ಪಾಳು ಬಾವಿಯಲ್ಲಿ ಸಿಕ್ಕಿದ ಜೇನು (ಭಾಗ 2)

ಪಾಳು ಬಾವಿಯಲ್ಲಿ ಸಿಕ್ಕಿದ ಜೇನು (ಭಾಗ 2)

ನೀರಿನ ಪಾತ್ರೆಗಳಾಗಿ ಜನರ ಬದುಕು ಕಟ್ಟಿಕೊಟ್ಟ ಈ ಬಾವಿಗಳು ನೀರಿಲ್ಲದೇ ದಿನಗಳು, ತಿಂಗಳುಗಳು, ವರ್ಷಗಳು ಕಳೆದಂತೆ ಈ ಬಾವಿಯಲ್ಲೇ ವಿವಿಧ ಜಾತಿಯ ಗಿಡ ಗಂಟೆಗಳು ಬೆಳೆದು ಅಕ್ಷರಶಃ ಗೂಬೆಗಳ ವಾಸಸ್ಥಾನ ಗಳಾದವು. ನಾನು ನನ್ನ ತಮ್ಮ ಬಾಲ್ಯದ ದಿನಗಳಲ್ಲಿ ಗೂಬೆಗಳ ನೋಡಲೆಂದೇ ಈ ಪಾಳು ಬಾವಿಗಳಿಗೆ ಬೇಟಿಕೊಟ್ಟು ಅವುಗಳ ಬೆಕ್ಕಿನಂತಹ ಮುಖವನ್ನು ನೋಡುವುದೇ ನಮಗೆ ಸಂಭ್ರಮವೆನಿಸುತ್ತಿತ್ತು. ಈ ಬಾವಿಗಳಲ್ಲಿ ನಾನು ಅಮ್ಮ ಗೂಬೆ, ಅಪ್ಪಗೂಬೆ ಮರಿಗೂಬೆ ಹೀಗೆ ಗೂಬೆಯ ಕುಟುಂಬವನ್ನೇ ನೋಡಿದ್ದೇನೆ. ಅವುಗಳನ್ನು ಕಲ್ಲು ಹೊಡೆದು ಹಾರಿಸಿ ಖುಷಿ ಪಡುತ್ತಾ ಬಾವಿಗಳು ಗೂಬೆಗಳ ಅಘೋಷಿತ ವಾಸದ ಮನೆಗಳಾಗೇ ರೂಪು ತಳೆದವು. ಇನ್ನೂ ನೀರಿಗಾಗಿ ಆಧುನಿಕ ಬೋರ್ ವೆಲ್ ಆಶ್ರಯಿಸಿ ಅಲ್ಪಸ್ವಲ್ಪ ಬಾವಿಗೆ ಸೇರುತಿದ್ದ ನೀರಿನಲ್ಲಿ ಎರಡ್ಮೂರು ಕೆಜಿ ಗಾತ್ರದ ನಾವು ಗೌಡರ ಕಪ್ಪೆ ಎಂದು ಕರೆಯುತ್ತಿದ್ದ Bull frog ಗಳು ಈ ಬಾವಿಯಲ್ಲಿ ಇರುತ್ತಿದ್ದವು. ನಾವು ಇವುಗಳನ್ನು ನೋಡಿ ಅವುಗಳಿಗೂ ಕಲ್ಲು ಹೊಡೆದು ನೀರಿಗೆ ಹಾರಿಸುವುದೇ ನಮ್ಮ ಕೆಲಸವಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಈ ಗೂಬೆಗಳ ಸಂತತಿಯೂ, ಕಪ್ಪೆಗಳ ಸಂತತಿಯೂ ಅಳಿವಿನಂಚಿಗೆ ಬಂದು ಈ ಪಾಳುಬಾವಿಯಲ್ಲಿ ಈಗ ಅಳಿಲುಗಳು ಮಾತ್ರ ಅಲ್ಲಲ್ಲಿ ಕಾಣಸಿಗುತ್ತಿವೆ.

ಒಂದಾನೊಂದು ಕಾಲದಲ್ಲಿ ನೀರಿನ ಪಾತ್ರೆಗಳಾಗಿದ್ದ ಬಾವಿಗಳು ನನ್ನ ಪಾಲಿಗೆ ಅಕ್ಷರಶಃ 'ಜೇನಿನ ಪಾತ್ರೆ' ಗಳಾಗಿದ್ದುದು ಈ ಪಾಳುಬಾವಿಗಳೇ... ಯಾಕೆಂದರೇ ಅಂದಿನ ದಿನಗಳಲ್ಲಿ ನನಗೆ ಅತ್ಯುತ್ತಮ ಪ್ರಮಾಣದ ಜೇನು ದೊರಕಿರುವುದು ಈ ಪಾಳುಬಾವಿಗಳಲ್ಲೇ...! ದಶಕಗಳಿಂದಲೂ ನಿಷ್ಪ್ರಯೋಜಕ ವಾದ ಯಾವುದಾದರೂ ಒಂದು ಬಾವಿಗೆ ಇಳಿದರೆ ಅದರಲ್ಲಿ ಬೆಳೆದ ಗಿಡಗಂಟೆಗಳಲ್ಲಿ ಕನಿಷ್ಠ ಎರಡು ಮೂರು ಜೇನು ಖಚಿತವಾಗಿ ಸಿಕ್ಕೇ ಸಿಗುತ್ತಿದ್ದವು. ಅಲ್ಲದೇ ಬಾವಿ ಹೊರತುಪಡಿಸಿ ಉಳಿದ ಜಾಗಗಳಲ್ಲಿ ಇರುತ್ತಿದ್ದ ಜೇನುಗಳು ಇತರ ಕುರಿಗಾಹಿಗಳಿಗೆ ಅವರಿವರ ಪಾಲಾಗುತ್ತಿದ್ದವು. ಆದರೆ ಇಳಿಯಲು ಹತ್ತಲು ಮೆಟ್ಟಿಲುಗಳು ಪೂರಾ ಸವೆದು ಅಳಿದುಳಿದ ಅಪಾಯಕಾರಿ ಮೆಟ್ಟಿಲುಗಳು/ಕೆಲವು ಬಾವಿಗಳು ಮಣ್ಣು ಕುಸಿದು ಮೆಟ್ಟಿಲೇ ಇಲ್ಲದ ಬಾವಿಗಳಲ್ಲಿ ಮಾತ್ರ ಅಪ್ಪಿ ತಪ್ಪಿಯೂ ಯಾರೂ ಇಳಿಯುತ್ತಿರಲಿಲ್ಲ. ಆದರೆ ನಾನು ಮಾತ್ರ ಇಂತಹ ಬಾ‌ವಿಗಳಲ್ಲಿ ಇಳಿಯುವ ಸಾಹಸ ಮಾಡುತ್ತಿದ್ದೆ. ಆ ಬಾವಿಗಳು ನೀರಿಲ್ಲದೇ ಎರಡ್ಮೂರು ದಶಕಗಳೇ ಕಳೆದುದರಿಂದ ಇಳಿಯಲು ಹತ್ತಲು ಮಾಡಿದ್ದ ಹಾದಿ ಮಳೆಯ ನೀರಿಗೆ ಪೂರ ಸವೆದು ಹೋಗಿ ಇಳಿಯಲು ಬಾರದ ಸ್ಥಿತಿಯನ್ನು ತಲುಪಿದ್ದವು. ಆದರೆ ಬಾವಿಯ ಒಳಗಡೆ ಬಹಳ ಗಿಡಗಂಟೆಗಳು, ಗಿಡಮರಗಳು ಬೆಳೆದಿರುತ್ತಿದ್ದವು. 

ಒಮ್ಮೆ ನಾನು ನಮ್ಮನೆಯಿಂದ ಒಂದೂವರೆ ಕಿಲೋಮೀಟರ್ ದೂರದಲ್ಲಿದ್ದ ಅಂತಹ ಒಂದು ಪಾಳುಬಾವಿಯ ಸಮೀಪ ಬಂದೆ. ಒಳಗಿನಿಂದ ಮೇಲೆ ಹುಳ ಹೊರಬರುವುದು, ಒಳಹೋಗುವುದು ಗಮನಿಸಿದ ನಾನು ಇಳಿಯುವ ಜಾಗ ತುಂಬಾ ಸವೆದು ಕಡಿದಾಗಿದ್ದರೂ ಹಾಗೆ ಜಾರುವ ಬಂಡಿಯ ರೀತಿ ಜಾರಿ ಇಳಿದುಬಿಟ್ಟೆ. ಇಳಿ ಇಳಿಯುತ್ತಲೇ ಒಂದು ಜೇನು ಬಾವಿಯ ಮೂಲೆಯಲ್ಲಿದ್ದ ಹಳೆಯ ಮುಳ್ಳುಗಂಟಿಗಳಲ್ಲಿ ಇದ್ದುದು ಕಣ್ಣಿಗೆ ಬಿತ್ತು. ತಡಮಾಡದೇ ಕಿತ್ತು ತೆಗೆದೆ. ಸಮಾರು ಇನ್ನೂರು ಮುನ್ನೂರು ಗ್ರಾಂಗಳಷ್ಟು ತುಪ್ಪ ಇರಬಹುದು. ತುಪ್ಪ ಚೆನ್ನಾಗಿಯೇ ಇತ್ತು. ಅಂದು ಜೇನಿಗಾಗಿ ಬಹಳ ಹೊತ್ತು ಅಲೆದಾಡಿದ್ದರಿಂದ ಹೊಟ್ಟೆಗೆ ಏನಾದರೂ ಹಾಕಬೇಕಿತ್ತು. ಹಸಿವೆಯಿಂದ ಜೇನನ್ನು ಬಾಯಲ್ಲಿಡುತ್ತಾ ಮೇಲೆ ನೋಡಿದೆ. ಬಾವಿಯಲ್ಲಿದ್ದ ಸಾಧಾರಣ ಎತ್ತರದ ಬೇವಿನ ಮರದಲ್ಲಿ ಹೆಜ್ಜೇನಿನಂತೆ ಕೋಲು ಜೇನು ಗೂಡು ಕಟ್ಟಿತ್ತು. ಆ ಜೇನು ಕಟ್ಟಿ ಕನಿಷ್ಟ ಒಂದುವರೆ ಎರಡು ತಿಂಗಳುಗಳು ಆಗಿರಬಹುದು. ಮೊಳದಷ್ಟು ಉದ್ದ ಬರಿ ತಲೆಯ ಭಾಗ ಇತ್ತು. ಹಸಿದ ಹೊಟ್ಟೆಗೆ ಕೈಯಲ್ಲಿ ಹಿಡಿದ ಮಧುರ ಜೇನನ್ನು ಅಲ್ಲೇ ಕುಳಿತು ಪೂರಾ ಖಾಲಿ ಮಾಡಿದೆ. ಜೇನು ಮತ್ತು ಜೇನಿನ ತಟ್ಟಿ/ರೊಟ್ಟಿ ನಾನು ಕೈಯಲ್ಲಿ ಹಿಡಿದುದರಿಂದ ಜೇನುನೊಣಗಳು ಅದರ ಮೇಲೆ ಕುಳಿತುಕೊಳ್ಳಲು ಹತ್ತಿರ ಬಂದು ಕುಳಿತುಕೊಳ್ಳಲು ಪ್ರಯತ್ನಿಸುತ್ತಿದ್ದವು. ನಾನು ಕೈ ಬೀಸುತ್ತಾ ಅವುಗಳನ್ನು ಕೊಡವಿ ತಿಂದು ಖಾಲಿ ಮಾಡಿದೆ. ಕೆಲವೊಮ್ಮೆ ತುಪ್ಪ ಮಾತ್ರ ತೆಗೆದು ಅದರ ರೊಟ್ಟಿಯ ಭಾಗವನ್ನು ಅಲ್ಲಿಯೇ ಬಿಟ್ಟರೆ ಪುನಃ ಅವು ಅಲ್ಲಿಯೇ ಇದ್ದು ತುಪ್ಪದ ಭಾಗವನ್ನು ಪುನಃ ನಿರ್ಮಾಣ ಮಾಡಿ ತಮ್ಮ ಸಂತಾನೋತ್ಪತ್ತಿ ಕಾರ್ಯವನ್ನು ಮಾಡಿಕೊಳ್ಳುತ್ತವೆ. ನಾನು ಒಂದೇ ದಿನ ಹತ್ತಾರು ಜೇನು ತೆಗೆದರೆ ಜೇನುತಟ್ಟೆಯನ್ನು ಸಾಮಾನ್ಯವಾಗಿ ಹಾಗೆ ಬಿಟ್ಟು ಬರುತ್ತಿದ್ದೆ. ಜೇನು ತಿಂದು ಬೆರಳನ್ನು ಚೀಪುತ್ತಾ ಮಚ್ಚು ಹಿಡಿದು ಬೇವಿನ ಮರವನ್ನು ಹತ್ತಿದೆ. ಮಚ್ಚಿನ ಸಹಾಯದಿಂದ ಗೂಡುಕಟ್ಟಿದ ಕೊನೆಯನ್ನು ಅಲ್ಲಾಡಿಸುತ್ತಾ ಅದರ ಕೊನೆಯನ್ನು ಕಡಿದೆ. ತಟ್ಟಿ ಬಹಳ ಅಗಲವಾಗಿದ್ದರಿಂದ ಮತ್ತು ಬೇವಿನ ಮರ ನೇರವಾಗಿದ್ದುದರಿಂದ ಜೇನನ್ನೂ ಕೈಯಲ್ಲಿ ಹಿಡಿಯಬೇಕಿತ್ತು. ಹಾಗೂ ಮರದಿಂದ ಇಳಿಯಲು ಎರಡೂ ಕೈಗಳ ಸಹಾಯ ಬೇಕಾಗಿತ್ತು. ಒಂದು ಕೈಯಲ್ಲಿ ಮರ ಇಳಿಯುವುದು ಅಸಾಧ್ಯವಾಗಿದ್ದರಿಂದ ಜೇನುತಟ್ಟೆಯನ್ನು ಅಲ್ಲೇ ಬೇವಿನ ಮರದ ಕವಲಿನ ಕಾಂಡಕ್ಕೆ ಸಿಕ್ಕಿಸಿ, ಮಚ್ಚನ್ನು ಕೆಳಗೆಸೆದು ಬಾಯಿಯಲ್ಲಿ ತುಪ್ಪದ ಕೊನೆಯನ್ನು ಕಚ್ಚಿಕೊಂಡು ಜಾರುತ್ತಾ ಬೇವಿನ ಮರದಿಂದ ಬಾವಿಯೊಳು ಇಳಿದೆ. ಹಸಿದ ಹೊಟ್ಟೆಗೆ ಜೇನು ತಿಂದೂ ಆಯಿತು ಕೈಯಲ್ಲೊಂದು ಹಿಡಿದೂ ಆಯಿತು. ನಡೆ ಹೋಗೋಣ ಎಂದು ಮೆಟ್ಟಿಲಕಡೆ ನೋಡಿದರೆ ಚೌಕಾಕಾರದ ಧರೆಯಷ್ಟೇ ಕಾಣುತ್ತಿದೆ. ಮೆಟ್ಟಿಲುಗಳೇ ಕಾಣುತ್ತಿಲ್ಲ. ಗೋಡೆ ಅಂಟಿಕೊಂಡ ಒಂದು ಅಡಿಯಷ್ಟು ಮಟ್ಟಿಲುಗಳ ಅವಶೇಷ ಇದೆ ಬಿಟ್ಟರೆ ಮಳೆಯ ನೀರಿಗೆ ಮಣ್ಣು ಕೊಚ್ಚಿ ಬರಿ ಕಲ್ಲಿನ ಹರಳುಗಳು ಮಾತ್ರ ಮೆಟ್ಟಿಲ್ಲಿ ಉಳಿದು ಹತ್ತಲು ಹಿಡಿತ ಸಿಗುತ್ತಿಲ್ಲ. ಭೂಮಿಯ ಮೇಲ್ಮೈಗಿಂತಲೂ ಆಳಕ್ಕೆ ಹೋದಂತೆಲ್ಲಾ ಭೂಮಿಯ ಗುರುತ್ವ ಹೆಚ್ಚುತ್ತಾ ಹೋಗುತ್ತದೆ. ಅಥವಾ ಆಳದಲ್ಲಿರುವ ವಸ್ತುವು ಹೆಚ್ಚು ಗುರುತ್ವವನ್ನು ಪಡೆಯುತ್ತದೆ. ಈ ನಿಯಮಾನುಸಾರ ಗುರುತ್ವ ಬಲ ನನ್ನನ್ನು ಕಡಿಮೆ ಅಸ್ಪಷ್ಟ ಜಾಗದಲ್ಲಿ ಸರಳವಾಗಿ ಹತ್ತಲು ಅವಕಾಶ ಮಾಡಿಕೊಡುತ್ತಿಲ್ಲ. ಮೆಟ್ಟಿಲು ಅಗಲವಾಗಿಲ್ಲದಿದ್ದರೆ ಕೊನೇ ಪಕ್ಷ ಒಂದು ಕಾಲು ಬಿಗಿಯಾಗಿ ಇಟ್ಟು ಮೆಟ್ಟಿಲಗೋಡೆ ಸಪೋರ್ಟ್ ಸಿಕ್ಕರೆ ಸಾಕಿತ್ತು. ಹತ್ತಬಹುದಿತ್ತು. ಆದರೆ ಮೆಟ್ಟಿಲಗೊಡೆಯು ದಶಕಗಳ ಮಳೆಯ ರಭಸ ಮತ್ತು ಪ್ರಾಕೃತಿಕ ಕಾರಣಗಳಿಂದ ಆಕೃತಿ ಕಳೆದು ಹುಡಿ ಹುಡಿಯಾದ ಮಣ್ಣು ಮಾತ್ರ ಸಿಗುತ್ತಿದೆ. ಒಂದೆರಡು ಹೆಜ್ಜೆ ಇಡಬಹುದಾದರೂ ಮೇಲೆತ್ತಲು ಆಗುತ್ತಿಲ್ಲ. ಹೀಗೆ ಹತ್ತಲು ಪ್ರಯತ್ನಿಸುತ್ತಾ ಒಮ್ಮೆ ಎರಡು ಮೂರು ಅಡಿ ಹಿಂದಕ್ಕೆ ಜಾರಿದ್ದರಿಂದ ತೊಡೆ ಮೊಣಕಾಲು ತರಚಿಹೋದವು. ಹೀಗೆ ಹತ್ತಾರು ಬಾರಿ ಪ್ರಯತ್ನಿಸಲಾಗಿ ಪ್ರತಿ ಪ್ರಯತ್ನವೂ ವಿಫಲವಾಗಿ ನನ್ನ ಆತ್ಮವಿಶ್ವಾಸ ಕುಂದುತ್ತಾ ಹೋಯಿತು. ಹತ್ತುತ್ತಾ... ಜಾರುತ್ತಾ ನನ್ನ ಪ್ರಯತ್ನಕ್ಕೆ ನನ್ನ ದೇಹ ಆಯಾಸವಾಯಿತು. 

ಬೇಸಿಗೆಯಾಗಿದ್ದುದರಿಂದ ಆ ಬಾವಿಯಲ್ಲಿ ಹೆಚ್ಚು ಗಾಳಿಯಾಡದೇ ಒಂದು ರೀತಿಯ ನಿರ್ವಾತ (ಗಾಳಿಯಾಡದ) ಪ್ರದೇಶದಂತಾಗಿತ್ತು. ಬಡಕಲದೇಹವೇ ವಿಪರೀತ ಬೆವೆಯಿತು. ಅಂದು ನಾನು ಸಹಾಯಕ್ಕೆ ಹಗ್ಗವನ್ನೂ ಅಥವಾ ಯಾರನ್ನಾದರೂ ಕರೆದುಕೊಂಡು ಹೋಗಿದ್ದರೆ ಚೆನ್ನಿತ್ತು. ಆದರೆ ಆಕಸ್ಮಿಕವಾಗಿ ಹಗ್ಗವೂ ಸಹಚರರು ಇಲ್ಲದೇ ಇದ್ದುದುದರಿಂದ ಬಾವಿಯಿಂದ ಮೇಲೆ ಹತ್ತಲಾಗದೇ ಗಲಿಬಿಲಿ ಹೆಚ್ಚತೊಡಗಿತು. ಬಾವಿಯಲ್ಲಿ ನೀರಿದ್ದ ಕಾಲದಲ್ಲಿ ಬಾವಿಯಲ್ಲಿ ಯಾರಾದರೂ ಮುಳುಗಿ ಸತ್ತಿದ್ದರೆ ಸತ್ತವರು ದೆವ್ವ-ಪ್ರೇತಗಳಾಗಿ ಅಲ್ಲೇ ಇರುತ್ತಾರೆಂದೂ, ಯಾರಾದರೂ ಹೋದರೆ ಕಣ್ಣಿಗೆ ಕಾಣದೇ ನೂರೊಂದು ರೀತಿಯಲ್ಲಿ ಕಾಟಕೊಡುತ್ತಾರೆಂದು ನಾನು ಅನೇಕರು ಹೇಳುವ ಕತೆಗಳನ್ನು ಕೇಳಿದ್ದೆ. ಹತ್ತಲಾಗದೇ ಹತಾಶನಾಗಿದ್ದಕ್ಕೂ, ಈ ಪ್ರೇತದ ಕತೆಗಳು ನೆನಪಾಗಿ ಏಕಾಂಗಿಯಾಗಿದ್ದ ನನ್ನನ್ನು ಕೊಂಚ ಅಧೀರನನ್ನಾಗಿಸಿತು. ಭಯದಿಂದ ನಾಲ್ಕೈದು ಬಾರಿ ಜೋರಾಗಿ ಕೂಗಿದೆ. ನನ್ನ ದ್ವನಿ ಯಾರಿಗೆ ಕೇಳಬೇಕು??? ನಾನು ಕೂಗುವ ಶಬ್ದ ನಾಲ್ಕೂ ದಿಕ್ಕಿಗೆ ಬಾವಿಯ ಗೋಡೆಗಳು ಇದ್ದುದರಿಂದ ನಾನು ಕೂಗುತ್ತಿದ್ದ ಶಬ್ಧ ಲಂಬಕೋನದಲ್ಲಿ ಮೇಲ್ಮೈ ಕಡೆಗೆ ಹೋಗುತ್ತಿತ್ತು. ನನ್ನ ದುರದೃಷ್ಟವಶಾತ್ ನಾನೆಷ್ಟೇ ಕೂಗಿದರೂ ನನ್ನ ಶಬ್ಧ ಕೇಳಿಸಿಕೊಂಡು ಸಹಾಯಕ್ಕೆ ಬರುವ ಯಾವ ಸಾಧ್ಯತೆಯೂ ಕಾಣಲಿಲ್ಲ. ಕೂಗಿ ಬೇರೆಯವರ ಸಹಾಯ ಪಡೆಯ ಬಯಸುವುದು ನಿಷ್ಪ್ರಯೋಜಕ ಎಂದು ಮನಗಂಡು ಜೇನುತುಪ್ಪದ ಬೇವಿನ ಕೊನೆಯನ್ನು ಅಲ್ಲೇ ಮುಳ್ಳುಗಳ ಮೇಲೆ ಇಟ್ಟೆ. ಕೈಯಲ್ಲಿದ್ದ ಮಚ್ಚು ನನ್ನ ಏಕಮಾತ್ರ ಆಯುಧವಾಗಿ ಮಚ್ಚಿನ ತುದಿಯಿಂದಲೇ ಮಳೆಯ ನೀರಿಗೆ ಕೊರೆದು, ಸವೆದು ಇಲ್ಲದಂತಿದ್ದ ಮೆಟ್ಟಿಲ ಜಾಗದಲ್ಲಿ ಕುದುರೆಯ ಹೆಜ್ಜೆಯಂತೆ ಗುಂಡಿ ತೆಗೆದು ಹೆಜ್ಜೆ ಮಾಡಿದೆ. ಎರಡ್ಮೂರು ಮಾರು ಅಂದರೆ ಎಂಟತ್ತು ಅಡಿ ದಾಟಿದರೆ ಮುಂದಿನ ಜಾಗ ಹತ್ತಲು ಬರುವಂತಿತ್ತು. ಮತ್ತೊಂದಷ್ಟು ನನ್ನ ಮಂಗನ ಬುದ್ದಿ ಕೆಲಸ ಮಾಡಿದ್ದರಿಂದ ಬಲಗಡೆಗೆ ಬಾವಿಯ ಪ್ರಪಾತ ಇದ್ದುದರಿಂದ ಆಕಸ್ಮಿಕವಾಗಿ ಯಾವುದೇ ಸಂದರ್ಭದಲ್ಲಿ ಜಾರಿ ಪ್ರಪಾತಕ್ಕೆ ಬೀಳುವ ಸಾಧ್ಯತೆ ಇದ್ದುದರಿಂದ ಎಂಟತ್ತು ಅಡಿಯ ಜಾಲಿಮರದ ಒಂದು ಗಳವನ್ನು ಕಡಿದು ಮುಳ್ಳುಗಳೆಲ್ಲಾ ಸವರಿದೆ. ಇಷ್ಟೆಲ್ಲ ಕೆಲಸ ಮಾಡಲು ಅಂದಾಜು ಒಂದು ತಾಸಿಗಿಂತಲೂ ಅಧಿಕ ಸಮಯ ತೆಗೆದುಕೊಂಡಿತು. ಈ ಶ್ರಮದ ಬೆವರಿಗೆ ಹಾಕಿದ್ದ ಬಟ್ಟೆಯೆಲ್ಲಾ ನೆನೆದು ನೀರಿನ ದಾಹ ಮಿತಿ ಮೀರಿತ್ತು. ಧೈರ್ಯ ಮಾಡಿ ನಾಲ್ಕೈದು ಪ್ರಯತ್ನದಲ್ಲಿ ಮಚ್ಚನ್ನು ಗಡ್ಡೆಗೆ ಎಸೆದೆ. ಮುಳ್ಳುಗಳ ಮೇಲೆ ಆನಿಸಿಟ್ಟ ಜೇನುತುಪ್ಪದ ಮೇಲೆ ನೂರಾರು ಹುಳುಗಳು ಕೂತು ತುಪ್ಪ ಹೀರಿ ಕುಡಿಯುವ ಕೆಲಸ ಮಾಡುತ್ತಿದ್ದವು. ಆ ಹುಳುಗಳನ್ನು ಎಬ್ಬಿಸಿ, ಓಡಿಸಿ ಪುನಃ ಬಾಯಲ್ಲಿ ಆ ಕೊನೆಯನ್ನು ಕಚ್ಚಿಕೊಂಡು ಗಳವನ್ನು ಊರುಗೋಲಾಗಿ ಹಿಡಿದುಕೊಂಡು ಏಕಾಗ್ರತೆಯಿಂದ ದಾಪುಗಾಲು ಇಡುತ್ತಾ, ಮುಟ್ಟಿದರೆ ಉದುರಿಬೀಳುತ್ತಿದ್ದ ಮಣ್ಣನ್ನೇ ಹಿಡಿದುಕೊಂಡು ಹತ್ತಿಬಿಟ್ಟೆ..! ನಾನು ತೆಗೆದ ಜೇನಿಗಿಂತ ಆ ಬಾವಿಯಿಂದ ಮೇಲೆ ಹತ್ತಿ ಬಂದಿದ್ದೆ ಸಾಹಸವಾಗಿತ್ತು. ಅಂದಿನಿಂದ ಸಮರ್ಪಕ ಮೆಟ್ಟಿಲುಗಳು ಇಲ್ಲದ ಬಾವಿಗೆ ಇಳಿಯುತ್ತಿರಲಿಲ್ಲ. ಇಳಿಯಲೇ ಬೇಕಾದ ಅನಿವಾರ್ಯತೆ ಇದ್ದರೆ ಜೊತೆಗಿರಲು ಯಾರಾದರೂ ಒಬ್ಬರನ್ನು ಕರೆದುಕೊಂಡು ಹೋಗುತ್ತಿದ್ದೆ. ಸುಮಾರು ಅರ್ಧ ಕಿಲೋಮೀಟರ್ ಅಷ್ಟು ದೂರ ಬಂದು ಹೊಂಡದ ನೀರನ್ನು ಹೊಟ್ಟೆತುಂಬಾ ಕುಡಿದು ಮನೆಕಡೆ ಹೆಜ್ಜೆ ಹಾಕಿದೆ. ಅಂದು ಸುಮಾರು ಎರಡು ಕ್ವಾಟರ್ ಬಾಟಲ್ ಗೂ ಅಧಿಕ ತುಪ್ಪ ಅಂದು ಶೇಖರಣೆ ಆಗಿತ್ತು. ಸಾಮಾನ್ಯವಾಗಿ ಕಂಡ ಜೇನುಗಳಲ್ಲಿ ಯಾವನ್ನೂ ಬಳಸುತ್ತಿರಲಿಲ್ಲವಾದರೂ, ಈ ಕೆಲವೊಮ್ಮೆ ಪಾಳು ಬಾವಿಯ ಗೋಡೆಗೆ ಕಟ್ಟಿರುತ್ತಿದ್ದವು. ಅವು ಬಾವಿಗೆ ಇಳಿದರೂ ಸಿಗುತ್ತಿರಲಿಲ್ಲ. ಬಾವಿಯ ಮೇಲ್ಬಾಗದಿಂದಲೂ ಬಡಿಗೆಗೂ ಎಷ್ಟು ಪ್ರಯತ್ನಿಸಿದರೂ ಸಿಗುತ್ತಿರಲಿಲ್ಲ. ಅವುಗಳನ್ನು ತೆಗೆಯಲು ಯಾವ ಆಪ್ಷನ್ ಇರುತ್ತಿರಲಿಲ್ಲ. ಆ ತರಹದವುಗಳು ಮಾತ್ರ ನನ್ನಿಂದ ಬದುಕಿಕೊಳ್ಳುತ್ತಿದ್ದವು...

ಚಿತ್ರ ಮತ್ತು ಬರಹ : ನಾಗೇಂದ್ರ ಬಂಜಗೆರೆ, ಬಳ್ಳಾರಿ