ಪುಸ್ತಕ ಸಂಸ್ಕೃತಿಯ ಪರಿವ್ರಾಜಕ - ಕು.ಗೋ.

ಪುಸ್ತಕ ಸಂಸ್ಕೃತಿಯ ಪರಿವ್ರಾಜಕ - ಕು.ಗೋ.

ಪುಸ್ತಕದ ಲೇಖಕ/ಕವಿಯ ಹೆಸರು
ಬೆಳಗೋಡು ರಮೇಶ್ ಭಟ್
ಪ್ರಕಾಶಕರು
ಸುಮುಖ ಪ್ರಕಾಶನ, ಮೂರು ಕಾವೇರಿ, ಕಿನ್ನಿಗೋಳಿ
ಪುಸ್ತಕದ ಬೆಲೆ
ರೂ. ೩೦.೦೦, ಮುದ್ರಣ: ಜೂನ್ ೨೦೦೮

ಈ ಕೃತಿಯಲ್ಲಿ ‘ಕು. ಗೋ. ಎಂಬ ವಿಸ್ಮಯ’ ಎಂಬ ಅಧ್ಯಾಯದಲ್ಲಿ ಲೇಖಕರು ಹೇಳುತ್ತಾರೆ “ ಬರೆವ, ಬರೆಸುವ, ಮಾತನಾಡುವ, ಮಾತನಾಡಿಸುವ, ಪುಸ್ತಕಗಳನ್ನು ಮಾರುವ, ಓದುವವರನ್ನು ಹುಡುಕಿಕೊಂಡು ಹೋಗಿ ಪುಸ್ತಕಗಳನ್ನು ಹಂಚುವ, ಲೇಖಕರನ್ನು ಪ್ರೋತ್ಸಾಹಿಸುವ, ಓದುಗರನ್ನು ಪ್ರೀತಿಸುವ, ಅಕ್ಷರ ಸಂಸ್ಕೃತಿಯ ಹರಿಕಾರ, ಪುಸ್ತಕ ಸಂಸ್ಕೃತಿಯ ಪರಿವ್ರಾಜಕ ಕು. ಗೋ. ಯಾನೆ ಉಡುಪಿಯ ಹೆರ್ಗ ಗೋಪಾಲಭಟ್ಟರು ಅಕ್ಷರಶಃ ಒಂದು ವಿಸ್ಮಯ.

ವಿಸ್ಮಯ ಯಾಕೆಂದರೆ, ಸ್ವತಃ ಬರೆವವರು ಬೇರೆಯವರ ಪುಸ್ತಕಗಳ ಕುರಿತು ಒಳ್ಳೆಯ ಮಾತನಾಡುವುದು ಕಡಿಮೆ. ತಾನು ಬರೆದು ಪ್ರಕಟಿಸಿದುದೇ ಮನೆಯಲ್ಲಿ ರಾಶಿ ಬಿದ್ದಿರುವಾಗ, ಬೇರೆಯವರ ಪುಸ್ತಕಗಳ ಪ್ರಕಟಣೆಗೆ ಮುಂದಾಗುವುದು ಕಡಿಮೆ. ಪುಸ್ತಕ ಮಾರಲಿಕ್ಕೆ ಹೊರಟವರು ಒಳ್ಳೆಯ ಪುಸ್ತಕಗಳನ್ನು ಒಳ್ಳೆಯ ಓದುಗರಿಗೆ ಪುಕ್ಕಟೆ ಹಂಚುವುದು ಕಡಿಮೆ. ಒಳ್ಳೆಯ ಪುಸ್ತಕಗಳ ಬಗ್ಗೆ ಒಳ್ಳೆಯ ಮಾತನಾಡುವುದು ಮಾತ್ರವಲ್ಲ, ನಾಲ್ಕು ಜನರಿಗೆ ಹೇಳಿ ಅವರಿಂದ ಲೇಖಕರಿಗೆ ಶಹಭಾಷ್‌ಗಿರಿ ತಲುಪಿಸುವವರೂ ಕಡಿಮೆ. ಕು. ಗೋ. ಅಪರೂಪಕ್ಕೆ ಒಂದು ಅಪವಾದ. ಅವರು ಕುಬ್ಬರ ನಡುವಿನ ಕುಭ್ರತ್ತು (ಅಕ್ಷರಶಃ ಯಾಕೆಂದರೆ, ಅವರ ಎತ್ತರ ಐದಡಿ, ಹನ್ನೆರಡು ಅಂಗುಲ!)

ಉಡುಪಿಯಿಂದ ಮಣಿಪಾಲಕ್ಕೆ ಹೋಗುವ ರಾಜಮಾರ್ಗದಲ್ಲಿ ಇಂದ್ರಾಳಿ ರೈಲ್ವೆ ಮೇಲು ರಸ್ತೆ ದಾಟಿದ ನಂತರ, ಎಡಬದಿಯಲ್ಲಿರುವ ಹಯಗ್ರೀವ ನಗರದ ಮೊದಲ ಮುಖ್ಯ ರಸ್ತೆಯ ಎರಡನೆಯ ಬಲತಿರುವಿನ ಕಾರ್ನ‌್ರನಲ್ಲಿ 'ವಾಗ್ಗೇವಿ' ಎಂಬ ಅಚ್ಚುಕಟ್ಟಾದ ಮನೆಯಲ್ಲಿ ತನಗಿನ್ನೂ ಇಪ್ಪತ್ತೇ ವರ್ಷ ವಯಸ್ಸೆಂದು ನಂಬಿರುವ, ಈ ಜೂನ್ ಆರಕ್ಕೆ ಎಪ್ಪತ್ತು ತುಂಬುವ, ಹಳೆಯ ತಲೆಮಾರಿನ ಸೌಜನ್ಯದ ಪ್ರತೀಕದಂತಿರುವ ಹಾಸ್ಯ ಲೇಖಕ ಕು. ಗೋ. ಹಲವು ವರ್ಷಗಳಿಂದ ವಾಸವಾಗಿದ್ದಾರೆ.

ಅವರದು ಮೊದಲಿನಿಂದಲೂ ಅಚ್ಚುಕಟ್ಟಾದ ಅಥವಾ ಅಚ್ಚುಕಟ್ಟಾಗಿಲ್ಲದ ದಿನಚರಿ. ಬೆಳಿಗ್ಗೆ ನಾಲ್ಕೂ ಐದೋ ಗಂಟೆಗೆ ಪೇಪರ್ ಎಸೆದು ಹೋಗುವ ಹುಡುಗರ ಸೈಕಲ್ ಬೆಲ್ ಅವರಿಗೆ ಅಲಾರಾಂ. ಗೇಟಿನ ಹತ್ತಿರ ಎಸೆದು ಹೋದ ಪೇಪರ್ ಎತ್ತಿ ತರಲು ಅಲ್ಲಿಯ ತನಕ ಬೆಳಗಿನ ವಾಕಿಂಗ್. ಮುಂದಿನ ಒಂದೆರಡು ಗಂಟೆಗಳ ತನಕೆ ಮನೆಗೆ ತರಿಸುವ ಎಲ್ಲಾ ಪತ್ರಿಕೆಗಳ ಸಿಂಹಾವಲೋಕನ. ಆ ಪತ್ರಿಕೆಗಳಲ್ಲಿ ಲೇಖನ ಬರೆದವರಿರಬಹುದು, ಫೋಟೋಗಳಲ್ಲಿ ಕಾಣಿಸಿಕೊಂಡವರಿರಬಹುದು, ಕೊನೆಗೆ ಪತ್ರಿಕೆಯ ಯಾವುದೋ ಮೂಲೆಯಲ್ಲಿ ಹೆಸರಿನ ರೂಪದಲ್ಲಿ ಉಲ್ಲೇಖಿತರಾಗಿದ್ದವರಿರಬಹುದು-ಅವರಲ್ಲಿ ಪರಿಚಿತರೆನ್ನಿಸಿಕೊಂಡವರಿಗೆಲ್ಲ ಫೋನ್ ಮಾಡಿ ಅಭಿನಂದಿಸುವ, ಕುಶಾಲಿನ ಮಾತನಾಡುವ ಸಂಭ್ರಮ ಮುಂದಿನ ಒಂದು ಘಂಟೆ. ಹಿರಿಯ ಲೇಖಕರಿರಬಹುದು, ಕಿರಿಯ ಲೇಖಕರಿರಬಹುದು, ಕಿರಿಕಿರಿಯ ಮಿತ್ರರಿರಬಹುದು. ಈ ತೆರನಾದ ಸುಪ್ರಭಾತ ವ್ರತವನ್ನು ನಿಡುಗಾಲದಿಂದ ಹಿಡಿದು ನಡೆದವರು ಕು.ಗೋ. ಹಾಗೆಯೇ ಈ ವ್ರತ ಕೆಟ್ಟಿತೆಂದರೆ ಅವರು ಊರಲ್ಲಿ ಇಲ್ಲವೆಂತಲೋ, ಅವರ ಆರೋಗ್ಯ ಕೆಟ್ಟಿರಬಹುದೆಂತಲೋ ನಾವು ಊಹಿಸುತ್ತಿದ್ದ ದಿನಗಳಿದ್ದವು.

ಈ ತೆರನಾದ ಟೆಲಿಫೋನ್ ವ್ರತ ಬರೇ ಖ್ಯಾತನಾಮರಿಗಷ್ಟೇ ಸಲ್ಲುವಂತಹದಾಗಿರಲಿಲ್ಲ. ಖ್ಯಾತ ಹನಿಗವಿ ಡುಂಡಿರಾಜ್ ವಿಜಯ ಕರ್ನಾಟಕದಲ್ಲಿ 'ಮಾತು ಕ(ವಿ)ತೆ' ಬರೆಯುತ್ತಿದ್ದಾಗ ಪ್ರತೀ ಮಂಗಳವಾರ ಅವರನ್ನು ಎಬ್ಬಿಸುತ್ತಿದ್ದುದೇ ಕು.ಗೋ.ರ ಫೋನ್‌ಕರೆ ಎಂದು ಬರೆದುದನ್ನು ಗಮನಿಸಿದ್ದೇವೆ. ವಿಶೇಷ ಅದಲ್ಲ. ಪರಿಚಿತ ವಲಯದ ಅತಿ ಸಾಮಾನ್ಯ ಕವಿಯೊಬ್ಬನ ಪುಟ್ಟ ಕವಿತೆಯೋ ಲೇಖನವೋ ಪ್ರಕಟವಾದಾಗಲೂ, ಯಾರಿಗೋ ಯಾವುದೋ ಸಾಮಾನ್ಯ ಪುರಸ್ಕಾರ ಲಭ್ಯವಾದಾಗಲೂ ಕು.ಗೋ. ಇದೇ ಸಂಭ್ರಮವನ್ನು ತೋರಿಸಿದ್ದುಂಟು. ಈ ಚರ್ಯೆಯಲ್ಲಿ ಅವರದೇ ಆದ ನಿಷ್ಕಳಂಕ ವೈಶಿಷ್ಟ್ಯವಿದೆ.

ಕು.ಗೋ.ರ ಈ 'ಫೋನ್ ಮಾಡುವ ವ್ರತ'ವನ್ನು ಡುಂಡಿರಾಜ್ ತಮ್ಮ ಕೆಲವು ಪುಸ್ತಕಗಳ ಮುನ್ನುಡಿಯಲ್ಲಿ ಉಲ್ಲೇಖಿಸಿದ್ದಾರೆ. "ಮಾತು ಕ(ವಿ)ತೆ ಪ್ರಾರಂಭವಾದಾಗಿನಿಂದಲೂ ಈ ಫೋನಿಸಿಕೆ ಕಾರ್ಯಕ್ರಮವನ್ನು ಕು.ಗೋ. ಒಂದು ವ್ರತವೆಂಬಂತೆ ನಡೆಸಿಕೊಂಡು ಬಂದಿದ್ದಾರೆ" ಎಂದು ಡುಂಡಿರಾಜ್ ಹೇಳಿಕೊಂಡಿದ್ದಾರೆ. ಅವರು ತಮ್ಮ ಲೇಖನವೊಂದರಲ್ಲಿ ದಾಖಲಿಸಿದ್ದಿದೆ- 'ಅದೆಷ್ಟೋ ಸಲ ಬೆಳಗಿನ ಜಾವ ಫೋನ್ ಮಾಡಿ ಕು.ಗೋ. ನಮ್ಮನ್ನೆಲ್ಲ ಎಬ್ಬಿಸುವ ಪುಣ್ಯಕಾರ್ಯವನ್ನು ಮಾಡಿದ್ದಿದೆ.”

ಪುಸ್ತಕದ ಒಂದು ಅಧ್ಯಾಯ ‘ಪಟ ಪಟ ಪಟಾಕಿ (೨೦೦೪)’ಯಲ್ಲಿ  'ಪಟ ಪಟ ಪಟಾಕಿ' ೨೦೦೪ರಿಂದ ೨೦೦೮ರ ತನಕ ಮುದ್ರಣವಾಗುತ್ತಲೇ ಬಂದಿರುವ ಮತ್ತೊಂದು ಜನಪ್ರಿಯ ಕೃತಿ. ಪ್ರತಿ ಸಲ ಪರಿಷ್ಕೃತಗೊಳ್ಳುತ್ತಲೇ, ಸ್ವಲ್ಪ ಪುಟಸಂಖ್ಯೆ ಹೆಚ್ಚಾಗುತ್ತಲೇ ಸಾಗಿದ ಈ ಕೃತಿಯ ಎಷ್ಟನೆಯ 'ಮುದ್ರಣ' ಈಗ ಮಾರುಕಟ್ಟೆಯಲ್ಲಿದೆಯೆಂದು ಕು.ಗೋ. ಅವರಿಗೂ ನೆನಪಿದ್ದಂತಿಲ್ಲ! ಈ ಕೃತಿಯ ಬಗ್ಗೆ ಲೇಖಕಿ ಶಾರದಾ ಭಟ್ ಬರೆಯುತ್ತಾ 'ಬೇಸರವಾದಾಗ ಪೆಪ್ಪರ್‌ಮೆಂಟ್ ಬಾಯಿಗಿಡುವ ಹಾಗೆ ತೆರೆದ ಪುಟಗಳಲ್ಲಿ ಕಣ್ಣಾಡಿಸಬಹುದು' ಎಂದು ಮನಮುಟ್ಟುವ ಮಾತು ಬರೆದಿದ್ದರು.

'ಪಟ ಪಟ ಪಟಾಕಿ' ಪರಿವಿಡಿಯೇ ಇಲ್ಲದ ನೂರ ಇಪ್ಪತ್ತೈದಕ್ಕೂ ಮಿಕ್ಕಿ ಎಲ್ಲಾ ಸೈಜಿನ ಮತ್ತು ಎಲ್ಲಾ ತೆರನಾದ ಪಟಾಕಿಗಳ ಕಟ್ಟು, ಹಲವಷ್ಟು ಪಟಾಕಿಗಳು ಉದಯವಾಣಿಯ ಸಂಪದಕ್ಕಾಗಿಯೇ ಕಟ್ಟಿದಂತಹವು. ಅಂತಲೇ ಉದಯವಾಣಿ ಬಳಗದ ಹಿರಿಯ ಪತ್ರಕರ್ತ ಬಿ. ಗಣಪತಿ ಬರೆದಿರುವ ಮುನ್ನುಡಿ ಇಲ್ಲಿ ಸ್ಮರಣೀಯ.

"ಕು.ಗೋ. ಸರ್ವಪ್ರಿಯ, ಸರಸಪ್ರಿಯ, ಆಪ್ತ-ಅಜಾತ ಶತ್ರು ತನಗಿಂತ ಬೇರೆಯವರು ಬೆಳೆಯಬೇಕು, ಬೆರೆಯಬೇಕು, ಅವರ ಪುಸ್ತಕಗಳು ಪ್ರಕಟವಾಗಬೇಕು ಎಂದು ಯಾವತ್ತೂ ಬಗಲಲ್ಲೊಂದು ಚೀಲವನ್ನು ನೇತುಹಾಕಿಕೊಂಡು ನಡೆದಾಡುವ ಈ ಇಳಿವಯಸ್ಸಿನ ಯುವಕ, ಮಾತಿಗೆ ಕುಳಿತರೆ ರಸಿಕತೆಯ ರಸಾಮೃತವನ್ನೇ ಹರಿಸುತ್ತಾರೆ. ಗೊದ್ದಲು ಗೊದ್ದಲಾಗಿ ಧ್ವನಿಸುವ ಅವರ ಮಾತೂ ಅಕ್ಷರಗಳಷ್ಟೇ ಆಕರ್ಷಕ. 'ಪಟ ಪಟ ಪಟಾಕಿ' ಈ ಯಾಂತ್ರಿಕ ಬದುಕಿನ ಮಧ್ಯೆ ಒಂದು ನಗೆಯ ಬಿಡುವನ್ನು ಸೃಷ್ಟಿಸುವ ಚುಟುಕು ಹಾಸ್ಯ, ವಿಡಂಬನೆ, ಜೋಕು ಮೊದಲಾದ ಮಾತ್ರೆಗಳು. ಮಾತ್ರೆಗಳಿಲ್ಲದೆ ದಿನಚರಿಯೇ ಇಲ್ಲದಿರುವಂತಹ ಈ ದಿನಗಳಲ್ಲಿ ಪಟ ಪಟ ಪಟಾಕಿ ಪ್ರತಿಯೊಬ್ಬರ ದೈಹಿಕ, ಮಾನಸಿಕ ಆರೋಗ್ಯವನ್ನು ವರ್ಧಿಸುವುದರ ಜೊತೆಗೆ ಒಂದು ಚುರುಕಾದ ಸಾಮಾಜಿಕ ಸರಸ ಸಂವಹನವನ್ನೂ ತಣ್ಣಗೆ ಹುಟ್ಟು ಹಾಕುತ್ತದೆ. ಇದು ಕೇವಲ ಜೋಕುಗಳಲ್ಲ. ಮನದೊಳಗೆ, ಹೃದಯದೊಳಗೆ ಮಾನವತೆಯ ತಂತುಗಳನ್ನು ಹೊಸೆದು ಜೀಕುವ ಹೃದ್ಯ ಜೋಕಾಲಿಯೂ ಆಗಿರುವುದು ಕು.ಗೋ. ಅವರ ಸೃಜನಾತ್ಮಕ ಕುಸುರಿತನಕ್ಕೆ, ಬಾಳ್ವೆಯ ಕುರಿತಿರುವ ಅವರ ಗಂಭೀರ ರೀತಿ, ನೀತಿ, ನಿಲುವಿಗೆ ಸಾಕ್ಷೀಭೂತವಾಗಿದೆ. ಸಾಹಿತ್ಯದ ಕೃಷಿಯಲ್ಲಿ ತನ್ನದೇ ಆದ ಸಮೃದ್ಧ ಹಾದಿಯನ್ನು ಈಗಾಗಲೇ ಸೃಷ್ಟಿಸಿಕೊಂಡಿರುವ ಕು.ಗೋ. ಈ ಪಟ ಪಟ ಪಟಾಕಿಯ ಮೂಲಕ ದಿನಪತ್ರಿಕೆಯ ದಿಗಿಲು ಹುಟ್ಟಿಸುವ ವೇಗದ ಮಧ್ಯೆಯೂ ನಿಂತು ಸರಸ-ಸಂಸ್ಕೃತಿಯ ಮಧುರ ತುಣುಕುಗಳನ್ನು ಕಟ್ಟಿಕೊಡುವ ಮೂಲಕ ಹೊಸತೊಂದು 'ಶಕೆ' ಆರಂಭಿಸಿದ್ದಾರೆ. 'ಉದಯವಾಣಿ'ಯ 'ಉದಯ ಸಂಪದ'ದ ಮೆರುಗನ್ನೂ ಇವರ ಪಟಾಕಿಗಳು ಗಮನಾರ್ಹವಾಗಿ ಹೆಚ್ಚಿಸಿದ್ದವು ಎಂಬುದು ಒಂದು ಪುಟ್ಟ ಇತಿಹಾಸದ ಮಾತು. ಕು.ಗೋ. ಅವರ ಈ ಉತ್ಸಾಹದ ನಡೆ ಮುಂದುವರಿಯಬೇಕು. ರಸಿಕರ ಎದೆಯ ರಂಗ ಮಂಚದಲ್ಲಿ ರಸೋದಕದ ಅಭಿಷೇಕ ಇವರಿಂದ ನಡೆಯುತ್ತಲೇ ಇರಬೇಕು.”

“ಸರಸ್ವತಿಯನ್ನು ನಿರ್ಲಕ್ಷಿಸುವುದು ಮಹಾದೋಷ. ಮೊದಲನೆಯ ದೋಷ ನೀವು ಪಡೆದ ಪುಸ್ತಕವನ್ನು ಗೌರವ ಪ್ರತಿ ಎಂದು ತಿಳಿದು ಲೇಖಕರಿಗೋ ಪ್ರಕಾಶಕರಿಗೋ ದುಡ್ಡು ಕೊಡದೇ ಇರುವುದು. ಎರಡನೆಯ ದೋಷ ಧರ್ಮಕ್ಕೆ ಪುಸ್ತಕ ಒಳಹಾಕಿದರೂ ಅದನ್ನು ಓದದೇ ಇರುವುದು. ಮೂರನೆಯ ದೋಷ ಪುಸ್ತಕ ಕೊಟ್ಟವರಿಗೆ ಒಂದು ನಾಲ್ಕು ಸಾಲು ಹೊಗಳಿಯೋ ಬೈದೋ ಬರೆಯದೆ ಇರುವುದು. ನಾಲ್ಕನೆಯ ದೋಷ ಈ ಪುಸ್ತಕ ಬರೆಯುವವರ ಬಗ್ಗೆ ತಿರಸ್ಕಾರ ಭಾವನೆ ಬೆಳೆಸಿಕೊಳ್ಳುವುದು.

ದೋಷ ಪರಿಹಾರಾರ್ಥ: ಯಾರಾದರೂ ಪುಸ್ತಕ ಕೊಟ್ಟರೆ ಸುಮ್ಮನೆ ತೆಗೆದುಕೊಂಡು ಚೀಲಕ್ಕೆ ಸೇರಿಸುವುದಲ್ಲ. ಎಷ್ಟು ಹಣ ಕೊಡಬೇಕೆಂದು ಕೇಳಿ ಆ ಪುಸ್ತಕದ ಬೆಲೆ ಕೊಡುವುದು. ಬೀಡಿ, ಸಿಗರೇಟು, ಚಾ, ಕಾಫಿ, ನಾಟಕ, ಸಿನೆಮಾ ಅಂತ ಖರ್ಚಾಗೋಲ್ವೆ. ಹಾಗೆಯೇ ಇದೊಂದು ಬಾಬತ್ತು ಅಂತ ಜನ್ಮದಲ್ಲಿ ಒಂದೆರಡಾದರೂ ಪುಸ್ತಕ ಹಣಕೊಟ್ಟು ತೆಗೆದುಕೊಳ್ಳುವುದು. ಎಲ್ಲಾದರೂ ಸಾಹಿತ್ಯ ಸಮ್ಮೇಳನ, ಸಭೆ, ಸಮಾರಂಭ, ಕವಿಗೋಷ್ಠಿ, ಹಾಸ್ಯಗೋಷ್ಠಿ ಆದರೆ ಹೋಗುವುದು ನಿಮ್ಮ ಮಕ್ಕಳೂ ಇಂಥ ಸಮ್ಮೇಳನಗಳಲ್ಲಿ ಭಾಗವಹಿಸಿ ಸ್ವಲ್ಪ ಸೇವೆ ಮಾಡುವಂತೆ ಪ್ರಚೋದಿಸುವುದು. ಒಟ್ಟಿನಲ್ಲಿ ಪುಸ್ತಕ ಪ್ರೀತಿ ಬೆಳೆಸಿಕೊಳ್ಳುವುದು. ಆಗ ಸಂತೋಷವೂ ನೆಮ್ಮದಿಯೂ ನಿಮ್ಮದಾಗುತ್ತದೆ.” ಇದು ಈ ಪುಸ್ತಕದ ಬೆನ್ನುಡಿಯಲ್ಲಿ ಕಂಡ ಬರಹ. ಎಲ್ಲಾ ಓದುಗರಿಗೆ ಅನ್ವಯವಾಗುವ ಮಾತುಗಳಲ್ಲವೇ? ೬೮ ಪುಟಗಳ ಈ ಪುಸ್ತಕ ಕು.ಗೋ. ಬಗ್ಗೆ ಎಲ್ಲಾ ವಿಷಯಗಳನ್ನು ಹೇಳದೇ ಹೋದರೂ ಬಹಳಷ್ಟು ಆಸಕ್ತಿದಾಯಕ ಸಂಗತಿಗಳನ್ನು ಹೇಳುತ್ತದೆ ಎನ್ನುವುದರಲ್ಲಿ ಅನುಮಾನವಿಲ್ಲ.