ಪ್ರಜಾಪ್ರತಿನಿಧಿ ಕಾಯ್ದೆ; ವಿಭಿನ್ನ ತೀರ್ಪು
ಮಧ್ಯಪ್ರದೇಶದ ಜಬ್ಬಲ್ಪುರ ವಿಧಾನಸಭಾ ಕ್ಷೆತ್ರದ ಹಾಲೀ ಶಾಸಕರ ವಿರುದ್ಧ ಒಂದು ತಕರಾರು ಕುರಿತಂತೆ ಸರ್ವೋನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಿಬ್ಬರು ಬೇರೆ ಬೇರೆ ತೀರ್ಪು ಕೊಟ್ಟಿದ್ದಾರೆಂದು ವರದಿಯಾಗಿದೆ. ಪ್ರಜಾಪ್ರತಿನಿಧಿ ಕಾಯ್ದೆ ಎನ್ನುವುದು ಮೂಲಭೂತವಾಗಿಯೇ ಅಧ್ವಾನವಾಗಿದ್ದು, ತೀರ್ಪಿನ ಬಗ್ಗೆ ಆಶ್ಚರ್ಯಪಡುವುದಕ್ಕೇನೂ ಇಲ್ಲ. ಅದರ ಕಲಮುಗಳು, ಕಪಟ ರಾಜಕಾರಣಿಗಳಿಗೆ ಸುಖವಾದ ಸವನ್ನ್ಹಾ ಹುಲ್ಲುಗಾವಲು! ಹಣ-ಹೆಂಡ ಹಂಚಿ, ಸೀರೆ-ಕುಪ್ಪುಸದ ’ಹೂವೀಳ್ಯ’ವೀಯುವುದು; ಕೈಕೊಡುವ ಮತದಾರರ ಬೆಂಡೆತ್ತುವುದು; - ಹೀಗೆ ಗೆಲುವಿನ ಮಾರ್ಜಿನ್ ಸಾಧಿಸುವುದನ್ನು ತಾನೇ, ನಾವು, ಕಿವಿಗೆ ಹೂ ಸಿಕ್ಕಿಸಿಕೊಂಡವರು, ’ಚುನಾವಣಾ ಅಕ್ರಮ’ ಎಂದು ತಿಳಿದುಕೊಂಡಿರುವುದು? ಆದರೆ ನಿಜವಾಗಿ ಅಭ್ಯರ್ಥಿಗಳು, ಇಡೀ ಟರ್ಮಿನಲ್ಲೇ ತಮ್ಮ ’ಮಾರ್ಜಿನ್’ ಮತದರರನ್ನು ’ಸಾಕಿಕೊಳ್ಳುವುದು’, ಚುನಾವಣಾ ನೀತಿಸಂಹಿತೆಯ ’ಬೇಡ’ಗಳಿಂದಲೇ ಎನ್ನುವುದನ್ನು ಅರ್ಥಮಾಡಿಕೊಳ್ಳುವುದಿಲ್ಲ!
ಜಾತಿ, ಕೋಮು, ಪಂಗಡ, ಭಾಷೆಗಳ ಮೀಸಲಾತಿಯಿಂದ, ಅನುಮಾನಾಸ್ಪದರ ವಿರುದ್ಧ ಭಯೋತ್ಪಾದನೆಯಿಂದ ಸಾಮಾಜಿಕ ಸಂಬಂಧಗಳ ಮೆದೆಗೆ ಕೊಳ್ಳಿಯಿಟ್ಟು ಅರಳಾರಿಸಿಕೊಳ್ಳುವುದೇ ಚುನಾವಣೆ ಗೆಲುವು. ಇಂತಹವರು ಕೇವಲ 20-30 ಪ್ರತಿಶತದವರಾದರೂ ಅವರೇ ಪ್ರತಿನಿಧಿಗಳು-ಪ್ರಭುಗಳು! ಇಂಥಲ್ಲಿ ಬೇರೆ ಸ್ಪೆಷಲ್ ಅಕ್ರಮ ಇನ್ನೇನಿದ್ದೀತು?