ಪುರಾಣ ಪುಣ್ಯ ಕಥಾ ಚಿತ್ರಕ್ಕೆ ಹಾಡು ಬರೆದ ಕರೀಂಖಾನ್ ಸಾಹೇಬ್!


೬೦ರ ದಶಕದಲ್ಲಿ ಪೌರಾಣಿಕ ಚಿತ್ರವೊಂದರ ಕಥೆ, ಸಂಭಾಷಣೆ ಮತ್ತು ಹಾಡುಗಳಿಗಾಗಿ ಆ ಚಿತ್ರದ ನಿರ್ದೇಶಕರಾದ ವೈ ಆರ್ ಸ್ವಾಮಿಯವರು ಆಯ್ಕೆ ಮಾಡಿದ್ದ ವ್ಯಕ್ತಿಯ ಹೆಸರನ್ನು ಕೇಳುತ್ತಲೇ ಬಹಳಷ್ಟು ಸಂಪ್ರದಾಯವಾದಿಗಳು ಉರಿದು ಬಿದ್ದಿದ್ದರು. ಹಲವಾರು ಮಂದಿ ನಿರ್ದೇಶಕರಾದ ಸ್ವಾಮಿಯವರನ್ನು ಟೀಕಿಸಿದರು, ಬೆದರಿಸಿದರು, ಹಂಗಿಸಿದರು. ಆದರೆ ತಾವು ಆಯ್ಕೆ ಮಾಡಿದ ಆ ವ್ಯಕ್ತಿ ತಮ್ಮ ಚಿತ್ರಕ್ಕೆ ಖಂಡಿತಾ ನ್ಯಾಯ ಒದಗಿಸುತ್ತಾರೆ ಎನ್ನುವ ನಂಬಿಕೆ ಸ್ವಾಮಿಯವರಿಗೆ ಇತ್ತು. ಅದೇ ಕಾರಣಕ್ಕ್ರೆ ಅವರು ಮುಂದಿಟ್ಟ ಹೆಜ್ಜೆಯನ್ನು ಹಿಂದಕ್ಕೆ ಇಡಲಿಲ್ಲ. ಇಷ್ಟಕ್ಕೂ ಅವರು ಆಯ್ಕೆ ಮಾಡಿದ ವ್ಯಕ್ತಿ ಯಾರು ಗೊತ್ತೇ? ಅವರೇ ಜಾನಪದ ವಿದ್ವಾಂಸ ಮತ್ತು ಹಾಡುಗಾರರಾದ ಎಸ್ ಕೆ ಕರೀಂಖಾನ್ ಸಾಹೇಬ್.
ಮುಸ್ಲಿಂ ವ್ಯಕ್ತಿಯೊಬ್ಬ ಹಿಂದೂ ಪೌರಾಣಿಕ ಚಿತ್ರಕ್ಕೆ ಹಾಡುಗಳನ್ನು ಬರೆಯುವುದೆಂದರೆ ಏನು ಕಥೆ? ಹಿಂದೂಗಳಲ್ಲಿ ಹಾಡು ಬರೆಯುವವರು ಇರಲಿಲ್ಲವೇ? ಹಾಗಿದ್ದೂ ಮುಸಲ್ಮಾನ ವ್ಯಕ್ತಿಯೊಬ್ಬನಿಗೆ ಹಾಡು, ಸಂಭಾಷಣೆ ಬರೆಯುವ ಹೊಣೆ ನೀಡಿದ್ದು ಯಾವ ಪುರುಷಾರ್ಥಕ್ಕೆ? ಎನ್ನುವ ಹಲವು ಜನರ ಪ್ರಶ್ನೆಗಳು ವೈ ಆರ್ ಸ್ವಾಮಿಯವರನ್ನು ಪೀಡಿಸತೊಡಗಿದವು. ಆದರೆ ಅವರ ನಿರ್ಧಾರ ಅಚಲವಾಗಿತ್ತು. ಶ್ಯಾಮ್ ಪ್ರಸಾದ್ ಮೂವೀಸ್' ಲಾಂಛನದಲ್ಲಿ ಡಿ ಆರ್ ನಾಯ್ಡು ಅವರು ‘ಸ್ವರ್ಣಗೌರಿ' ಎನ್ನುವ ಪೌರಾಣಿಕ ಚಿತ್ರ ನಿರ್ಮಿಸಲು ಹೊರಟಾಗ ಆದ ಘಟನೆ ಇದು. ನಿರ್ಮಾಪಕರಾದ ನಾಯ್ಡು ಅವರಿಗೂ ಮುಸ್ಲಿಂ ವ್ಯಕ್ತಿಯೊಬ್ಬ ಈ ಚಿತ್ರಕ್ಕೆ ಹಾಡು ಬರೆದರೆ ಹೇಗೆ? ಎನ್ನುವ ಆಲೋಚನೆ ಬಂದದ್ದೂ ಇದೆ. ಆದರೆ ನಿರ್ದೇಶಕರಾದ ಸ್ವಾಮಿಯವರು ಅವರನ್ನು ಒಪ್ಪಿಸಿ ನಿರ್ದೇಶನದ ಭಾರವೊಂದನ್ನು ಹೊರತು ಪಡಿಸಿ ಉಳಿದ ಎಲ್ಲಾ ಜವಾಬ್ದಾರಿಯನ್ನು ಕರೀಂಖಾನ್ ಅವರಿಗೆ ಒಪ್ಪಿಸಿ ನಿರಾಳರಾಗಿದ್ದರು.
ನಿರ್ದೇಶಕರು ತಮ್ಮ ಮೇಲಿಟ್ಟ ನಂಬಿಕೆಯನ್ನು ಹುಸಿಗೊಳಿಸದ ಕರೀಂಖಾನ್ ಅವರು ಸ್ವರ್ಣಗೌರಿ ಚಿತ್ರಕ್ಕಾಗಿ ಐದು ಆಕರ್ಷಕವಾದ, ಇಂಪಾದ ಹಾಡುಗಳನ್ನು ಬರೆದರು. ನುಡಿಮನ ಶಿವಗುಣ ಸಂಕೀರ್ತನಾ, ಜಯಗೌರೀ ಜಗದೀಶ್ವರಿ, ಬಾರಾ ಚಂದ್ರಮಾ.., ಬಾರೇ ನೀ ಚೆಲುವೆ, ನಟವರ ಗಂಗಾಧರ ಉಮಾಶಂಕರ ಎನ್ನುವ ಹಾಡುಗಳು ಈಗಲೂ ಚಿರನೂತನವಾಗಿವೆ. ಪಿ ಬಿ ಶ್ರೀನಿವಾಸ್, ಎಸ್ ಜಾನಕಿ, ಬಾಲಮುರಳಿ ಕೃಷ್ಣ ಮತ್ತು ಚಿತ್ತರಂಜನ್ ಅವರು ತಮ್ಮ ಮಧುರ ಕಂಠದಲ್ಲಿ ಸೊಗಸಾಗಿ ಹಾಡಿದ್ದಾರೆ.
ಸ್ವರ್ಣಗೌರಿ ಚಿತ್ರದ ತಾರಾಗಣದಲ್ಲಿ ಡಾ. ರಾಜ್ ಕುಮಾರ್, ಉದಯಕುಮಾರ್, ನರಸಿಂಹರಾಜು, ಕೆ ಎಸ್ ಅಶ್ವಥ್, ಕೃಷ್ಣ ಕುಮಾರಿ, ಸೊರಟ್ ಅಶ್ವಥ್ ನಟಿಸಿದ್ದಾರೆ. ಪಾರ್ವತಿ ಪಾತ್ರದಲ್ಲಿ ಜಯಲಲಿತಾ ಅವರ ತಾಯಿ ಸಂಧ್ಯಾ ನಟಿಸಿದ್ದು ವಿಶೇಷವಾಗಿತ್ತು. ಎಂ ವೆಂಕಟರಾಜು ಅವರು ಸಂಗೀತ ಸಂಯೋಜನೆ ಮಾಡಿದ್ದರು. ೧೯೬೨ರಲ್ಲಿ ತೆರೆಕಂಡ ಈ ಪೌರಾಣಿಕ ಕಪ್ಪು ಬಿಳುಪು ಚಿತ್ರಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬ ಹಾಡುಗಳನ್ನು ಬರೆದಿದ್ದಾರೆ ಎನ್ನುವ ಸಂಗತಿ ತಿಳಿದ ಪ್ರೇಕ್ಷಕರು ಅಚ್ಚರಿಗೊಳಗಾದದ್ದು ಸಹಜವಾದರೂ ಚಿತ್ರವನ್ನು ವೀಕ್ಷಿಸಿದ ಬಳಿಕ, ಚಿತ್ರ ಕಥೆ ಹಾಗೂ ಇಂಪಾದ ಹಾಡುಗಳನ್ನು ಗಮನಿಸಿದ ಬಳಿಕ ಕರೀಂಖಾನ್ ಅವರು ಚಿತ್ರಕ್ಕೆ ನ್ಯಾಯ ಒದಗಿಸಿದ್ದಾರೆ ಎನ್ನುವುದು ಅವರೆಲ್ಲರ ಅಭಿಪ್ರಾಯವಾಗಿತ್ತು.
ಇದೆಲ್ಲಾ ಹೊರಗಿನವರ ಕಥೆಯಾಯಿತು, ಖುದ್ದು ಪೌರಾಣಿಕ ಚಿತ್ರವೊಂದಕ್ಕೆ ಹಾಡು ಬರೆಯುವ ಅವಕಾಶ ಬಂದಾಗ ಕರೀಂಖಾನ್ ಅವರ ಮನಸ್ಥಿತಿ ಏನಾಗಿತ್ತು ಗೊತ್ತೇ? ಮೊದಲಿಗೆ ಅವರು ವೈ ಆರ್ ಸ್ವಾಮಿ ಅವರು ತಮ್ಮ ಬಳಿ ಸುಮ್ಮನೇ ಈ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ ಅಂದುಕೊಂಡಿದ್ದರಂತೆ, ನಂತರ ಅವರು ನಿಜಕ್ಕೂ ತಮ್ಮನ್ನು ಹಾಡುಗಳನ್ನು ಬರೆಯುವಂತೆ ಹೇಳುತ್ತಿದ್ದಾರೆ ಎಂದು ಗೊತ್ತಾದಾಗ ದಿಗ್ಭ್ರಮೆಗೆ ಒಳಗಾದರಂತೆ. ನಂತರ ಇದೊಂದು ದೇವರೇ ನೀಡಿದ ಪರೀಕ್ಷೆ ಎಂದು ಭಾವಿಸಿ ಸಂತೋಷದಿಂದ ಒಪ್ಪಿಕೊಂಡರಂತೆ. ಹಾಡುಗಳ ಜೊತೆಗೆ ಸಂಭಾಷಣೆ ಮತ್ತು ಚಿತ್ರಕಥೆಯನ್ನು ಬರೆಯುವ ಹೊಣೆಯೂ ಕರೀಂಖಾನ್ ಅವರ ಮಡಿಲಿಗೆ ಬಿತ್ತು.
ಪುರಾಣ ಕಥೆಯೊಂದಕ್ಕೆ ಹಾಡುಗಳನ್ನು ಬರೆಯುವ ಬಗ್ಗೆ ಮಾನಸಿಕ ಗೊಂದಲವನ್ನು ಹೊಂದಿದ್ದಾಗ ಅವರ ಬೆಂಬಲಕ್ಕೆ ಬಂದದ್ದು ಬ್ರಾಹ್ಮಣ ಕುಟುಂಬಗಳ ಜೊತೆಗಿನ ಅವರ ಒಡನಾಟ. ಕರೀಂಖಾನ್ ಅವರು ಸಕಲೇಶಪುರದಲ್ಲಿದ್ದಾಗ ಅವರಿಗೆ ಬ್ರಾಹ್ಮಣ ಕುಟುಂಬದವರ ಜೊತೆಗೆ ಆತ್ಮೀಯತೆ ಇತ್ತು. ಈ ಆತ್ಮೀಯತೆಯನ್ನು ಕಂಡು ಇವರ ಪರಿಚಯದವರು ಅವರನ್ನು ‘ಮುಸ್ಲಿಂ ಬ್ರಾಹ್ಮಣ' ಎಂದು ಕರೆಯುತ್ತಿದ್ದರಂತೆ. ಕರೀಂಖಾನ್ ಅವರ ಸೇವೆ ಈ ಚಿತ್ರಕ್ಕೆ ದೊರೆತದ್ದು ನಿಜಕ್ಕೂ ಪವಾಡವೇ ಸರಿ. ಏಕೆಂದರೆ ಕರೀಂಖಾನ್ ಅವರ ವಂಶಸ್ಥರು ಮೂಲತಃ ಅಫ್ಘಾನಿಸ್ತಾನದ ಕಾಬೂಲ್ ನವರು. ಅಲ್ಲಿಂದ ಹೈದರಾಬಾದ್ ಗೆ ವಲಸೆ ಬಂದವರು ನಂತರ ನೆಲೆ ನಿಂತದ್ದು ಕರ್ನಾಟಕದ ಸಕಲೇಶಪುರದಲ್ಲಿ. ಉರ್ದು ಶಾಲೆಗೆ ಸೇರಿದ ಕರೀಂಖಾನ್ ಅವರಿಗೆ ಅದು ಸರಿ ಬರದ ಕಾರಣ ಕನ್ನಡ ಮಾಧ್ಯಮ ಶಾಲೆಯಲ್ಲಿ ಓದಿದರು. ಈ ಕಾರಣದಿಂದ ಕರೀಂಖಾನ್ ಅವರಿಗೆ ಕನ್ನಡ ಭಾಷೆಯ ಮೇಲೆ ಉತ್ತಮ ಹಿಡಿತ ಮತ್ತು ಅಪಾರ ಪ್ರೀತಿ ಇತ್ತು. ಈ ಧೈರ್ಯದಿಂದಲೇ ಅವರು ಸ್ವರ್ಣ ಗೌರಿ ಚಿತ್ರದ ಹಾಡುಗಳನ್ನು ಬರೆಯಲು ಒಪ್ಪಿಕೊಂಡದ್ದು.
“ಸ್ವರ್ಣ ಗೌರಿ" ಚಿತ್ರದಲ್ಲಿ ತಮಗೆ ಸಿಕ್ಕಿದ ಮೊದಲ ಅವಕಾಶದಲ್ಲೇ ಯಶಸ್ಸನ್ನು ಕಂಡ ಕರೀಂಖಾನ್ ಅವರಿಗೆ ಚಿತ್ರರಂಗ ಕೆಂಪು ಹಾಸನ್ನು ಹಾಸಿ ಸ್ವಾಗತಿಸಬೇಕಾಗಿತ್ತು, ಆದರೆ ನಂತರದ ದಿನಗಳಲ್ಲಿ ಅವರಿಗೆ ಅಂತಹ ಅವಕಾಶಗಳು ಒದಗಿ ಬರಲಿಲ್ಲ. ಕರೀಂಖಾನ್ ಓರ್ವ ಮುಸಲ್ಮಾನ ವ್ಯಕ್ತಿ ಎನ್ನುವ ಕಾರಣದಿಂದ ಅವರಿಗೆ ಅವಕಾಶಗಳು ಒದಗಿ ಬರಲಿಲ್ಲವೋ ಅಥವಾ ಅವರ ಸರಳ ಸಜ್ಜನಿಕೆಯ ವ್ಯಕ್ತಿತ್ವ ಚಿತ್ರರಂಗದವರಿಗೆ ರುಚಿಸಲಿಲ್ಲವೋ ಏನೋ ಗೊತ್ತಿಲ್ಲ. ಆ ಸಮಯದಲ್ಲಿ ಪೌರಾಣಿಕ ಚಿತ್ರಗಳದ್ದೇ ಬಹುಪಾಲು ಆಗಿದ್ದ ಕಾರಣದಿಂದಲೋ ಏನೋ ಕರೀಂಖಾನ್ ಅವರಿಗೆ ನಂತರ ಅಷ್ಟೇನೂ ದೊಡ್ಡ ಅವಕಾಶಗಳು ಸಿಗಲಿಲ್ಲ. ಇದರ ಜೊತೆಗೆ ಅಲ್ಪ ಸ್ವಲ್ಪ ಜನರ ಕಿರುಕುಳವೂ ಇದ್ದುದರಿಂದ ಕರೀಂಖಾನ್ ಅವರು ಚಿತ್ರರಂಗವನ್ನು ತ್ಯಜಿಸಿ ತಮ್ಮ ಪ್ರೀತಿಯ ಜಾನಪದ ಲೋಕಕ್ಕೆ ಮರಳಿದರು. ಅದರಲ್ಲೇ ಆನಂದವನ್ನು ಕಂಡರು. ಕನ್ನಡ ಚಿತ್ರರಂಗ ತನ್ನ ಸಂಕುಚಿತ ಮನೋಭಾವದ ಕಾರಣ ಇನ್ನಷ್ಟು ಉತ್ತಮ ಗೀತೆಗಳನ್ನು ಪಡೆಯುವ ಅವಕಾಶದಿಂದ ವಂಚಿತವಾಯಿತು. ಕರೀಂಖಾನ್ ಅವರು ಚಿತ್ರರಂಗದಿಂದ ಹೊರ ಬರುವ ಮೊದಲು ಗಂಗೆ ಗೌರಿ, ಶಿವಲಿಂಗ ಸಾಕ್ಷಿ, ಜೀವನ ತರಂಗ, ಬೇವು ಬೆಲ್ಲ, ರಾಜೇಶ್ವರಿ, ದೊಂಬರಕೃಷ್ಣ ಮೊದಲಾದ ಚಿತ್ರಗಳಿಗೆ ಹಾಡು ಬರೆದಿದ್ದರು.
ಕರೀಂಖಾನ್ ಅವರು ಅಪ್ಪಟ ಬ್ರಹ್ಮಚಾರಿ. ಧೀರ ಸ್ವಾತಂತ್ರ್ಯ ಹೋರಾಟಗಾರ, ಅದ್ಭುತ ಜಾನಪದ ಕಲಾವಿದ, ಜಾನಪದ ನುಡಿಮುತ್ತುಗಳ ಸರದಾರ. ನಂತರದ ದಿನಗಳಲ್ಲಿ ಕರೀಂಖಾನ್ ಅವರ ಕುಟುಂಬದಿಂದಲೂ ಯಾರೂ ಚಿತ್ರರಂಗಕ್ಕೆ ಬರಲಿಲ್ಲ. ರಾಜ್ಯ ಸರಕಾರದ ವತಿಯಿಂದ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರೆತರೂ ಯಾವುದೇ ಸಹಾಯಕ್ಕೆ ಸರಕಾರದ ಬಳಿ ಕೈಚಾಚಲಿಲ್ಲ. ತಮ್ಮ ಕೊನೆಯ ಉಸಿರು ಇರುವವರೆಗೆ ಕನ್ನಡವನ್ನೇ ಜಪಿಸಿದರು. ಕರೀಂಖಾನ್ ಅವರ ಬಗ್ಗೆ ‘ಕನ್ನಡ ಚಲನಚಿತ್ರ ಇತಿಹಾಸ' ಗ್ರಂಥದಲ್ಲಿ ಹೀಗೆ ನೆನಪಿಸಿಕೊಳ್ಳಲಾಗಿದೆ - “ಜಾನಪದ ವಿದ್ವಾಂಸರಾದ ಎಸ್ ಕೆ ಕರೀಂಖಾನರು ‘ಸ್ವರ್ಣ ಗೌರಿ' ಚಿತ್ರಕ್ಕೆ ಕಥೆ, ಸಂಭಾಷಣೆ ಮತ್ತು ಹಾಡುಗಳನ್ನು ಬರೆದುಕೊಟ್ಟು ಇಡೀ ಚಿತ್ರಕ್ಕೊಂದು ಶೋಭೆ ತಂದುಕೊಟ್ಟರು.” ಕನ್ನಡ ಚಿತ್ರರಂಗ ಇರುವ ತನಕ ಕರೀಂಖಾನ್ ಸಾಹೇಬರ ಹೆಸರು ಅಜರಾಮರವಾಗಿ ಉಳಿಯಲಿದೆ.
(ಆಧಾರ)
ಚಿತ್ರ ಕೃಪೆ: ಅಂತರ್ಜಾಲ ತಾಣ