ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೪)

ಪುಲಿಕೇಶಿ-ಹರ್ಷವರ್ಧನರ ಕಾಲದಲ್ಲಿ... (ಭಾಗ ೧೪)

ಬರಹ

***** ಭಾಗ ೧೪

ಸೃಘ್ನ, ಮಾತೀಪುರ, ಬ್ರಹ್ಮಪುರ, ಗೋವಿಶನ, ಅಹಿಕ್ಷೇತ್ರ, ವಿರಸನ ದೇಶಗಳ ಸಂದರ್ಶನದ ನಂತರ ಕಪೀಥ ದೇಶವನ್ನು ತಲುಪಿದೆವು. ನನ್ನ ಮಿತ್ರನಿಗಿಲ್ಲಿ ಸ್ವಲ್ಪ ಸಮಾಧಾನವಾಯಿತು. ಇಲ್ಲಿ ಬೌದ್ಧ ಧರ್ಮ ಅನುಯಾಯಿಗಳು ಹೆಚ್ಚು ಸಂಖ್ಯೆಯಲ್ಲಿದ್ದು ಅವನನ್ನು ಸ್ವಾಗತಿಸಿದರು. ನಮ್ಮ ದೇವಾಲಯಗಳೂ ಸುಮಾರು ಸಂಖ್ಯೆಯಲ್ಲಿದ್ದು, ಈ ಪ್ರದೇಶದ ಇಷ್ಟದೇವ ಮಹೇಶ್ವರನಾಗಿದ್ದ. ಈ ಸ್ಥಳದಲ್ಲಿದ್ದ ಒಂದು ಸುಂದರವಾದ ಸ್ತೂಪದೊಳಗೆ ತಥಾಗಥ ಬುದ್ಧನ ಹಲವಾರು ದಂತಕತೆಗಳು ಕೇಳಿಬಂದವು. ಇವೆಲ್ಲವನ್ನೂ ನನ್ನ ಮಿತ್ರ ಸಿಹಿ ಕಂಡ ಎಳೆ ಕೂಸಿನ ಮುದಿತದಿಂದ ಕೇಳಿ, ಸಮಸ್ಥವನ್ನೂ ಬರೆದುಕೊಂಡನು.

ನನ್ನ ಮಿತ್ರನ ಬರಹದ ಬಗ್ಗೆ ಮೊದಲಿನಿಂದಲೂ ಕುತೂಹಲ ನನಗೆ. ಸಾಲುಗಳನ್ನು ಬರೆಯುವ ಬದಲು ಇವನು ಮೇಲಿನಿಂದ ಕೆಳಕ್ಕೆ, ಒಂದು ಕೃಷ ಹಾಳೆಯಮೇಲೆ, ಕಜ್ಜಳ ಹತ್ತಿಸಿದ ನಿಷಿತ ಕಡ್ಡಿಯೊಂದರಲ್ಲಿ ಬರೆಯುತ್ತಿದ್ದ. ಅವನು ಬರೆಯುತ್ತಿದ್ದ ವಿಷಯಗಳಂತೂ ನನಗೆ ಗೊತ್ತೇ ಇದ್ದವು. ಅವನ ಲಿಪಿಯ ಬಗ್ಗೆ ತಿಳಿದಿರಲಿಲ್ಲ. ಒಮ್ಮೆ ಅವನನ್ನೇ ಕೇಳಿದೆ "ಮಿತ್ರ, ನೀನು ಬರೆಯುತ್ತಿರುವ ಲಿಪಿ ಯಾವುದು, ಇದರ ವಿವರಗಳನ್ನು ಸ್ವಲ್ಪ ತಿಳಿಸು"

"ಇದು ನನ್ನ ಮಾತೃಭೂಮಿಯಾದ ಮಹಾಚೀನ ದೇಶದ ಭಾಶೆ ಹಾಗು ಲಿಪಿ. ಇದನ್ನು ಈ ರೀತಿ ಮೇಲಿನಿಂದ ಕೆಳಕ್ಕೆ ಬರೆಯುವುದು. ಈ ಅಕ್ಷರಗಳ ಹೆಸರು 'ಹಾಂಜಿ'." ಎಂದ. ಅವನು ಹೇಳಿದ್ದನ್ನು ನಿಖರವಾಗಿ ನಮ್ಮ ಲಿಪಿಯಲ್ಲಿ ಬರೆಯಲಾರೆ. 'ಹಾಂಜಿ' ನಾನು ಬರೆಯಲಾಗುವಂತಹ ಅದರ ಅತ್ಯಂತ ಸಮೀಪ ರೂಪಾಂತರ.

"ಈ ಅಕ್ಷರಗಳ ಅರ್ಥವೇನು? ಒಟ್ಟು ಎಷ್ಟಿವೆ?" ಎಂದು ಕೇಳಿದೆ

"ಇದರ ಪ್ರತಿಯೊಂದು ಗುರುತೂ ನಮ್ಮ ಭಾಷೆಯ ಒಂದು ಅಕ್ಷರ; ಜೊತೆಗೆ ಪ್ರತೀ ಅಕ್ಷರಕ್ಕೂ ಒಂದು ಅರ್ಥವಿದೆ. ಆದಿಯಲ್ಲಿ ಪ್ರತಿ ಅಕ್ಷರವೂ ಮನುಷ್ಯ, ಪ್ರಾಣಿ ಯಾ ಇತರ ವಸ್ತುಗಳ ಚಿತ್ರಗಳಾಗಿದ್ದವು. ಕಾಲ ಕಳೆದಂತೆ ಆ ಚಿತ್ರಗಳು ಸ್ವಲ್ಪ ಬೇರ್ಪಟ್ಟು, ಈಗ ಮೊದಲಿನಂತೆ ಕಾಣುವುದಿಲ್ಲ. ಹಲವಾರು ಅಕ್ಷರಗಳು ಎರಡು ಅಥವ ಹೆಚ್ಚು ಅಕ್ಷರಗಳ ಸಮ್ಮಿಲನವಾಗಿವೆ" ಎಂದು ಉತ್ತರಿಸಿದ

ನಾನು ಕೇಳಿದೆ "ಒಹೋ! ಹಾಗಾದರೆ ಇದು ಚಿತ್ರಲಿಖಿತ ಲಿಪಿಯೇ? ಮತ್ತೆ ಅಕ್ಷರಗಳು ಎಷ್ಟಿವೆ? ಮಿತಿಯೇ ಇಲ್ಲ ಅಲ್ಲವೆ?"

ಅವನು ಪುನಃ ಒಂದು ದೊಡ್ಡ ವಿವರಣೆ ಕೊಟ್ಟ "ಈ ಲಿಪಿಯಲ್ಲಿ ವಾಸ್ತವವಾಗಿ ಅನಂತ ಅಕ್ಷರಗಳನ್ನು ಬರೆಯಬಹುದು. ಎಷ್ಟು ಅಕ್ಷರಗಳೆಂದು ಹೇಳಲು ಸಾಧ್ಯವೇ ಇಲ್ಲ. ಅತೀ ದೊಡ್ಡ ಶಬ್ಧಕೋಶಗಳು ಸುಮಾರು ೫೬ ಸಹಸ್ರ ಅಕ್ಷರಗಳ ಬಗ್ಗೆ ಹೇಳುತ್ತವೆ. ಆದರೆ ಅಷ್ಟೊಂದು ಅಕ್ಷರಗಳನ್ನು ನೆನಪಿಟ್ಟುಕೊಳ್ಳಲು ಅಸಾಧ್ಯ. ಸುಮಾರು ಮೂರು ಸಹಸ್ರ ಅಕ್ಷರಗಳಿಂದ ದಿನ-ನಿತ್ಯದ ಮಾತುಗಳನ್ನೆಲ್ಲ ಬರೆಯಬಹುದು. ಕ್ಲಿಷ್ಟ ಗ್ರಂಥಗಳನ್ನು ಓದಲು ಅಥವ ಬರೆಯಲು ಸುಮಾರು ಆರು ಸಹಸ್ರ ಅಕ್ಷರಗಳು ಬೇಕಾದೀತು"

"ಅಕ್ಷರಗಳನ್ನು ಒಂದರಿಂದ ಅರವತ್ತು ನಾಲ್ಕು ರೇಖೆಗಳು ಎಳೆದು ಬರೆಯ ಬಹುದು. ಇನ್ನೂ ಹೆಚ್ಚು ರೇಖೆಗಳೂ ಸಾಧ್ಯ. ಇಲ್ಲಿ ನೋಡು: ಸಂಖ್ಯೆ ೧ ಬರೆಯಬೇಕಾದರೆ ಒಂದು ರೇಖೆ, ಕನಕವನ್ನು ಬರೆಯಬೇಕಾದರೆ ಈ ರೀತಿ ೮ ಗೆರೆ, ದಂತ ತೋರಿಸಲು ಈ ರೀತಿ ೧೫ ರೇಖೆಗಳು, ಶುಕ ಪಕ್ಷಿಗೆ ೨೮ ರೇಖೆಗೆಅಳು, ವಾಚಾಳಿತ - ಮಾತಿನಗೂಳಿ ಎಂದು ಹೇಳಲು ಈ ರೀತಿ ೬೪ ರೇಖೆಗಳು" ಎಂದು ಅನೇಕ ರೇಖೆಗಳುಳ್ಳ ಚಿತ್ರಗಳನ್ನು ಬರೆದು ತೋರಿಸಿದ. ಒಂದು ಮನೆಯಂತೆ ಕಾಣಿಸಿತು ಮತ್ತೊಂದು ಚೌಕದಂತೆ, ಉಳಿದವೆಲ್ಲ ಎನೇನೋ ಗೀಚಿದ ಹಾಗೆ ಕಾಣಿಸಿದವು.

ನನಗಾದರೋ ಇವೆಲ್ಲವನ್ನು ಕಂಡು ಬಹು ಆಶ್ಚರ್ಯವಾಯಿತು. "ಇವೆಲ್ಲವಕ್ಕೂ ಬೇರೆ ಬೇರೆ ಉಚ್ಛಾರ, ಅರ್ಥಗಳಿವೆಯೇ?" ನಂಬಲಾಗದೆ ಕೇಳಿದೆ.

"ಇಲ್ಲ ಹಾಗೇನಿಲ್ಲ. ಹಲವಾರು ಗುರುತನ್ನು ಒಂದೇ ರೀತಿ ಓದುತ್ತೇವೆ. ಆದರೆ ಬರೆದಿರುವ ಅಕ್ಷರದ ಮೇಲೆ ಅದರ ಅರ್ಥ ನಿರ್ಭರವಾಗಿರುತ್ತದೆ. ಇಲ್ಲಿ ನೋಡು ಈ ಅಕ್ಷರ, ಈ ಅಕ್ಷರ ಹಾಗು ಈ ಅಕ್ಷರ ಮೂವರು ಒಂದೇ ರೀತಿ ಕಾಣಿಸುವುದಿಲ್ಲ" ಎಂದು ಮೂರು ಅಕ್ಷರಗಳನ್ನು ಬರೆದು ತೋರಿಸಿದ. "ಇವೆಲ್ಲವಕ್ಕೂ ಉಚ್ಛಾರ ಒಂದೇ ರೀತಿ 'ಬಾಂಗ್' ಎಂದು. ಆದರೆ ಅರ್ಥಗಳು ಮಾತ್ರ ಬೇರೆ ಬೇರೆ. ಕೆಲವು ಬಾರಿ ಒಂದೇ ಅಕ್ಷರದಲ್ಲಿ ಒಂದು ಪದ ಬರೆಯಲಾಗದಿದ್ದಲ್ಲಿ ಅದನ್ನು ಎರಡಾಗಿ ವಿಭಾಗಿಸಿ ಎರಡಕ್ಕೂ ಒಂದೊಂದು ಅಕ್ಷರಗಳು ಬರೆಯುವುದು" ಎಂದು ಮುಂದುವರೆಸಿದ.

"ಹೀಗಿದ್ದರೆ ಈ ಲಿಪಿ ಕೇವಲ ನಿನ್ನ ಭಾಷೆ ಬರೆಯಲು ಮಾತ್ರ ಅನುಕೂಲ ಹಾಗು ಉತ್ತಮ. ಇದರಲ್ಲಿ ನಮ್ಮ ದೇಶದ ವಿಚಾರಗಳನ್ನು ಹೇಗೆ ಬರೆಯುವೆ? ಉದಾಹರಣೆಗೆ ಈ ದೇಶದ ಹೆಸರನ್ನು ಹೇಗೆ ಬರೆಯುವೆ?" ಎಂದು ಕೇಳಿದೆ.

"ಈ ದೇಶವಾದರೋ ಸ್ವಲ್ಪ ಸುಲಭ ಕಪೀಥವನ್ನು ನಾನು ಕೀ-ಪಿ-ಥ ಎಂದು ಬರೆಯುವೆ. ಆದರೆ ಹಲವು ಹೆಸರುಗಳು ಬರೆಯಲು ಬಲುಕಷ್ಟ ಉದಾಹರಣೆಗೆ ನಾವು ಹಾಯ್ದು ಬಂದ ಬ್ರಹ್ಮಪುರ. ಇದನ್ನು ಪೊ-ಲೊ-ಹಿಹ್-ಮೊ-ಪು-ಲೊ ಎಂದು ಬರೆಯಬೇಕಾಯಿತು. ಅಂತೆಯೇ ಸ್ಥಾನೇಶ್ವರವನ್ನು ಸ-ತ-ನಿ-ಶಿ-ಫ-ಲೊ ಎಂದು ಬರೆದಿದ್ದೇನೆ." ಎಂದು ಉತ್ತರಿಸಿದ.

"ಇದು ತಪ್ಪಾಗುವುದಿಲ್ಲವೆ? ನಿನ್ನ ಕೃತಿ ಓದಿದವರಿಗೆ ಇದನ್ನು ಅರ್ಥಮಾಡಿಕೊಳ್ಳುವುದಾದರೂ ಹೇಗೆ?" ಎಂದು ಪ್ರಶ್ನಿಸಿದೆ

"ಇದು ನಮ್ಮ ಲಿಪಿಯ ಸೀಮಾಬಂಧನ - ಇದಕ್ಕಿಂತ ಹೆಚ್ಚು ನಿಖರವಾಗ ಬರೆಯಲಾರೆ" ಎಂದು ಉತ್ತರಿಸಿದ.

ಸುಮಾರು ಇದೇ ಸಮಯದಲ್ಲಿ ನನ್ನ ಮಿತ್ರ ತಾನು ಸಂಸ್ಕೃತ ಕಲಿಯುವ ಆಸೆಯನ್ನು ನನ್ನಲ್ಲಿ ತೋಡಿಕೊಂಡ "ಮಿತ್ರ, ನಾನು ಈ ದೇಶಕ್ಕೆ ಬಂದಿರುವುದೇ ತಥಾಗಥನ ಧರ್ಮವನ್ನು ಅರಿಯಲೆಂದು. ಇಲ್ಲಿಯಾದರೋ ಎಲ್ಲ ಸೂತ್ರಗಳು, ಗ್ರಂಥಗಳು ಎಲ್ಲವೂ ಸಂಸ್ಕೃತದಲ್ಲಿಯೇ ಬರೆದಿರುವಂತಾಗಿ ನನ್ನ ಈ ಗುರಿಯಲ್ಲಿ ಬಾಧೆಗಳುಂಟಾಗಿವೆ. ಧಾರ್ಮಿಕ ಗ್ರಂಥಗಳನ್ನೆಲ್ಲ ನಾನು ನಮ್ಮ ಭಾಷೆಗೆ ಅನುವಾದ ಮಾಡುವ ಆಕಾಂಕ್ಷೆ ಹೊತ್ತು ಬಂದಿದ್ದೇನೆ. ಹಾಗಾಗಿ ನಾನು ಸಂಸ್ಕೃತ ಕಲಿಯುವುದು ಅನಿವಾರ್ಯವಾಗಿದೆ. ನನಗಾದರೋ ಒಂದೇ ಸ್ಥಳದಲ್ಲಿ ನಿಂತು ಭಾಷೆ ಕಲಿಯುವ ವ್ಯವಧಾನವಿಲ್ಲ. ನೀನಾದರೆ ನನ್ನ ಜೊತೆಯಲ್ಲಿಯೇ ಬರುತ್ತಿರುವೆ. ಸಂಸ್ಕೃತವನ್ನೂ ಚೆನ್ನಾಗಿ ಬಲ್ಲವ ನೀನು. ನೀನೇ ಏಕೆ ನನಗೆ ಸಂಸ್ಕೃತ ಶಿಕ್ಷಣ ಮಾಡಿಕೊಡಿಸುವ ಆಚಾರ್ಯನಾಗಬಾರದು?" ಎಂದು ಬೇಡಿಕೊಂಡ.

ಸಂಸ್ಕೃತವನ್ನು ಅಡೆತಡೆಯಿಲ್ಲದೆ ಮಾತನಾಡಲು, ಓದಲು, ಬರೆಯಲೂ ಬಂದರೂ ನನಗಾದರೋ ಅದನ್ನು ಹೇಳಿಕೊಡುವುದು ಹೇಗೆ ಎಂದು ಗೊತ್ತಾಗುವಂತಿರಲಿಲ್ಲ. ನಾನು ಸಣ್ಣ ಹುಡುಗನಾಗಿದ್ದಾಗ ಗುರುಕುಲದಲ್ಲಿ ಗುರುಗಳು ಹೇಳಿಕೊಟ್ಟ ಸಂಸ್ಕೃತ ಪಾಠಗಳನ್ನು ಸ್ಮರಿಸಿಕೊಂಡೆ. ಬ್ರಾಹ್ಮಿ, ಗಾಂಧಾರ ಹಾಗು ಶಾರದ ಲಿಪಿಗಳು ಈಗ ಹೆಚ್ಚಾಗಿ ಬಳಕೆಯಲ್ಲಿರಲಿಲ್ಲ. ದೇವನಾಗರಿ ಅಕ್ಷರಗಳೇ ಸರಿಯೆಂದು ನಿರ್ಧರಿಸಿದೆ. ಅಂತೆಯೇ ೫೧ ಅಕ್ಷರಗಳ ವರ್ಣಮಾಲೆ ಆದಿಯಾಗಿ ನನ್ನ ಪಾಠ ಆರಂಭ ಮಾಡಿದೆ.

ನಾನೇ ಗುರುವಿಗಿಂತ ಒಳ್ಳೆಯ ಶಿಷ್ಯನೋ ಅಥವ ನನ್ನ ಮಿತ್ರನೇ ಶಿಷ್ಯನಿಗಿಂತ ಒಳ್ಳೆಯ ಗುರುವೋ ಕಾಣೆ. ಅಂತು ಕಾಲ ಕಳೆದಂತೆ ಅವನು ಸಂಸ್ಕೃತ ಕಲಿಯಲು ಇನ್ನೂ ಕಷ್ಟಪಡುತ್ತಿದ್ದನಾದರೂ, ಅವನಿಗೆ ಹೇಳಿಕೊಡುತ್ತ ನಾನೇ ಅವನ ಲಿಪಿಯನ್ನು ಓದಲು ಕಲಿತೆ. ಅವನು ಬರೆಯುವುದನ್ನೆಲ್ಲ ಈಗ ಓದಲು ಸಾಧ್ಯವಾಗುತ್ತಿತ್ತು.

ಕಪೀಥವನ್ನು ಬಿಟ್ಟು ಕನ್ಯಾಕುಬ್ಜಕ್ಕೆ ಹೊರಟೆವು. ಕಪೀಥದಿಂದ ವಾಯವ್ಯ ದಿಕ್ಕಿನಲ್ಲಿ ಸುಮಾರು ೧೦೦ ಕ್ರೋಶಗಳಷ್ಟು ದೂರ ಹೋಗಿ ಕನ್ಯಾಕುಬ್ಜವನ್ನು ಸೇರಿದೆವು. ಕನ್ಯಾಕುಬ್ಜ ಹತ್ತಿರವಾಗುತ್ತಿದ್ದಂತೆ ನನ್ನ ಕಾತುರ ಹೆಚ್ಚಾಯಿತು. ಅಲ್ಲಿಯ ದೊರೆಯಾದ ಹರ್ಷವರ್ಧನನ ವಿರುದ್ಧ ಅರಸ ಪುಲಿಕೇಶಿಗಾಗಿ ಕೆಲಸ ಮಾಡಿದ್ದೆ - ಅದೂ ಗೂಢಚರ್ಯೆ. ನನ್ನನ್ನು ಗುರುತಿಸಿ ಕಾರಾಗ್ರಹಕ್ಕೆ ತಳ್ಳಿದರೆ? ಅಷ್ಟೇಯೇಕೆ, ಇನ್ನು ಮರಣ ದಂಡನೆ ವಿಧಿಸಿದರೆ? ಎಂದೆಲ್ಲ ಯೋಚಿಸಿ ನನ್ನ ಕಶೆರಿನ ಮೇಲೆ ಶೀತಲ ಬೆವರಿಳಿಯಿತು. ಆದರೆ ಈಗ ತಪ್ಪಿಸಿಕೊಳ್ಳುವಂತಿರಲಿಲ್ಲ. "ಇಷ್ಟು ದಿನಗಳ ಕಾಲವೂ ಹರ್ಷರಾಜನ ರಾಜ್ಯದಲ್ಲೇ ಇದ್ದೆ, ರಾಜಧಾನಿಗೆ ಹೋಗಲೇನು ಭಯ" ಎಂದು ನನಗೆ ನಾನೆ ಸಮಾಧಾನ ಹೇಳಿಕೊಂಡು ಮುನ್ನಡೆದೆ.