ಪೆದ್ದ ಮತ್ತು ಚಿನ್ನದ ನಾಣ್ಯದ ಪಾತ್ರೆ




ಒಂದು ಹಳ್ಳಿಯಲ್ಲಿ ಒಬ್ಬ ರೈತ-ಮಹಿಳೆ ವಾಸವಿದ್ದಳು. ಅವಳಿಗೆ ಒಬ್ಬನೇ ಮಗ. ಅವನು ಎಂತಹ ಪೆದ್ದ ಎಂದರೆ ಹಳ್ಳಿಯವರೆಲ್ಲ ಅವನನ್ನು ಪೆದ್ದ ಎಂದೇ ಕರೆಯುತ್ತಿದ್ದ ಕಾರಣ ಎಲ್ಲರಿಗೂ ಅವನ ಹೆಸರೇ ಮರೆತುಹೋಯಿತು.
ಅದೊಂದು ದಿನ ರೈತ-ಮಹಿಳೆ ದೂರದ ಹಳ್ಳಿಗೆ ಹೋಗಬೇಕಾಯಿತು. ಅವಳು ತನ್ನ ಮಗನನ್ನು ಕರೆದು ಹೇಳಿದಳು, “ನೀನು ನಾನಿಲ್ಲದಾಗ ಯಾವುದೇ ತೊಂದರೆ ಮಾಡಿಕೊಳ್ಳಬಾರದು. ಆ ಗೂಡಿನಲ್ಲಿರುವ ತಾಯಿಕೋಳಿ ಹೊರಗೆ ಬಂದರೆ ಅದನ್ನು ಹಿಡಿದು ಪುನಃ ಗೂಡಿಗೆ ಹಾಕು. ಅದು ಮೊಟ್ಟೆಗಳಿಗೆ ಕಾವು ಕೊಡದಿದ್ದರೆ ಕೋಳಿಮರಿಗಳು ಹುಟ್ಟೋದಿಲ್ಲ.” "ಸರಿ, ಸರಿ" ಎಂದು ತಲೆಯಾಡಿಸಿದ ಅವಳ ಮಗ.
ಆಕೆ ಅತ್ತ ಹೋದೊಡನೆ ಇತ್ತ ತಾಯಿಕೋಳಿ ಗೂಡಿನಿಂದ ಹೊರಬಂತು. ಪೆದ್ದ ಅದನ್ನು ಹಿಡಿಯಲು ಓಡಿದ. ತಾಯಿಕೋಳಿಯೂ ಓಡಿತು. ಅವನು ಬೊಬ್ಬೆ ಹಾಕುತ್ತಾ ಓಡಿದಂತೆ ತಾಯಿಕೋಳಿ ಹೆದರಿ ಸಿಕ್ಕಸಿಕ್ಕಲ್ಲಿ ಓಡಿತು. ಅವನು ಕೋಳಿಯ ಮೇಲೆ ತನ್ನ ಟೋಪಿ ಎಸೆದಾಗಲೂ ಅದು ತಪ್ಪಿಸಿಕೊಂಡಿತು. ಕೋಳಿಯ ಮೇಲೆ ಇನ್ನೇನು ಎಸೆಯಲಿ ಎಂದು ಆತ ಅತ್ತಿತ್ತ ನೋಡಿದಾಗ ಒಂದು ಕೋಲು ಕಾಣಿಸಿತು. ಅದನ್ನೇ ಎತ್ತಿ ಕೋಳಿಯ ಮೇಲೆ ಎಸೆದ. ಅದೀಗ ಕೋಳಿಯ ತಲೆಗೆ ಬಡಿದು ಅದು ನೆಲಕ್ಕೆ ಬಿತ್ತು.
“ಅಯ್ಯೋ, ನಾನೇನು ಮಾಡಿದೆ? ಕೋಳಿಯನ್ನು ಕೊಂದು ಬಿಟ್ಟೆನಲ್ಲಾ. ಇನ್ನು ಮೊಟ್ಟೆಗಳಿಗೆ ಕಾವಿಲ್ಲದೆ ಕೋಳಿಮರಿಗಳೂ ಹುಟ್ಟೋದಿಲ್ಲ. ಅಮ್ಮ ಸಿಟ್ಟಾಗುತ್ತಾರೆ” ಎಂದು ತಲೆ ಕೆರೆದುಕೊಂಡ ಪೆದ್ದ.
ಮೊಟ್ಟೆಗಳಿಗೆ ತಾನೇ ಕಾವು ಕೊಡ್ತೇನೆ ಎಂದು ಪೆದ್ದ ಅವುಗಳ ಮೇಲೆ ಕುಳಿತಾಗ ಅವೆಲ್ಲ ಒಡೆದು ಹೋದವು. ಅಷ್ಟರಲ್ಲಿ ಅವನಿಗೆ ಹಸಿವಾಯಿತು. ಒಡೆದಿದ್ದ ಮೊಟ್ಟೆಗಳನ್ನೇ ಬೇಯಿಸಿ ತಿಂದ. ಅದು ಅವನ ಹಸಿವನ್ನು ತಣಿಸಲಿಲ್ಲ. ಆಗ ಅವನಿಗೆ ಸತ್ತ ಕೋಳಿಯ
ನೆನಪಾಯಿತು. ಅದನ್ನು ತಂದು ಅದರ ರೆಕ್ಕೆಪುಕ್ಕಗಳನ್ನು ಕಿತ್ತು ಹಾಕಿ, ಅದನ್ನು ಬೆಂಕಿಯಲ್ಲಿ ಸುಡಲು ತಯಾರಾದ. ಆಗ ಒಂದು ಬೆಕ್ಕು ನೆಗೆದು ಬಂದು, ಮೇಜಿನ ಮೇಲಿದ್ದ ಕೋಳಿಯನ್ನು ಎತ್ತಿಕೊಂಡು ಹೋಯಿತು.
ಪೆದ್ದನಿಗೆ ತಲೆಕೆಟ್ಟು ಹೋಯಿತು. ಅಷ್ಟರಲ್ಲಿ ಅವನ ತಾಯಿ ಹಿಂತಿರುಗಿದಳು. ದೂರದಲ್ಲಿ ಅವಳನ್ನು ಕಾಣುತ್ತಲೇ ಪೆದ್ದ ಒಂದು ಹಳೆಯ ಒಲೆಯೊಳಗೆ ಅವಿತುಕೊಂಡ. ಅವನ ತಾಯಿ ಮನೆಯೊಳಗೆ ಬಂದಾಗ ಮಗನನ್ನು ಕಾಣದೆ ಅವನನ್ನು ಕರೆಯ ತೊಡಗಿದಳು. ಅವಳು ಕರೆದುಕರೆದು ಸುಸ್ತಾದಾಗ “ಇಲ್ಲಿದ್ದೇನೆ ಅಮ್ಮಾ” ಎಂದು ಪೆದ್ದ ಒಲೆಯೊಳಗಿಂದ ಕೂಗಿದ.
"ಈಗಲೇ ಹೊರಗೆ ಬಾ" ಎಂದು ತಾಯಿ ಕೂಗಿದಾಗ ಪೆದ್ದ ಒಲೆಯಿಂದ ಹೊರಗೆ ಬಂದ. "ಯಾಕೆ ಅಡಗಿ ಕುಳಿತೆ?” ಎಂದು ಅಮ್ಮ ಕೇಳಿದಾಗ ಪೆದ್ದ ತನ್ನ ಕತೆಯನ್ನೆಲ್ಲ ಹೇಳಿದ. ಅವನ ಅಮ್ಮ ತಲೆ ಚಚ್ಚಿ ಕೊಂಡಳು.
ಕೊನೆಗೆ, ತಾನು ಹೆಣೆದಿದ್ದ ಒಂದು ಶಾಲನ್ನು ಅವನಿಗೆ ಕೊಟ್ಟಳು. “ಹೇಳಿದ ಕೆಲಸ ಸರಿಯಾಗಿ ಮಾಡಲಿಕ್ಕೆ ಇದು ನಿನಗೆ ಕೊನೆಯ ಅವಕಾಶ. ಮಾರುಕಟ್ಟೆಗೆ ಹೋಗಿ ಇದನ್ನು ಮಾರಿ ಬಾ. ನೂರು ರೂಪಾಯಿಗಳಿಗಿಂತ ಜಾಸ್ತಿ ಬೆಲೆಗೇ ಇದನ್ನು ಮಾರಬೇಕು. ಹೆಚ್ಚು ಮಾತನಾಡುವವರೊಂದಿಗೆ ನೀನು ವ್ಯವಹಾರ ಮಾಡಲೇ ಬಾರದು” ಎಂದು ತಾಕೀತು ಮಾಡಿದಳು.
ಪೆದ್ದ ಆ ಶಾಲನ್ನು ಮಾರುಕಟ್ಟೆಗೆ ಒಯ್ದ. ಅಲ್ಲಿ ಜನರು ಜಮಾಯಿಸಿದ್ದರು. “ಶಾಲು, ಒಳ್ಳೆಯ ಶಾಲು. ಯಾರಿಗೆ ಬೇಕು” ಎಂದು ಕೂಗುತ್ತಾ ಪೆದ್ದ ಅಲ್ಲಿ ಸುತ್ತಾಡಿದ. ಆದರೆ ಯಾರಾದರೂ ಶಾಲಿನ ಬಗ್ಗೆ ಪ್ರಶ್ನೆ ಕೇಳಿದರೆ ಅವರಿಂದ ದೂರ ಹೋಗುತ್ತಿದ್ದ. ಒಬ್ಬಾತ “ಶಾಲಿಗೆ ಎಷ್ಟು ಹಣ?” ಎಂದು ಕೇಳಿದಾಗಲೂ ಪೆದ್ದ “ನಿಮ್ಮ ಜೊತೆ ನನಗೆ ವ್ಯವಹಾರ ಮಾಡಲು ಸಾಧ್ಯವಿಲ್ಲ” ಎಂದು ಅತ್ತ ನಡೆದ. ಅವನು ತಾಯಿ ಹೇಳಿದ ಮಾತನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದ.
ಕೊನೆಗೆ ಪೆದ್ದನಿಗೆ ಆ ಶಾಲು ಬಹಳ ಭಾರವಾಗಿದೆ ಅನಿಸಿತು. ಅವನು ಒಂದೆಡೆ ಅದನ್ನು ಇಡೋಣ ಎಂದು ಮಾರುಕಟ್ಟೆ ಪಕ್ಕದ ಒಕ್ಕಲಿಲ್ಲದ ಹಳೆಯ ಮನೆಯ ಆವರಣಕ್ಕೆ ಹೋದ. ಆ ಮನೆಯ ಪಕ್ಕದಲ್ಲಿ ಒಂದು ಪ್ಲಾಸ್ಟರಿನ ಮನುಷ್ಯನ ಮೂರ್ತಿಯಿತ್ತು. ಅದು ಜೀವಂತ ಮನುಷ್ಯ ಎಂದು ಭಾವಿಸಿದ ಪೆದ್ದ. “ಈ ಮನೆಯಲ್ಲಿ ಯಾರು ವಾಸವಿದ್ದಾರೆ?” ಎಂದು ಕೇಳಿದ. ಅದು ಉತ್ತರಿಸದಿದ್ದಾಗ ಅವನಿಗೆ ಸಮಾಧಾನವಾಯಿತು. "ನಾನು ನಿನ್ನಂತಹ ಗಿರಾಕಿಯನ್ನೇ ಹುಡುಕುತ್ತಿದ್ದೆ. ತಗೋ, ನನ್ನ ಅಮ್ಮನೇ ಹೆಣೆದ ಚಂದದ ಶಾಲು ಇಲ್ಲಿದೆ” ಎಂದು ಶಾಲನ್ನು ಆ ಮೂರ್ತಿಯ ಕಾಲಿನ ಬಳಿ ಇಟ್ಟ. ಮೂರ್ತಿ ಮಾತನ್ನೇ ಆಡದಿದ್ದಾಗ, “ಪರವಾಗಿಲ್ಲ, ಇದರ ಹಣ ತಗೊಳ್ಳಲು ನಾಳೆ ಬರ್ತೇನೆ” ಎನ್ನುತ್ತಾ ಅಲ್ಲಿಂದ ಹೊರಟ.
ಆ ದಿನ ರಾತ್ರಿ ಭಿಕಾರಿಯೊಬ್ಬ ಮಲಗಲು ಜಾಗ ಹುಡುಕುತ್ತಿದ್ದ. ಅದೇ ಒಕ್ಕಲಿಲ್ಲದ ಹಳೆಯ ಮನೆಯ ಆವರಣಕ್ಕೆ ಅವನು ಬಂದ. ಅಲ್ಲಿ ಮೂರ್ತಿಯ ಕಾಲಿನ ಬುಡದಲ್ಲಿದ್ದ ಶಾಲನ್ನು ಕಂಡು ಖುಷಿಯಿಂದ ಎತ್ತಿಕೊಂಡ. ಮರುದಿನ ಅಲ್ಲಿಗೆ ಪೆದ್ದ ಬಂದಾಗ ಅವನಿಗೆ ತಾನಿಟ್ಟಿದ್ದ ಶಾಲು ಕಾಣಿಸಲಿಲ್ಲ. “ಶಾಲಿನ ಹಣ ಕೊಡು” ಎಂದು ಪೆದ್ದ ಮೂರ್ತಿಯ ಬಳಿ ಕೇಳಿದ. ಮೂರು ಬಾರಿ ಕೇಳಿದರೂ ಮೂರ್ತಿ ಉತ್ತರಿಸದಿದ್ದಾಗ ಅವನಿಗೆ ಸಿಟ್ಟು ಬಂತು. ತನ್ನ ಕೈಯಲ್ಲಿದ್ದ ಕೋಲಿನಿಂದ ಆ ಮೂರ್ತಿಗೆ ಒಂದೇಟು ಕೊಟ್ಟ. ಆಗ ಅದು ಒಡೆಯಿತು. ಅದು ಟೊಳ್ಳಾಗಿತ್ತು. ಅದರೊಳಗಿದ್ದ ಒಂದು ಪಾತ್ರೆಯಲ್ಲಿ ಚಿನ್ನದ ನಾಣ್ಯಗಳಿದ್ದವು! ಅದನ್ನು ತಾಯಿಗೆ ತೋರಿಸಲಿಕ್ಕಾಗಿ ಪೆದ್ದ ಒಯ್ದ.
ಅದನ್ನು ಕಂಡು ಅವನ ಅಮ್ಮನಿಗೆ ಬಹಳ ಸಂತೋಷವಾಯಿತು. ಅದನ್ನು ಗುಪ್ತ ಸ್ಥಳದಲ್ಲಿ ಅವಿತಿಟ್ಟಳು. “ಇದೊಂದು ಸಲ ನೀನು ಒಳ್ಳೆಯ ಕೆಲಸ ಮಾಡಿದ್ದಿ” ಎಂದು ಮಗನನ್ನು ಅಪ್ಪಿಕೊಂಡಳು.