಟಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಉತ್ತಮ.
ರಕ್ತದೊತ್ತಡ ನಿಯಂತ್ರಣ: ಅಧಿಕ ರಕ್ತದೊತ್ತಡವು ಪಾರ್ಶ್ವವಾಯು ಬರುವ ಅಪಾಯ ಹೆಚ್ಚಿಸುತ್ತದೆ. ರಕ್ತದೊತ್ತಡ ೧೨೦/೮೦ ಮೀರದಂತೆ ನೋಡಿಕೊಳ್ಳಬೇಕು. ನಿಮ್ಮ ರಕ್ತದೊತ್ತಡ ಹೆಚ್ಚಿದ್ದರೆ, ಆಹಾರ ಕ್ರಮ ಹಾಗೂ ವ್ಯಾಯಾಮದ ಮೂಲಕ ಅದನ್ನು ನಿಯಂತ್ರಣ ಮಾಡಿಕೊಳ್ಳಬೇಕಾಗುತ್ತದೆ. ಆದರೂ ಕೂಡ ನಿಯಂತ್ರಣಕ್ಕೆ ಬರದಿದ್ದರೆ ಔಷಧಿ ತೆಗೆದುಕೊಳ್ಳಬೇಕು ಎಂದು ವೈದ್ಯರು ಎಚ್ಚರಿಕೆ ನೀಡುತ್ತಾರೆ. ೨೦೧೯ರಲ್ಲಿ ದಿ ಲ್ಯಾನ್ಸೆಟ್ ನ್ಯೂರಾಲಜಿ ಜರ್ನಲ್ನಲ್ಲಿ ಪ್ರಕಟವಾದ 'ಪಾರ್ಶ್ವವಾಯುವಿಗೆ ಕಾರಣವಾಗುವ ಅಪಾಯಕಾರಿ ಅಂಶಗಳು: ವ್ಯವಸ್ಥಿತ ವಿಮರ್ಶೆ ಮತ್ತು ಮೆಟಾ-ವಿಶ್ಲೇಷಣೆ' ಎಂಬ ಅಧ್ಯಯನದಲ್ಲಿ ಈ ಬಗ್ಗೆ ಅಧಿಕ ಮಾಹಿತಿ ನೀಡಿದ್ದಾರೆ.
ಹೃದಯ ಬಡಿತದ ತಪಾಸಣೆ ಮಾಡಿ: ಅನಿಯಮಿತ ಹೃದಯ ಬಡಿತ (ಹೃತ್ಕರ್ಣದ ಕಂಪನ) ಪಾರ್ಶ್ವವಾಯುವಿಗೆ ಕಾರಣವಾಗುವ ಸಾಧ್ಯತೆಯನ್ನು ಐದು ಪಟ್ಟು ಹೆಚ್ಚು ಮಾಡುತ್ತದೆ. ನಿಮ್ಮ ಹೃದಯ ವೇಗವಾಗಿ ಹಾಗೂ ಅನಿಯಮಿತವಾಗಿ ಬಡಿಯುತ್ತಿದ್ದರೆ ಇದಕ್ಕೆ ಕಾರಣವೇನು ಎಂಬುದನ್ನು ಕಂಡು ಹಿಡಿಯಲು ನೀವು ವೈದ್ಯರನ್ನು ಸಂಪರ್ಕಿಸಬೇಕು. ಹೃತ್ಕರ್ಣದ ಕಂಪನ ಇದ್ದರೆ ಹೃದಯ ಬಡಿತವನ್ನು ನಿಧಾನಗೊಳಿಸುವ ಹಾಗೂ ರಕ್ತ ಹೆಪ್ಪುಗಟ್ಟುವುದನ್ನು ತಡೆಯುವ ಔಷಧಗಳನ್ನು ತೆಗೆದುಕೊಳ್ಳಲು ಸೂಚಿಸಲಾಗುತ್ತದೆ.
ಒತ್ತಡ ನಿಯಂತ್ರಿಸಲು ಸಲಹೆ: ಒತ್ತಡವು ದೇಹದಲ್ಲಿ ಉರಿಯೂತ ಉಂಟುಮಾಡುತ್ತದೆ. ಇದು ಪಾರ್ಶ್ವವಾಯುಗೆ ತುತ್ತಾಗುವ ಅಪಾಯಕ್ಕೆ ಕಾರಣವಾಗಬಹುದು. ಹೀಗಾಗಿ ಒತ್ತಡವನ್ನು (Tension) ಕಡಿಮೆ ಮಾಡಲು ಪ್ರಯತ್ನಿಸಬೇಕು. ಕೆಲಸದ ಒತ್ತಡದಿಂದಾಗಿ ನೀವು ಕಚೇರಿಯಲ್ಲಿ ಒತ್ತಡಕ್ಕೊಳಗಾಗಿದ್ದರೆ ಆಗಾಗ ನಿಮ್ಮ ಕುರ್ಚಿಯಿಂದ ಎದ್ದು, ಆಳವಾದ ಉಸಿರು ಎಳೆದುಕೊಂಡು ಹೊರಗಡೆ ಬಿಡಬೇಕಾಗುತ್ತದೆ. ಸ್ವಲ್ಪ ಹೊತ್ತು ಕಚೇರಿಯ ಅಥವಾ ಮನೆಯ ಆವರಣದಲ್ಲೇ ಸಣ್ಣ ವಾಕ್ ಮಾಡುವುದು ಉತ್ತಮ. ಒಂದೇ ಬಾರಿಗೆ ಹಲವು ವಿಧದ ಕೆಲಸಗಳನ್ನು ಮಾಡಲು ಪ್ರಯತ್ನಿಸಬಾರದು. ಒಂದು ಕೆಲಸ ಮುಗಿಸಿದ ಬಳಿಕ ಮತ್ತೊಂದು ಕಾರ್ಯವನ್ನು ಆರಂಭಿಸಬೇಕು. ಕೆಲಸದ ವಾತಾವರಣ ಶಾಂತವಾಗಿರಬೇಕು ಹಾಗೂ ಮನೆಯ ಸುತ್ತಮುತ್ತಲಿನಲ್ಲಿ ಸಣ್ಣ ಗಿಡಗಳನ್ನು ಬೆಳೆಸಬೇಕು. ಕಚೇರಿ ಕೆಲಸವನ್ನು ಮನೆಗೆ ತರುವ ಬದಲು ಕುಟುಂಬದ ಸದಸ್ಯರೊಂದಿಗೆ ಆರಾಮವಾಗಿ ಸಮಯ ಕಳೆಯುವ ಅಭ್ಯಾಸ ಮಾಡಿಕೊಳ್ಳಬೇಕು.
ಮಧುಮೇಹ ನಿಯಂತ್ರಣ: ಮಧುಮೇಹ ಇರುವವರಿಗೆ ಪಾರ್ಶ್ವವಾಯು ಬರುವ ಅಪಾಯ ೧.೫ ಪಟ್ಟು ಹೆಚ್ಚಾಗಿರುತ್ತದೆ. ಪ್ರಮುಖ ಕಾರಣವೆಂದರೆ ಹೆಚ್ಚಿನ ಗ್ಲೂಕೋಸ್ ಮಟ್ಟವು ದೇಹದ ರಕ್ತನಾಳಗಳು ಹಾಗೂ ನರಗಳಿಗೆ ಹಾನಿ ಉಂಟುಮಾಡುತ್ತದೆ. ಮಧುಮೇಹ ಇರುವವರು ಅಧಿಕ ರಕ್ತದೊತ್ತಡ ಹಾಗೂ ಬೊಜ್ಜು ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ. ಇದು ಹೃದ್ರೋಗ ಹಾಗೂ ಪಾರ್ಶ್ವವಾಯುವಿನ ಅಪಾಯ ಕೂಡ ಹೆಚ್ಚಿಸುತ್ತದೆ. ರತ್ಕದಲ್ಲಿರುವ ಗ್ಲುಕೋಸ್ ಅನ್ನು ನಿಯಂತ್ರಣದಲ್ಲಿಡುವುದು ತುಂಬಾ ಮುಖ್ಯ.
ಔಷಧಗಳನ್ನು ನಿಯಮಿತವಾಗಿ ತೆಗೆದುಕೊಳ್ಳಿ: ಜನರು ತಮ್ಮ ದೈನಂದಿನ ಔಷಧಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು. ವಿಶೇಷವಾಗಿ ಅವರಿಗೆ " ಮಧುಮೇಹ, ರಕ್ತದೊತ್ತಡ (ಬಿಪಿ)ದಂತಹ ಸಮಸ್ಯೆಗಳಿದ್ದರೆ, ಔಷಧಗಳನ್ನು ತೆಗೆದುಕೊಳ್ಳುವುದನ್ನು ವೈದ್ಯರ ಅನುಮತಿ ಇಲ್ಲದೇಮಧ್ಯದಲ್ಲಿ ನಿಲ್ಲಿಸುವುದು ಸೂಕ್ತವಲ್ಲ. ಆಗಾಗ ವೈದ್ಯರ ಸಲಹೆಗಳ ಪ್ರಕಾರ ಔಷಧಗಳನ್ನು ಸೇವಿಸಬೇಕಾಗುತ್ತದೆ.
ಅಧಿಕ ರಕ್ತದೊತ್ತಡ ಹಾಗೂ ತೂಕವಿದ್ದರೆ ಇಳಿಸೋದು ಉತ್ತಮ: ಅಧಿಕ ತೂಕ ಹಾಗೂ ಬೊಜ್ಜು ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಅಪಾಯ ಹೆಚ್ಚಿಸುತ್ತದೆ. ಇದರ ಪರಿಣಾಮ ಪಾರ್ಶ್ವವಾಯು ಒಳಗಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಅದಕ್ಕಾಗಿಯೇ ಪ್ರತಿದಿನ ಕನಿಷ್ಠ ಅರ್ಧ/ಮುಕ್ಕಾಲು ಗಂಟೆ ನಿಯಮಿತವಾಗಿ ವ್ಯಾಯಾಮ ಮಾಡುವುದು ಒಳ್ಳೆಯದು ಎಂದು ತಜ್ಞರು ಸೂಚನೆ ನೀಡುತ್ತಾರೆ.
ಹಣ್ಣುಗಳ ಸೇವನೆ: ಹಣ್ಣುಗಳು ಅದರಲ್ಲೂ ಪೀಚ್ (Peach) ಎಂಬ ಹಣ್ಣನ್ನು ತಿನ್ನುವುದರಿಂದ ಪಾರ್ಶ್ವವಾಯು ಅಗುವ ಅಪಾಯ ತಕ್ಕ ಮಟ್ಟಿಗೆ ಕಡಿಮೆ ಮಾಡಬಹುದು. ದೈನಂದಿನ ಆಹಾರದಲ್ಲಿ ಧಾನ್ಯಗಳು, ತಾಜಾ ತರಕಾರಿಗಳು ಹಾಗೂ ಫೈಬರ್ ಅಧಿಕವಾಗಿರುವ ಹಣ್ಣುಗಳನ್ನು ಸೇರಿಸಿಕೊಳ್ಳುವುದು ಉತ್ತಮ ವಿಧಾನ. ನಮಗೆ ದಿನಕ್ಕೆ ೨೫ ಗ್ರಾಂ ಫೈಬರ್ ಅಗತ್ಯವಿದೆ. ಹಣ್ಣು ತರಕಾರಿಗಳಲ್ಲಿರುವ ಫೈಬರ್ ಅಂಶವು ಪಾರ್ಶ್ವವಾಯು ತಗಲುವ ಅಪಾಯವನ್ನು ಶೇ.7ರಷ್ಟು ಕಡಿಮೆ ಮಾಡುತ್ತದೆ.
ಧೂಮಪಾನ ಮಾಡಬೇಡಿ: ಸಿಗರೇಟ್, ಬೀಡಿ ಹಾಗೂ ಪೈಪ್ ಸೇದುವವರು ವಿಶೇಷವಾಗಿ ಪಾರ್ಶ್ವವಾಯುವಿಗೆ ಒಳಗಾಗುವ ಅಪಾಯದಲ್ಲಿರುತ್ತಾರೆ. ಧೂಮಪಾನವು ರಕ್ತ ಹೆಪ್ಪು ಗಟ್ಟುವಿಕೆ, ರಕ್ತನಾಳಗಳ ಕಿರಿದಾಗುವಿಕೆ ಹಾಗೂ ರಕ್ತನಾಳಗಳಲ್ಲಿ ಪ್ಲೇಕ್ ರಚನೆಯ ಅಪಾಯ ಹೆಚ್ಚಿಸುತ್ತದೆ. ಪರಿಣಾಮವಾಗಿ, ಪಾರ್ಶವಾಯು ತಗಲುವ ಅಪಾಯ ಹೆಚ್ಚಾಗುತ್ತದೆ ಎಂದು ತಜ್ಞರು ತಿಳಿಸುತ್ತಾರೆ.
ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಬೇಕು: ನಮ್ಮ ದೇಹದಲ್ಲಿ ಹೆಚ್ಚು ಕೆಟ್ಟ ಕೊಲೆಸ್ಟ್ರಾಲ್ ಹಾಗೂ ಕಡಿಮೆ ಒಳ್ಳೆಯ ಕೊಲೆಸ್ಟ್ರಾಲ್ ಇದ್ದರೆ, ರಕ್ತನಾಳಗಳಲ್ಲಿ ಪ್ಲೇಕ್ ರಚನೆಯ ಅಪಾಯವನ್ನು ತುಂಬಾ ಹೆಚ್ಚು ಮಾಡುತ್ತದೆ. ಮೆದುಳಿಗೆ ರಕ್ತ ಪೂರೈಸುವ ರಕ್ತನಾಳಗಳಲ್ಲಿ ಇವು ರೂಪುಗೊಂಡರೆ, ಅವು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ ಎಂದು ತಜ್ಞರು ಎಚ್ಚರಿಕೆ ನೀಡುತ್ತಾರೆ. ಸ್ಯಾಚುರೇಟೆಡ್ ಕೊಬ್ಬಿನ ಪದಾರ್ಥಗಳ ಸೇವನೆ ಕಡಿಮ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದನ್ನು ತಡೆಯಲು ಸಹಾಯವಾಗುತ್ತದೆ. ವ್ಯಾಯಾಮ ಮಾಡುವುದರಿಂದ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು. ಇವು ಸಹಾಯ ಮಾಡದಿದ್ದರೆ ವೈದ್ಯರ ಸಲಹೆಯ ಮೇರೆಗೆ ಔಷಧಗಳನ್ನು ತೆಗೆದುಕೊಳ್ಳಬೇಕು ಎಂದು ತಜ್ಞರು ಸೂಚಿಸುತ್ತಾರೆ.
ಆರೋಗ್ಯಕರ ಜೀವನವನ್ನು ಸಾಗಿಸಲು ನಮ್ಮ ಜೀವನ ಶೈಲಿಯನ್ನೂ ಬದಲಾಯಿಸಿಕೊಳ್ಳುವುದು ಬಹಳ ಅಗತ್ಯ. ಪಾರ್ಶ್ವವಾಯು ತಲುಗಿದರೆ ಅದರಿಂದ ಬಹಳಷ್ಟು ಸಲ ಶಾಶ್ವತ ಅಂಗಾಂಗ ವೈಫಲ್ಯ ಆಗುವ ಸಾಧ್ಯತೆ ಇರುತ್ತದೆ. ಇದರಿಂದ ಗುಣಮುಖರಾಗುವ ಸಂಭವನೀಯತೆ ತುಂಬಾ ಕಡಿಮೆ. ಏಕೆಂದರೆ ಮಿದುಳಿಗೆ ಘಾಸಿಯಾಗಿರುವುದರಿಂದ ಕೂಡಲೇ ಇದರಿಂದ ಹೊರಬರಲು ಆಗದು. ನಿಯಮಿತ ಔಷಧೋಪಚಾರ, ಲಘು ವ್ಯಾಯಾಮಗಳು, ಫಿಸಿಯೋಥೆರಪಿ ವಿಧಾನದ ಮೂಲಕ ರೋಗಿಯಲ್ಲಿ ಸುಧಾರಣೆ ಕಾಣಲು ಸಾಧ್ಯ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ